ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಶಿಕ್ಷಣ ಸಚಿವರಿಗೆ ಮನವಿ


ಬೆಂಗಳೂರು: ಪ್ರಾಥಮಿಕ ಶಾಲೆಗಳು ಸಮಸ್ಯೆಗಳನ್ನು ಹೊದ್ದು ಮಲಗಿದ್ದು, ಆ ಸಮಸ್ಯೆಗಳನ್ನು ನಿವಾರಿಸಬೇಕು ಹಾಗೂ ಗುಣಮಟ್ಟದ ಉಚಿತ ಶಿಕ್ಷಣಕ್ಕೆ ಯೋಜನೆಯನ್ನು ರೂಪಿಸಬೇಕು ಎಂದು ಶಿಕ್ಷಣ ಸಚಿವರಿಗೆ ಭಾರತ ವಿದ್ಯಾರ್ಥಿ ಫೆಡರೇಷನ್‌ (SFI ರಾಜ್ಯ ನಿಯೋಗ ಮನವಿ ಮಾಡಿದೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪರವರ ಕಚೇರಿಯಲ್ಲಿ ಮನವಿ ಸಲ್ಲಿಸಿದ ರಾಜ್ಯ ನಿಯೋಗ,  ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಠ್ಯ ಪರಿಷ್ಕರಣೆಯ ಮೂಲಕ ಶಿಕ್ಷಣವನ್ನು ಕೇಸರಿಕರಣ ಮಾಡಲು ಕೆಲವು ಪಾಠಗಳನ್ನು ಬದಲಾವಣೆ ಮಾಡಲಾಗಿತ್ತು. ತಾವುಗಳು ಅಧಿಕಾರಕ್ಕೆ ಬಂದ ನಂತರ ಕೇಸರೀಕರಣ ಮಾಡಿದ ಪಾಠಗಳನ್ನು ಕೈ ಬಿಟ್ಟು ವಿದ್ಯಾರ್ಥಿಗಳಿಗೆ ಬೇಕಾಗುವ ಹಾಗೂ ನಾಡಿನ ಸೌಹಾರ್ದತೆ ಹಾಗೂ ಸಹೋದರತ್ವವನ್ನು ಬೆಳೆಸುವಂತಹ ಪಾಠಗಳನ್ನು ಸೇರ್ಪಡೆ ಮಾಡಿರುವುದನ್ನು ಸ್ವಾಗತಿಸಿದೆ.

ರಾಜ್ಯದಲ್ಲಿ ಅನೇಕ ಸರಕಾರಿ ಶಾಲಾ ಕಾಲೇಜುಗಳಲ್ಲಿ ಈಗಲೂ ಅನೇಕ ಮೂಲಭೂತ ಸೌಲಭ್ಯಗಳ ಕೊರತೆ ಇರುತ್ತದೆ. ಸರ್ಕಾರಿ ಶಾಲಾ-ಕಾಲೇಜುಗಳ ಸುಧಾರಣೆಗಾಗಿ ಕೋಠಾರಿ ಆಯೋಗ ಸೇರಿದಂತೆ ಅನೇಕ ಶಿಕ್ಷಣ ತಜ್ಞರು, ಶಿಕ್ಷಕರು, ಉಪನ್ಯಾಸಕರು, ಸಾಹಿತಿಗಳು, ವಿದ್ಯಾರ್ಥಿ ಸಂಘಟನೆಗಳು, ರಾಜಕೀಯ ಮುತ್ಸದ್ಧಿಗಳು, ಪ್ರಗತಿಪರರು ಶ್ರಮಿಸಿದ್ದು. ಆದರೂ ಸಹ ನಮಗೆ ಸ್ವಾತಂತ್ರ ಸಿಕ್ಕು 75 ವರ್ಷಗಳು ಕಳೆದರು ನಮ್ಮ ರಾಜ್ಯದ ಗ್ರಾಮೀಣ ಪ್ರದೇಶ, ಕೊಳಚೆ ಪ್ರದೇಶಗಳು, ಹಾಗೂ ಬುಡಕಟ್ಟು ಪ್ರದೇಶಗಳಲ್ಲಿ ಇರುವಂತಹ ಸರಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗದೇ ಇರುವುದು ಒಂದು ಕಡೆಯಾದರೆ, ಕೊರೋನ ಮತ್ತು ಕೊರೋನ ನಂತರದಲ್ಲಿ ಶೈಕ್ಷಣಿಕ ರಂಗದಲ್ಲಿ ಸಾಕಷ್ಟು ಸಮಸ್ಯೆಗಳನ್ನು ವಿದ್ಯಾರ್ಥಿಗಳು ದಿನನಿತ್ಯ ಅನುಭವಿಸುತ್ತಿದ್ದಾರೆ ಎಂದು ಮನವಿಪತ್ರದಲ್ಲಿ ಬರೆದಿದ್ದಾರೆ.

ವಿದ್ಯಾರ್ಥಿಗಳ ಮದ್ಯೆ ಸಂವಿಧಾನಬದ್ಧವಾಗಿ ರಾಜ್ಯದಲ್ಲಿ ಐಕ್ಯತೆ ಮೂಡಿಸುವ, ಸಹೋದರತ್ವ ಬೆಳೆಸುವ, ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ನಿರಂತರವಾಗಿ ಹಲವಾರು ಕಾರ್ಯಕ್ರಮ ಹಾಗೂ ಚಟುವಟಿಕೆಗಳನ್ನು ಮಾಡುತ್ತಾ ಜೊತೆಯಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟಗಳನ್ನು ಮಾಡುತ್ತಲೇ ಬಂದಿದ್ದ  ಭಾರತ ವಿದ್ಯಾರ್ಥಿ ಫೆಡೆರೇಷನ್ (ಎಸ್.ಎಫ್.ಐ) ಸಂಘಟನೆಯು ಕೆಲವು ಶೈಕ್ಷಣಿಕ  ಸಮಸ್ಯೆಗಳ ಪರಿಹಾರಕ್ಕಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ  ಮನವಿಯನ್ನ ಸಲ್ಲಿಸಿದರು.

ಇದನ್ನೂ ಓದಿ:ಉನ್ನತ ಶಿಕ್ಷಣದಲ್ಲಿ ಮುಸ್ಲಿಮರ ದಾಖಲಾತಿ ಎಲ್ಲರಿಗಿಂತಲೂ ಕಡಿಮೆ.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಅಮರೇಶ ಕಡಗದ, ರಾಜ್ಯ ಕಾರ್ಯದರ್ಶಿ ಭೀಮನಗೌಡ ಸುಂಕೇಶ್ವರಹಾಳ, ರಾಜ್ಯ ಪಧಾದಿಕಾರಿಗಳಾದ ಗಣೇಶ ರಾಠೋಡ್, ಬಸವರಾಜ ಬೋವಿ, ವಿಜಯ ಕುಮಾರ ಹಾಗೂ ವಿಶ್ವನಾಥ  ಉಪಸ್ಥಿತರಿದ್ದರು.

ಮನವಿ ಪತ್ರದಲ್ಲಿ ಸಲ್ಲಿಸಲಾಗಿರುವ ಬೇಡಿಕೆಗಳು ಈ ರೀತಿ ಇವೆ

  1. ಕಳೆದ 4 ವರ್ಷಗಳಿಂದ 8 ನೇಯ ತರಗತಿಯ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸದೇ ಹಿಂದಿನ ಭಾ.ಜ.ಪ ಸರ್ಕಾರ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದ್ದು ಈ ವರ್ಷದಿಂದ ಸೈಕಲ್‌ ವಿತರಿಸಲು ಸರ್ಕಾರ ಕ್ರಮವಹಿಸಬೇಕು.
  2. ಡೊನೇಶನ್ ಹಾವಳಿ ನಿಯಂತ್ರಣ ಮಾಡಲು ಜಿಲ್ಲಾಧಿಕಾರಿಗಳ ಅದ್ಯಕ್ಷತೆಯಲ್ಲಿರುವ ಡೇರಾ ಸಮಿತಿಯನ್ನು ಸಕ್ರಿಯಗೊಳಿಸಿ ಎಲ್ಲಾ ಜಿಲ್ಲೆಗಳಲ್ಲಿ ಸಭೆ ಮಾಡಲು ಸೂಚನೆ ನೀಡಿ ಡೊನೇಶನ್ ಹಾವಳಿಯನ್ನು ನಿಲ್ಲಿಸಬೇಕು.
  3. ರಾಜ್ಯದ ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಮೂಲಭೂತ ಸೌಲಭ್ಯಗಳಾದ ಶುದ್ಧ ಕುಡಿಯುವ ನೀರು, ಶೌಚಾಲಯಗಳು, ವಿದ್ಯಾರ್ಥಿಗಳಿಗೆ ಡೆಸ್ಕ್ ಗಳು ಒದಗಿಸಬೇಕು.
  4. ಸ್ವಂತ ಕಟ್ಟಡಗಳು, ಈಗಾಗಲೇ ಇರುವ ಕಟ್ಟಡಗಳ ದುರಸ್ತಿ, ಗ್ರಂಥಾಲಯ ಕೊಠಡಿ, ಭೋಜನಾಲಯ ಕೊಠಡಿ ಹಾಗೂ ಎಲ್ಲಾ ಶಾಲಾ-ಕಾಲೇಜುಗಳಿಗೆ ಕಂಪೌಂಡ್ ವ್ಯವಸ್ಥೆಯನ್ನು ಖಾತ್ರಿ ಪಡಿಸಬೇಕು.
  5. ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ಹಂತದ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ ಅವುಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಗಬೇಕು.
  6. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ‘ಡಿ’ ಗ್ರೂಪ್ ಹುದ್ದೆಗಳು ಹಾಗೂ ರಂಗ ಶಿಕ್ಷಕರ ಹುದ್ದೆಗಳನ್ನು ಮಂಜೂರು ಮಾಡಬೇಕು.
  7. ಕೊರೋನ ಸಮಯದಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಅವರನ್ನು ಮರಳಿ ಶಾಲೆಗೆ ಕರೆದುಕೊಂಡು ಬರುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ಜಾರಿ ಮಾಡಬೇಕು.
  8. ಸರ್ಕಾರಿ ಶಾಲೆಗಳನ್ನು ಕಿರಿಯ ಪ್ರಾಥಮಿಕದಿಂದ ಹಿರಿಯ ಪ್ರಾಥಮಿಕಕ್ಕೆ ಮೇಲ್ದರ್ಜೆಗೆ ಏರಿಸಲು ಇರುವ ಸಮಸ್ಯೆಗಳನ್ನು ಪರಿಹರಿಸಬೇಕು.
  9. ಆರ್.ಟಿ.ಇ ನಿಯಮಗಳನ್ನು ಎಲ್ಲಾ ಶಾಲೆಗಳಲ್ಲಿ ಸಮರ್ಪಕವಾಗಿ ಜಾರಿಗೊಳಿಸಲು ಆದೇಶ ಮಾಡಬೇಕು.
  10. ಸರ್ಕಾರಿ ನಿಯಮಗಳನ್ನು ಉಲ್ಲಂಘನೆ ಮಾಡಿ ಬಹುತೇಕ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್, ನೋಟ್ ಬುಕ್ ಬಟ್ಟೆ ಮಾರಾಟ ಮಾಡುವಂತಹ ಶಾಲೆಗಳ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು.
  11. ರಾಜ್ಯದಲ್ಲಿ ಅನಧೀಕೃತವಾಗಿವಾಗಿರುವ ಐಸಿಎಸ್‌ಇ ಹಾಗೂ ಸಿಬಿಎಸ್‌ಇ ಶಾಲೆಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.
Donate Janashakthi Media

Leave a Reply

Your email address will not be published. Required fields are marked *