ಬೆಂಗಳೂರು: ಸಿಸಿಬಿ ಪೊಲೀಸರು ನಂದಿನಿ ಬ್ರ್ಯಾಂಡ್ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ಜಾಡು ಪತ್ತೆಹಚ್ಚಿದಾರೆ. ನಂದಿನಿ ಉತ್ಪನ್ನದ ಅಧಿಕೃತ ಮಾರಾಟಗಾರ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ಧಾರೆ.
ಇದನ್ನೂ ಓದಿ : ರೈತರ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಕಲ್ಲುತೂರಾಟ; 6 ಮಂದಿ ಬಂಧನ
ನಂದಿನಿ ತುಪ್ಪದ ಬಹುಬೇಡಿಕೆಯನ್ನು ದುರ್ಬಳಕೆ ಮಾಡಿಕೊಂಡ ಆರೋಪಿಗಳು, ತಮಿಳುನಾಡು ರಾಜ್ಯದಲ್ಲಿ ಕಲಬೆರೆಕೆ ತುಪ್ಪವನ್ನು ಸಿದ್ದಪಡಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ಧಾರೆ. ಚಾಮರಾಜಪೇಟೆಯ ಮಹೇಂದ್ರ ಮತ್ತು ಈತನ ಪುತ್ರ ದೀಪಕ್ ಹಾಗೂ ತಮಿಳುನಾಡು ಮೂಲದ ಮುನಿರಾಜು ಮತ್ತು ಅಭಿಅರಸು ಬಂಧಿತರು. ಆರೋಪಿಗಳಿಂದ 1.26 ಕೋಟಿ ರೂ. ಮೌಲ್ಯದ 8,136 ಲೀಟರ್ ನಕಲಿ ನಂದಿನಿ ಬ್ರ್ಯಾಂಡ್ನ ಕಲಬೆರೆಕೆ ತುಪ್ಪ ಮತ್ತು ನಾಲ್ಕು ವಾಹನಗಳು, ಕಲಬೆರೆಕೆ ತುಪ್ಪ ತಯಾರು ಮಾಡಲು ಬಳಸುತ್ತಿದ್ದ ಯಂತ್ರಗಳು, ತೆಂಗು ಮತ್ತು ಪಾಮ್ ಆಯಿಲ್ ಎಣ್ಣೆಗಳನ್ನು ವಶಕ್ಕೆ ಪಡೆಯಲಾಗಿದೆ.
ತಮಿಳುನಾಡಿನಲ್ಲಿ ಕಲಬೆರಕೆ ತುಪ್ಪ ತಯಾರಿಸುತ್ತಿದ್ದ ವಂಚಕರು, ಅಲ್ಲಿಯೇ ಪ್ಯಾಕೆಟ್ ಮತ್ತು ಬಾಟಲಿಗಳಿಗೆ ನಂದಿನಿ ಬ್ರ್ಯಾಂಡ್ನ ಸ್ಟಿಕರ್ಗಳನ್ನು ಅಂಟಿಸುತ್ತಿದ್ದರು. ಬಳಿಕ ವಾಹನಗಳಲ್ಲಿ ಬೆಂಗಳೂರಿಗೆ ಸಾಗಾಟ ಮಾಡುತ್ತಿದ್ದರು. ಇನ್ನು ಈ ನಕಲಿ ಪ್ಯಾಕೆಟ್ಗಳಲ್ಲಿ ಶೇ.60ರಷ್ಟು ಅಸಲಿ ನಂದಿನಿ ತುಪ್ಪ, ಇನ್ನುಳಿದಂತೆ ಪಾಮ್ ಆಯಿಲ್ ಮತ್ತು ತೆಂಗು ಎಣ್ಣೆ ಮಿಶ್ರಣ ಮಾಡಿ ಪ್ಯಾಕೆಟ್ ಮಾಡುತ್ತಿದ್ದರು. ಇದೇ ಪ್ಯಾಕೆಟ್ ಹಾಗೂ ಬಾಟಲಿಗಳನ್ನು ಮಹೇಂದ್ರ ಮತ್ತು ಆತನ ಪುತ್ರ ಬೆಂಗಳೂರಿನ ವಿವಿಧ ಸಗಟು, ಚಿಲ್ಲರೆ ಮತ್ತು ನಂದಿನಿ ಪಾರ್ಲರ್ಗಳಿಗೆ ಸರಬರಾಜು ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ನಂದಿನಿ ಬ್ರ್ಯಾಂಡ್ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟದ ಬಗ್ಗೆ ಕೆಎಂಎಫ್ ಜಾಗೃತ ದಳದ ಅಧಿಕಾರಿಗಳಿಂದ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಮತ್ತು ಜಾಗೃತ ದಳ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ಮುಂದುವರೆಸಲಾಗಿದೆ.
ಇದನ್ನೂ ನೋಡಿ : ಪಿಚ್ಚರ್ ಪಯಣ – 165 | ಸಿನೆಮಾ: ಅನ್ನ, ನಿರ್ದೇಶನ -ಇಸ್ಲಾಹುದ್ದೀನ್ ಎನ್. ಎಸ್ ವಿಶ್ಲೇಷಣೆ : ಎಂ ನಾಗರಾಜ ಶೆಟ್ಟಿ
