ಸುರತ್ಕಲ್ ವಲಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರ: ಸಿಪಿಐಎಂ ಪ್ರತಿಭಟನೆ ಎಚ್ಚರಿಕೆ

ಮಂಗಳೂರು: ನಗರ ಪಾಲಿಕೆಯ ಕಾಟಿಪಳ್ಳ, ಕೃಷ್ಣಾಪುರ, ಕಾನ, ಕುಳಾಯಿ ಸೇರಿದಂತೆ ಸುರತ್ಕಲ್ ವಲಯ ವ್ಯಾಪ್ತಿಯ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಗಂಭೀರ ಸಮಸ್ಯೆ ಉದ್ಭವಾಗಿದೆ. ಕೆಲವು ವಾರ್ಡ್ ಗಳಲ್ಲಿ ವಾರಗಳ ಕಾಲ ನೀರು ಪೂರೈಕೆಯಾಗದಿರುವ, ಮೂರು ದಿನಗಳಿಗೊಮ್ಮೆ ಕೆಲವು ಗಂಟೆಗಳ ಕಾಲ ಮಾತ್ರ ನೀರು ಪೂರೈಕೆಯಾಗುವ ಸ್ಥಿತಿ ಇದೆ ಎಂದು ಕಾರ್ಯದರ್ಶಿ ಶ್ರೀನಾಥ್ ಕುಲಾಲ್ ಹೇಳಿದ್ದಾರ.

ಇದರಿಂದ ಜನ ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಈ ಕುರಿತು ಹಲವು ದೂರುಗಳು ಸಲ್ಲಿಕೆಯಾಗಿದ್ದರೂ ನಗರ ಪಾಲಿಕೆ ಅಧಿಕಾರಿಗಳು ಸಮಸ್ಯೆ ಬಗೆಹರಿಸುತ್ತಿಲ್ಲ. ನಗರ ಪಾಲಿಕೆಯ ಆಡಳಿತ ಬೇಜವಾಬ್ದಾರಿತನ ತೊರೆದು ತಕ್ಷಣವೆ ಸಮಸ್ಯೆ ಪರಿಹರಿಸಬೇಕು, ನಿಯಮದಂತೆ ಪ್ರತಿದಿನ ನೀರು ಪೂರೈಸಬೇಕು, ಇಲ್ಲದಿದ್ದಲ್ಲಿ ಸಂತ್ರಸ್ತ ನಾಗರಿಕರನ್ನು ಸೇರಿಸಿ ನಗರ ಪಾಲಿಕೆಗೆ ಮುತ್ತಿಗೆ ಹಾಕಲಾಗುವುದು ಎಂದು ಸಿಪಿಐಎಂ ಸುರತ್ಕಲ್ ವಿಭಾಗ ಸಮಿತಿ ಎಚ್ಚರಿಸಿದೆ.

ಸುರತ್ಕಲ್ ವಲಯದ ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಅನಧಿಕೃತ ರೇಷನಿಂಗ್ ಪದ್ದತಿ ಜಾರಿಯಲ್ಲಿದೆ. ಕಳೆದ ಮಳೆಗಾಲದಲ್ಲಿ ಡ್ಯಾಂಗಳಲ್ಲಿ ನೀರು ಶೇಖರಣೆಗೊಂಡ ತರುವಾಯ, ಮಂಗಳೂರು ನಗರ ವ್ಯಾಪ್ತಿಯಲ್ಲಿ ಮೂರು ದಿನಕ್ಕೊಮ್ಮೆ ನೀರು ಪೂರೈಸುವ ರೇಷನಿಂಗ್ ಪದ್ದತಿ ಕೈ ಬಿಡಲಾಗಿತ್ತು‌.

ಇದನ್ನೂ ಓದಿ: ಮೆಟ್ರೋ ಟಿಕೆಟ್ ದರ ಏರಿಕೆ ಎಫೆಕ್ಟ್ – ಬೆಂಗಳೂರಿನಲ್ಲಿ ಟ್ರಾಫಿಕ್, ವಾಯುಮಾಲಿನ್ಯ ಹೆಚ್ಚಳ

ಪ್ರತಿದಿನ ನೀರು ಪೂರೈಕೆಯ ನೀತಿ ಜಾರಿಗೆ ಬಂದಿತ್ತು. ಆದರೆ, ಸುರತ್ಕಲ್ ವಲಯದಲ್ಲಿ ಮಾತ್ರ ಮೂರು ದಿನಕ್ಕೊಮ್ಮೆ ನೀರು ಪೂರೈಸುವ ರೇಷನಿಂಗ್ ಪದ್ದತಿ ಅನಧಿಕೃತವಾಗಿ ಈವರೆಗೂ ಮುಂದುವರಿದಿದೆ ಎಂದರು.

ಅದರ ಜೊತೆಗೆ ಕೆಲವು ವಾರ್ಡ್ ಗಳಲ್ಲಿ ನಾಲ್ಕೈದು ದಿನಗಳಿಗೊಮ್ಮೆ ನೀರು ಪೂರೈಸುವ, ಹಲವು ಪ್ರದೇಶಗಳಲ್ಲಿ ವಾರಗಳ ಕಾಲ ನೀರು ಪೂರೈಕೆ ಆಗದಿರುವುದೂ ನಡೆಯುತ್ತಿದೆ. ಈ ಕುರಿತು ಅಧಿಕಾರಿಗಳಿಗೆ ದೂರು ನೀಡಿದರೆ ಪ್ರತಿಕ್ರಿಯಿಸದಿರುವುದು, ಹಾರಿಕೆಯ ಉತ್ತರ ನೀಡುವುದು, ಜಲಸಿರಿ ಕಾಮಗಾರಿಯ ನೆಪ ಹೇಳಿ ಜಾರಿಕೊಳ್ಳುವುದೂ ನಡೆಯುತ್ತಿದೆ‌.

ನೀರು ಸರಬರಾಜಿನ ಪೈಪ್ ಗಳು ಒಡೆದಲ್ಲಿ ಗಂಟೆಗಳಲ್ಲಿ ಮಾಡಬೇಕಾದ ರಿಪೇರಿಗಳಿಗೆ ಮೂರ್ನಾಲ್ಕು ದಿನಗಳ ದೀರ್ಘ ಅವಧಿ ಪಡೆದು ಸತಾಯಿಸಲಾಗುತ್ತಿದೆ. ಕುಡಿಯುವ ನೀರು ಪೂರೈಸುವ ಡ್ಯಾಂ ಗಳು ಭರ್ತಿ ಆಗಿರುವ ಈ ಅವಧಿಯಲ್ಲಿ ಈ ರೀತಿ ನೀರಿಗೆ ಕೃತಕ ಅಭಾವ ಬಂದಿರುವುದರಿಂದ ಜನ ಬೇಸತ್ತು ಹೋಗಿದ್ದಾರೆ‌ ಎಂದರು.

ಜನಪ್ರತಿನಿಧಿಗಳೂ ಈ ಕುರಿತು ತಮ್ಮ ಜವಾಬ್ದಾರಿ ಮರೆತಿರುವುದು ಕುಡಿಯುವ ನೀರಿನ ಸಮಸ್ಯೆಯನ್ನು ಮತ್ತಷ್ಟು ಗಂಭೀರವಾಗಿಸಿದೆ. ಅದರಲ್ಲೂ ಕಾಟಿಪಳ್ಳ, ಕೃಷ್ಣಾಪುರ, ಕುಳಾಯಿ, ಕಾನ ಮುಂತಾದ ವಾರ್ಡ್ ಗಳಲ್ಲಿ ಸಮಸ್ಯೆ ಅತೀ ಹೆಚ್ಚಾಗಿದೆ.

ಮಂಗಳೂರು ನಗರ ಪಾಲಿಕೆ ಅಧಿಕಾರಿಗಳು ಅಸಡ್ಡೆಯನ್ನು ತೊರೆದು ಈ ಭಾಗದ ಕುಡಿಯುವ ನೀರು ಸರಬರಾಜಿನ ಸಮಸ್ಯೆಗಳನ್ನು ಬಗೆಹರಿಸಬೇಕು. ಮೂರು ದಿನಗಳಿಗೊಮ್ಮೆ ನೀರು ಪೂರೈಸುವ ಅನಧಿಕೃತ, ಅನ್ಯಾಯದ ರೇಷನಿಂಗ್ ಪದ್ದತಿಯನ್ನು ಕೈ ಬಿಟ್ಟು ನಿಯಮದಂತೆ ಪ್ರತಿ ದಿನ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದದಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಿಪಿಐಎಂ ಸುರತ್ಕಲ್ ವಿಭಾಗ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

ಇದನ್ನೂ ನೋಡಿ: ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ಕಳ್ಳ ಕಾಕರ ಪಾಲಾಗದಿರಲಿ – ಎಸ್.‌ ವರಲಕ್ಷ್ಮಿ Janashakthi Media

Donate Janashakthi Media

Leave a Reply

Your email address will not be published. Required fields are marked *