ಜಾರಿ ನಿರ್ದೇಶನಾಲಯ ದೂರಿನ ಮೇರೆಗೆ ಸಿಎಂ ಕೇಜ್ರಿವಾಲ್‌ಗೆ ದೆಹಲಿ ಕೋರ್ಟ್‌ ಸಮನ್ಸ್!

ನವದೆಹಲಿ: ಅಬಕಾರಿ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯವು ಮುಖ್ಯಮಂತ್ರಿ ಕೇಜ್ರಿವಾಲ್‌ ಅವರಿಗೆ ಬುಧವಾರ ಸಮನ್ಸ್ ನೀಡಿದೆ. ಜಾರಿ ನಿರ್ದೇಶನಾಲಯ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ್ದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದಿವ್ಯಾ ಮಲ್ಹೋತ್ರಾ ಅವರು ಫೆಬ್ರವರಿ 17ಕ್ಕೆ ಮುಖ್ಯಮಂತ್ರಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶ ಪ್ರಕಟಿಸಿದ್ದಾರೆ.

ಅಬಕಾರಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಕಳುಹಿಸಿದ್ದ ಐದು ಸಮನ್ಸ್‌ಗಳಿಗೆ ಕೇಜ್ರಿವಾಲ್‌ ಅವರು ಹಾಜರಾಗಿರಲಿಲ್ಲ. ಈ ಕಾರಣಕ್ಕೆ ಫೆಬ್ರವರಿ 3 ರಂದು ಇಡಿ ಮುಖ್ಯಮಂತ್ರಿ ವಿರುದ್ಧ ರೂಸ್ ಅವೆನ್ಯೂ ನ್ಯಾಯಾಲಯದಲ್ಲಿ ದೂರು ದಾಖಲಿಸಿತ್ತು. ಎಎಪಿ ಸರ್ಕಾರ ಜಾರಿಗೆ ತಂದಿದ್ದ ಹೊಸ ಅಬಕಾರಿ ನೀತಿಯ ವಿರುದ್ದ ಈ ಪ್ರಕರಣ ದಾಖಲಾಗಿತ್ತು. ಆದರೆ ನೀತಿಯು ವಿವಾದವಾಗುತ್ತಿದ್ದಂತೆ ಸರ್ಕಾರ ಅದನ್ನು ರದ್ದು ಮಾಡಿತ್ತು.

ಇದನ್ನೂ ಓದಿ: ಮಧ್ಯಪ್ರದೇಶ | ಪಟಾಕಿ ಕಾರ್ಖಾನೆ ಸ್ಫೋಟದಲ್ಲಿ 8 ಸಾವು, 80 ಅಧಿಕ ಮಂದಿಗೆ ಗಾಯ

ಸಾರ್ವಜನಿಕ ಸೇವಕರ ಆದೇಶವನ್ನು ಪಾಲಿಸದಿದ್ದಕ್ಕಾಗಿ ಐಪಿಸಿಯ ಸೆಕ್ಷನ್ 174 ರ ಅಡಿಯಲ್ಲಿ ಮತ್ತು ಇಡಿ ನೀಡಿದ ಸಮನ್ಸ್‌ಗಳನ್ನು ಪಾಲಿಸದಿದ್ದಕ್ಕಾಗಿ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 50 ರ ಅಡಿಯಲ್ಲಿ ನ್ಯಾಯಾಲಯದಲ್ಲಿ ಕೇಜ್ರಿವಾಲ್‌ ವಿರುದ್ಧ ದೂರು ದಾಖಲಿಸಲಾಗಿತ್ತು.

ನ್ಯಾಯಾಲಯದ ಸಮನ್ಸ್‌ಗೆ ಪ್ರತಿಕ್ರಿಯಿಸಿದ ಎಎಪಿ ನಾಯಕ ಜಾಸ್ಮಿನ್ ಶಾ ಅವರು, “ನಾವು ನ್ಯಾಯಾಲಯದ ಆದೇಶವನ್ನು ಅಧ್ಯಯನ ಮಾಡುತ್ತಿದ್ದೇವೆ. ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಜಾರಿ ನಿರ್ದೇಶನಾಲಯದ ಎಲ್ಲಾ ಸಮನ್ಸ್‌ಗಳು ಹೇಗೆ ಕಾನೂನುಬಾಹಿರವಾಗಿವೆ ಎಂಬುದನ್ನು ನಾವು ನ್ಯಾಯಾಲಯಕ್ಕೆ ತಿಳಿಸುತ್ತೇವೆ” ಎಂದು ಹೇಳಿದ್ದಾರೆ.

ಜಾರಿ ನಿರ್ದೇಶನಾಲಯ ಕಳುಹಿಸಿದ್ದ ಐದು ಸಮನ್ಸ್‌ಗಳಿಗೆ ಕೇಜ್ರಿವಾಲ್‌ ಅವರು ಹಾಜರಾಗಿರಲಿಲ್ಲ. ಈ ಸಮನ್ಸ್‌ಗಳು ತನ್ನನ್ನು ಬಂಧಿಸಲು ಇರುವ “ಅಕ್ರಮ ಪ್ರಯತ್ನಗಳು” ಎಂದು ಅವರು ಕರೆದ್ದರು. ಚುನಾವಣೆಯಲ್ಲಿ ಪ್ರಚಾರ ಮಾಡದಂತೆ ತಡೆಯುವ ಉದ್ದೇಶದಿಂದ ಈ ಸಮನ್ಸ್ ನೀಡಲಾಗಿದೆ ಎಂದು ಅವರು ಪ್ರತಿಪಾದಿಸಿದ್ದರು. ಅವರು 2023 ರ ನವೆಂಬರ್ 2 ಮತ್ತು ಡಿಸೆಂಬರ್ 21 ಮತ್ತು ಜನವರಿ 3, ಜನವರಿ 18 ಮತ್ತು ಫೆಬ್ರವರಿ 2 ರ ಜಾರಿ ನಿರ್ದೇಶನಾಲಯದ ಸಮನ್ಸ್‌ಗಳಿಗೆ ಹಾಜರಾಗಿರಲಿಲ್ಲ.

ಇದನ್ನೂ ಓದಿ: ಪ್ರಧಾನಿಯವರೆ ಹಾಲು ಕೊಡುವ ಕೆಚ್ಚಲನ್ನೇ ಕೊಯ್ಯಬೇಡಿ – ತೆರಿಗೆ ಹಂಚಿಕೆ ತಾರತಮ್ಯದ ವಿರುದ್ಧ ಕರ್ನಾಟಕ ಪ್ರತಿಭಟನೆ

ಫೆಬ್ರವರಿ 2 ರಂದು ಕೇಜ್ರಿವಾಲ್ ಅವರು ಇಡಿ ಮುಂದೆ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಎಎಪಿ ಹೇಳಿದೆ. ದೆಹಲಿ ಸರ್ಕಾರವನ್ನು ಉರುಳಿಸಲು ಕೇಂದ್ರ ಸರ್ಕಾರ ಬಯಸುತ್ತಿದೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿಯನ್ನು ಪಕ್ಷವು ಗುರಿಯಾಗಿಸಿತ್ತು.

2021-22ರ ದೆಹಲಿ ಸರ್ಕಾರದ ಅಬಕಾರಿ ನೀತಿಯು ಖಾಸಗಿ ಮದ್ಯದ ವ್ಯಾಪಾರಿಗಳಿಗೆ ಪರವಾನಗಿ ನೀಡಲು ಅನುಕೂಲ ಮಾಡಿಕೊಡಲು ರಚಿಸಲಾಗಿದ್ದು, ಅದಕ್ಕಾಗಿ ಲಂಚ ಪಡೆಯಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಆದರೆ ಈ ನೀತಿಯನ್ನು ಎಎಪಿ ಸರ್ಕಾರ ನಂತರ ರದ್ದುಗೊಳಿಸಿತ್ತು. ಅದಾಗ್ಯೂ, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಕೇಂದ್ರೀಯ ತನಿಖಾ ದಳದ ತನಿಖೆಗೆ ಶಿಫಾರಸು ಮಾಡಿದ ನಂತರ ಇಡಿ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು.

ವಿಡಿಯೊ ನೋಡಿ: ನ್ಯಾಶನಲ್ ಕಾಲೇಜ್ ಮುಂದೆ ಜನಾಕ್ರೋಶ :ಡಾ. ರವಿ ಬಾಗಿ ವರ್ಗಾವಣೆ ಹಿಂಪಡೆದ ಆಡಳಿತ ಮಂಡಳಿ Janashakthi Media

Donate Janashakthi Media

Leave a Reply

Your email address will not be published. Required fields are marked *