ಎರಡು ವರ್ಷ ಕಳೆದರು ಸಿಗದ ಪ್ರವಾಹ ಪರಿಹಾರ

ಕೊಡಗು : ಭಾರೀ ಪ್ರಮಾಣದ ಪ್ರವಾಹ ಬಂದು ಮನೆಗಳು ಕೊಚ್ಚಿಹೋಗಿ ಎರಡು ವರ್ಷಗಳೇ ಕಳೆದರೂ ಇಲ್ಲಿಯ ಕುಟುಂಬಗಳಿಗೆ ಇಂದಿಗೂ ಪರಿಹಾರ ಸಿಕ್ಕಿಲ್ಲ. ಈಗಲೂ ಮಳೆ ಬಂತೆಂದರೆ ಜೀವ ಕೈಯಲ್ಲಿ ಹಿಡಿದು ಬದುಕಬೇಕಾದ ಸ್ಥಿತಿ ಉಂಟಾಗಿದೆ.

ಹೌದು ಇಂತಹ ಪರಿಸ್ಥಿತಿಯಲ್ಲಿ ಬದುಕು ದೂಡುತ್ತಿರುವುದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿಯ ಕಿರುದಾಲೆ ಗ್ರಾಮದ ಕೂಲಿಕಾರ ಕುಟುಂಬಗಳು. 2018 ರ ಆಗಸ್ಟ್ ತಿಂಗಳಲ್ಲಿ ಸುರಿದಿದ್ದ ಭಾರೀ ಮಳೆಯಿಂದ ಸೂರ್ಲಬ್ಬಿ ಬೆಟ್ಟಗಳಿಂದ ಭಾರೀ ನೀರು ನುಗ್ಗಿ ನಂದಿಮೊಟ್ಟೆ ಹೊಳೆಯಲ್ಲಿ ಪ್ರವಾಹ ಸೃಷ್ಟಿಯಾಗಿತ್ತು. ಈ ವೇಳೆ ಕಿರುದಾಲೆಯ 10 ಕುಟುಂಬಗಳ ಮನೆಗಳು ಹಿಂಬದಿಯಲ್ಲಿ ತಳಪಾಯದ ಸಮೇತ ಸಂಪೂರ್ಣ ಕೊಚ್ಚಿಹೋಗಿದ್ದವು. ಈ ಸ್ಥಿತಿ ನಿರ್ಮಾಣವಾಗಿ ಎರಡು ವರ್ಷಗಳೇ ಕಳೆದಿದ್ದರೂ ಈ ಕುಟುಂಬಗಳಿಗೆ ನಯಾಪೈಸೆ ಪರಿಹಾರ ಸಿಕ್ಕಿಲ್ಲ.

2019 ಮತ್ತು 2020 ರ  ಎರಡು ವರ್ಷಗಳ ಆಗಸ್ಟ್ ತಿಂಗಳಲ್ಲೂ ಪ್ರವಾಹ ಎದುರಾಗಿತ್ತು. ಇಷ್ಟಾದರೂ ಅಧಿಕಾರಿಗಳು ಮಾತ್ರ ಈ ಕುಟುಂಬಗಳಿಗೆ ಪರ್ಯಾಯ ವಸತಿ ಇರಲಿ, ಕನಿಷ್ಠ ಪರಿಹಾರವನ್ನೂ ನೀಡಿಲ್ಲ. ಈ ಕುಟುಂಬಗಳು ಬೇರೆ ವಿಧಿಯಿಲ್ಲದೆ ಇಂದಿಗೂ ಮುರಿದು ಬಿದ್ದಿರುವ ಮನೆಯಲ್ಲೇ ಜೀವನ ಸಾಗಿಸುತ್ತಿವೆ. ಇಳಿವಯಸ್ಸಿನ ಇಬ್ರಾಹಿಂ ಅವರ ಮನೆ ಸಂಪೂರ್ಣ ಬಿದ್ದು ಹೋಗಿದ್ದು ಅದೇ ಮನೆಯಲ್ಲೇ ಬದುಕು ನಡೆಸುತ್ತಿದ್ದಾರೆ. ವೆಂಕಟೇಶ್ ಎನ್ನುವರ ಮನೆಯೂ 2018 ಪ್ರವಾಹದಲ್ಲಿ ಕೊಚ್ಚಿಹೋಗಿದ್ದು ಅದೇ ಮನೆಯಲ್ಲೇ ಬದುಕು ದೂಡುತ್ತಿದ್ದಾರೆ.

ಅದೇ ವರ್ಷದ ಪ್ರವಾಹದಲ್ಲಿ ಮನೆಗಳಿಗೆ ಯಾವುದೇ ನಷ್ಟವಾಗದಿದ್ದರೂ ಅಂತ ಕುಟುಂಬಗಳಿಗೆ ಜಿಲ್ಲಾಡಳಿತ ಮನೆಗಳನ್ನು ನೀಡಿದೆ. ಇನ್ನು ಎಷ್ಟೋ ಮನೆಗಳಿಗೆ ಅಪಾಯವಿಲ್ಲದಿದ್ದರೂ ಅಪಾಯವಿದೆ ಎಂದು ತೋರಿಸಿ ಅಂತವರಿಗೆ ಮನೆಗಳನ್ನು ನೀಡಲಾಗಿದೆ. ಈಗ ಅಂತಹವರು ಸರ್ಕಾರದ ಹೊಸ ಮನೆಗಳನ್ನು ಪಡೆದುಕೊಂಡಿರುವುದಲ್ಲದೆ, ಹಳೆ ಮನೆಯಲ್ಲೂ ಇದ್ದಾರೆ. ಆದರೆ ನಿಜವಾಗಿಯೂ ಮನೆಗಳು ಕೊಚ್ಚಿಹೋಗಿದ್ದರೂ ಪರಿಹಾರ ಕೊಟ್ಟಿಲ್ಲ. ಬದಲಾಗಿ ಪ್ರತೀ ವರ್ಷ ಮಳೆಗಾಲ ಬಂದಾಗ ಅಧಿಕಾರಿಗಳು ಬಂದು ಮನೆಗಳನ್ನು ಖಾಲಿ ಮಾಡುವಂತೆ ನೋಟಿ ನೀಡುತ್ತಾರೆ. ಪರ್ಯಾಯ ವ್ಯವಸ್ಥೆ ನೀಡುವಂತೆ ಅಧಿಕಾರಿಗಳನ್ನು ಕೇಳಿದರೆ, ಹೊಳೆದಂಡೆಯಲ್ಲಿ ಮನೆ ಕಟ್ಟಿರುವುದರಿಂದ ಪರಿಹಾರ ಕೊಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ಎನ್ನೋದು ಜನರ ಆರೋಪ. ಒಟ್ಟಿನಲ್ಲಿ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡು ಎರಡು ವರ್ಷಗಳು ತುಂಬಿದರೂ ಪರ್ಯಾಯ ವಸತಿ ಇಲ್ಲದೆ ಜನರು ಕಣ್ಣೀರಿನಲ್ಲಿ ಕೈತೊಳೆಯುತ್ತಾ ಆತಂಕದಲ್ಲೇ ಬದುಕು ಕಳೆಯುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *