ಹಾವೇರಿ : ಶಿಕ್ಷಣ ಇಲ್ಲದ ಪ್ರಜಾಪ್ರಭುತ್ವದಿಂದ ಸಮಾನತೆ ಸಾಧ್ಯವಿಲ್ಲ ಎಂದು ಕಲಬುರ್ಗಿ ಕೇಂದ್ರಿಯ ವಿವಿಯ ಸಹಾಯಕ ಪ್ರಾಧ್ಯಾಪಕ ಕಿರಣ್ ಗಾಜನೂರು ಕಳವಳ ವ್ಯಕ್ತಪಡಿಸಿದರು. ಹಾವೇರಿ
ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಆಯೋಜಿಸಿರುವ ಹಾಸ್ಟೆಲ್ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ ಸಾರ್ವಜನಿಕ ಶಿಕ್ಷಣದ ಇದ್ದ ಕಾರಣದಿಂದಾಗಿ ನಾನು ಇಂದು ಸಹಾಯಕ ಪ್ರಾದ್ಯಾಪಕನಾಗಿ ಕೇಂದ್ರೀಯ ವಿವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನನ್ನ ತಂದೆ ಸಣ್ಣದಾದ ಹೋಟೆಲ್ ನಿಂದ ಜೀವನ ನಿರ್ವಹಿಸುತ್ತಾ ಇತ್ತು. ಕಿತ್ತು ತಿನ್ನುವ ಬಡತನ. ಸರ್ಕಾರಿ ಶಾಲಾ – ಕಾಲೇಜ್ ಇಲ್ಲದೆ ಇದ್ದಿದ್ದರೆ ನಾನು ಖಂಡಿತ ಓದುತ್ತಿರಲಿಲ್ಲ ಎಂದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಗಟ್ಟಿತನವನ್ನು ವಿವರಿಸಿದರು.
ಇದನ್ನೂ ಓದಿ : ಬೆಂಗಳೂರು | ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕ್ಯಾರಿವೋವರ್ ನೀಡಿ ಸಚಿವ ಡಾ. ಎಂ.ಸಿ ಸುಧಾಕರಗೆ ಎಸ್ ಫ್ ಐ ಮನವಿ
ರೈತ ಕಾರ್ಮಿಕ ದಲಿತ ಕೂಲಿಕಾರ ಎಲ್ಲ ಮನಸ್ಸುಗಳು ಸೇರಿ ಹಾಸ್ಟೆಲ್ ವಿದ್ಯಾರ್ಥಿಗಳ ಈ ಸಮಾವೇಶಕ್ಕೆ ಜೊತೆಯಾಗಿದ್ದು ಐಕ್ಯ ಹೋರಾಟದ ಸೂಚಕವಾಗಿದೆ. ಇದು ಚಾರಿತ್ರಿಕ ಮಹತ್ವ ಪಡೆದುಕೊಂಡಿದೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಆದರೆ ಪ್ರಜಾಪ್ರಭುತ್ವ ಇನ್ನೂ ಜಾರಿಯಾಗದಿರುವುದು ಆತಂಕದ ಸಂಗತಿ. ಶಿಕ್ಷಣ ಇಲ್ಲದ ಪ್ರಜಾಪ್ರಭುತ್ವದಿಂದ ಸಮಾನತೆ ಸಾಧ್ಯವಿಲ್ಲ. 63% ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದು ದೇಶ, ರಾಜ್ಯದ ಬೆಳವಣಿಗೆಗೆ ಹಿನ್ನಡೆಯಾಗಿದೆ ಎಂದು ಆತಂಕ ವ್ಯಕ್ತ ಪಡಿಸಿದರು.
ದುಡಿಮೆಯ ಪ್ರತಿಫಲ ಸರಿಸಮಾನವಾಗಿ ಹಂಚಲ್ಪಡುತ್ತಿಲ್ಲ. ಆದರೂ ನಾವು ಜಿಡಿಪಿಯಲ್ಲಿ ನೆಗತ ಕಂಡಿದ್ದೇವೆ ಎಂದು ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುತ್ತಿದ್ದೇವೆ. ಖಾಸಗೀಕರಣ ಉದ್ಯೋಗ ಸೃಷ್ಟಿಸುತ್ತಿದೆ ಎಂದೂ ಎಲ್ಲರೂ ಹೇಳುತ್ತಾರೆ. ಆದರೆ ಅದು ಯಾವರೀತಿ ಗುಣಮಟ್ಟ ಸೃಷ್ಟಿಸುತ್ತದೆ ಎಂದು ಯೋಚಿಸುತ್ತಿಲ್ಲ. ಇದಕ್ಕೆ ಗಿಗ್ ವರ್ಕರ್ ಕೆಲಸದ ವಿಧಾನವನ್ನು ನೀವು ಅಧ್ಯಯನ ಮಾಡಿದರೆ ಉತ್ತರ ಸಿಗುತ್ತದೆ. ಯಾವ ಉದ್ಯೋಗಕ್ಕೂ ಭದ್ರತೆ ಇಲ್ಲ. ಇದನ್ನು ಹೋಗಲಾಡಿಸಬೇಕಾದರೆ ಗುಣಮಟ್ಟದ ಶಿಕ್ಷಣ ಸಿಗಬೇಕು ಅದು ಸಾರ್ವತ್ರೀಕರಣಗೊಳ್ಳಬೇಕು ಎಂದರು.

ಕರ್ನಾಟಕದಲ್ಲಿ ಕಾಲೇಜುಗಳಷ್ಟೆ ಪಾತ್ರವನ್ನು ಹಾಸ್ಟೆಲ್ ನಿರ್ಮಿಸುತ್ತಿವೆ. ಹಾಸ್ಟೆಲ್ ಇಲ್ಲದೆ ಇದ್ದಿದ್ದರೆ ತಳ ಸಮುದಾಯದವರು ಶಿಕ್ಷಣದಿಂದ ಮತ್ತಷ್ಟು ವಂಚಿತರಾಗುತ್ತಿದ್ದರು. ವಂಚಿತ ಸಮುದಾಯಗಳ ಆಶಾಕಿರಣವಾಗಿರುವ ಹಾಸ್ಟೆಲ್ ಗಳನ್ನು ಬಲಪಡಿಸಬೇಕಿದೆ ಎಂದರು.
ಭರವಸೆ ಇಲ್ಲದ ಕಾಲದ ನಡುವೆ ನಾವು ಬದುಕುತ್ತಿದ್ದೇವೆ. ಕಳೆದು ಹೋಗಿರುವ ನಮ್ಮನ್ನು ಚಳುವಳಿಗಳೇ ಎಚ್ಚರಿಸಬೇಕು, ವಿಶ್ವಾಸ ತುಂಬುವ ಕೆಲಸ ಮಾಡಬೇಕು. ವಿದ್ಯಾರ್ಥಿ ಚಳುವಳಿಯ ನಾಯಕತ್ವ ವಹಿಸಿರುವ ಎಸ್ಎಫ್ಐ ಆ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿ. ಚಾರಿತ್ರಿಕತೆಯನ್ನು ಸೃಷ್ಟಿಸಲಿ ಎಂದು ಕರೆ ನೀಡಿದರು.
ಎಸ್ಎಫ್ಐ ಅಖಿಲ ಭಾರತ ಅಧ್ಯಕ್ಷ ಆದರ್ಶ ಸಾಜಿ ಮಾತನಾಡಿ, ರಾಜ್ಯದ ಹಾಸ್ಟೆಲ್ ಗಳನ್ನು ಸುಧಾರಿಸಲು ರಾಜ್ಯ ಸರ್ಕಾರ ಮುಂದಾಗಬೇಕು. ಮಾಸಿಕವಾಗಿ 4500 ರೂ ಆಹಾರ ಭತ್ಯೆ ನೀಡಬೇಕು. ಹಾಗೂ ಹಾಸ್ಟೆಲ್ ಗಳಲ್ಲಿ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡಬೇಕು ಎಂದರು.
ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಬಲಗೊಳ್ಳಬೇಕು. ಶಿಕ್ಷಣ ಇಡೀ ವ್ಯವಸ್ಥೆಯನ್ನು ಬದಲಾಯಿಸುವ ಆಯುಧ ಎಂದು ನೆಲ್ಸನ್ ಮಂಡೇಲಾ ಹೇಳಿದ್ದನ್ನು ಸರ್ಕಾರಗಳು ಮರೆಯಬಾರದು. ಶಿಕ್ಷಣ ಕ್ಷೇತ್ರವನ್ನು ರಾಜ್ಯ ಕೇಂದ್ರ ಸರ್ಕಾರಗಳು ನಿರ್ಲಕ್ಷಿಸುತ್ತಿವೆ. ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ನೀಡುತ್ತಿಲ್ಲ. ವಿದ್ಯಾರ್ಥಿ ವಿರೋಧಿ ಶೈಕ್ಷಣಿಕ ನೀತಿಗಳನ್ನು ತಂದು ಶಿಕ್ಷಣ ಕ್ಷೇತ್ರವನ್ನು ಉಳ್ಳವರಪರ ಮಾಡಿದ್ದಾರೆ ಎಂದು ಆರೋಪಿಸಿದರು.
ವಿದ್ಯಾರ್ಥಿಗಳು ಶಿಕ್ಷಣದ ಜೊತೆಯಲ್ಲಿ ಸಮಾಜವನ್ನು ಅಧ್ಯಯನ ಮಾಡಬೇಕು ಆಗ ಮಾತ್ರ ಬದಲಾವಣೆ ಸಾಧ್ಯ ಆ ನಿಟ್ಟಿನಲ್ಲಿ ಈ ಸಮಾವೇಶ ಹಾಸ್ಟೆಲ್ ಬಲಪಡಿಸಲು ದಾರಿಯಾಗಲಿ ಎಂದರು.
ಎಸ್ಎಫ್ಐ ರಾಜ್ಯಾಧ್ಯಕ್ಷ ಶಿವಪ್ಪ ಅಂಬ್ಲೀಕಲ್ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು, ರಾಜ್ಯ ಕಾರ್ಯದರ್ಶಿ ವಿಜಯ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಸ್ ಬಸವರಾಜ ಕಾರ್ಯಕ್ರಮ ನಿರ್ವಹಿಸಿದರು.
ವೇದಿಕೆಯಲ್ಲಿ ಎಸ್ಎಫ್ಐ ಕೇಂದ್ರ ಸಮಿತಿ ಸದಸ್ಯರಾದ ಸುಜಾತ ವೈ, ದೊಡ್ಡ ಬಸವರಾಜ, ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ್, ಸಾಹಿತಿ ಸತೀಶ್ ಕುಲಕರ್ಣಿ, ಸ್ವಾಗತ ಸಮಿತಿಯ ಅಧ್ಯಕ್ಷರಾದ ಪರಿಮಳ ಜೈನ್, ವಿಜಯ ಕುಮಾರ್ ಮುದುಕಣ್ಣವರ್, ಮಲ್ಲಿಕಾರ್ಜುನ ಬಳ್ಳಾರಿ, ಮಲ್ಲಿಕಾರ್ಜುನ ಹಾವೇರಿ, ಉಡುಚಪ್ಪ ಮಾಳಗಿ, ನಾರಾಯಣ ಕಾಳೆ, ರೇಣುಕಾ ಕಹಾರ, ಗಣೇಶ್ ರಾಠೋಡ್ ಸೇರಿದಂತೆ ಅನೇಕರಿದ್ದರು.
ಉದ್ಘಾಟನೆಗೂ ಮುನ್ನ ಮೈಲಾರ ಮಹದೇವ ವೃತ್ತದಿಂದ ಗುರುಭವನದ ವರೆಗೆ ವಿದ್ಯಾರ್ಥುಗಳಿಂದ ಮೆರವಣಿಗೆ ನಡೆಯಿತು. “ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ, ಹಾಸ್ಟೆಲ್ ಬಲವರ್ಧನೆಗಾಗಿ” ರಾಜ್ಯವ್ಯಾಪಿ ಸಂಚರಿಸಿದ ಜಾಥಾವನ್ನು ಈ ವೇಳೆ ಬರಮಾಡಿಕೊಳ್ಳಲಾಯಿತು.
ಇದನ್ನೂ ನೋಡಿ : ರವೆಗೆ ಉಪ್ಪು ಹಾಕಿದ್ರೆ ಉಪ್ಪಿಟ್ಟು ಸಕ್ಕರೆ ಹಾಕಿದ್ರೆ ಶಿರಾ (ಕೇಸರಿಬಾತ್) – ಇದು “ಹಾಸ್ಟೆಲ್ಗಳ ಕಥೆ-ವ್ಯಥೆ”
