ಕೋಲ್ಕತ್ತಾ: ಸುಪ್ರೀಂ ಕೋರ್ಟ್ನ ಸೂಚನೆಗಳನ್ನು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ತಾರ್ಕಿಕ ವ್ಯತ್ಯಾಸಗಳ ಹೆಸರಿನಲ್ಲಿ ಜನರಿಗೆ ಕಿರುಕುಳ ನೀಡಬಾರದು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಾಕೀತು ಮಾಡಿದ್ದಾರೆ. ಮಂಗಳವಾರ ಸಚಿವಾಲಯ ನಬನ್ನಾದಲ್ಲಿ ಮುಖ್ಯ ಕಾರ್ಯದರ್ಶಿ ನಂದಿನಿ ಚಕ್ರವರ್ತಿ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಸಿಎಂ ಈ ಸೂಚನೆ ಕೊಟ್ಟಿದ್ದಾರೆ.
ತಾರ್ಕಿಕ ವ್ಯತ್ಯಾಸಗಳ ನೆಪದಲ್ಲಿ ಜನರು ಅನಾನುಕೂಲತೆಗೆ ಒಳಗಾಗದಂತೆ ನೋಡಿಕೊಳ್ಳಲು ಅವರು ಅಧಿಕಾರಿಗಳಿಗೆ ನಿರ್ದಿಷ್ಟವಾಗಿ ಸೂಚನೆ ನೀಡಿದ್ದಾರೆ” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಎಸ್ಐಆರ್ಗೆ ಸಂಬಂಧಿಸಿದ ಎಲ್ಲಾ ವಿಚಾರಣೆಗಳನ್ನು ಸುಪ್ರೀಂ ಕೋರ್ಟ್ನ ನಿರ್ದೇಶನಗಳಿಗೆ ಅನುಸಾರವಾಗಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ತಾರ್ಕಿಕ ವ್ಯತ್ಯಾಸಗಳಿಗಾಗಿ ಪರಿಶೀಲಿಸಬೇಕಾದ ಮತದಾರರ ಪಟ್ಟಿಯನ್ನು ಪ್ರಕಟಿಸಲು, ಅವರು ಸಲ್ಲಿಸಿದ ದಾಖಲೆಗಳಿಗೆ ರಸೀದಿಗಳನ್ನು ನೀಡಲು ಮತ್ತು ಪರಿಶೀಲನೆ ಸಮಯದಲ್ಲಿ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರು (ಬಿಎಲ್ಎ) ಮತದಾರರೊಂದಿಗೆ ಹೋಗಲು ಅವಕಾಶ ನೀಡುವಂತೆ ನಿರ್ದೇಶನ ನೀಡಿತ್ತು.
ಇದನ್ನೂ ಓದಿ : ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲರ ನಿರಾಕರಣೆ!
ತಾರ್ಕಿಕ ವ್ಯತ್ಯಾಸಗಳ ಕುರಿತು ಎಸ್ಐಆರ್ ವಿಚಾರವಾಗಿ ಜನರು ತೊಂದರೆ ಎದುರಿಸುತ್ತಿದ್ದಾರೆ ಮತ್ತು ಈ ಸಮಸ್ಯೆಯನ್ನು ಮಾನವೀಯ ದೃಷ್ಟಿಕೋನದಿಂದ ನೋಡಬೇಕೆಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಚುನಾವಣಾ ಆಯೋಗದ ಕೆಲಸ ಮುಂದುವರಿಯಬೇಕು ಗದಿತ ದಿನಾಂಕಗಳಂದು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಹಾಜರಾಗಲು ಸಾಧ್ಯವಾಗದ ಮತದಾರರಿಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಬೇಕು ಆದರೆ ರಾಜ್ಯದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಯಾವುದೇ ಸಂದರ್ಭದಲ್ಲೂ ಅಡ್ಡಿಯಾಗಬಾರದು ಎಂದು ಸೂಚಿಸಿದ್ದಾರೆ.
ಚುನಾವಣಾ ಆಯೋಗವು ಪಶ್ಚಿಮ ಬಂಗಾಳಕ್ಕೆ 11 ಹೆಚ್ಚುವರಿ ವೀಕ್ಷಕರನ್ನು ನಿಯೋಜಿಸಿದ್ದು, ರಾಜ್ಯದ ಅಧಿಕಾರಿಗಳು ಭಯಪಡುವ ಅಗತ್ಯವಿಲ್ಲ, ಏಕೆಂದರೆ ಸರ್ಕಾರ ನಿಮ್ಮೊಂದಿಗೆ ದೃಢವಾಗಿ ನಿಂತಿದೆ ಎಂದು ಬ್ಯಾನರ್ಜಿ ಅಭಯ ನೀಡಿದರು. ರಾಜ್ಯದಲ್ಲಿ ಒಟ್ಟು ರೋಲ್ ವೀಕ್ಷಕರ ಸಂಖ್ಯೆ 20ಕ್ಕೆ ತಲುಪಿರುವ ಬೆನ್ನಲ್ಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಂದ ಈ ನಿರ್ದೇಶನಗಳು ಬಂದಿವೆ.
ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಹಿನ್ನೆಲೆ ತಾನು ಭಾರತೀಯ, ಪೂರ್ವಜರು ಇಲ್ಲಿಯವರೇ ಎಂಬುದನ್ನು ಸಾಬೀತು ಮಾಡಲು ವ್ಯಕ್ತಿಯೊಬ್ಬ ತನ್ನ ಅಜ್ಜನ ಸಮಾಧಿಯ ಮಣ್ಣು ತಂದು ಡಿಎನ್ಎ ಪರೀಕ್ಷೆ ನಡೆಸಲು ಒತ್ತಾಯಿಸಿದ್ದರು. ಹರಿಶ್ಚಂದ್ರಪುರ ಬ್ಲಾಕ್ 1 ರ ವಾರಿ ದೌಲತ್ಪುರ ಗ್ರಾಮದಲ್ಲಿ ವಾಸಿಸುತ್ತಿರುವ ಸಲೇಕ್ ಈ ರೀತಿ ಮಾಡಿದ ವ್ಯಕ್ತಿ. ಚುನಾವಣಾಧಿಕಾರಿಗಳಿಗೆ ಈಗಾಗಲೇ ಹಲವು ದಾಖಲೆಗಳನ್ನು ನೀಡಿದರೂ, ಪದೇ ಪದೆ ವಿಚಾರಣೆಗೆ ಕರೆದಿದ್ದರಿಂದ ಸಿಟ್ಟಾದ ಈತ ಏಕಾಏಕಿ ಅಜ್ಜನ ಸಮಾಧಿ ಅಗೆದು ಅದರ ಮಣ್ಣನ್ನು ತಂದು ಡಿಎನ್ಎ ಪರೀಕ್ಷೆ ಮಾಡಲು ಆಗ್ರಹಿಸಿದ್ದರು.
ಇದನ್ನೂ ನೋಡಿ : ಉತ್ತರ ಪ್ರದೇಶ | ಮತದಾರರ “ಪರಿಷ್ಕರಣೆಯೋ? ಹರಣವೋ? | ಗುರುರಾಜ ದೇಸಾಯಿ| Janashakthi Media #upsir
