ಜುಲೈ 19 ರಂದು ಕ್ವಿಂಟಾಲ್ ಕೊಬ್ಬರಿಗೆ ಬೆಂಬಲ ಬೆಲೆ ಖರೀದಿಗೆ ಒತ್ತಾಯಿಸಿ:ತೆಂಗು ಬೆಳೆಗಾರರ ವಿಧಾನಸೌಧ ಚಲೋ

ಬೆಂಗಳೂರು: ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ 16730 ರೂ. ಬೆಂಬಲ ಬೆಲೆಗೆ ಆಗ್ರಹಿಸಿ, ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ತೆರೆಯಲು ಆಗ್ರಹಿಸಿ, ಕೇಂದ್ರ ಸರ್ಕಾರದ ತಪ್ಪು ಆಮದು ನೀತಿ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ವಿರೋಧಿಸಿ, ತೆಂಗು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ, ಜುಲೈ 19, 2023 ರಂದು ಬೆಂಗಳೂರಿನಲ್ಲಿ ತೆಂಗು ಬೆಳೆಗಾರರ ಬೃಹತ್ ವಿಧಾನ ಸೌಧ ಚಲೋ ನಡೆಸಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘ ( KPRS) ಹೇಳಿದೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ರಾಜ್ಯಾಧ್ಯಕ್ಷ ಜಿ.ಸಿ ಬಯ್ಯಾರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಒಟ್ಟು 6.46 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಬೆಳೆಯಲಾಗುತ್ತಿದ್ದು, ವಾರ್ಷಿಕ ಕೊಬ್ಬರಿ ಉತ್ಪಾದನೆ2.18 ಲಕ್ಷ ಮೆಟ್ರಿಕ್ ಟನ್ ನಷ್ಟಿದೆ. ಇಂತಹ ಪ್ರಮುಖ ಬೆಳೆಯಾದ ಕೊಬ್ಬರಿ ಬೆಲೆಯು ಹಿಂದೆಂದೂ ಕೇಳಿರದ ಪ್ರಮಾಣದಲ್ಲಿ, ಕ್ವಿಂಟಾಲ್‌ಗೆ 6-7 ಸಾವಿರಕ್ಕೆ ಕುಸಿದಿದೆ. ಕೊಬ್ಬರಿಯ ಬೆಲೆ ಪಾತಾಳಕ್ಕೆ ಇಳಿದಿರುವುದು ತೆಂಗು ಬೆಳೆಯುವ ಪ್ರದೇಶದ ರೈತರಲ್ಲಿ ಆತಂಕವನ್ನು ಉಂಟುಮಾಡಿದೆ ಎಂದರು.
ಕೇಂದ್ರ ಸರ್ಕಾರದ ತಪ್ಪು ಆಮದು ನೀತಿ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷದಿಂದಾಗಿ ಇಂದು ರಾಜ್ಯದ ತೆಂಗು ಬೆಳೆಯುವ ರೈತರು ಅತ್ಯಂತ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.  ಹೊರ ದೇಶಗಳಿಂದ ತೆಂಗು, ಕೊಬ್ಬರಿ, ತೆಂಗಿನ ಉಪ ಉತ್ಪನ್ನಗಳು ಮತ್ತು ಪಾಮಾಯಿಲ್ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇದರ ಪರಿಣಾಮವಾಗಿ ಸ್ಥಳೀಯವಾಗಿ ತೆಂಗು ಬೆಳೆಯುವ ರೈತರಿಗೆ ಸರಿಯಾದ ಮಾರುಕಟ್ಟೆ ಸಿಗುತ್ತಿಲ್ಲ. ಕೇಂದ್ರ ಸರ್ಕಾರದ ಇಂತಹ ತಪ್ಪು ಆಮದು ನೀತಿಗಳೇ ಇಂದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿವೆ. ಕೂಡಲೇ ಇಂತಹ ರೈತ ವಿರೋಧಿ ನೀತಿಗಳನ್ನು ಕೈಬಿಟ್ಟು ಸಂಕಷ್ಟದಲ್ಲಿರುವ ರೈತರ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಬೇಕು ಎಂದರು.
ರಾಜ್ಯ ತೋಟಗಾರಿಕಾ ಇಲಾಖೆಯು, ಕೇಂದ್ರ  ಸರ್ಕಾರದ ಕೃಷಿ ವೆಚ್ಚ ಮತ್ತು ದರ  ಆಯೋಗ (ಸಿಎಸಿಪಿ) ಕ್ಕೆ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 16730 ರೂಗಳನ್ನು ನೀಡಬೇಕು ಎಂದು ಉತ್ಪಾದನಾ ವೆಚ್ಚದ ಆಧಾರದಲ್ಲಿ ಶಿಫಾರಸ್ಸು ಮಾಡಿದೆ. ಆದರೂ ಕೇಂದ್ರ ಸರ್ಕಾರ ಬೆಂಬಲ ಬೆಲೆಯಾಗಿ ಕೇವಲ 11750 ರೂ. ಮಾತ್ರ ನಿಗದಿಪಡಿಸಿದೆ.
ರೈತರ ಆಗ್ರಹಕ್ಕೆ ಮಣಿದು ರಾಜ್ಯ ಸರ್ಕಾರವು ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 1250 ರೂ. ನಿಗದಿ ಮಾಡಿದೆ. ಆದರೆ ಮಾರುಕಟ್ಟೆಯಲ್ಲಿ ಕೇವಲ 6500 ಮಾತ್ರ ಇದೆ. ಸರ್ಕಾರಗಳು ಘೋಷಿಸಿರುವ ಬೆಂಬಲ ಬೆಲೆ ಜಾರಿಗೆ ಬರಬೇಕಾದರೆ ಖರೀದಿ ಕೇಂದ್ರಗಳನ್ನು ವ್ಯಾಪಕವಾಗಿ ತೆರೆಯಬೇಕು. ಸಮರ್ಪಕ ಖರೀದಿ ಕೇಂದ್ರಗಳು ಇಲ್ಲದೇ ಇದ್ದರೆ ಬೆಂಬಲ ಬೆಲೆ ಕೇವಲ ಕಾಗದದಲ್ಲಿ ಮಾತ್ರ ಉಳಿಯುತ್ತದೆ. ಅದ್ದರಿಂದ ವ್ಯಾಪಕವಾಗಿ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌) ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸುತ್ತದೆ ಎಂದು ಹೇಳಿದ್ದಾರೆ.
ಒಂದೆಡೆ ಸರಿಯಾಗಿ ಮಳೆ ಇಲ್ಲದೆ, ಮತ್ತೊಂದೆಡೆ ವಿಪರೀತ ಹೆಚ್ಚಳವಾಗಿರುವ ಉತ್ಪಾದನಾ ವೆಚ್ಚವನ್ನು ನಿಭಾಯಿಸಿ ತೆಂಗುಬೆಳೆ ರೈತನ ಕೈಗೆ ಫಸಲಾಗಿ ಸಿಗಲು ಕನಿಷ್ಟ 10 ವರ್ಷಗಳುಬೇಕು. ನುಸಿ ಪೀಡೆ, ಬರಗಾಲ -ಅಂತರ್ಜಲ ಮಟ್ಟ ಕುಸಿತ ಮುಂತಾದ ಹಲವಾರು ಸವಾಲುಗಳ ನಡುವೆಯೂ ದೇಶದಲ್ಲೇ ತೆಂಗು ಉತ್ಪಾದನೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ ಈಗ ಕಲ್ಪ ವೃಕ್ಷ ಎಂದು ಹೆಸರಾಗಿರುವ ತೆಂಗು ಇಂದು ರೈತರ ಪಾಲಿಗೆ ಕಲ್ಪವೃಕ್ಷವಾಗಿ ಉಳಿದಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌) ಕರ್ನಾಟಕ ರಾಜ್ಯ ಸಮಿತಿ ವಿಶ್ಲೇಷಿಸಿದೆ ಎಂದರು. ತೆಂಗು ರೈತರ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾರುಕಟ್ಟೆಯಲ್ಲಿ ಮಧ್ಯಪ್ರವೇಶ ಮಾಡಿ ಕೃಷಿ ತಜ್ಞ ಡಾ.ಎಂ.ಎಸ್.ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ಉತ್ಪಾದನಾ ವೆಚ್ಚಕ್ಕೆ ಶೇಕಡಾ 50 ರಷ್ಟು ಲಾಭಾಂಶವನ್ನು ಸೇರಿಸಿ ಬೆಲೆ ನಿಗದಿ ಮಾಡಿ ಮಾಡಬೇಕು. ಇದರ ಜೊತೆಗೆ ತೆಂಗು ಬೆಳೆಗಾರರ ಇತರೆ ಸಮಸ್ಯೆಗಳಾದ ರೋಗಬಾದೆ, ನೀರಾವರಿ ಪಂಪ್ ಸೆಟ್‌ಗಳಿಗೆ ಮೀಟರ್ ಅಳವಡಿಕೆಯಂತಹ ನೀತಿಗಳು ಈಗಾಗಲೇ ಸಂಕಷ್ಟದಲ್ಲಿರುವ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತದೆ ಎಂದರು.
ಈ ಹಿನ್ನಲೆಯಲ್ಲಿ ತೆಂಗುಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ರಾಜ್ಯ ಬಜೆಟ್ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ತೆಂಗು ಬೆಳೆಗಾರರ ವಿಧಾನ ಸೌಧ ಚಲೋವನ್ನು ತೆಂಗು ಬೆಳೆಗಾರರ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ದಿನಾಂಕ 19 ಜುಲೈ 2023 ರಂದು ಬೆಂಗಳೂರಿನಲ್ಲಿ ವಿಧಾನ ಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಹೋರಾಟಕ್ಕೆ ರಾಜ್ಯದ ತೆಂಗು ಬೆಳೆಗಾರರು ಪಕ್ಷಾತೀತವಾಗಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌) ಕರ್ನಾಟಕ ರಾಜ್ಯ ಸಮಿತಿ ಮನವಿ ಮಾಡಿಕೊಳ್ಳುತ್ತದೆ. ಕೂಡಲೇ ಕೇಂದ್ರ ಸರ್ಕಾರ ರೈತ ವಿರೋಧಿ ಆಮದು ನೀತಿಯನ್ನು ಕೈ ಬಿಡಬೇಕು. ರಾಜ್ಯ  ತೋಟಾಗಾರಿಕೆ ಇಲಾಖೆ ಶಿಪಾರಸ್ಸಿನಂತೆ ಒಂದು ಕ್ವಿಂಟಾಲ್ ದುಂಡು ಕೊಬ್ಬರಿಗೆ 16730 ರೂ ಅನ್ನು ಬೆಂಬಲ ಬೆಲೆಯಾಗಿ ನಿಗದಿ ಮಾಡಬೇಕು, ಅಲ್ಲಿಯ ತನಕ ರಾಜ್ಯ ಸರ್ಕಾರ ರೈತರ ರಕ್ಷಣೆಗಾಗಿ ಕನಿಷ್ಠ ಐದು ಸಾವಿರ ರೂಗಳ ಪ್ರೋತ್ಸಾಹ ಧನ ನೀಡಬೇಕು, ತೆಂಗು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕಾಗಿ ಬೆಳೆ ಪ್ರದೇಶದ ರೈತ ಮುಖಂಡರು, ಶಾಸಕರು, ಸಂಸದರ ನಿಯೋಗವನ್ನು  ಪ್ರಧಾನಿಗಳ ಬಳಿಗೆ ಕರೆದೊಯ್ಯಬೇಕು, ತೆಂಗು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಾಣಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ತೆಂಗು ಬೆಳೆಗಾರರ ಸಭೆ ನಡೆಸಬೇಕು ಎಂದು ವಿಧಾನ ಸೌಧ ಚಲೋ ದಲ್ಲಿ ಆಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ. ಈ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ,ರಾಜ್ಯ ಉಪಾಧ್ಯಕ್ಷ ಎನ್.ವೆಂಕಟಾಚಲಯ್ಯ ಇದ್ದರು.
Donate Janashakthi Media

Leave a Reply

Your email address will not be published. Required fields are marked *