ಡಾ.ಆರ್‌.ವಿ. ಭಂಡಾರಿ ಅವರ ಕವನ ಪರಿಷ್ಕೃತ ಪಠ್ಯಪುಸ್ತಕದಲ್ಲಿ ಅಳವಡಿಕೆಗೆ ಅನುಮತಿ ಇಲ್ಲ

ಬೆಂಗಳೂರು : ರಾಜ್ಯದ ಪಠ್ಯಪುಸ್ತಕ ಮರು ಪರಿಷ್ಕರಣೆಯ ಹಿನ್ನೆಲೆಯಲ್ಲಿ ಸಾಕಷ್ಟು ವಿವಾದಗಳು ಸೃಷ್ಟಿಯಾಗುತ್ತಿದ್ದು, ಹಲವು ಸಾಹಿತಿಗಳು, ಬರಹಗಾರರು ತಮ್ಮ ಲೇಖನ ಅಥವ ಕವನವನ್ನು ಹಿಂಪಡೆದುಕೊಳ್ಳುತ್ತಿದ್ದಾರೆ. ಈ ಸಾಲಿಗೆ ಡಾ. ಆರ್. ವಿ. ಭಂಡಾರಿ ಅವರು ಬರೆದಿರುವ ಕವನವನ್ನು ಪರಿಷ್ಕೃತ ಪಠ್ಯದಲ್ಲಿ ಅಳವಡಿಸಿಕೊಳ್ಳದಿರಿ ಎಂದು ರಾಜ್ಯದ ಶಿಕ್ಷಣ ಸಚಿವರಿಗೆ ಯಮುನಾ ಗಾಂವ್ಕರ್ ಪತ್ರ ಬರೆದಿದ್ದಾರೆ.

ಕಳೆದ ಅವಧಿಯಲ್ಲಿ ತಿಳಿ ಕನ್ನಡ, ದ್ವಿತೀಯ ಭಾಷಾ ಕನ್ನಡ ಪಠ್ಯಪುಸ್ತಕ, ಪರಿಷ್ಕೃತ, (ಎರಡನೇ ಭಾಷೆ, ಕನ್ನಡ ಪಠ್ಯಪುಸ್ತಕ) ಎಂಟನೆಯ ತರಗತಿಯ ಪರಿವಿಡಿಯ ಪದ್ಯಭಾಗದ ೨ ನೇ ಕವನ ಪುಟ ಸಂಖ್ಯೆ ೬೯-೭೧ ರಲ್ಲಿರುವ ಆರ್. ವಿ. ಭಂಡಾರಿಯವರು ಬರೆದ “ಹಾರಿದ ಹಕ್ಕಿಗಳು” ಕವನವನ್ನು ಪಠ್ಯದಲ್ಲಿ ಬಳಸಲು ನೀಡಿದ ಪರವಾನಗಿಯನ್ನು ಡಾ. ಆರ್. ವಿ. ಭಂಡಾರಿಯವರ ಕುಟುಂಬದ ಪರವಾಗಿ ನೀಡಲಾಗಿತ್ತು.

ರಾಜ್ಯ ಸರ್ಕಾರವು ಪಠ್ಯಪುಸ್ತಕ ಮರು ಪರಿಷ್ಕೃತ ವಿಚಾರವಾಗಿ ಸಾಕಷ್ಟು ಗೊಂದಲಗಳನ್ನು ಸೃಷ್ಠಿಸುತ್ತಿರುವ ಹಿನ್ನೆಲೆಯಲ್ಲಿ ಈ ಪಠ್ಯವನ್ನು ಹಿಂಪಡೆದ ಪತ್ರ ತಮಗೆ ಕಳಿಸಲಾಗಿದೆ ಎಂದು ಯಮುನಾ ಗಾಂವ್ಕರ್‌ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನಾಡಿನ ಜನತೆಯ ಸಾಕ್ಷಿ ಪ್ರಜ್ಞೆಯಂತಿದ್ದ ಡಾ. ಆರ್. ವಿ. ಭಂಡಾರಿಯವರು ಅರವತ್ತರ ದಶಕದಲ್ಲಿಯೇ ಎರಡು ಸ್ನಾತಕೋತ್ತರ ಉನ್ನತ ಪದವಿಗಳನ್ನು ನಂತರ ಸಂಶೋಧನಾ ಪ್ರಬಂಧವನ್ನು ಸಲ್ಲಿಸಿ ಪಿಎಚ್.ಡಿ ಪದವಿ ಪಡೆದವರು. ಕೊನೆಯವರೆಗೂ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ತೀರಾ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದರು. ಮೂವತ್ತೈದು ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ ಅವರು, ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಅವರ ಮನಸ್ಸನ್ನು ಅರಳಿಸುವ ಪರಿಯನ್ನು  ವೈಜ್ಞಾನಿಕವಾಗಿ ಅರ್ಥ ಮಾಡಿಕೊಂಡವರು.

ಡಾ. ಆರ್‌.ವಿ.ಭಂಡಾರಿ ಅವರು, ನೂರಾರು ಪುಸ್ತಕ ಬರೆದು ಮಕ್ಕಳ ಸಾಹಿತ್ಯ, ವಿಮರ್ಶೆ, ಕತೆ, ಕಾದಂಬರಿ, ವೈಚಾರಿಕ, ಮಾನವಿಕ ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾದವರು. ಪ್ರಸಿದ್ಧ ತಾಳಮದ್ದಲೆ ಅರ್ಥಧಾರಿಗಳೂ ಆಗಿದ್ದರು. ಸಾಕ್ಷರತಾ ಆಂದೋಲನವನ್ನು ಒಳಗೊಂಡು ಶೈಕ್ಷಣಿಕ ಎಲ್ಲಾ ಕೆಲಸಗಳಲ್ಲಿ ತೊಡಗಿಸಿಕೊಂಡವರು. ಅಂದು ಸಾಹಿತ್ಯ ಅಕಾಡೆಮಿ, ಕನ್ನಡ ಜಾಗೃತಿ ಸಮಿತಿ, ಗ್ರಂಥಾಲಯ ಸಮಿತಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ನಲವತ್ತು ದಶಕಗಳ ಕಾಲ ವಿವಿಧ ಸರ್ಕಾರಗಳ ಅವಧಿಯಲ್ಲಿ ಪಠ್ಯ ಪುಸ್ತಕ ರಚನೆಗೆ ತನ್ನ ಪ್ರಬುದ್ಧ ಸಲಹೆಗಳನ್ನು, ಅಗತ್ಯವಿದ್ದಲ್ಲಿ ಸೂಕ್ತ ಮಾರ್ಪಾಡುಗಳನ್ನು ಸೂಚಿಸುವಲ್ಲಿ ತೊಡಗಿಸಿಕೊಂಡಿದ್ದರು.

ಪತ್ರವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರಿಗೆ  ಅಂಚೆ ಮೂಲಕ ಮತ್ತು ಈ ಮೇಲ್ ಮೂಲಕ ಯಮುನಾ ಗಾಂವ್ಕರ್‌ ಅವರು ಕುಟುಂಬದ ಪರವಾಗಿ ಕಳುಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *