ಸಾರ್ವಜನಿಕರಿಂದ ಸನ್ಮಾನ ರೂಪದಲ್ಲಿ ಹಾರ-ತುರಾಯಿ, ಶಾಲು-ಶಲ್ಯಗಳನ್ನು ಸ್ವೀಕರಿಸಲ್ಲ; ಪುಸ್ತಕಗಳನ್ನು ನೀಡಬಹುದು – ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸನ್ಮಾನ ರೂಪದಲ್ಲಿ ಸಾರ್ವಜನಿಕರಿಂದ ಹಾರ ಶಾಲು ಹೂವಿನ ಗುಚ್ಛಗಳನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ. ಒಂದು ವೇಳೆ ಪ್ರೀತಿಯಿಂದ ಕೊಡಬೇಕು ಎಂದಿದ್ದರೆ ಪುಸ್ತಕಗಳನ್ನು ನೀಡುವಂತೆ ತಿಳಿಸಿದ್ದಾರೆ. ಈ ಕುರಿತು ಭಾನುವಾರ ಟ್ವೀಟ್‌ ಮಾಡಿರುವ ಅವರು, ” ನಾಳೆಯಿಂದ ಸಾರ್ವಜನಿಕರಿಂದ ಗೌರವ-ಸನ್ಮಾನದ ರೂಪದಲ್ಲಿ ಹಾರ-ತುರಾಯಿ, ಶಾಲು-ಶಲ್ಯಗಳನ್ನು ಸ್ವೀಕರಿಸದೆ ಇರಲು ನಿರ್ಧರಿಸಿದ್ದೇನೆ. ಇದು ನನ್ನ ಮನೆ-ಕಚೇರಿ ಮತ್ತು ಸಾರ್ವಜನಿಕ ಸಮಾರಂಭಗಳಿಗೂ ಅನ್ವಯ. ಪ್ರೀತಿ-ಗೌರವವನ್ನು ಕಾಣಿಕೆಗಳ ಮೂಲಕವೇ ಸಲ್ಲಿಸಬೇಕೆನ್ನುವವರು ಪುಸ್ತಕಗಳನ್ನು ನೀಡಬಹುದು. ನಿಮ್ಮೆಲ್ಲರ ಪ್ರೀತಿ-ಅಭಿಮಾನ ಸದಾ ನನ್ನ ಮೇಲಿರಲಿ ” ಎಂದಿದ್ದಾರೆ.

ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಬರುವವರು ಸಾವಿರಾರು ಮಂದಿ ದೊಡ್ಡ ದೊಡ್ಡ ಹೂಗುಚ್ಛಗಳನ್ನು ಹಿಡಿದುಕೊಂಡು ಹೋಗುತ್ತಾರೆ. ಮಾತ್ರವಲ್ಲದೇ ಪೇಟ ಶಲ್ಯ ಹಾರಗಳನ್ನು ತೆಗೆದುಕೊಂಡು ಹೋಗಿ ಹಾಕಿ ಅಭಿಮಾನ ತೋರಿಸುತ್ತಾರೆ. ಆದರೆ, ಗೂಗುಚ್ಛ ಒಂದು ಅಥವಾ ಎರಡು ದಿನಕ್ಕೆ ಹಾಳಾಗುತ್ತದೆ. ಇನ್ನು ಸಾಕಷ್ಟು ಶಲ್ಯಗಳು ಅನಗತ್ಯ ವ್ಯರ್ಥವಾಗುತ್ತವೆ. ಹೀಗಾಗಿಯೇ ಅನಗತ್ಯ ದುಂದು ವೆಚ್ಚ ಮಾಡದೇ ನಿಮ್ಮ ಪ್ರೀತಿಯನ್ನು ತೋರಿಸಿದರೆ ಸಾಕು ಎಂಬ ಕಾರಣಕ್ಕೆ ಸಿದ್ದರಾಮಯ್ಯ ಈ ನಿರ್ಧಾರಕ್ಕೆ ಬಂದಿರಬಹುದು. ಅದರ ಮೇಲೆಯೂ ಇಚ್ಛೆ ಇದ್ದರೆ ನನಗೆ ಪುಸ್ತಕಗಳನ್ನು ನೀಡಿ ಎಂದು ಅವರೇ ಹೇಳಿದ್ದಾರೆ.

ಪುಸ್ತಕಗಳಿದ್ದರೆ ಅದನ್ನು ಮತ್ತೊಬ್ಬರಿಗೆ ಓದಲು ನೀಡಬಹುದು. ಅಥವಾ ಉಡುಗೊರೆ ರೂಪದಲ್ಲಿ ಮತ್ತೊಬ್ಬರಿಗೆ ಅಥವಾ ಶಾಲಾ ಕಾಲೇಜು ಅರ್ಹ ಮಕ್ಕಳಿಗೆ ತಲುಪಿಸಬಹುದು. ಈ ಮೂಲಕ ಪುಸ್ತಕ ಅಭಿರುಚಿಯು ಹೆಚ್ಚಲಿದೆ. ಪುಸ್ತಕದಿಂದ ಜ್ಞಾನ ವಿಚಾರ ವಿನಿಮಯವಾಗಲಿದೆ ಎಂಬ ಮತ್ತೊಂದು ಉದ್ದೇಶವನ್ನು ನೂತನ ಮುಖ್ಯಮಂತ್ರಿಗಳು ಹೊಂದಿರಬಹುದು. ಜೀರೋ ಟ್ರಾಫಿಕ್‌ ನಿರಾಕರಿಸಿದ್ದ ಸಿದ್ದರಾಮಯ್ಯ ತಮಗೆ ಒದಗಿಸಲಾಗಿರುವ ಜೀರೋ ಟ್ರಾಫಿಕ್‌ ಸೌಲಭ್ಯ ವಾಪಸ್‌ ಪಡೆಯುವಂತೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಈ ಮೂಲಕ ಅವರು ಮೇಲ್ಪಂಕ್ತಿ ಹಾಕಿಕೊಟ್ಟಿದ್ದರು. ಬೆಂಗಳೂರಿನಲ್ಲಿಸಂಚಾರ ದಟ್ಟಣೆ ಸರ್ವೇ ಸಾಮಾನ್ಯ ಎಂಬಂತಾಗಿದೆ. ಅದರಲ್ಲೂಬೆಳಗ್ಗೆ ಮತ್ತು ಸಂಜೆ ಅತಿಯಾದ ಸಂಚಾರ ದಟ್ಟಣೆ ಇರುತ್ತದೆ. ಇಂಥ ಸಂದರ್ಭದಲ್ಲಿವಿಐಪಿಗಳಿಗೆ ಜೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಿದಾಗ ಜನರು ಬಹಳ ತೊಂದರೆ ಅನುಭವಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈ ನಿರ್ಧಾರ ಕೈಗೊಂಡಿದ್ದರು. ಈ ಬೆನ್ನಲ್ಲೆ ಈ ನಿರ್ಧಾರಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ.

ನಿಮ್ಮ ಸಂಪುಟದ ಉಪಮುಖ್ಯಮಂತ್ರಿ, ಗೃಹ ಸಚಿವ ಸೇರಿದಂತೆ ಎಲ್ಲಹಿರಿಯ ಸಚಿವರಿಗೆ ಕೂಡ ಅವರಿಗೂ ಸಲಹೆ ನೀಡಿ. ಎಲ್ಲರೂ ನಿಮ್ಮನ್ನು ಅನುಸರಿಸಲಿ ಎಂದು ಸಾಮಾಜಿಕ ಜಾಲತಾಣದಲ್ಲೂನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *