ಶಿವ ಸೇನಾ ಬಣ ರಾಜಕೀಯ; ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ ಮೊರೆಹೋದ ಉದ್ಧವ್ ಠಾಕ್ರೆ

ನವದೆಹಲಿ: ಚುನಾವಣಾ ಆಯೋಗ ಶುಕ್ರವಾರ(ಫೆಬ್ರವರಿ 17) ಏಕನಾಥ್ ಶಿಂಧೆ ಅವರ ಬಣಕ್ಕೆ ಶಿವ ಸೇನಾ ಪಕ್ಷದ ಹೆಸರು ಮತ್ತು ‘ಬಿಲ್ಲು ಮತ್ತು ಬಾಣ’ದ ಚಿಹ್ನೆಯನ್ನು ಬಳಸಲು ಅನುಮತಿ ನೀಡಿದ ನಿರ್ಧಾರದ ವಿರುದ್ಧ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸುಪ್ರಿಂ ಕೋರ್ಟ್‌ ಮೊರೆ ಹೋಗಿದ್ದಾರೆ.

ಏಕನಾಥ್ ಶಿಂಧೆ ಬಣಕ್ಕೆ ಶಿವಸೇನೆಯ ಹೆಸರು ಮತ್ತು ಚಿಹ್ನೆಯನ್ನು ನೀಡಿರುವ ಆಯೋಗದ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಿರಿಯ ವಕೀಲ ಎಎಂ ಸಿಂಘ್ವಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಪೀಠದ ಮುಂದೆ ಪಟ್ಟಿಯಲ್ಲಿಲ್ಲದ ಪ್ರಸ್ತಾಪವನ್ನು ಮಾಡಲು ಪ್ರಯತ್ನಿಸಿದರು. ತುರ್ತು ವಿಚಾರಣೆಗೆ ನಿರಾಕರಿಸಿದ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮಂಗಳವಾರ ವಿಷಯ ಪ್ರಸ್ತಾಪಿಸುವಂತೆ ಹೇಳಿದರು.

ಶಿಂಧೆ ಬಣವನ್ನು ಬೆಂಬಲಿಸಿದ 40 ಶಾಸಕರು ಒಟ್ಟು 47,82,440 ಮತಗಳಲ್ಲಿ 36,57,327 ಮತಗಳನ್ನು ಗಳಿಸಿದ್ದಾರೆ. ಅಂದರೆ, ಇದು ಸುಮಾರು ಶೇ 76ರಷ್ಟು ಮತಗಳು ವಿಜೇತ ಶಾಸಕರ ಪರವಾಗಿ ಬಂದಿವೆ. ಇನ್ನು ಉದ್ಧವ್ ಠಾಕ್ರೆ ಬಣದಿಂದ ಬೆಂಬಲಿತವಾದ 15 ಶಾಸಕರು ಒಟ್ಟು 11,25,113 ಮತಗಳನ್ನು ಗಳಿಸಿದ್ದಾರೆ. ಈ ಆಧಾರದಲ್ಲಿ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ನೀಡಲಾಗಿದೆ ಎಂದು ಆಯೋಗವು ತನ್ನ ಆದೇಶದಲ್ಲಿ ತಿಳಿಸಿದೆ.

ಶನಿವಾರ ಶಿಂಧೆ ಬಣವು ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಅನ್ನು ಸಲ್ಲಿಸಿತ್ತು. ಅದರಲ್ಲಿ, ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿ ಸಲ್ಲಿಸುವ ಯಾವುದೇ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಮೊದಲು, ಮಹಾರಾಷ್ಟ್ರ ಸರ್ಕಾರದ ನಿಲುವು ಏನೆಂಬುದನ್ನು ತಿಳಿದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಶಾಸಕಾಂಗ ವಿಭಾಗದಲ್ಲಿ ಪಕ್ಷದ ಸಂಖ್ಯಾ ಬಲದಲ್ಲಿ 55 ಶಾಸಕರ ಪೈಕಿ 40 ಶಾಸಕರು ಮತ್ತು 18 ಲೋಕಸಭಾ ಸದಸ್ಯರಲ್ಲಿ 13 ಸದಸ್ಯರ ಬೆಂಬಲವನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೊಂದಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *