ದಿಲ್ಲಿ ಹಿಂಸಾಚಾರದ ಬಗ್ಗೆ ದಿಲ್ಲಿ ಪೊಲೀಸ್ ತನಿಖೆ ವಿಶ್ವಾಸಯೋಗ್ಯವಾಗಿಲ್ಲ

ತನಿಖಾ ಆಯೋಗಗಳ ಕಾಯ್ದೆಯ ಅಡಿಯಲ್ಲಿ ನ್ಯಾಯಾಂಗ ತನಿಖೆ ಅಗತ್ಯವಾಗಿದೆ- ರಾಷ್ಟ್ರಪತಿಗಳಿಗೆ ಪ್ರತಿಪಕ್ಷಗಳ ಮನವಿ

ಕಾಂಗ್ರೆಸ್ ಪಕ್ಷದ ಖಜಾಂಚಿ ಅಹ್ಮದ್ ಪಟೇಲ್, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜ, ಡಿಎಂಕೆ ಮುಖಂಡರು ಮತ್ತು ಸಂಸತ್ ಸದಸ್ಯೆ ಕನ್ನಿಮೋಳಿ ಮತ್ತು ಆರ್‌ಜೆಡಿ ಮುಖಂಡ ಮತ್ತು ಸಂಸತ್ ಸದಸ್ಯ ಮನೋಜ ಝಾ ಇದ್ದ ಪ್ರತಿಪಕ್ಷಗಳ ನಿಯೋಗವೊಂದು ಸೆಪ್ಟಂಬರ್ 17ರಂದು ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಈಶಾನ್ಯ ದಿಲಿಯಲ್ಲಿ ಫೆಬ್ರುವರಿ 23ರಿಂದ 26 ರವರೆಗೆ ನಡೆದ ಗಲಭೆಗಳ ತನಿಖೆ ಕುರಿತಂತೆ ಒಂದು ವಿವರವಾದ ಮನವಿ ಪತ್ರವನ್ನು ಸಲ್ಲಿಸಿದರು.

53 ಮಂದಿ ಪ್ರಾಣ ಕಳಕೊಂಡ ಕೋಮುವಾದಿ ಹಿಂಸಾಚಾರ, ಅದಕ್ಕೆ ಕೇಂದ್ರ ಮಂತ್ರಿಯೊಬ್ಬರೂ ಸೇರಿದಂತೆ ಆಳುವ ಪಕ್ಷದ ಹಿರಿಯ ಮುಖಂಡರುಗಳ ಪ್ರಚೋದನೆಯ ಕುರಿತಂತೆ ತನಿಖೆ ನಡೆಸುವ ಬದಲು ದಿಲ್ಲಿ ಪೋಲೀಸ್ ಕೇಂದ್ರ ಗೃಹಮಂತ್ರಿಗಳ ನಿರ್ದೇಶನದ ಅಡಿಯಲ್ಲಿ ಶಾಂತಿಯುತವಾಗಿದ್ದ ಸಿಎಎ/ಎನ್‌.ಆರ್‌.ಸಿ. ವಿರೋಧಿ ಪ್ರತಿಭಟನೆಗಳನ್ನು ಈ ಹಿಂಸಾಚಾರದೊಂದಿಗೆ ತಳುಕು ಹಾಕುವ ಕತೆಯನ್ನು ಕಟ್ಟುತ್ತಿದ್ದಾರೆ ಎಂಬ ಸಂಗತಿಯನ್ನು ರಾಷ್ಟ್ರಪತಿಗಳಿಗೆ ಮನವರಿಕೆ ಮಾಡಿಸಿದ್ದಾರೆ. ಈ ಕಟ್ಟು ಕತೆಯಿಂದಾಗಿ ಹಲವಾರು ಮುಗ್ಧ ಕಾರ್ಯಕರ್ತರು, ಪ್ರಖ್ಯಾತ ಚಿಂತಕರು ಮತ್ತು ರಾಜಕೀಯ ಮುಖಂಡರ ಮೇಲೆ ಗುರಿಯಿಡಲಾಗುತ್ತಿದೆ. ದಿಲ್ಲಿ ಪೋಲಿಸ್ ಈ ರೀತಿಯಲ್ಲಿ ಕೋಮುವಾದಿ ಹಿಂಸಾಚಾರ ನಡೆಸಿದವರನ್ನು ಗುರುತಿಸಿ ಶಿಕ್ಷಿಸುವ ಕೆಲಸದಿಂದ ಗಮನ ಬೇರೆಡೆಗೆ ಸೆಳೆಯಲಿಕ್ಕಾಗಿ ಒಂದು ಪಿತೂರಿಯನ್ನು ಸೃಷ್ಟಿಸುತ್ತಿದ್ದಾರೆ. ಈ ಹಿಂಸಾಚಾರದಿಂದ ಪೀಡಿತರಾದವರನ್ನು ಬಂಧಿಸಲಾಗುತ್ತಿದೆ, ಅತ್ತ ಹಿಂಸಾಚಾರ ನಡೆಸಿದವರು ರಾಜಾರೋಷವಾಗಿ ತಿರುಗಾಡಲು ಬಿಡಲಾಗುತ್ತಿದೆ ಎಂದು ಈ ಮುಖಂಡರು ರಾಷ್ಟ್ರಪತಿಗಳಿಗೆ ಹೇಳಿದ್ದಾರೆ.

ರಾಷ್ಟ್ರಪತಿಗಳು ನಿಯೋಗದ ಮಾತುಗಳನ್ನು ಆಲಿಸಿ, ಮನವಿ ಪತ್ರವನ್ನು ಸ್ವೀಕರಿಸಿದರು ಹಾಗು ಅದನ್ನು ಪರೀಕ್ಷಿಸುವದಾಗಿ ಹೇಳಿದರು.

ಕೊವಿಡ್ ಪರಿಸ್ಥಿತಿಯಿಂದಾಗಿ ಐವರಿಗಿಂತ ಹೆಚ್ಚು ಮಂದಿಗೆ ರಾಷ್ಟ್ರಪತಿ ಭವನಕ್ಕೆ ಪ್ರವೇಶವಿರಲಿಲ್ಲ. ಆದ್ದರಿಂದ ಈ ಮನವಿ ಪತ್ರದಲ್ಲಿನ ಎಲ್ಲ ಅಂಶಗಳ ಬಗ್ಗೆಯೂ ಒಮ್ಮತವಿರುವ ಹಲವು ಪ್ರತಿಪಕ್ಷಗಳ ಮುಖಂಡರು ನಿಯೋಗದಲ್ಲಿ ಹೋಗಲು ಸಾಧ್ಯವಾಗಿಲ್ಲ.

ಕಾನೂನು ಮತ್ತು ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಲ್ಲಿ ಮತ್ತೆ ವಿಶ್ವಾಸ ಮೂಡುವಂತಾಗಲು ಒಂದು ವಿಶ್ವಾಸಾರ್ಹ ಮತ್ತು ನಿಷ್ಪಕ್ಷಪಾತ ತನಿಖೆ ಅಗತ್ಯವಾಗಿದೆ. ಈ ತನಿಖೆ ದೇಶದಲ್ಲಿ ಭಿನ್ನಮತ ಮತ್ತು ಪ್ರತಿಭಟನೆಯ ವಿರುದ್ಧ ಮೈನಡುಗಿಸುವಂತಹ ಪರಿಣಾಮ ಉಂಟು ಮಾಡಲು ಜನಗಳನ್ನು ಹೆಕ್ಕುವ ಕ್ರಿಯೆಯಾಗಲು ಬಿಡಲಾಗದು. ಆದ್ದರಿಂದ ತನಿಖಾ ಅಯೋಗ ಕಾಯ್ದೆಯ ಅಡಿಯಲ್ಲಿ ಹಾಲಿ ಅಥವ ನಿವೃತ್ತ ನ್ಯಾಯಾಧೀಶರುಗಳ ನೇತೃತ್ವದಲ್ಲಿ ಒಂದು ತನಿಖೆಯನ್ನು ನಡೆಸಬೇಕು ಎಂದು ಭಾರತ ಸರಕಾರಕ್ಕೆ ಕರೆ ನೀಡಬೇಕು ಎಂದು ಮನವಿ ಪತ್ರದಲ್ಲಿ ರಾಷ್ಟ್ರಪತಿಗಳನ್ನು ಆಗ್ರಹಿಸಲಾಗಿದೆ.

ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ಮನವಿ ಪತ್ರದ ಪೂರ್ಣ ಒಕ್ಕಣಿಕೆ ಹೀಗಿದೆ:

ಗೌರವಾನ್ವಿತ ರಾಷ್ಟ್ರಪತಿಗಳೇ,

ನಾವು, ಈಶಾನ್ಯ ದಿಲ್ಲಿಯಲ್ಲಿ ಫೆಬ್ರುವರಿ 23ರಿಂದ 26, 2020 ರವರೆಗೆ ನಡೆದ 53 ಮಂದಿ ಜೀವ ಕಳಕೊಂಡಿರುವ ಗಲಭೆಗಳನ್ನು ಕುರಿತಂತೆ ದಿಲ್ಲಿ ಪೋಲಿಸ್ ತನಿಖೆ ನಡೆಸುತ್ತಿರುವ ರೀತಿಯ ಬಗ್ಗೆ ನಮ್ಮ ಆಳವಾದ ಆತಂಕವನ್ನು ವ್ಯಕ್ತಪಡಿಸಲು ಈ ಪತ್ರವನ್ನು ಬರೆಯುತ್ತಿದ್ದೇವೆ.

ದಿಲ್ಲಿ ಪೋಲಿಸ್ ಈ ಕುರಿತಂತೆ ವಿಶೇಷ ತನಿಖಾ ತಂಡ(ಎಸ್‌ಐಟಿ)ಗಳನ್ನು ರಚಿಸಿದೆ, ಮತ್ತು ಅದರ ಸ್ಪೆಷಲ್ ಸೆಲ್ ಕೂಡ ದಿಲ್ಲಿ ಗಲಭೆಗಳ ಹಿಂದಿನ ಪಿತೂರಿಯ ಅಂಶವನ್ನು ತನಿಖೆ ಮಾಡುತ್ತಿದೆ.

ಆದರೆ ಹಿಂಸಾಚಾರದ ವೇಳೆಯಲ್ಲಿ ಸ್ವತಃ ದಿಲ್ಲಿ ಪೋಲೀಸಿನ ಪಾತ್ರದ ಬಗ್ಗೆ ಮತ್ತು ಈಗ ಸಿಎಎ/ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಮತ್ತು ಯುವಜನರಿಗೆ ಕಿರುಕುಳ ಕೊಡುತ್ತಿರುವ ಮತ್ತು ಸುಳ್ಳು ಕೇಸುಗಳಲ್ಲಿ ಸಿಲುಕಿಸುತ್ತಿರುವ ಬಗ್ಗೆ ಹಲವು ಗಂಭೀರ ಪ್ರಶ್ನೆಗಳಿವೆ.

ಈ ರೀತಿಯಲ್ಲಿ ತಯಾರಿಸಿರುವ ಪಿತೂರಿ ಸಿದ್ಧಾಂತ ಈಗ ರಾಜಕೀಯ ಮುಖಂಡರನ್ನು ಸುಳ್ಳು ರೀತಿಯಲ್ಲಿ ಸಿಲುಕಿಸಲು ಆರಂಭಿಸಿದೆ. ದೀರ್ಘ ಕಾಲದಿಂದ ಒಬ್ಬ ಸಂಸದೀಯ ಪಟು ಎಂದು ಖ್ಯಾತಿ ಗಳಿಸಿರುವ, ಒಂದು ರಾಷ್ಟ್ರೀಯ ರಾಜಕೀಯ ಪಕ್ಷ ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಮತ್ತು ಹಲವು ಪ್ರಖ್ಯಾತ ಚಿಂತಕರು, ಕಾರ್ಯಕರ್ತರುಗಳ ಹೆಸರುಗಳು ಸಾರ್ವಜನಿಕಗೊಂಡಿರುವ ಸಾಮಗ್ರಿಯಲ್ಲಿ ಕಾಣಬರುತ್ತಿದೆ. ಇದು ಒಂದು ಕಳವಳಕಾರಿ ಪ್ರವೃತ್ತಿ, ಇದು ಈ ತನಿಖೆಗಳ ಬಗ್ಗೆಯೇ ಗಂಭಿರ ಪ್ರಶ್ನೆಗಳನ್ನು ಎತ್ತುತ್ತದೆ.

ಪೋಲೀಸರು ಹಿಂಸಾಚಾರದಲ್ಲಿ ಶಾಮೀಲಾಗಿರುವುದು, ಕಲ್ಲೆಸೆಯುವಂತೆ ಜನಗಳಿಗೆ ನಿರ್ದೇಶಿಸುತ್ತಿದ್ದುದು ಅಥವ ಹಿಂಸಾಚಾರವನ್ನು ತಡೆಯದೆ ಸುಮ್ಮನಿದ್ದುದನ್ನು ತೋರಿಸುವ ಹಲವಾರು ಸಾರ್ವಜನಿಕ ದಾಖಲೆಗಳು ವೀಡಿಯೋಗಳು ಇವೆ. ಹಿಂಸಾಚಾರದ ವೇಳೆಯಲ್ಲಿ, ಒಬ್ಬ ಗಾಯಗೊಂಡು ಬಿದ್ದ ವ್ಯಕ್ತಿಯನ್ನು ರಾಷ್ಟ್ರಗೀತೆ ಹಾಡುವಂತೆ ಪೋಲಿಸರು ಮತ್ತೆ-ಮತ್ತೆ ಥಳಿಸುತ್ತ ಬಲವಂತ ಮಾಡುತ್ತಿರುವ ಕಳವಳಕಾರಿ ವೀಡಿಯೋ ಇದೆ. ಇನ್ನೊಂದು ಘಟನೆಯಲ್ಲಿ ಹೀಗೆ ಥಳಿತಕ್ಕೆ ಒಳಗಾದ ಫೈಜಾನ್ ಎಂಬ ವ್ಯಕ್ತಿ ಕೆಲವು ದಿನಗಳ ನಂತರ ಸತ್ತಿದ್ದಾನೆ. ಇನ್ನೊಂದು ಘಟನೆಯಲ್ಲಿ ಒಬ್ಬ ಡಿಸಿಪಿ ಒಬ್ಬ ಬಿಜೆಪಿ ಮುಖಂಡ ಪ್ರತಿಭಟನಾಕಾರರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾಗ ಮೂಕಪ್ರೇಕ್ಷಕನಂತೆ ನಿಂತಿರುವಂತೆಯೇ ಆ ಮುಖಂಡ ಪ್ರತಿಭಟನಾಕಾರರು ರಸ್ತೆ ತೆರವು ಮಾಡದಿದ್ದರೆ ತಾನೇ ಮಾಡಿಸುವುದಾಗಿ ಎಚ್ಚರಿಸುತ್ತಿರುವುದು ದಾಖಲಾಗಿದೆ. ಒಬ್ಬ ಡಿಸಿಪಿ, ಅಡಿಷನಲ್ ಕಮಿಷನರುಗಳು, ಎಸ್‌ಹೆಚ್‌ಒಗಳ ವಿರುದ್ಧ ಅವರು ಹಿಂಸಾಚಾರದಲ್ಲಿ ಶಾಮೀಲಾಗಿದ್ದಾರೆ ಎಂದು ಹಲವು ದೂರುಗಳಿದ್ದರೂ ಇದರ ತನಿಖೆ ನಡೆಸಿ ಅವರನ್ನು ಶಿಕ್ಷಿಸುವ ಬಗ್ಗೆ ಯಾವುದೇ ತುರ್ತನ್ನು ತೋರಲಾಗುತ್ತಿಲ್ಲ.

ಪೋಲೀಸರು ತಮ್ಮ ಕಸ್ಟಡಿಯಲ್ಲಿರುವವರನ್ನು ಥಳಿಸುವ ಮತ್ತು ಚಿತ್ರಹಿಂಸೆಗೆ ಗುರಿಪಡಿಸುವ ವಿವರಗಳೂ ದಾಖಲಾಗಿವೆ.ಇದರಲ್ಲಿ ಫೆಬ್ರುವಿರಿ 26 ರಂದು ಪೋಲಿಸರು ಕರೆದೊಯ್ದ ಖಾಲಿದ್ ಸೈಫಿಯೂ ಸೇರಿದ್ದಾನೆ. ಆತನನ್ನು ನಂತರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸುವಾಗ ಅವನ ಎರಡೂ ಕಾಲುಗಳಲ್ಲಿ ತೀವ್ರ ಗಾಯಗಳಿದ್ದವು.

ಪ್ರಚೋದನಾಕಾರಿ ಭಾಷಣಗಳನ್ನು ಕೊಟ್ಟ ಬಿಜೆಪಿಗೆ ಸಂಬಂಧಿಸಿದ ಮುಖಂಡರುಗಳ ಬಗ್ಗೆ ಚಾರ್ಜಶೀಟ್‌ಗಳಲ್ಲಿ ಕಾಣುವ ಮೌನ ಗಮನಾರ್ಹವಾಗಿದೆ, ಒಬ್ಬ ಕೇಂದ್ರ ಮಂತ್ರಿ ಪ್ರತಿಭಟನಾಕಾರರಿಗೆ ಗುಂಡು ಹೊಡೆಯಿರಿ ಎಂದು ಸಾರ್ವಜನಿಕವಾಗಿಯೇ ಪ್ರಚೋದಿಸಿರುವುದೂ ಸೇರಿದಂತೆ ಡಿಸೆಂಬರ್ 2019ರಿಂದ ಆಳುವ ಪಕ್ಷಗಳ ಮುಖಂಡರ ಭಾಷಣಗಳ ದಾಖಲೆಗಳು ಇವೆ. ಇವು ಈ ತನಿಖೆಗಳ ನಿಷ್ಪಕ್ಷಪಾತತೆಯ ಬಗ್ಗೆ ಸಂದೇಹಗಳನ್ನು ಉಂಟುಮಾಡಿವೆ. ಬಿಜೆಪಿ ಮುಖಂಡರುಗಳಾದ ಕಪಿಲ್ ಮಿಶ್ರ, ಅನುರಾಗ್ ಠಾಕುರ್, ಪರ್ವೇಶ್ ಶರ್ಮ, ಸತ್ಯಪಾಲ್ ಸಿಂಗ್, ಜಗದೀಶ ಪ್ರಧಾನ್, ನಂದಕಿಶೋರ್, ಮತ್ತು ಮೋಹನ ಬಿಷ್ಟ್ ಈ ಬಿಜೆಪಿ ಮುಖಂಡರುಗಳ ಮೇಲೆ ಜನಗಳು ಹೇಗೋ ಧೈರ್ಯ ತಂದುಕೊಂಡು ದೂರುಗಳನ್ನು ದಾಖಲಿಸಿದರೂ ಈ ಬಗ್ಗೆ ದಿಲ್ಲಿ ಪೋಲಿಸ್ ಯಾವ ಕ್ರಮವನ್ನೂ ಕೈಗೊಂಡಿಲ್ಲ.

ದಿಲ್ಲಿ ಪೋಲೀಸ್ ಹಿಂಸಾಚಾರದಲ್ಲಿ ತಮ್ಮದೇ ಸಿಬ್ಬಂದಿಯ ಮತ್ತು ಬಿಜೆಪಿ ಮುಖಂಡರುಗಳ ಪಾತ್ರದ ಬಗ್ಗೆ ಕುರುಡಾಗಿರುವಾಗಲೇ, ತನಿಖೆ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧ ಪ್ರತಿಭಟನೆಗಳನ್ನು ಅಪರಾಧೀಕರಿಸುವ ಮತ್ತು ಅವು ದಿಲ್ಲಿ ಗಲಭೆಗಳಾಗುವಂತೆ ಮಾಡಿದ ಒಂದು ಪಿತೂರಿ ಎಂದು ಚಿತ್ರಿಸುವ ದಾರಿಯಲ್ಲಿ ಚಲಿಸುತ್ತಿರುವಂತೆ ಕಾಣುತ್ತದೆ. ಚಾರ್ಜ್ಶೀಟ್‌ಗಳಲ್ಲಿ ಪೋಲೀಸರು ವರ್ಣಿಸಿರುವ ಕಾಲಾನುಕ್ರಮಣಿಕೆ ಸಾರ್ವಜನಿಕವಾಗಿ ಲಭ್ಯವಾಗಿದ್ದು, ದಿಲ್ಲಿಯಲ್ಲಿ ವಿವಿಧ ದೃಣಿಗಳು ಮತ್ತು ಸಾಮಾಜಿಕ ಕಾರ್ಯಕರ್ತರುಗಳಿಂದ ಭಾಷಣಗಳು ಪ್ರತಿಯೊಂದೂ ಗಲಭೆಗಳಿಗೆ ಮಾಡಿದ ತಯಾರಿಯೇನೋ ಎಂಬಂತೆ ಅದರಲ್ಲಿ ಕಾಣುತ್ತದೆ. ಈ ಸಮಸ್ತ ತನಿಖೆ, ಗೃಹಮಂತ್ರಿಗಳು ಮಾರ್ಚ್ 2020ರಲ್ಲಿ ಲೋಕಸಭೆಯಲ್ಲಿ, ಗಲಭೆಗಳ ಬಗ್ಗೆ ಯಾವುದೇ ತನಿಖೆ ಆರಂಭವಾಗುವ ಮೊದಲೇ ಪ್ರತಿಪಾದಿಸಿದ ಒಂದು ಪಿತೂರಿಯ ಪೂರ್ವಕಲ್ಪಿತ ಸಿದ್ಧಾಂತದತ್ತ ತಲುಪುವ ಗುರಿ ಹೊಂದಿರುವಂತೆ ಕಾಣುತ್ತದೆ.

ಸ್ಪೆಷಲ್ ಸೆಲ್ ತನಿಖೆ ನಡೆಸಿರುವ ಈ ‘ಪಿತೂರಿ’ಯ ಎಫ್‌ಐಆರ್(59/2020) ಕರಾಳ ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾಯ್ದೆ(ಯುಎಪಿಎ) ಯನ್ನು ಉಲ್ಲೇಖಿಸಿದ್ದು, ಅದನ್ನು ಪ್ರತಿಭಟನೆಗಳಲ್ಲಿ ತೊಡಗಿದ್ದ ಕಾರ್ಯಕರ್ತರು ಮತ್ತು ಯುವಜನರ ವಿರುದ್ಧ ಗಾಳ ಹಾಕಿ ಅವರ ವಿರುದ್ಧ ಅಂಶಗಳನ್ನು ಹೆಕ್ಕಿ ತೆಗೆಯಲು ಬಳಸಲಾಗುತ್ತಿದೆ. ಕಳೆದ ಆರು ತಿಂಗಳಲ್ಲಿ , ಈ ಪ್ರತಿಭಟನೆಗಳಲ್ಲಿ ಭಾಗವಹಿಸಿದವರು ಮತ್ತು ಬೆಂಬಲಿಸಿದವರನ್ನು ಪೋಲಿಸರು ವಿಚಾರಣೆಗೆಂದು ಕರೆಸಿಕೊಳ್ಳುತ್ತಲೇ ಮತ್ತು ಅವರಿಗೆ ಕಿರುಕುಳಗಳನ್ನು ಕೊಡುತ್ತಲೇ ಇದ್ದಾರೆ,  ಈ ಪಿತೂರಿಗೆ ‘ಸಾಕ್ಷ್ಯ’ಗಳನ್ನು ಸೃಷ್ಟಿಸಲು ಮತ್ತು ಸುಳ್ಳು ಹೇಳಿಕೆಗಳನ್ನು ಬಲವಂತದಿಂದ ಪಡೆಯಲು ಅವರನ್ನು ದೀರ್ಘ ವಿಚಾರಣೆಗಳಿಗೆ ಗುರಿಪಡಿಸುತ್ತಿದ್ದಾರೆ, ಬೆದರಿಕೆಗಳನ್ನೂ ಹಾಕುತ್ತಿದ್ದಾರೆ. ಪೋಲೀಸರು ಬಂಧಿತರಿಂದ ಈ ಪಿತೂರಿ’ಯಲ್ಲಿ ವಿವಿಧ ಕಾರ್ಯಕರ್ತರ ಮತ್ತು ನಾಗರಿಕ ಸಮಾಜದ ಮುಖಂಡರ ಪಾತ್ರದ ಬಗ್ಗೆ “ವಿಷಯ ಬಹಿರಂಗ ಪಡಿಸಿದ ಹೇಳಿಕೆ”ಗಳನ್ನು (ಅವಕ್ಕೆ ಸಾಕ್ಷ್ಯ ಎಂಬ ಬೆಲೆಯೇನೂ ಇಲ್ಲದಿದ್ದರೂ) ದುರುದ್ದೇಶದಿಂದಲೇ ಸೋರಿ ಹೋಗುವಂತೆ ಮಾಡುತ್ತಿದ್ದಾರೆ, ಇದು ಇವರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುವಂತೆ ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ಪ್ರಭಾವಿಸಲು ಮಾಡುತ್ತಿರುವ ಪ್ರಯತ್ನ.

 

ಇದನ್ನು ಓದಿ:

ಈಶಾನ್ಯ ದಿಲ್ಲಿಯಲ್ಲಿ ಮತ್ತೆ ಕಳವಳಕಾರೀ ಘಟನೆಗಳು-ಇವನ್ನು ನಿಲ್ಲಿಸುವಂತೆ ದಿಲ್ಲಿ ಪೋಲಿಸ್ ಆಯುಕ್ತರಿಗೆ ಬೃಂದಾ ಕಾರಟ್ ಪತ್ರ

ಆದ್ದರಿಂದ, ದಿಲ್ಲಿ ಪೋಲಿಸ್ ನಡೆಸುತ್ತಿರುವ ತನಿಖೆ ವಿಶ್ವಾಸವನ್ನು ಸ್ಫುರಿಸುವುದಿಲ್ಲ. ಈ ತನಿಖೆಯ ನಿಷ್ಪಕ್ಷಪಾತತೆಯ ಬಗ್ಗೆ ಗಂಭೀರ ಪ್ರಶ್ನೆಗಳಿವೆ. ಇದರಲ್ಲಿ, ವಿಶೇಷವಾಗಿ, ಇತ್ತೀಚೆಗೆ, ವಿಶೇಷ ಪೋಲಿಸ್ ಆಯುಕ್ತರು(ಅಪರಾಧ) ಈಶಾನ್ಯ ದಿಲ್ಲಿಯ ಕೆಲವು ಗಲಭೆಪೀಡಿತ ಪ್ರದೇಶಗಳ “ಕೆಲವು ಹಿಂದೂ ಯುವಜನರ” ಬಂಧನಗಳ ಬಗ್ಗೆ “ಹಿಂದು ಸಮುದಾಯದಲ್ಲಿ ಒಂದು ಮಟ್ಟದ ಕೋಪ” ಇದೆ ಎನ್ನುತ್ತ ನೀಡಿರುವ ಆದೇಶವೂ ಸೇರಿದೆ.

ಒಂದು ವಿಶ್ವಾಸಾರ್ಹ ಮತ್ತು ನಿಷ್ಪಕ್ಷಪಾತ ತನಿಖೆ ಕಾನೂನು ಮತ್ತು ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಲ್ಲಿ ಮತ್ತೆ ವಿಶ್ವಾಸ ಮೂಡುವಂತಾಗಲು ಅಗತ್ಯವಾಗಿದೆ. ಈ ತನಿಖೆ ದೇಶದಲ್ಲಿ ಭಿನ್ನಮತ ಮತ್ತು ಪ್ರತಿಭಟನೆಯ ವಿರುದ್ಧ ಮೈನಡುಗಿಸುವಂತಹ ಪರಿಣಾಮ ಉಂಟು ಮಾಡಲು ಜನಗಳನ್ನು ಗಾಳ ಹಾಕಿ ಹೆಕ್ಕುವ ಕ್ರಿಯೆಯಾಗಲು ಬಿಡಲಾಗದು.

ಆದ್ದರಿಂದ, ನಾವು ತಮ್ಮನ್ನು, ತನಿಖಾ ಆಯೋಗ ಕಾಯ್ದೆಯ ಅಡಿಯಲ್ಲಿ ಹಾಲಿ ಅಥವ ನಿವೃತ್ತ ನ್ಯಾಯಾಧೀಶರುಗಳ ನೇತೃತ್ವದಲ್ಲಿ ಒಂದು ತನಿಖೆಯನ್ನು ನಡೆಸಬೇಕು ಎಂದು ಭಾರತ ಸರಕಾರಕ್ಕೆ ಕರೆ ನೀಡಬೇಕು ಎಂದು ಆಗ್ರಹಿಸುತ್ತೇವೆ.

Donate Janashakthi Media

Leave a Reply

Your email address will not be published. Required fields are marked *