ರೈತರ ಆತ್ಮಹತ್ಯೆ ತಡೆಗಟ್ಟುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಫಲ: ಬಸವರಾಜ ಪೂಜಾರ
ಹಾವೇರಿ: ರೈತರು ಬೆಳೆದ ಬೆಲೆಗಳಿಗೆ ವೈಜ್ಞಾನಿಕ ಬೆಲೆ ಒದಗಿಸುವುದು ಸೇರಿದಂತೆ ರೈತರ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಫಲವಾಗಿದ್ದ ರೈತರ ಬದುಕು ಸಂಕಷ್ಟಕ್ಕೀಡಾಗಿದೆ. ರೈತರ ಆತ್ಮಹತ್ಯೆಯಲ್ಲಿ ಹಾವೇರಿ ಜಿಲ್ಲೆಯು ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿರುವುದು ಅತ್ಯಂತ ನೋವಿನ ಸಂಗತಿ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನ್ನದಾತರ ಸಮಸ್ಯೆ ಪರಿಹರಿಸಲು ಮುಂದಾಗಬೇಕು ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಆಗ್ರಹಿಸಿದರು. ಹುತಾತ್ಮ
ಮಂಗಳವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿರುವ ‘ರೈತ ಹುತಾತ್ಮ ಸ್ಥಂಭ’ಕ್ಕೆ ಎಸ್ಎಫ್ಐ-ಡಿವೈಎಫ್ಐ ಸಂಘಟನೆಗಳ ವತಿಯಿಂದ ಮಾಲಾರ್ಪಣೆ ಗೈದು ಗೌರವ ನಮನಗಳನ್ನು ಸಲ್ಲಿಸಿ ಮಾತನಾಡಿ, 2008 ರಲ್ಲಿ ರೈತರು ಬಿತ್ತನೆಗೆ ಅಗತ್ಯವಾದ ಗೊಬ್ಬರಕ್ಕಾಗಿ ಪ್ರತಿಭಟನೆ ನಡೆಸಿದ್ದರು. ರೈತರಿಗೆ ಗೊಬ್ಬರ ಒದಗಿಸಬೇಕಿದ್ದ ಅಂದಿನ ಬಿಜೆಪಿ ಸರಕಾರವು ಗೊಬ್ಬರ ಸಮಸ್ಯೆ ಪರಿಹರಿಸುವ ಬದಲಾಗಿ ರೈತರ ಧ್ವನಿ ಹತ್ತಿಕ್ಕಲು ಮೇಲೆ ಗೋಲಿಬಾರ್ ನಡೆಸಿತ್ತು. ಈ ಗೋಲಿಬಾರ್ ನಲ್ಲಿ ರೈತರಾದ ಹಾವೇರಿಯ ಸಿದ್ಲಿಂಗಪ್ಪ ಚೂರಿ ಹಾಗೂ ನೆಲೋಗಲ್ ಗ್ರಾಮದ ಪುಟ್ಟಪ್ಪ ಹೊನ್ನತ್ತಿ ಪೋಲಿಸರ ಗುಂಡಿಗೆ ಬಲಿಯಾದರು. ಹಲವರು ಗಂಭೀರವಾಗಿ ಗಾಯಗೊಂಡು ನರಳಾಡಿದ ನೆನಪು ಇನ್ನೂ ಹಸಿಯಾಗಿದೆ ಎಂದರು.
ಕೇಂದ್ರ ಬಿಜೆಪಿ ಸರಕಾರ ರೈತರಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಲು ಶಿಫಾರಸ್ಸು ಮಾಡಿರುವ ಎಂ.ಎಸ್ ಸ್ವಾಮಿನಾಥನ್ ವರದಿಯನ್ನು ಸಮರ್ಪಕವಾಗಿ ಜಾರಿಗೊಳಿಸದೇ ಅನ್ನದಾತರಿಗೆ ದ್ರೋಹ ಬಗೆಯುತ್ತಿದೆ. ಕಾರ್ಪೋರೇಟ್ ಕಂಪೆನಿಗಳಿಗೆ ಸಾವಿರಾರು ಕೋಟಿ ರೂಪಾಯಿ ತೆರಿಗೆ ವಿನಾಯತಿ ನೀಡುತ್ತಿರುವ ಮೋದಿ ಸರಕಾರ ಒಂದು ಸಲ ದೇಶದ ಎಲ್ಲ ರೈತರ ಎಲ್ಲಾ ಸಾಲವನ್ನು ಏಕಕಾಲಕ್ಕೆ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಜನ ಸಂಖ್ಯೆಗೆ ಸಂಬಂಧಿಸಿದಂತೆ ಮಾತ್ರ ಮರು ಸಮೀಕ್ಷೆ : ಸಿದ್ದರಾಮಯ್ಯ
ರಾಜ್ಯ ಕಾಂಗ್ರೇಸ್ ಸರಕಾರ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ರೈತರಿಗೆ ಕೊಟ್ಟ ಆಶ್ವಾಸನೆಗಳನ್ನು ಎರಡು ವರ್ಷಗಳಾದರೂ ಈಡೇರಿಸದೇ ಮೋಸ ಮಾಡುತ್ತಿದೆ. ವಿದ್ಯುತ್ ಖಾಸಗೀಕರಣ, ಕೃಷಿ ಕಾಯ್ದೆ ವಾಪಾಸ್ಸು ಪಡೆಯುವುದು, ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡುವುದು ಸೇರಿದಂತೆ ರೈತರ ಪ್ರಮುಖ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು.
ಹಾವೇರಿ ಜಿಲ್ಲೆಯ ರೈತರ ಬಹು ವರ್ಷಗಳ ಬೇಡಿಕೆಯಾದ ವರದಾ-ಬೇಡ್ತಿ ನದಿ ಜೋಡಣೆಯನ್ನು ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಕೇಂದ್ರ, ರಾಜ್ಯ ಸರಕಾರಗಳ ರೈತ ವಿರೋಧಿ ಧೋರಣೆಗಳ ವಿರುದ್ಧ ರೈತರು ಐಕ್ಯ ಚಳುವಳಿಗೆ ಮುಂದಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಹುತಾತ್ಮ ರೈತ ಸಿದ್ಲಿಂಗಪ್ಪ ಚೂರಿ, ಪುಟ್ಟಪ್ಪ ಹೊನ್ನತ್ತಿ ಅಮರ ರಹೇ! ಹಾಗೂ ರೈತ ವಿರೋಧಿ ನೀತಿಗಳನ್ನು ಜಾರಿ ಮಾಡುತ್ತಿರುವ ಸರಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಎಸ್ಎಫ್ಐ ಜಿಲ್ಲಾಧ್ಯಕ್ಷರಾದ ಬಸವರಾಜ ಎಸ್, ಎಸ್ಎಫ್ಐ-ಡಿವೈಎಫ್ಐ ಮುಖಂಡರಾದ ಸುನೀಲ್ ಕುಮಾರ್ ಎಲ್, ಮಾಬುಲಿ ಮದರಂಗಿ, ಸುಭಾಸ್ ಮಡಿವಾಳರ, ರೈತ ಸಂಘಟನೆಯ ಜಿಲ್ಲಾ ಮುಖಂಡರಾದ ಶಿವಬಸಪ್ಪ ಗೋವಿ, ಸುರೇಶ ಚಲವಾದಿ ಸೇರಿದಂತೆ ಇನ್ನಿತರರು ಇದ್ದರು.
ಇದನ್ನೂ ನೋಡಿ: ಜನ ಸಂಖ್ಯೆಗೆ ಸಂಬಂಧಿಸಿದಂತೆ ಮಾತ್ರ ಮರು ಸಮೀಕ್ಷೆ : ಸಿದ್ದರಾಮಯ್ಯ | Janashakthi Media