ಧರ್ಮದ ರೋಗ ದೇಶದಲ್ಲಿ ಅಪಾಯಕಾರಿಯಾಗಿ ಹರಡಿದೆ: ದಿನೇಶ್‌ ಗುಂಡೂರಾವ್‌

ಬೆಂಗಳೂರು: ದ್ವೇಷ ಭಾಷಣದಿಂದ ದೇಶದಲ್ಲಿ ಆತಂಕ ವಾತಾವರಣ ನಿರ್ಮಾಣವಾಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ಶಾಸಕ ದಿನೇಶ್‌ ಗುಂಡೂರಾವ್‌, ದ್ವೇಷ ಭಾಷಣ ಸರ್ಕಾರದ ಭಾಗವಾಗಿದ್ದು, ಇದನ್ನು ತಡೆಯುವರ‍್ಯಾರು ಎಂದು ಪ್ರಶ್ನಿಸಿರುವ ಅವರು, ಧರ್ಮದ ರೋಗ ದೇಶದಲ್ಲಿ ಅಪಾಯಕಾರಿಯಾಗಿ ಹರಡಿದೆ” ಎಂದು ಹೇಳಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ”ದ್ವೇಷ ಭಾಷಣ ದೇಶದ ವಾತಾವರಣ ಹದಗೆಡಿಸುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ವಿಪರ್ಯಾಸವೆಂದರೆ ದ್ವೇಷ ಭಾಷಣಕ್ಕೆ ಕಡಿವಾಣ ಹಾಕಬೇಕಿರುವ ಕೇಂದ್ರ ಸರ್ಕಾರವೇ ಈ ಭಾಷಣಗಳ ಪ್ರಾಯೋಜಕತ್ವ ವಹಿಸಿಕೊಂಡಿದೆ. ಸರ್ಕಾರದ ಭಾಗವಾಗಿರುವವರೇ ದೇಶವನ್ನು ದ್ವೇಷ ಭಾಷಣದಿಂದ ಇಬ್ಭಾಗ ಮಾಡುತ್ತಿದ್ದಾರೆ. ಹೀಗಿರುವಾಗ ದ್ವೇಷ ತಡೆಯುವರ‍್ಯಾರು?” ಎಂದಿದ್ದಾರೆ.

ಮುಂದುವರೆದು, ”ದೇಶದಲ್ಲಿ ದ್ವೇಷದ ಜನಕರೆ ಪ್ರಧಾನಿ ಮೋದಿ. ಮೋದಿ ಸರ್ಕಾರ ಜನರಲ್ಲಿ‌ ಧರ್ಮದ ವ್ಯಸನ ತುಂಬಿದ್ದೇ ಈ ದ್ವೇಷದ ವಾತಾವರಣಕ್ಕೆ ಕಾರಣ. ಮೋದಿ ಸರ್ಕಾರ ಬಹುತ್ವದ ಆಧಾರದ ಮೇಲೆ ನಿರ್ದಿಷ್ಟ ಸಮುದಾಯವೊಂದನ್ನು ಗುರಿ ಮಾಡಿ ದ್ವೇಷ ಹರಡೋ ಕ್ರಿಮಿಗಳಿಗೆ ನೀರೆರೆಯುತ್ತಿದೆ. ಅದರ ಪ್ರತಿಫಲ ಇಂದು ದೇಶ ದ್ವೇಷದ ಗೂಡಾಗಿದೆ” ಎಂದಿದ್ದಾರೆ.

”ಇಂದು ದೇಶದಲ್ಲಿ ಕಲಾವಿದನಲ್ಲಿ ಧರ್ಮ ಹುಡುಕುತ್ತಾರೆ, ಕ್ರೀಡಾಳುವಿನಲ್ಲಿ ಧರ್ಮ ಹುಡುಕುತ್ತಾರೆ, ಯಾವುದೇ ಕ್ಷೇತ್ರದ ಸಾಧಕನಲ್ಲಿ ಧರ್ಮ ಹುಡುಕುವ ಪರಿಪಾಠ ಬೆಳೆಯುತ್ತಿದೆ‌. ಈ ಧರ್ಮದ ರೋಗ ದೇಶದಲ್ಲಿ ಅಪಾಯಕಾರಿಯಾಗಿ ಹರಡಿದೆ” ಎಂದು ಹೇಳಿದ್ದಾರೆ. ಧರ್ಮದ ನಶೆ ಏರಿದಾಗ ದ್ವೇಷ ಕಾರದೆ, ಪ್ರೀತಿ ಹಂಚಲು ಸಾಧ್ಯವೇ? ಜನರಲ್ಲಿ ಈ ಧರ್ಮಾಂಧತೆಯ ಅಮಲು ತುಂಬಿದ್ದು ಯಾರು?” ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ, ದ್ವೇಷ ಭಾಷಣದಿಂದ ದೇಶದ ಸ್ವಾಸ್ಥ್ಯ ಹಾಳಾಗುತ್ತಿರುವುದನ್ನು ಸುಪ್ರೀಂ ಕೋರ್ಟ್ ಸೂಕ್ಷ್ಮವಾಗಿ ಗಮನಿಸಿದೆ. ಆದರೆ ಈ ಸೂಕ್ಷ್ಮತೆ ಮತ್ತು ಪ್ರಜ್ಞೆ ಇರಬೇಕಾದದ್ದು ಸರ್ಕಾರಕ್ಕೆ. ಧರ್ಮದ ಆಧಾರದಲ್ಲಿ ದೇಶ ಆಳಲು ಹೋದ ಹಿಟ್ಲರ್ ಮತ್ತು ಮುಸಲೋನಿ ಅಂತ್ಯ ಹೇಗಾಯ್ತು ಎಂದು ಆಳುವ ಸರ್ಕಾರ ಅರಿತುಕೊಳ್ಳಬೇಕು. ಇಲ್ಲದಿದ್ದರೆ ಅವರಿಗಾದ ಗತಿಯೇ ಇವರಿಗೆ. ಎಂದು ದಿನೇಶ್‌ ಗುಂಡೂರಾವ್‌ ಟ್ವೀಟ್‌ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *