ಎರಡು ಸೆಮಿಸ್ಟರ್ ಪರೀಕ್ಷೆ ಬೇಡ-ಒಂದೇ ಪರೀಕ್ಷೆ ನಡೆಸಲು ಎಐಡಿಎಸ್‌ಓ ಸಹಿ ಸಂಗ್ರಹ ಚಳುವಳಿ

ಬೆಂಗಳೂರು: ಕಳೆದ ಸುಮಾರು ಎರಡು-ಮೂರು ವಾರಗಳಿಂದ ರಾಜ್ಯದ ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಸರ್ಕಾರಕ್ಕೆ `ಹಿಂದಿನ ಸೆಮಿಸ್ಟರ್ ಪರೀಕ್ಷೆ ರದ್ದುಗೊಳಿಸಿ’ ಎಂದು ಆಗ್ರಹಿಸುತ್ತಿದ್ದಾರೆ. ಆದರೂ ಸರಕಾರ ಶೈಕ್ಷಣಿಕ ಹಿತದೃಷ್ಟಿಯಿಂದ ವಿದ್ಯಾರ್ಥಿಗಳ ಆಗ್ರಹಕ್ಕೆ ಮಣಿಯದೆ ತನ್ನ ನಿಲುವಿಗೆ ಕಟಿಬದ್ಧವಾಗಿರುವುದನ್ನು ಎಐಡಿಎಸ್‌ಓ ಸಂಘಟನೆಯು ಖಂಡಿಸಿದೆ.

ವಿದ್ಯಾರ್ಥಿಗಳ ಬೇಡಿಕೆಯನ್ನು ಸರ್ಕಾರಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ಜುಲೈ 4ರಿಂದ 6ರವರೆಗೆ ಮೂರು ದಿನಗಳು ರಾಜ್ಯದಾದ್ಯಂತ ಸಹಿ ಸಂಗ್ರಹ ಚಳುವಳಿಯನ್ನು ಹಮ್ಮಿಕೊಂಡು ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯಗಳ ಮನವಿಯನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಓ) ಸಲ್ಲಿಸಿದೆ.

ಇದನ್ನು ಓದಿ: ನಾಲ್ಕು ವರ್ಷಗಳ ಪದವಿ ಶಿಕ್ಷಣ: ಬೆಂಕಿಯಿಂದ ಬಾಣಲೆಗೆ

ಈಗಾಗಲೇ ಆನ್‌ಲೈನ್ ಚಳುವಳಿ, ಪ್ರಾತಿನಿಧಿಕವಾಗಿ ಕಾಲೇಜು, ವಿವಿಗಳ ಮುಂದೆ ಚಳುವಳಿ, ಪ್ರಾಂಶುಪಾಲರಿಗೆ, ವಿವಿಯ ಕುಲಪತಿಗಳಿಗೆ ಮನವಿ ಪತ್ರ ಸಲ್ಲಿಕೆ ಸೇರಿದಂತೆ ಶಾಸಕರುಗಳು, ಉಪಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಮನವಿಯನ್ನು ಸಲ್ಲಿಸಲಾಗಿತ್ತು. ಆದರೂ ಸರಕಾರ ಮಾತ್ರ ಈ ಬಗ್ಗೆ ಕಿವಿಗೊಡಲಿಲ್ಲ ಎಂದು ಎಐಡಿಎಸ್‌ಓ ಸಂಘಟನೆಯು ಆರೋಪಿಸಿದೆ.

ಹೋರಾಟಕವನ್ನು ತೀವ್ರಗೊಳಿಸಿರುವ ಸಂಘಟನೆಯು ಸಹಿ ಸಂಗ್ರಹ ಚಳುವಳಿಯನ್ನು ಹಮ್ಮಿಕೊಂಡಿದ್ದವು. ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳ ವಿದ್ಯಾರ್ಥಿಗಳು ಈ ಚಳುವಳಿಯಲ್ಲಿ ಭಾಗಿಯಾಗಿದ್ದರು. ವಿವಿ ಮಟ್ಟದಲ್ಲಿ, ಕಾಲೇಜು ಮಟ್ಟದಲ್ಲಿ, ತಾಲ್ಲೂಕು-ಜಿಲ್ಲಾ ಮಟ್ಟದಲ್ಲಿ ಮತ್ತು ಹಳ್ಳಿಗಳಲ್ಲೆಲ್ಲಾ ಜನಸಾಮಾನ್ಯರ ಹಾಗೂ ಹಲವಾರು ಶಿಕ್ಷಣ ತಜ್ಞರು, ಬುದ್ದಿಜೀವಿಗಳ ಸಹಿಸಂಗ್ರಹದಲ್ಲಿ ಭಾಗವಹಿಸಿದ್ದರು.

ಈ ಜನಭಿಪ್ರಾಯದ ಸಹಿಸಂಗ್ರಹವನ್ನು ಮನವಿ ಪತ್ರದೊಂದಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಎಐಡಿಎಸ್‌ಓ ಸಂಘಟನೆಯು ಸರ್ಕಾರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ತಕ್ಷಣವೇ ಸ್ಪಂದಿಸಬೇಕೆಂಬುದು ಆಗ್ರಹಿಸಿದ್ದಾರೆ.

ಸಹಿ ಸಂಗ್ರಹದ ವರದಿಯನ್ನು ಸಿದ್ಧಪಡಿಸಿದ ಎಐಡಿಎಸ್‌ಓ ಸಂಘಟನೆಯು ಆನ್‌ಲೈನ್ ಹಾಗೂ ಆಫ್‌ಲೈನ್‌ ಸಮೀಕ್ಷೆಯಲ್ಲಿ 1,10,000 ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಭಾಗವಹಿಸಿದ್ದಾರೆ. ಇದೇ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಎರಡು ಡೋಸ್‌ ಉಚಿತ ಲಸಿಕೆ ನೀಡುವವರೆಗೂ ಆಫ್‌ಲೈನ್ ತರಗತಿ / ಪರೀಕ್ಷೆಗಳನ್ನು ನಡೆಸಬಾರದು ಎಂದು ಸರಕಾರಕ್ಕೆ ಮನವಿಯನ್ನು ಸಲ್ಲಿಸಿದರು.

ಇದನ್ನು ಓದಿ: ಒಂದೇ ತಿಂಗಳಿನಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ಬೇಡ-ಒಂದೇ ಪರೀಕ್ಷೆ ನಡೆಸಿ: ಎಐಡಿಎಸ್‌ಓ ಆಗ್ರಹ

ಸಹಿ ಸಂಗ್ರಹದ ಅಭಿಯಾನದಲ್ಲಿ ಪ್ರಮುಖ ಶಿಕ್ಷಣ ತಜ್ಞರುಗಳು ಭಾಗವಹಿಸಿದ್ದರು.

ಅಲ್ಲಮಪ್ರಭು ಬೆಟ್ಟದೂರು(ನಿವೃತ್ತ ಪ್ರಾಂಶುಪಾಲರು, ಶಿಕ್ಷಣ ತಜ್ಞರು, ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯಾಧ್ಯಕ್ಷರು), ಪ್ರೊ. ಡಾ. ಎಮ್.ವಿ.ನದಕರ್ಣಿ(ಮಾಜಿ ಕುಲಪತಿಗಳು, ಕಲಬುರಗಿ ವಿಶ್ವವಿದ್ಯಾನಿಲಯ), ಡಾ. ಎಮ್.ಎಸ್.ತಿಮ್ಮಪ್ಪ(ಮಾಜಿ ಕುಲಪತಿಗಳು, ಬೆಂಗಳೂರು ವಿಶ್ವವಿದ್ಯಾನಿಲಯ), ಪ್ರೊ. ಡಾ.ಆರ್.ಎನ್. ಶ್ರೀನಿವಾಸ ಗೌಡ(ಮಾಜಿ ಕುಲಪತಿಗಳು, ಕರ್ನಾಟಕ ಪಶು ಸಂಗೋಪನೆ, ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾನಿಲಯ), ಪ್ರೊ. ಪಿ.ವಿ.ನಾರಾಯಣ(ಕನ್ನಡ ಲೇಖಕರು), ಪ್ರೊ. ಚಂದ್ರ ಪೂಜಾರಿ(ನಿವೃತ್ತ ಪ್ರಾಧ್ಯಾಪಕರು, ಹಂಪಿ ಕನ್ನಡ ವಿಶ್ವವಿದ್ಯಾನಿಲಯ), ಪ್ರೊ. ರಾಜೇಂದ್ರ ಚೆನ್ನಿ(ನಿವೃತ್ತ ಪ್ರಾದ್ಯಾಪಕರು, ಕುವೆಂಪು ವಿಶ್ವವಿದ್ಯಾನಿಲಯ), ಪ್ರೊ. ಡಾ. ಎನ್.ಪ್ರಭುದೇವ್(ಶಿಕ್ಷಣ ತಜ್ಞರು, ಪ್ರಖ್ಯಾತ ವೈದ್ಯರು, ಮಾಜಿ ಕುಲಪತಿಗಳು, ಬೆಂಗಳೂರು ವಿಶ್ವವಿದ್ಯಾನಿಲಯ), ಪ್ರೊ. ಎ.ಮುರಿಗೆಪ್ಪ (ಮಾಜಿ ಕುಲಪತಿಗಳು, ಹಂಪಿ ಕನ್ನಡ ವಿಶ್ವವಿದ್ಯಾನಿಲಯ), ಡಾ. ಮಹಾಬಲೇಶ್ವರ್ ರಾವ್(ಶಿಕ್ಷಣ ತಜ್ಞರು, ನಿವೃತ್ತ ಪ್ರಾಂಶುಪಾಲರು, ಟಿಎಮ್‌ಎ ಪೈ ಕಾಲೇಜ್ ಆಫ್ ಎಜುಕೇಷನ್), ಪ್ರೊ.ಪುರುಷೋತ್ತಮ ಬಿಳಿಮಲೆ(ನಿವೃತ್ತ ಕನ್ನಡ ಪ್ರಾಧ್ಯಾಪಕರು, ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾನಿಲಯ), ಡಾ.ಕೆ. ಮರಳುಸಿದ್ದಪ್ಪ(ನಿವೃತ್ತ ಪ್ರಾಧ್ಯಾಪಕರು, ಬೆಂಗಳೂರು ವಿಶ್ವವಿದ್ಯಾನಿಲಯ), ಪ್ರೊ. ದೊಡ್ಡರಂಗೇಗೌಡ(ಖ್ಯಾತ ಸಾಹಿತಿಗಳು, ಪದ್ಮಶ್ರೀ ಪುರಸ್ಕೃತರು) ಹಾಗೂ ಶೈಕ್ಷಣಿಕ ವಲಯದ ಬಗ್ಗೆ ಕಾಳಜಿ ಇರುವ ಪ್ರಮುಖರು ವಿದ್ಯಾರ್ಥಿಗಳ ಆಂದೋಲನದಲ್ಲಿ ಭಾಗಿಯಾಗಿದ್ದಾರೆ.

ಮುಖ್ಯಮಂತ್ರಿಗಳು ನಮ್ಮ ಮನವಿಯನ್ನು ಸ್ವೀಕರಿಸಿದರು ಹಾಗೂ ನಮ್ಮ ಸಮಸ್ಯೆಗಳ ಕುರಿತು ಆಲಿಸಿದರು. ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಸಂಘಟನೆಯ ರಾಜ್ಯ ಅಧ್ಯಕ್ಷರಾದ ಅಶ್ವಿನಿ ಕೆ.ಎಸ್‌., ರಾಜ್ಯ ಕಾರ್ಯದರ್ಶಿ ಅಜಯ್‌ ಕಾಮತ್‌ ಹಾಗೂ ರಾಜ್ಯ ಕಾರ್ಯದರ್ಶಿ ಮಂಡಳಿ  ಸುಭಾಷ್‌ ಬಿ.ಜೆ. ತಿಳಿಸಿದ್ದಾರೆ.

ಸರ್ಕಾರದಿಂದ ಅಧಿಕೃತ ತೀರ್ಮಾನ ಬರುವವರೆಗು ಹೋರಾಟವನ್ನು ಕೈಬಿಡದೇ ಮುಂದುವರೆಸುವುದಾಗಿಯೂ ಸಂಘಟನೆಯು ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *