ಸಂಘಟಿತ ಪ್ರಯತ್ನದಿಂದ ಮಾತ್ರ ದೇವದಾಸಿ ಪದ್ದತಿ ನಿರ್ಮೂಲನೆ ಸಾದ್ಯ: ನ್ಯಾಯಮೂರ್ತಿ ವಿಭು ಬಖ್ರು

ರಾಯಚೂರು: ‘ಸಂಘಟಿತ ಪ್ರಯತ್ನದಿಂದ ಮಾತ್ರ ದೇವದಾಸಿ ಆಚರಣೆಯಂತಹ ಅನಿಷ್ಠ ಪದ್ಧತಿಯನ್ನು ಬೇರು ಸಹಿತ ಕಿತ್ತೆಸೆಯಲು ಸಾಧ್ಯವಿದೆ’ ಎಂದು ಬೃಹತ್ ಆರೋಗ್ಯ ಶಿಬಿರ ಹಾಗೂ ಕಾನೂನು ಸಾಕ್ಷರತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಪೋಷಕರೂ ಆದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅಭಿಪ್ರಾಯಪಟ್ಟರು. ಸಂಘಟಿತ

ನವೆಂಬರ್‌ 15ರಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ರಾಯಚೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಮತ್ತು ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜಿಸಿದ್ದ ಬೃಹತ್ ಆರೋಗ್ಯ ಶಿಬಿರ ಹಾಗೂ ಕಾನೂನು ಸಾಕ್ಷರತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಂಘಟಿತ

‘ಪೊಲೀಸ್‌ ಇಲಾಖೆ, ಸರ್ಕಾರೇತರ ಸಾಮಾಜಿಕ ಸಂಘಟನೆಗಳು ಹಾಗೂ ಮಾಧ್ಯಮಗಳು ಅನಿಷ್ಠ ಪದ್ಧತಿಯ ನಿರ್ಮೂಲನೆಗೆ ಒಗ್ಗೂಡಿ ಕಾರ್ಯನಿರ್ವಹಿಸಬೇಕಾಗಿದೆ’ ಎಂದು ತಿಳಿಸಿದರು. ಸಂಘಟಿತ

ಇದನ್ನೂ ಓದಿ: ಅಂಗಾಂಗ ಕಸಿ ವೇಳೆ ಕೋವಿಡ್ -19 ಪರೀಕ್ಷೆ ಕಡ್ಡಾಯವಲ್ಲ: ಆರೋಗ್ಯ ಸಚಿವಾಲಯ

‘ರಾಜ್ಯದಲ್ಲಿ, ಈಗಾಗಲೇ ಮಾಜಿ ದೇವದಾಸಿಯರ ಸ್ಥಿತಿಗತಿ ಅರಿಯಲು ಸಮೀಕ್ಷೆ ನಡೆದಿದೆ. ಮಾನ್ವಿ, ಸಿಂಧನೂರ, ಮಸ್ಕಿ, ಸಿರವಾರ, ದೇವದುರ್ಗ, ಲಿಂಗಸುಗೂರು ಹಾಗೂ ರಾಯಚೂರು ತಾಲ್ಲೂಕುಗಳಲ್ಲಿ‌ 3433 ದೇವದಾಸಿಯರ ಕುಟುಂಬಗಳಿವೆ. ಪುಸ್ತಕಗಳಲ್ಲಿ ಕಾನೂನು  ಇದ್ದರೆ ಸಾಲದು, ಪದ್ಧತಿಯ ನಿರ್ಮೂಲನೆಗೆ ಪ್ರತಿಜ್ಞೆ ಮಾಡಬೇಕಿದೆ’ ಎಂದು ಹೇಳಿದರು.

‘ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣದಲ್ಲಿ ಇಂದಿಗೂ ದೇವದಾಸಿ ಪದ್ಧತಿ ಆಚರಣೆಯಲ್ಲಿರುವ ಕಾರಣ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಮೀಕ್ಷೆ ಆರಂಭಿಸಿದೆ. ಬಲಿಷ್ಠ ಕಾನೂನುಗಳು ಇದ್ದರೆ ಸಾಲದು ಇದನ್ನು ಹೇಗೆ ಸಮರ್ಥ ರೀತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎನ್ನುವುದರ ಮೇಲೆ ನಿರ್ಮೂಲನೆಯ ಅವಧಿ ಅವಲಂಬಿಸಿದೆ‘ ಎಂದರು.

ಹೈಕೋರ್ಟ್ ನ್ಯಾಯಮೂರ್ತಿ, ರಾಯಚೂರು ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶ ಎಂ.ಜಿ. ಶುಕುರೆ ಕಮಲ್ ಮಾತನಾಡಿ, ‘ಹಿಂದಿನ ಕಾಲದಲ್ಲಿ ದೇವದಾಸಿ ಪದ್ಧತಿಯ ಉದ್ದೇಶ ಬೇರೆಯೇ ಇತ್ತು. ಮಹಿಳೆಯರು ದೇವತೆಗಳಿಗೆ ಅಲಂಕರಿಸಿ ಪೂಜೆ ಸಲ್ಲಿಸುವುದಾಗಿತ್ತು. ಕಾಲಾನಂತರದಲ್ಲಿ ಅದು ಬದಲಾಯಿತು. ಅನಿಷ್ಠ ಪದ್ಧತಿಯ ಸ್ವರೂಪ ಪಡೆಯಿತು’ ಎಂದರು.

‘ಸಮಾಜಕ್ಕೆ ಕಸದಂತಾಗಿರುವ, ಅಮಾನವೀಯ ದೇವದಾಸಿ ಪದ್ಧತಿಯನ್ನು ಬೇರು ಸಹಿತ ಕಿತ್ತೊಗೆಯುವ ಸಂಕಲ್ಪದೊಂದಿಗೆ ನಾವೆಲ್ಲ ಮುನ್ನುಗ್ಗಬೇಕಿದೆ‘ ಎಂದು ತಿಳಿಸಿದರು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಹೈಕೋರ್ಟ್ ನ್ಯಾಯಮೂರ್ತಿ ಅನು ಸಿವರಾಮನ್ ಮಾತನಾಡಿ, ‘ದೇವದಾಸಿ ಪದ್ಧತಿ ನಿರ್ಮೂಲನೆಗೆ ರಾಜಕೀಯ ಇಚ್ಛಾಸಕ್ತಿಯೂ ಬೇಕು. ಸರ್ಕಾರದಿಂದ ಪ್ರತ್ಯೇಕ ಅನುದಾನವೂ ಬೇಕು. ಕಾನೂನು ಸೇವಾ ಪ್ರಾಧಿಕಾರ ಸಾಧ್ಯವಿರುವ ಎಲ್ಲ ರೀತಿಯ ಸಹಕಾರ ಕೊಡಲಿದೆ’ ಎಂದರು.

‘ಮಾಜಿ ದೇವದಾಸಿಯ ಸ್ಥಿತಿಗತಿ ಅರಿಯುವ ದಿಶೆಯಲ್ಲಿ ರಾಯಚೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಉತ್ತಮ ಕಾರ್ಯಕ್ರಮ ಆಯೋಜಿಸಿದೆ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಹೋರಾಗಾರ್ತಿ ಮೋಕ್ಷಮ್ಮ ಮಾತನಾಡಿ, ‘ದೇವಾಲಯಗಳಲ್ಲಿ ದೇವರ ಸೇವೆ ಮಾಡುವ ಕಾರ್ಯಕ್ಕೆ ದೇವದಾಸಿ ಪದ್ಧತಿ ಎಂದು ಕರೆದರು. ಆ ದೇವದಾಸಿಯರನ್ನು ಲೈಂಗಿಕತೆಗೆ ಬಳಸಿಕೊಳ್ಳುವ‌ ಪರಂಪರೆ ಮುಂದುವರೆಯಿತು. ಇದು ಹಳ್ಳಿಹಳ್ಳಿಗೂ ವ್ಯಾಪಿಸಿತು. ಈ ಅನಿಷ್ಠ ಪದ್ಧತಿಯನ್ನು ತೊಲಗಿಸಲು ಸಂಘಟಿತ ಹೋರಾಟ ಮಾಡಿದ್ದೇವೆ. ನಿವಾಸ, ನಿವಶೇನ ಹಾಗೂ ಮಾಸಾಶನದ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೇವೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ವತಿಯಿಂದ ಮನೆ ಮಂಜೂರಾತಿ ಆದೇಶ ಪತ್ರವನ್ನು ಹುಲಿಗೆಮ್ಮ ಮತ್ತು ಯಲ್ಲಮ್ಮ ಅವರಿಗೆ ವಿತರಿಸಲಾಯಿತು.

ಸರೋಜಮ್ಮ, ನರಸಮ್ಮ ರಾಮವ್ವ ಅವರಿಗೆ ಮಾಜಿ ದೇವದಾಸಿ ಎನ್ನುವ ದೃಢೀಕರಣ ಪತ್ರ ನೀಡಲಾಯಿತು. ರಾಮಮ್ಮ ಹಾಗೂ ಬಸಮ್ಮ ಅವರಿಗೆ ಆದಾಯೋತ್ಪನ್ನ ಚಟುವಟಿಕೆಯ ಮತ್ತು ಲಕ್ಷ್ಮಿ ಮತ್ತು ಕೃಷ್ಣದೇವಿ ಅವರಿಗೆ ಕಾರ್ಮಿಕ ಇಲಾಖೆಯ ಆದೇಶದ ಪ್ರತಿ ವಿತರಿಸಲಾಯಿತು.

ಮಹಿಳಾ‌ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಕಟಿಸಿದ 18 ಮಕ್ಕಳ ಹಕ್ಕುಗಳು ಕಿರು ಹೊತ್ತಿಗೆ ಹಾಗೂ ಪೊಲೀಸ್ ಇಲಾಖೆ ಪ್ರಕಟಿಸಿದ ಜಾಗೃತಿ ಕೈಪಿಡಿಯನ್ನು ಸಹ ಬಿಡುಗಡೆಗೊಳಿಸಲಾಯಿತು.

ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತಕುಮಾರ, ಜಿಲ್ಲಾಧಿಕಾರಿ ನಿತೀಶ್ ಕೆ., ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ ಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ, ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಕೆಎಸ್‌ಎಲ್‌ಎಸ್‌ಎ ಉಪ ಕಾರ್ಯದರ್ಶಿ ಶ್ರೀಧರ ಎಂ. ಅವರು ಉಪಸ್ಥಿತರಿದ್ದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮಾರುತಿ ಬಾಗಡೆ ಸ್ವಾಗತಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಎಚ್.ಎ.ಸಾತ್ವಿಕ್ ವಂದಿಸಿದರು.

ಇದನ್ನೂ ನೋಡಿ: ಕಡಲೆಕಾಯಿ ಪರಿಷೆಗೆ ಶೃಂಗಾರಗೊಳ್ಳುತ್ತಿದೆ ಬಸವನಗುಡಿ |17 ರಿಂದ 21 | Janashakthi Media| #kadalekaiparishe

Donate Janashakthi Media

Leave a Reply

Your email address will not be published. Required fields are marked *