ಬೆಂಗಳೂರು : ಕಿಲೋಮೀಟರ್ಗಟ್ಟಲೆ ಉದ್ದದ ಸರತಿ ಸಾಲಲ್ಲಿ ನಿಂತರೂ ಯೂರಿಯಾ ಸಿಗದೆ ಅದೆಷ್ಟೋ ಮಂದಿ ರೈತರು ಹಿಂದಿರುಗಿದ್ದರು. ಈ ನಡುವೆ ರೈತರಿಗೆ ಹಂಚಿಕೆಯಾಗಬೇಕಿದ್ದ ಯೂರಿಯಾ ಕಾಳಸಂತೆಯಲ್ಲಿ ಮಾರಾಟವಾಗಿರುವ ಆತಂಕಕಾರಿ ವಿಷಯ ಬಹಿರಂಗವಾಗಿದೆ. ರಾಜ್ಯಕ್ಕೆ ವಿನಾಯಿತಿ ದರದಲ್ಲಿ ಕೇಂದ್ರ ಸರ್ಕಾರ ಕೊಡುತ್ತಿರುವ ಯೂರಿಯಾದ ಅಭಾವದಿಂದಾಗಿ ಈ ಬಾರಿ ರೈತರು ಪರದಾಟ ನಡೆಸಿದ ಸಾಕಷ್ಟು ಘಟನೆಗಳು ನಡೆದಿತ್ತು.
ಇದನ್ನೂ ಓದಿ : ವಿಜಯನಗರ | ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಲಪನಗುಡಿಯಲ್ಲಿ ನೃತ್ಯ, ನಾಟಕೋತ್ಸವ
ರೈತರಿಗೆ ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದ್ದ ಯೂರಿಯಾ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. 200 ರೂ. ಯೂರಿಯಾ 1,500 ರೂ.ಗೆ ಮಾರಾಟ ಮಾಡುತ್ತಿದ್ದ ಜಾಲವನ್ನು DRI (ಕಂದಾಯ ಗುಪ್ತಚರ ನಿರ್ದೇಶನಾಲಯ) ಅಧಿಕಾರಿಗಳ ತಂಡ ಪತ್ತೆ ಮಾಡಿದೆ. ಅಕ್ರಮವಾಗಿ ಸಂಗ್ರಹಿಸಿದ್ದ 190 ಟನ್ ಯೂರಿಯಾವನ್ನು ವಶಕ್ಕೆ ಪಡೆದಿದೆ.



ಈ ದಾಳಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಕೂಡ ಸಂಗ್ರಹಿಸಿರುವೆ. ನೆಲಮಂಗಲದಲ್ಲಿ ಅಕ್ರಮ ಯೂರಿಯಾ ದಾಸ್ತಾನು ಮೇಲೆ ನಡೆದ ದಾಳಿ ವಿಚಾರ ಕುರಿತು ಮಂಡ್ಯದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಕೇಂದ್ರ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ಮಾಡಿ ಸಬ್ಸಿಡಿ ಯೂರಿಯಾ ಮಾರಾಟದ ಜಾಲವನ್ನು ಪತ್ತೆ ಮಾಡಿದ್ದಾರೆ. ನಾನು ಮಂತ್ರಿಯಾದ ಮೇಲೆ ಕೆಲವು ಲೀಗಲಿ ಕೇಸ್ ಹಾಕಲು ತೊಂದರೆ ಆಗಿದ್ದರಿಂದ ರೆವಿನ್ಯೂ ಇಲಾಖೆ, ತೆರಿಗೆ, ಪೊಲೀಸರು ಜಂಟಿಯಾಗಿ ಕಮಿಟಿ ಮಾಡುವ ಮೂಲಕ ಇಂತಹ ಅಕ್ರಮ ಜಾಲವನ್ನು ಹತ್ತಿಕ್ಕಲು ಮುಂದಾಗಲಾಗಿತ್ತು. ಅದರ ಉಪಯೋಗ ಈಗ ಆಗಿದೆ. ಕೇರಳದಿಂದ ಚೆನ್ನೈಗೆ ಸಪ್ಲೈ ಆಗುತ್ತಿದ್ದ ದಾಸ್ತಾನು ಇದಾಗಿತ್ತು ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ.
ಕೇರಳ ರಾಜ್ಯದಿಂದ ತಮಿಳುನಾಡಿಗೆ ಹೋಗುವ ಯೂರಿಯಾವಾಗಿದ್ದು, ನಮ್ಮ ರಾಜ್ಯದ ಗೋಡಾನ್ ಬಳಕೆ ಮಾಡಿಕೊಂಡಿದ್ದಾರೆ. 88 ಲಕ್ಷ ಮೌಲ್ಯದ 190ಮೆಟ್ರಿಕ್ ಟನ್ ಯೂರಿಯಾ ಇದಾಗಿದೆ. ತಾಜೀರ್ ಎಂಬವನು ಈ ಅಕ್ರಮ ಜಾಲದ ಕೇಂದ್ರ ಬಿಂದು ಆಗಿದ್ದು, ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬರಬೇಕಿದೆ. ಈ ದಾಳಿಯಲ್ಲಿ ಕೇಂದ್ರದ ಜಾರಿ ದಳ ಅಷ್ಟೇ ಅಲ್ಲ, ರಾಜ್ಯದ ದಳ ಕೂಡ ಭಾಗಿಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ನೋಡಿ : ’ಕಸ ನಿರ್ವಹಣೆ–ಜನರಿಗೂ ಇದೆ ಹೊಣೆ’ Janashakthi Media
