ಕಾರ್ಪೊರೇಟ್ ಭೂ ಕಬಳಿಕೆಗೆ ಪ್ರೊತ್ಸಾಹ ನೀಡುವ ನಿರಾಶೆ ಬಜೆಟ್: KPRS ಟೀಕೆ

ಬೆಂಗಳೂರು: ರಾಜ್ಯಾದ್ಯಂತ ವರದಿಯಾಗುತ್ತಿರುವ ರೈತ-ಕೃಷಿಕೂಲಿಕಾರರ ಆತ್ಮಹತ್ಯೆಗಳು, ವಲಸೆ-ಮರುವಲಸೆ ಸಂಕಟಗಳು, ತೀವ್ರ ಗತಿಯಲ್ಲಿ ಹೆಚ್ಚುತ್ತಿರುವ ಗ್ರಾಮೀಣ ನಿರುದ್ಯೋಗ ಮತ್ತು ಸಾಲಭಾಧೆಗೆ ಪರಿಹಾರ ಒದಗಿಸುವಲ್ಲಿ 2026-27 ರ ಈ ಬಜೆಟ್ ಕೂಡ ವಿಫಲವಾಗಿದೆ ಹಾಗೂ ಕಾರ್ಪೊರೇಟ್ ಭೂ ಕಬಳಿಕೆಗೆ ದೊಡ್ಡ ಪ್ರಮಾಣದ ಉತ್ತೇಜನ ಒದಗಿಸಿದೆ  ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಕಟು ಟೀಕೆ ಮಾಡಿದೆ. ಕಬಳಿಕೆ

ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ಡೆವಲಪರ್ ಗಳಿಗೆ ತಮ್ಮ ಕಛೇರಿ ಹಾಗೂ ಮನೆಯಲ್ಲೇ ಭೂಮಿ ನೋಂದಣಿ ಮಾಡಿಕೊಳ್ಳುವುದನ್ನು ಸಕ್ರಮಗೊಳಿಸುವ ನೋಂದಣಿ ಕಾಯ್ದೆಯ ಪ್ರಸ್ತಾಪ ,ಕೃಷಿ ಭೂಮಿ ಪಹಣಿಗಳಿಗೆ ಆಧಾರ್ ಜೋಡಿಸಿ ಡಿಜಿಟಲೀಕರಣಗೊಳಿಸುವುದು  ಈಗಾಗಲೇ ಕೇಂದ್ರಿಕೃತವಾಗಿ ನಿರ್ವಹಿಸಲ್ಪಡುತ್ತಿರುವುದರಿಂದ  ಇಂತಹ ಪ್ರಸ್ತಾಪಗಳು ರೈತರ ಕೃಷಿ ಭೂಮಿ ದಾಖಲೆಗಳನ್ನೇ ತಿರುಚುವ ಅವಕಾಶವನ್ನು ನಕಲಿ ದಾಖಲಾತಿ ಸೃಷ್ಟಿಸಿ ಭೂ ಕಬಳಿಕೆ ಮಾಡುತ್ತಿದ್ದ ಖದೀಮರಿಗೆ ಅವಕಾಶ ಕೊಟ್ಟಂತೆ ಆಗುತ್ತದೆ.  ಭೂ ಗಳ್ಳತನದಂತಹ  ಹೊಸ ಹೊಸ ಸೈಬರ್ ಅಪರಾಧಗಳಿಗೆ ಕಾರಣವಾಗಬಹುದಾದ ಆತಂಕವನ್ನು ಉಂಟು ಮಾಡಿವೆ. ಈ ಹಿನ್ನೆಲೆಯಲ್ಲಿ ಇಂತಹ ಯಾವುದೇ ರೀತಿಯ ತೊಂದರೆಗೆ ರೈತರನ್ನು ಸಿಲುಕಿಸುವುದಿಲ್ಲ ಎಂದು ಸ್ಪಷ್ಟ ಶ್ವೇತಪತ್ರ ಹೊರಡಿಸದೇ ಇಂತಹ ಕೆಲಸಕ್ಕೆ ಮುಂದಾಗಬಾರದು ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಆಗ್ರಹಿಸುತ್ತದೆ. ಕಬಳಿಕೆ

ನವ ಉದಾರೀಕರಣ ನೀತಿಗಳಿಗೆ ಮಣೆ ಹಾಕಿರುವ ಈ ಬಜೆಟ್ ಕೂಡ ಕೃಷಿ ಉತ್ಪಾದನೆ ಹಾಗೂ ಕೃಷಿ ಭೂಮಿ ರಕ್ಷಣೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಸಾಲಭಾಧೆಗೆ ತುತ್ತಾಗಿರುವ ಹಾಗೂ ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ಕಂಗೆಟ್ಟಿರುವ ರೈತ ಸಮುದಾಯಗಳಿಗೆ ಯಾವುದೇ ಪರಿಣಾಮಕಾರಿ ಪರಿಹಾರ ಒದಗಿಸಿಲ್ಲ. ಅಮೇರಿಕಾ ,ಯೂರೋಪಿಯನ್ ಒಕ್ಕೂಟ ಮುಂತಾದ ಇತ್ತೀಚಿನ ಮುಕ್ತ ವಾಣಿಜ್ಯ ಒಪ್ಪಂದಗಳಿಂದ ರಾಜ್ಯದ ರೈತರನ್ನು ರಕ್ಷಿಸುವ ಈ ಸಂದರ್ಭದ ಅಗತ್ಯವಾದ ಯಾವ  ಕ್ರಮವನ್ನು ಬಜೆಟ್ ಒದಗಿಸಿಲ್ಲ.  ಕೃಷಿಕರ ಆದಾಯ ಮತ್ತು ಜೀವನ ಭದ್ರತೆ ಹಾಗೂ ಕೃಷಿ ಉತ್ಪಾದನೆಯಲ್ಲಿ ಗಣನೀಯ ಕೊಡುಗೆ ನೀಡುತ್ತಿರುವ ಬಗರ್ ಹುಕುಂ, ಅರಣ್ಯ ಸಾಗುವಳಿ, ಗೇಣಿ ರೈತರ ಕಲ್ಯಾಣವನ್ನು ಮತ್ತು ಅವರ ಹಕ್ಕು ಪತ್ರದ ಹಕ್ಕು ಅನ್ನು ನಿರ್ಲಕ್ಷಿಸಲಾಗಿದೆ. ಕಬಳಿಕೆ

ಇದನ್ನೂ ಓದಿ: ಸಾರ್ವಜನಿಕ ಸಾರಿಗೆ ವ್ಯವಸ್ಥೆ: 4,000 ಎಲೆಕ್ಟ್ರಿಕ್‌ ಬಸ್‌ ಜಾರಿ!

ಬಲವಂತದ ಭೂ ಸ್ವಾಧೀನದ ವಿರುದ್ಧ ರಕ್ಷಣೆ ನೀಡುವಂತೆ, ಕೃಷಿ ಪಂಪ್ ಸೆಟ್ ಗಳಿಗೆ ಸ್ಮಾರ್ಟ್ ಮೀಟರ್ ಪ್ರೀಪೇಡ್ ಮೀಟರ್ ಅಳವಡಿಸುವ ಕೇಂದ್ರದ ವಿದ್ಯುತ್ ಖಾಸಗೀಕರಣ ನೀತಿಗೆ ನಿರಾಕರಣೆ,ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ  ಖಾತರಿ ಖರೀದಿಗೆ ವ್ಯವಸ್ಥೆ, ಸಾಲಭಾಧೆಯಿಂದ ಆತ್ಮಹತ್ಯೆಗೆ ತುತ್ತಾಗದಂತೆ ಕೇರಳ ಮಾದರಿಯಲ್ಲಿ ಋಣಮುಕ್ತ ಕಾಯ್ದೆ ಜಾರಿ ಮಾಡುವಂತೆ , ಕೈಗಾರಿಕಾ ಪ್ರದೇಶಾಭಿವೃದ್ಧಿ ಹೆಸರಿನಲ್ಲಿ ಭೂ ಮಾಪಿಯಾದ ಚಟುವಟಿಕೆಗಳನ್ನು ನಿಯಂತ್ರಿಸಿ ಕೃಷಿ ಭೂಮಿಯ ಕಾರ್ಪೊರೇಟ್ ಲೂಟಿ ತಡೆಯುವಂತೆ, ಗ್ರಾಮೀಣ ಜನತೆ ಭೂ ಹೀನತೆ ಹಾಗೂ ವಸತಿ ಹೀನತೆಗೆ ನಿವಾರಿಸುವಂತೆ  ಬಜೆಟ್ ಪೂರ್ವ ದಲ್ಲಿ ತೀವ್ರ ಪ್ರತಿಭಟನೆ ಮೂಲಕ ಒತ್ತಾಯಿಸಿದ್ದರೂ ಈ ಬಜೆಟ್  ತೀವ್ರವಾಗಿ ಕಡೆಗಣಿಸಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಆಕ್ರೋಶ ವ್ಯಕ್ತಪಡಿಸಿದೆ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಆಗಿರುವ ನ್ಯಾಯಬದ್ಧ, ಶಾಸನಬದ್ದ ತೆರಿಗೆ ಪಾಲಿನಲ್ಲಿ ವಂಚನೆ,ಅಭಿವೃದ್ಧಿ ಅನುದಾನದಲ್ಲಿ ತಾರತಮ್ಯ, ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಅಗತ್ಯ ಅನುದಾನ ಒದಗಿಸದೇ ರಾಜ್ಯ ಸರ್ಕಾರಗಳ ಕತ್ತು ಹಿಸುಕುವ ಗಂಭೀರ ಸಮಸ್ಯೆ-ಸವಾಲುಗಳ ಮಧ್ಯೆಯೂ ಗ್ಯಾರಂಟಿ ಯೋಜನೆಗಳಿಗೆ ಹಾಗೂ ಕೆಲವು ಕಲ್ಯಾಣ ಕಾರ್ಯಕ್ರಮಗಳಿಗೆ ಪ್ರಯತ್ನ ನಡೆಸಲಾಗಿದೆ .ಆದರೆ ಕೃಷಿ ಬಿಕ್ಕಟ್ಟು, ನಿರುದ್ಯೋಗ, ಬೆಲೆ ಏರಿಕೆ ಯಂತಹ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಒದಗಿಸದೇ ಕೇವಲ ಗ್ಯಾರಂಟಿ ಯೋಜನೆಗಳು ರಾಜ್ಯದ ಅರ್ಥಿಕ ಅಭಿವೃದ್ದಿಗೆ ಯಾವುದೇ ಪರಿಣಾಮಕಾರಿ ಕೊಡುಗೆ ನೀಡಲು ಸಾಧ್ಯವಿಲ್ಲ ಎಂಬುದನ್ನು ಕಳೆದ ಮೂರು ವರ್ಷಗಳ ಗ್ಯಾರಂಟಿ ಅನುಭವ ತೋರಿಸಿಕೊಟ್ಟಿದೆ.  ಕಬಳಿಕೆ

ಶಿಕ್ಷಣ, ಆರೋಗ್ಯ ,ಕೃಷಿ ಮಾರುಕಟ್ಟೆ ,ವಸತಿ ಮುಂತಾದ ಕ್ಷೇತ್ರಗಳಲ್ಲಿ ಖಾಸಗೀಕರಣ ಹಾಗೂ ಖಾಸಗಿ ಸಹಭಾಗಿತ್ವವನ್ನೇ ಪ್ರೊತ್ಸಾಹಿಸಲಾಗುತ್ತಿದೆ. ಇದು ಮತ್ತಷ್ಟು ನಿರುದ್ಯೋಗ, ಕೃಷಿ ಬಿಕ್ಕಟ್ಟು, ಬೆಲೆ ಏರಿಕೆಗೆ ಕಾರಣವಾಗಲಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ(KPRS) ಕರ್ನಾಟಕ ರಾಜ್ಯ ಸಮಿತಿ ಅಭಿಪ್ರಾಯ ಪಡುತ್ತದೆ.

ಕಳೆದ ವಿಧಾನ ಸಭಾ ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಗಳಾದ ಕರಾಳ ಕೃಷಿ ಕಾಯ್ದೆಗಳು ಹಾಗೂ ಭೂ ಸ್ವಾಧೀನ ಕಾಯ್ದೆಗಳ ರದ್ದತಿ ಘೋಷಣೆ ಈ ಬಜೆಟ್ ನಲ್ಲೂ ಕೂಡ ಮಾಡಿಲ್ಲ. ಕೃಷಿ ಮಾರುಕಟ್ಟೆಯಲ್ಲಿ ಖಾಸಗಿ ಸಹಭಾಗಿತ್ವ ವನ್ನು ಪ್ರೋತ್ಸಾಹಿಸುವ ಪ್ರಸ್ತಾಪ ಅಪಾಯಕಾರಿಯಾಗಿದೆ. ಈಗಾಗಲೇ ಎಪಿಎಂಪಿ ಕಾಯ್ದೆಗಳನ್ನು ದುರ್ಬಲಗೊಳಿಸಿರುವ ಕಾರಣ ಹಾಗೂ ಖಾಸಗಿ ಸಗಟು ಮಾರುಕಟ್ಟೆಗಳಿಗೆ ಅವಕಾಶ ಕಲ್ಪಿಸಿರುವ ಕಾರಣ ಮತ್ತಷ್ಟು ತೊಂದರೆ ರೈತರಿಗೆ ಉಂಟಾಗಲಿದೆ. ಕೂಡಲೇ ಖಾಸಗಿ ಕೃಷಿ ಮಾರುಕಟ್ಟೆ ಪರ ಧೋರಣೆ ಕೈ ಬಿಟ್ಟು ಎಪಿಎಂಸಿ ಮಾರುಕಟ್ಟೆಗಳನ್ನು ಬಲಪಡಿಸಬೇಕು.  ಭೂ ಸುಧಾರಣೆ ಕಾಯ್ದೆ 2020 ಸೇರಿದಂತೆ ಎಲ್ಲಾ ಕರಾಳ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸುತ್ತದೆ.

ಕೇಂದ್ರದ ವಿಬಿ ಗ್ರಾಮ್ ಜಿ ಕಾಯ್ದೆಯನ್ನು ಬಲವಾಗಿ ವಿರೋಧಿಸಿ ಶಾಸನ ಸಭೆಯಲ್ಲಿ ನಿರ್ಣಯ ಮಾಡಿದ್ದ ರಾಜ್ಯ ಸರ್ಕಾರ , ಕಳೆದ ವರ್ಷಕ್ಕಿಂತ ಕಡಿಮೆ ಅನುದಾನವನ್ನು ಒದಗಿಸಿ , ಗ್ರಾಮೀಣ ಉದ್ಯೋಗ ಖಾತರಿಯನ್ನು ನಾಶ ಮಾಡುವ ಕೇಂದ್ರ ಸರ್ಕಾರದ ದುರುದ್ದೇಶಕ್ಕೆ ಬೆಂಬಲ ನೀಡಿದೆ. ಗ್ಯಾರಂಟಿ ಯೋಜನೆಗಳ ದಕ್ಷತೆ ಉತ್ತಮಪಡಿಸಿ, ವಿವಿಧ ಇಲಾಖೆಗಳ ಅನುದಾನದಲ್ಲಿ ಇರುವ ಸೋರಿಕೆ ತಡೆಗಟ್ಟಿ ಈಗ ಲಭ್ಯವಾಗುವ ಉದ್ಯೋಗ ಖಾತರಿ ಅನುದಾನವನ್ನು ಗ್ರಾಮೀಣ ಕೂಲಿಕಾರರಿಗೆ ಉದ್ಯೋಗ ನಷ್ಟವಾಗದಂತೆ ಬಳಸಲು ಇರುವ ಅವಕಾಶವನ್ನು ಕೈ ಚೆಲ್ಲಿದೆ. ಕೇಂದ್ರ ಸರ್ಕಾರದ ಒಕ್ಕೂಟ ವಿರೋಧಿ ಹಾಗೂ ರೈತ -ಕೃಷಿ ಕೂಲಿಕಾರರ ವಿರೋಧಿ ಧೋರಣೆಗಳನ್ನು ಹಿಮ್ಮೆಟ್ಟಿಸಲು ಬಡ ರೈತರು ಹಾಗೂ ಕೃಷಿ ಕೂಲಿಕಾರರನ್ನು ಸಶಕ್ತಗೊಳಿಸುವ ಎಲ್ಲಾ ಸಾಧ್ಯತೆಗಳನ್ನು ಬಳಸಿಕೊಳ್ಳದೇ ನಿರ್ಲಕ್ಷ್ಯ ತೋರಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಟೀಕಿಸುತ್ತದೆ.

ಇದನ್ನೂ ನೋಡಿ: ಗಾಂಧಿ, ನೆಹರೂ ವಿಚಾರಗಳ ಮೇಲೆ ದಾಳಿ: ಉಗ್ರಪ್ಪ ಆರೋಪJanashakthi Media

Donate Janashakthi Media

Leave a Reply

Your email address will not be published. Required fields are marked *