ಸರ್ಕಾರ ʼಜನಪರ ದಿಕ್ಕಿನಲ್ಲಿ ಸಾಗುವಂತೆ ನೋಡಿಕೊಳ್ಳುವುದು ವಿರೋಧ ಪಕ್ಷಗಳ ಜವಬ್ದಾರಿʼ, – ಎದ್ದೇಳು ಕರ್ನಾಟಕ

ಬೆಂಗಳೂರು : ಚುನಾವಣೆಯಲ್ಲಿ ಬಹುಮತದಿಂದ ಗೆದ್ದು ಅಧಿಕಾರಿ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವನ್ನು  ಬೀಳಿಸಬೇಕು ಎಂದು ಬಿಜೆಪಿ ಜೆಡಿಎಸ್‌ ಹುನ್ನಾರ ನಡೆಸಿವೆ ಎಂದು ಎದ್ದೇಳು ಕರ್ನಾಟಕ ಆರೋಪಿಸಿದೆ.

ಈ ಕುರಿತು ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಎದ್ದೇಳು ಕರ್ನಾಟದ ಸದಸ್ಯರು ಮಾತನಾಡಿ,  ವಿರೋಧ ಪಕ್ಷದಲ್ಲಿರುವ ಈ ಮೈತ್ರಿ ಪಕ್ಷಗಳು ಜನರ ಸಂಕಷ್ಟದ ವಿಷಯವಾಗಿ ಒಂದು ದಿನವೂ ವಿಧಾನಸಭೆಯಲ್ಲಿ ಮಾತನಾಡಿಲ್ಲ. ಇವರು ಜನ ವಿರೋಧಿ ಕೆಲಸದಲ್ಲಿ ತೊಡಗಿದರೆ, ಇತ್ತ ನೋಡಿದರೆ ರಾಜ್ಯಪಾಲರು ಸಂವಿಧಾನ ವಿರೋಧಿ ಕೆಲಸದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜ್ಯ ಸರ್ಕಾರ ಜನಪರ ದಿಕ್ಕಿನಲ್ಲಿ ಸಾಗುವಂತೆ ನೋಡಿಕೊಳ್ಳುವುದು ವಿರೋಧ ಪಕ್ಷಗಳ ಜವಬ್ದಾರಿ. ಜನರ ಪರವಾದ ಆಡಳಿತ ನೀಡುವಂತೆ, ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವಂತೆ ಆಳುವ ಪಕ್ಷದ ಮೇಲೆ ವಿರೋಧ ಪಕ್ಷ ಒತ್ತಡ ಹಾಕಿದರೆ ಅದು ರಚನಾತ್ಮಕ ಕೆಲಸವಾಗುತ್ತದೆ. ಆದರೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕಳೆದ 15 ತಿಂಗಳಲ್ಲಿ ಜನರ ಬದುಕಿನ ಒಂದೇ ಒಂದು ಸಮಸ್ಯೆಯನ್ನು ಕೈಗೆತ್ತಿಕೊಂಡು ವಿಧಾನಸಭೆಯಲ್ಲಿ ಗಟ್ಟಿ ದನಿ ಎತ್ತಿಲ್ಲ ಅಥವಾ ಬೀದಿಗಿಳಿದು ಹೋರಾಟ ನಡೆಸಿಲ್ಲ. ಅದು ಮಾಡುತ್ತಿರುವ ಏಕೈಕ ಕೆಲಸವೆಂದರೆ ಜನರು ಆಯ್ಕೆ ಮಾಡಿರುವ ಸಂವಿಧಾನಿಕ ಸರ್ಕಾರವನ್ನು ಬುಡಮೇಲು ಮಾಡಲು ಯತ್ನಿಸುವುದು. ಇದು ರಾಜ್ಯದ್ರೋಹಿ ಹಾಗೂ ಜನ ವಿರೋಧಿ ಕೆಲಸವಾಗಿದೆ ಎಂದು ಹೇಳಿದೆ.

ಭ್ರಷ್ಟ ವ್ಯಕ್ತಿಗಳಿಗೆ ಹಾಗೂ ದುಷ್ಟ ಶಕ್ತಿಗಳಿಗೆ ಆಶ್ರಯತಾಣವಾಗಿರುವ ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಮಾತನಾಡುವುದು ಹಾಸ್ಯಾಸ್ಪದ ವಿಚಾರವಾಗಿದೆ. ಸಿಬಿಐ, ಇಡಿ, ಐಟಿ ಗಳಂತಹ ಸಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ತಳ್ಳುವುದು, ಆಪರೇಷನ್ ಕಮಲ ಮಾಡಿ ಜನರು ಆಯ್ಕೆ ಮಾಡಿದ ಸರ್ಕಾರಗಳನ್ನು ಕೆಡವವುದು ಅದರ ಹವ್ಯಾಸವಾಗಿಬಿಟ್ಟಿದೆ. ಇಲ್ಲಿ ಈ ಬಾರಿ ರಾಜ್ಯಪಾಲರನ್ನು ಬಳಸಿಕೊಂಡು ಜನರು ಆರಿಸಿದ ಸರ್ಕಾರವನ್ನು ಕೆಡವುವ ಪ್ರಯತ್ನದಲ್ಲಿ ತೊಡಗಿದೆ. ಅವಕಾಶವಾದವನ್ನು ಅರೆದುಕುಡಿದಿರುವ ಜೆಡಿಎಸ್ ಆತ್ಮವಂಚನೆ ಮಾಡಿಕೊಳ್ಳುತ್ತಾ ಬಿಜೆಪಿಯ ದುಷ್ಟ ರಾಜಕಾರಣಕ್ಕೆ ವೇದಿಕೆಯನ್ನು ಒದಗಿಸುತ್ತಿದೆ. ಈ ಎರಡು ಪಕ್ಷಗಳ ಈ ಕಪಟ ರಾಜಕಾರಣವನ್ನು ನಾವು ತೀವ್ರ ರೀತಿಯಲ್ಲಿ ಖಂಡಿಸುತ್ತೇವೆ. ಈ ನಡತೆಯನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಈ ಕೂಡಲೇ ತಿದ್ದುಕೊಳ್ಳದಿದ್ದಲ್ಲಿ ರಾಜ್ಯದ ಜನತೆಯಿಂದ ಇನ್ನೂ ತೀವ್ರ ಸ್ವರೂಪದ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಅಂದ ಮಾತ್ರಕ್ಕೆ ನಾವು ಕಾಂಗ್ರೆಸ್ ಪಕ್ಷದ ಆಡಳಿತದಿಂದ ಸಂತಷ್ಟರಾಗಿದ್ದೇವೆ ಎಂದಲ್ಲ. 2023ರ ವಿಧಾನ ಸಭಾ ಚುನಾವಣೆಗಳಲ್ಲಿ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡುವುದರಲ್ಲಿ ನಾಗರೀಕ ಸಂಘಟನೆಗಳ ದೊಡ್ಡ ಪಾತ್ರವಿದೆ. ನಮ್ಮೆಲ್ಲರ ನಿರೀಕ್ಷೆಗೆ ತಕ್ಕಂತೆ ಕಾಂಗ್ರೆಸ್ ಆಡಳಿತ ನೀಡುತ್ತಿಲ್ಲ ಎಂಬ ವಿಮರ್ಷೆ ನಮಗಿದೆ. ಸೂಕ್ತ ಸಂದರ್ಭದಲ್ಲಿ ನಾವದನ್ನು ಮುಂದಿಡುತ್ತೇವೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಗಮನಕ್ಕೆ ಒಂದು ಮುಖ್ಯ ವಿಚಾರ ತರಲೇಬೇಕಿದೆ. “ಬಿಜೆಪಿ ಮತ್ತು ಸಂಘಪರಿವಾರದ ಶಕ್ತಿಗಳ ಬಗೆಗಿನ ನಿಮ್ಮ ಮೃದ ನಡತೆಯನ್ನು ಈಗಲಾದರೂ ಕೈಬಿಡಿ. ನಿಮ್ಮ ಪಕ್ಷದ ಹಲವು ಸ್ತರಗಳಲ್ಲಿ ಬಲಪಂಥೀಯ ಶಕ್ತಿಗಳ ಜೊತೆ ಮುಂದುವರೆಸಿಕೊಂಡು ಬರುತ್ತಿರುವ ಒಳ ಸಂಬಂಧಗಳನ್ನು, ಒಳ ಒಪ್ಪಂದಗಳನ್ನು ಈಗಲಾದರೂ ತುಂಡರಿಸಿಕೊಳ್ಳಿ. ಸಂವಿಧಾನಿಕ ಆಶಯಗಳ ಜೊತೆ ಧೃಡವಾಗಿ ನಿಲ್ಲಿ. ದೇಶ ಒಡೆಯುವ ಶಕ್ತಿಗಳ ಮೇಲೆ ಕಠಿಣ ಕ್ರಮಗಳಿಗೆ ಮುಂದಾಗಿ. ಅಲ್ಲದೆ ನಿಜವಾಗಿಯೂ ನೀವು ಬಿಜೆಪಿಗಿಂತ ಭಿನ್ನ ಎಂಬುದನ್ನು ಸಾಬೀತುಪಡಿಸುವಂತಹ ಜನಪರ ನಡತೆಗಳ ಮೂಲಕ ಆ ಶಕ್ತಿಗಳಿಗೆ ಈ ರಾಜ್ಯದಲ್ಲಿ ಜಾಗವಿಲ್ಲದಂತೆ ಮಾಡಿ” ಎಂದು ಕರೆಕೊಟ್ಟಿದೆ.

ಈಗ ಚೆಂಡು ನ್ಯಾಯಾಲಯದಲ್ಲಿದೆ. ಸಂವಿಧಾನಿಕ ಮೌಲ್ಯಗಳನ್ನು ರಕ್ಷಿಸಬೇಕಾದ ರಾಜ್ಯಪಾಲರೇ ಅಸಂವಿಧಾನಿಕವಾಗಿ ನಡೆದುಕೊಂಡಿದ್ದಾರೆ. ದೆಹಲಿಯ ಕೈಗೊಂಬೆಯಾಗಿ ದುಷ್ಟ ನಡೆಗಳಿಗೆ ಅಂಕಿತ ಹಾಕಿದ್ದಾರೆ. ರಾಜ್ಯಪಾಲರ ಈ ನಡತೆಯನ್ನು ತಿರಸ್ಕರಿಸುವ ಮೂಲಕ ನ್ಯಾಯಲಯ ಸರಿಯಾದ ಸಂದೇಶವನ್ನು ರಾಜಕೀಯ ಶಕ್ತಿಗಳಿಗೆ ರವಾನಿಸಬೇಕಿದೆ. ಉಚ್ಛ ನ್ಯಾಯಲಯ ಸಂವಿಧಾನಿಕ ಘನತೆಯನ್ನು ಎತ್ತಿಹಿಡಿಯುತ್ತದೆ ಎಂಬ ನಿರೀಕ್ಷೆಯನ್ನು ನಾವೆಲ್ಲರೂ ಇಟ್ಟುಕೊಂಡಿದ್ದೇವೆ ಎಂದು ಹೇಳಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವೆ ಬಿಟಿ ಲಲಿತಾ ನಾಯಕ್‌, ಕರ್ನಾಟಕ ಜನಶಕ್ತಿಯ ಕೆ.ಎಲ್.‌ ಅಶೋಕ್‌, ಕ್ರೈಸ್ತ ಸಮುದಾಯದ ಹಿರಿಯ ಮುಖಂಡ ಡಾ. ರೆವರೆಂಡ್‌ ಮನೋಹರ್‌ ಚಂದ್ರಪ್ರಸಾದ್‌ ಉಪಸ್ಥಿತರಿದ್ದರು.

 

Donate Janashakthi Media

Leave a Reply

Your email address will not be published. Required fields are marked *