ಪಂಚರಾಜ್ಯ ಚುನಾವಣೆ | ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಮತದಾನ ಪ್ರಾರಂಭ

ಹೊಸದಿಲ್ಲಿ: ಪಂಚರಾಜ್ಯ ಚುನಾವಣೆಯ ನೀರಸ ಪ್ರಚಾರದ ನಡುವೆ ಎರಡು ರಾಜ್ಯಗಳಲ್ಲಿ ಮತದಾನ ಪ್ರಾರಂಭವಾಗಿದೆ. ಮಧ್ಯಪ್ರದೇಶದ ಎಲ್ಲಾ 230 ಕ್ಷೇತ್ರಗಳು ಮತ್ತು ಛತ್ತೀಸ್‌ಗಢದ 90 ಕ್ಷೇತ್ರಗಳಲ್ಲಿ 70 ಕ್ಷೇತ್ರಗಳ ಮತದಾನ ಪ್ರಕ್ರಿಯೆ ಶುಕ್ರವಾರ ನಡೆಯುತ್ತಿದೆ. ಮಧ್ಯಪ್ರದೇಶದಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿ ಸಂಜೆ 6 ಗಂಟೆಯವರೆಗೆ ನಡೆಯಲಿದ್ದು, ಛತ್ತೀಸ್‌ಗಢದಲ್ಲಿ ಬೆಳಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮತದಾನ ನಡೆಯಲಿದೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಪ್ರತಿಸ್ಪರ್ಧಿ ಸರ್ಕಾರಗಳನ್ನು ಕಿತ್ತೊಗೆಯಲು ಹರಸಾಹಸ ಪಡುತ್ತಿವೆ. ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ನೀರಸವಾಗಿ ಪ್ರಚಾರದಲ್ಲಿ ತೊಡಗಿದ್ದು, ಬಿಜೆಪಿ ಸಾಕಷ್ಟು ಹಣವನ್ನು ಮತ್ತು ಜನರನ್ನು ಕಸರತ್ತಿಗೆ ನಿಯೋಜಿಸಿದೆ ಎಂದು ವರದಿಗಳು ಹೇಳಿವೆ.

ಇದನ್ನೂ ಓದಿ: ತೆಲಂಗಾಣ | ಆಡಳಿತರೂಢ ಬಿಆರ್‌ಎಸ್ ಶಾಸಕನ ನಿವಾಸದ ಮೇಲೆ ಐಟಿ ದಾಳಿ

ಕಳೆದ ಬಾರಿ ಛತ್ತೀಸ್‌ಗಢದಲ್ಲಿ 90 ಸ್ಥಾನಗಳ ಪೈಕಿ 68 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್, 15 ವರ್ಷಗಳ ಬಿಜೆಪಿ ಆಡಳಿತವನ್ನು ಕೊನೆಗೊಳಿಸಿತ್ತು. ಆದರೆ ಈ ಬಾರಿ ಕಾಂಗ್ರೆಸ್‌ಗೆ ಆತ್ಮವಿಶ್ವಾಸದ ಕೊರತೆ ಎದ್ದು ಕಾಣುತ್ತಿದ್ದು, ಪಕ್ಷಕ್ಕೆ ಚುನಾವಣೆ ಕಷ್ಟಕರವಾಗಿ ಪರಿಣಮಿಸಿದೆ. 2018 ರಲ್ಲಿ ಕೃಷಿ ಮತ್ತು ಬುಡಕಟ್ಟು ಜನಸಂಖ್ಯೆಯ ಬೆಂಬಲವು ಕಾಂಗ್ರೆಸ್‌ಗೆ ಅನುಕೂಲಕರವಾಗಿತ್ತು. ಅದಾಗ್ಯೂ ಈ ಬಾರಿ ರಾಜ್ಯದಲ್ಲಿ ಅತಂತ್ರ ಅಥವಾ ಕಾಂಗ್ರೆಸ್ ಪರವಾಗಿ ಸರಳ ಬಹುಮತ ಬರಲಿದೆ ಎಂದು ಸಮೀಕ್ಷಗಳು ಹೇಳಿವೆ.

ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಯಿಲ್ಲದೆ ಕಂಗಾಲಾಗಿದ್ದಾಗ ಮತ್ತು ಸಂಘಪರಿವಾರವು ಕ್ರಿಶ್ಚಿಯನ್ನರ ವಿರುದ್ಧ ಕೋಮು ದ್ವೇಷ ಅಭಿಯಾನ ನಡೆಸಿದಾಗ ಕಾಂಗ್ರೆಸ್ ನಿಷ್ಕ್ರಿಯವಾಗಿತ್ತು ಎಂಬ ಆರೋಪವಿದೆ. ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಭೂಪೇಶ್ ಬಾಗಲ್ ವಿರುದ್ಧ 508 ಕೋಟಿ ರೂ.ಗಳ ಮಹಾವದೇವ ಬೆಟ್ಟಿಂಗ್ ಹಗರಣದ ಆರೋಪ ಮಾಡಿದ್ದರು.

ಇದನ್ನೂ ಓದಿ: ಬಳ್ಳಾರಿ ಬಿಜೆಪಿ ಸಂಸದ ದೇವೇಂದ್ರಪ್ಪ ಮಗನಿಂದ ಪ್ರೀತಿ ಹೆಸರಲ್ಲಿ ವಂಚನೆ ಆರೋಪ | ದೂರು ದಾಖಲಿಸಿದ ಯುವತಿ

ಎರಡನೇ ಹಂತದ ಚುನಾವಣೆಯಲ್ಲಿ 958 ಅಭ್ಯರ್ಥಿಗಳು ಕಣದಲ್ಲಿದ್ದು, 1.68 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ. ಮೊದಲ ಹಂತದಲ್ಲಿ 40 ಲಕ್ಷ ಮಂದಿ ಮತದಾನ ಮಾಡಿದ್ದರು.

ಮಧ್ಯಪ್ರದೇಶದಲ್ಲಿ 230 ಸ್ಥಾನಗಳಿಗೆ ಒಟ್ಟು 2533 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, 5.6 ಕೋಟಿ ಮತದಾರರಿದ್ದಾರೆ. ಕಳೆದ ಬಾರಿ, ಕಾಂಗ್ರೆಸ್ 114 ಸ್ಥಾನಗಳನ್ನು ಮತ್ತು ಬಿಜೆಪಿ 109 ಸ್ಥಾನಗಳನ್ನು ಗೆದ್ದುಕೊಂಡಿತು. ಅದಾಗ್ಯೂ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿಯು 15 ತಿಂಗಳ ಅವಧಿಯಲ್ಲಿ ಆಪರೇಷನ್ ಕಮಲ ಮೂಲಕ ಪತನಗೊಳಿಸಿತ್ತು. ನಂತರ ಸರ್ಕಾರ ರಚಿಸಿರುವ ಬಿಜೆಪಿ ಪ್ರಸ್ತುತ 127 ಸ್ಥಾನಗಳನ್ನು ಹೊಂದಿದೆ.

ಎರಡೂ ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ಪ್ರಚಾರದ ಪ್ರಮುಖ ಮುಖವಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ರ‍್ಯಾಲಿಗಳನ್ನು ಮುನ್ನಡೆಸಿದ್ದರು.

ವಿಡಿಯೊ ನೋಡಿ: ಮಾನವೀಯತೆ ಜಾಗಕ್ಕೆ ಮತೀಯತೆ ಬಂದಿದೆ – ಬರಗೂರು ರಾಮಚಂದ್ರಪ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *