ದೆಹಲಿ ರೈತರ ಚಳುವಳಿ ಕುರಿತು ಫೆ.20 ಕ್ಕೆ ಎರಡು ಪುಸ್ತಕಗಳ ಬಿಡುಗಡೆ

ಬೆಂಗಳೂರು ಫೆ 17: ರೈತ ಚಳುವಳಿಯ ಕುರಿತು ಎರಡು ಪುಸ್ತಕಗಳ ಬಿಡುಗಡೆ ಮತ್ತು “ದೆಹಲಿ ಗಡಿಯ ರೈತರೊಂದಿಗೆ ಕನ್ನಡ ಮನಸ್ಸುಗಳು” ಕುರಿತು ಪುಸ್ತಕ ಪ್ರೀತಿ ತಿಂಗಳ ಮಾತುಕತೆ ಕಾರ್ಯಕ್ರಮವು ಫೆ 20 ರಂದು ನಡೆಯಲಿದೆ ಎಂದು ಕ್ರಿಯಾ ಮಾಧ್ಯಮ ತಿಳಿಸಿದೆ.
ದೇಶದಲ್ಲಿ ಜನತಾಂತ್ರಿಕ ನೆಲೆಗಳು ದುರ್ಬಲಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಹೋರಾಟ ನಡೆಸಿರುವ ಅನ್ನದಾತರು ಪ್ರಜಾಪ್ರಭುತ್ವದ ಎಳೆಗಳನ್ನು ಗಟ್ಟಿಗೊಳಿಸುವ ಮಹತ್ವದ ಚಳುವಳಿಯನ್ನು ರೂಪಿಸುತ್ತಿದ್ದಾರೆ. ಇದನ್ನು ಇಡೀ ವಿಶ್ವವೇ ಒಪ್ಪಿಕೊಂಡಿದೆ. ಕಳೆದ ಎರಡೂವರೆ ತಿಂಗಳಿಂದಲೂ ರೈತ ಹೋರಾಟ ದೆಹಲಿಯ ಗಡಿಗಳಲ್ಲಿ ನಡೆಯುತ್ತಿದೆ.
ಸರ್ಕಾರವನ್ನೇ ಬೆಚ್ಚಿ ಬೀಳಿಸುವಂತಹ ಮಟ್ಟದಲ್ಲಿ ರೈತರಿಗೆ ಬೆಂಬಲ ವ್ಯಕ್ತವಾಗಿದೆ. 2021ರ ಗಣರಾಜ್ಯೋತ್ಸವ `ರೈತಗಣರಾಜ್ಯೋತ್ಸವ’ವಾಗಿ ಮಾರ್ಪಟ್ಟಿತು. ಇದೇ ಸಂದರ್ಭದಲ್ಲಿ ಬರಹಗಾರರು, ಕಲಾವಿದರು, ಸಾಹಿತಿಗಳು ತಮ್ಮ ಕಾಳಜಿಯನ್ನು ಬರಹದ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ವಿಶ್ವದೆಲ್ಲೆಡೆಗಳಿಂದ ರೈತರ ಹೋರಾಟವನ್ನು ಬೆಂಬಲಿಸಿ ಪ್ರತಿಭಟನೆಗಳು ನಡೆಯುತ್ತಿವೆ. ರೈತರ ಕುರಿತು ಸಾವಿರಾರು ಬರಹಗಾರರು ಕವಿತೆ, ಕತೆ, ಲೇಖನ, ಹಾಡು, ನಾಟಕಗಳ ಮೂಲಕ ಸ್ಪಂದಿಸುತ್ತಿದ್ದಾರೆ.
ಈ ಹೋರಾಟಕ್ಕೆ ಸ್ಪಂದಿಸಿದ ಕನ್ನಡದ ಕವಿಗಳಿಂದ ರೈತರ ಆಂದೋಲನ ಕುರಿತ ಕವನಗಳನ್ನು ತರಿಸಿ, `ಹೊನ್ನಾರು ಒಕ್ಕಲು’ (ರೈತ ಆಂದೋಲನದ ಕವಿತೆಗಳು) ಎಂಬ ಹೆಸರಿನ ಕವನ ಸಂಕಲನವನ್ನು ರೂಪಿಸಲಾಗಿದೆ. 64 ಹಿರಿಯ ಕಿರಿಯ ಕವಿಗಳ ಕವಿತೆಗಳು ಇಲ್ಲಿವೆ. ಈ ಸಂಕಲನವನ್ನು ಡಾ. ಕೆ ಷರೀಫಾ ಮತ್ತು ಯಮುನಾ ಗಾಂವ್ಕರ್ ಸಂಪಾದಿಸಿದ್ದಾರೆ. ಈ ಸಂಕಲನದಲ್ಲಿ ರೈತ ಚಳುವಳಿಗೆ ಬೆಂಬಲವಾಗಿ ಕಲಾವಿದರು ಬರೆದ ಕಲಾತ್ಮಕ ಪೋಸ್ಟರುಗಳು, ಕಲಾಕೃತಿಗಳ ಚಿತ್ರಗಳನ್ನು ಕವಿತೆಗಳ ಜತೆ ಕೊಡಲಾಗಿದೆ.
ರೈತ ಚಳುವಳಿ ತೀವ್ರವಾಗುತ್ತಿದ್ದಾಗ ಜನವರಿಯ ಎರಡನೇ ವಾರದಲ್ಲಿ ದೆಹಲಿ ರೈತರ ಚಳುವಳಿಗೆ ಕರ್ನಾಟಕ ರೈತರ ಸೌಹಾರ್ದ ಬೆಂಬಲ ಕೊಡಲು ಮತ್ತು ಆ ಚಾರಿತ್ರಿಕ ಚಳುವಳಿಯ ಪ್ರತ್ಯಕ್ಷ ಅನುಭವ ಪಡೆಯಲು ಕರ್ನಾಟಕ ಪ್ರಾಂತ ರೈತ ಸಂಘ ಅದರ ರಾಜ್ಯ ನಾಯಕರುಗಳಾದ ಎಚ್.ಆರ್. ನವೀನ್ ಕುಮಾರ್ ಮತ್ತು ಜಗದೀಶ ಸೂರ್ಯ ಅವರನ್ನು ದೆಹಲಿಗೆ ಕಳಿಸಿತು. ಅವರು 10 ದಿನಗಳ ಪ್ರವಾಸದ ಅವಧಿಯಲ್ಲಿ ತಮ್ಮ ಶ್ರೀಮಂತ ಅನುಭವವನ್ನು ಬರಹ, ಫೊಟೊ, ಲೈವ್ ವಿಡಿಯೊ ಗಳ ಮೂಲಕ ಫೇಸ್ ಬುಕ್ ನಲ್ಲಿ ಹಂಚಿಕೊಂಡರು.
ದೆಹಲಿಯ ರೈತ ಹೋರಾಟವನ್ನು ಜಾಣ ಮೌನ, ಸುಳ್ಳು ಸುದ್ದಿ, ಪೊಳ್ಳು ಆಪಾದನೆಗಳ ಮೂಲಕ ನಿರ್ಲಕ್ಷ, ಅವಹೇಳನಕ್ಕೆ ಗುರಿ ಮಾಡಿರುವ “ಗೋದಿ ಮೀಡಿಯಾ”ದ ಅಸಹ್ಯ ವರ್ತನೆಯ ಸಂದರ್ಭದಲ್ಲಿ ಇವು ಬಹಳ ಜನಪ್ರಿಯವಾದವು. ಈ ಚಾರಿತ್ರಿಕ ಚಳುವಳಿಯ ಅಮೂಲ್ಯ ಅನುಭವಗಳ ಕುರಿತ ಚಾರಿತ್ರಿಕ ಬರಹಗಳನ್ನು ಫೊಟೊಗಳನ್ನು ಇನ್ನಷ್ಟು ಸೇರಿಸಿ, ಪರಿಷ್ಕರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಬೇಕು ಎಂಬ ಒತ್ತಾಯದ ಮೇರೆಗೆ ಸ್ವತಃ ಉತ್ತಮ ಪತ್ರಕರ್ತ, ಫೊಟೊಗ್ರಾಫರ್ ಆಗಿರುವ ಎಚ್.ಆರ್. ನವೀನ್ ಕುಮಾರ್ ಅದನ್ನು ಪುಸ್ತಕದ ರೂಪದಲ್ಲಿ ಬರೆದಿದ್ದಾರೆ. ಅದರಲ್ಲಿ ತಾವೇ ತೆಗೆದ ಉತ್ತಮ ಪೋಟೊಗಳನ್ನು ಸೇರಿಸಿದ್ದಾರೆ. ಇದಕ್ಕೆ ‘ಕದನ ಕಣ’ ಎಂದು ಹೆಸರಿಟ್ಟಿದ್ದಾರೆ.
ಈ ಎರಡೂ ಪುಸ್ತಕಗಳನ್ನು ಕ್ರಿಯಾ ಮಾಧ್ಯಮ ಪ್ರಕಟಿಸುತ್ತಿದ್ದು, ಇವುಗಳೆರಡಕ್ಕೂ ದೆಹಲಿಯಲ್ಲಿ ವಾಸವಿದ್ದು ರೈತರ ಚಳುವಳಿಯ ನೇರ ಸಂಪರ್ಕ ಇಟ್ಟುಕೊಂಡಿರುವ ಅದರ ಆಳವಾದ ತಿಳುವಳಿಕೆ ಇರುವ ಡಾ. ಪುರುಷೋತ್ತಮ ಬಿಳಿಮಲೆ ಅವರು ಮುನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ. ದೆಹಲಿ ರೈತರ ಚಳುವಳಿಯ ಕುರಿತಾದ ‘ಹೊನ್ನಾರು ಒಕ್ಕಲು’ ಮತ್ತು ‘ಕದನ ಕಣ’ ಎಂಬ ಈ ಎರಡು ಪುಸ್ತಕಗಳನ್ನು ಫೆಬ್ರುವರಿ 20ರಂದು ನಡೆಯುವ ಆನ್ ಲೈನ್ ಸಭೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ. ದೆಹಲಿಗೆ ಎರಡು ಬಾರಿ ಭೇಟಿಯಿತ್ತು ದೆಹಲಿ ರೈತರ ಚಳುವಳಿಯ ಕುರಿತು ಸಾಕ್ಷö್ಯ ಚಿತ್ರ ತಯಾರಿಸುತ್ತಿರುವ ಕೇಸರಿ ಹರವು, ಚಳುವಳಿಯ ನಾಯಕತ್ವ ವಹಿಸುತ್ತಿರುವ ರೈತ ಸಂಘಟನೆಗಳಲ್ಲಿ ಒಂದಾದ ಅಖಿಲ ಭಾರತ ಕಿಸಾನ ಸಭಾದ ಜಂಟಿ ಕಾರ್ಯದರ್ಶಿ ವಿಜೂ ಕೃಷ್ಣನ್ ಮತ್ತು ಡಾ. ಪುರುಷೋತ್ತಮ ಬಿಳಿಮಲೆ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಎರಡೂ ಪುಸ್ತಕಗಳ ಲೇಖಕರು, ಕವಿಗಳು, ಸಂಪಾದಕರು ಭಾಗವಹಿಸಲಿದ್ದಾರೆ ಕ್ರಿಯಾ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮವು ಆನ್ಲೈನ್ ನಲ್ಲಿ ನಡೆಯಲಿದ್ದು ಈ ಕೆಳಗಿನ ಜೂಮ್ ಕೊಂಡಿಯನ್ನು ಬಳಿಸಿ ಭಾಗವಹಿಸಬಹುದಾಗಿದೆ. ಕಾರ್ಯಕ್ರಮದ ನೇರ ಪ್ರಸಾರವು ಜನಶಕ್ತೀ ಮೀಡಿಯಾ ಫೆಸ್ಬುಕ್ ನಲ್ಲಿ ಪ್ರಸಾರವಾಗಲಿದೆ.

“ಪುಸ್ತಕ ಪ್ರೀತಿ ತಿಂಗಳ ಮಾತುಕತೆ”
ಕದನ ಕಣ & ಹೊನ್ನಾರು ಒಕ್ಕಲು ಪುಸ್ತಕ ಬಿಡುಗಡೆ
Time: Feb 20, 2021 05:00 PM Mumbai, Kolkata, New Delhi

ಈ ಲಿಂಕ್ ಕ್ಲಿಕ್ ಮಾಡಿ : “ಪುಸ್ತಕ ಪ್ರೀತಿ ತಿಂಗಳ ಮಾತುಕತೆ” ಕದನ ಕಣ & ಹೊನ್ನಾರು ಒಕ್ಕಲು ಪುಸ್ತಕ ಬಿಡುಗಡೆ

Meeting ID: 876 7557 0684
Passcode: 655960

Donate Janashakthi Media

Leave a Reply

Your email address will not be published. Required fields are marked *