ಎರಡು ನಾಲಿಗೆಯಿಂದ ಮಾತನಾಡುವ ಗೃಹ ಸಚಿವ ಮೊದಲು ರಾಜೀನಾಮೆ ನೀಡಲಿ: ಬಿ.ಕೆ. ಹರಿಪ್ರಸಾದ್‌

ಬೆಂಗಳೂರು: ಗೃಹ ಸಚಿವ ಅರಗ ಜ್ಞಾನೇಂದ್ರ ಅವರೇ, ನಾಲಗೆ ಕುಲ ಹೇಳುತ್ತೆ ಎಂಬುದು ನಿಜ. ನಂದಿತಾ ಸಾವನ್ನಪ್ಪಿದಾಗ ನಿಮ್ಮದು ಕ್ರಿಮಿನಲ್ ಗಳ ಕುಲ ಎಂದು ನಿಮ್ಮ ನಾಲಗೆ ಹೇಳಿತ್ತು. ನಂದಿತಾ ಸಾವಿಗೆ ಮುಸ್ಲಿಮರು ಕಾರಣ, ಸಿಬಿಐಗೆ ಕೊಡಿ ಎಂದು ಸಮಾಜದ ಸ್ವಾಸ್ಥ್ಯ ಹಾಳು ಮಾಡಿದಿರಲ್ಲಾ… ಈಗ ನೀವೇ ಗೃಹ ಸಚಿವರು, ಸಿಬಿಐ ತನಿಖೆ ಮಾಡಿಸಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸಿ ಎಂದು ವಿಧಾನ ಪರಿಷತ್‌ ಕಾಂಗ್ರೆಸ್‌ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಕೆ. ಹರಿಪ್ರಸಾದ್‌, ಭಾರೀ ಪ್ರಾಮಾಣಿಕ ಗೃಹ ಸಚಿವರು ನೀವು. ಪೊಲೀಸ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿಯ ಸಚಿವರೇ ಹೇಳಿದರೂ ಇನ್ನೂ ಯಾವ ನೈತಿಕತೆಯಲ್ಲಿ ಸಚಿವರಾಗಿ ಮುಂದುವರೆದಿದ್ದೀರಿ ? ಪೊಲೀಸ್ ಪರೀಕ್ಷೆಯಲ್ಲಿ ಅಕ್ರಮ ನಡೆದೇ ಇಲ್ಲ ಎಂದು ಸದನದಲ್ಲಿ ಗೃಹ ಸಚಿವರಾಗಿ ಹೇಳಿಕೆ ಕೊಡ್ತಿರಿ. ಹೇಳಿಕೆ ಬಳಿಕ ಪೊಲೀಸರು ಪರೀಕ್ಷಾ ಅಕ್ರಮದ ಬಗ್ಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸುತ್ತಾರೆ. ಹಾಗಾದರೆ ಗೃಹ ಸಚಿವರಾಗಿ ಯಾರನ್ನು ರಕ್ಷಿಸಲು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದೀರಿ ? ಇದು ಬಹುಕೋಟಿ ಹಗರಣ ಅಲ್ವಾ? ನಿಮ್ಮ ಸ್ಥಾನದ ಮೇಲೆ ಗೌರವ ಇದ್ದರೇ ರಾಜೀನಾಮೆ ನೀಡಿ ಕುರ್ಚಿ ಖಾಲಿ ಮಾಡಿ ಎಂದು ಆರೋಪಿಸಿದರು.

ಗೃಹ ಸಚಿವರು ಮತ್ತಿನಲ್ಲಿ ಮಾತನಾಡುತ್ತಾರೆ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ನಿಮಗೆ ಕೋಮುವಾದದ ಮತ್ತು ಹರಡಿದೆ. ನಿಮಗೆ ಅಮಾನವೀಯತೆಯ, ಕ್ರೂರತೆಯ ಮತ್ತು ತಲೆಗೇರಿದೆ. ಅದು ಡಾರ್ಕ್ ವೆಬ್ ನಲ್ಲಿ ಸಿಗೋ ಮಾಧಕ ವಸ್ತುವಿಗಿಂತಲೂ ಆರ್ ಎಸ್ ಎಸ್ ನ ಮತ್ತು ದೇಶಕ್ಕೆ ಅಪಾಯಕಾರಿ. ಈ ಆರ್ ಎಸ್ ಎಸ್ ಮತ್ತು ಹಿಂದುತ್ವದ ಮತ್ತಿನಿಂದ ಗೃಹ ಸಚಿವರು ಹೊರ ಬರದೇ ಇದ್ದರೆ ಒಬ್ಬ ಮಾನಸಿಕ ಅಸ್ವಸ್ಥ ರಾಜ್ಯದ ಗೃಹಸಚಿವನಾಗಿದ್ದಾನೆ ಎಂದೇ ನಾವಂದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.

ಅಪಘಾತದಲ್ಲಿ ಗಲಾಟೆ ನಡೆದು ಕೊಲೆಯಾದ ಪ್ರಕರಣದ ಬಗ್ಗೆ ವಿವಾದ ಹುಟ್ಟು ಹಾಕಿದ ಗೃಹ ಸಚಿವ ಉರ್ದು ಮಾತನಾಡದ್ದಕ್ಕೆ ಅಮಾಯಕ ದಲಿತ ಚಂದ್ರುನನ್ನ ಕೊಚ್ಚಿ ಕೊಚ್ಚಿ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ವೈಭವೀಕರಿಸಿದಾಗ ನಿಮ್ಮ ನಾಲಿಗೆ ಯಾವುದಾಗಿತ್ತು? ಬೆಂಗಳೂರು ಕಮಿಷನರ್ ಹೇಳಿಕೆ ನೀಡಿದ ನಂತರ ನನಗೆ ಬಂದ ಸೋರ್ಸು ಸುಳ್ಳು ಗಲಾಟೆ ನಡೆದು ಕೊಲೆಯಾಗಿದೆ, ಕ್ಷಮಿಸಿ ಎಂದಾಗ ಅದ್ಯಾವ ನಾಲಿಗೆ ಇತ್ತು? ಬಹುಶಃ ನಿಮ್ಮಲ್ಲಿ ಎರಡು ನಾಲಿಗೆ ಇರಬೇಕು. ಒಂದು ಕೇಶವ ಕೃಪದ್ದೋ, ಇನ್ನೊಂದು ಹಾವಿನಪುರದ್ದೋ? ಮೊದಲು ಸ್ಪಷ್ಟಪಡಿಸಿ ಎಂದು ಪ್ರಶ್ನಿಸಿದರು.

ತೀರ್ಥಹಳ್ಳಿ ಸಮಿಪದ ಮಲ್ಲೆಸರದ ಮುರುಳಿ ಮೇಲೆ ಗಾಂಜಾ ಮತ್ತಿನಲ್ಲಿ ಮಾರಣಾಂತಿಕ ಹಲ್ಲೆ ನಡೆದು ತಿಂಗಳುಗಳೆ ಕಳೆದರೂ ಕೆಲ ಆರೋಪಿಗಳ ಬಂಧನವಾಗಿಲ್ಲ. ಆಸ್ಪತ್ರೆಯ ರಿಪೋರ್ಟ್ ಬದಲಿಸಿ ಆರೋಪಿಗಳನ್ನು ರಕ್ಷಿಸಲು ನಿಮ್ಮ ಪಕ್ಷದ ನಾಯಕನೊಬ್ಬ ಪ್ರಯತ್ನಿಸಿರುವುದು ಬೆಳಕಿಗೆ ಬಂದಿದೆ ಎಂದು ಬಿ ಕೆ ಹರಿಪ್ರಸಾದ್‌ ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *