ಸಿಗಂದೂರು ಸೇತುವೆ ಲೋಕಾರ್ಪಣೆ: ಕಾರ್ಯಕ್ರಮಕ್ಕೆ ಗೈರು ಹಾಜರಾಗಿರುವ ಬಗ್ಗೆ ಡಿ.ಕೆ ಶಿವಕುಮಾರ್‌ ಪ್ರತಿಕ್ರಿಯೆ

ಬೆಂಗಳೂರು: ಸಿಗಂದೂರು ಸೇತುವೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸಿಎಂ ಸಿದ್ಧರಾಮಯ್ಯ ಹಾಗೂ ತಾವು ಗೈರು ಹಾಜರಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಜುಲೈ 14ರಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ.

“ನಮ್ಮ ನೀರಾವರಿ ಇಲಾಖೆಯಿಂದ 2 ಸಾವಿರ ಕೋಟಿ ರೂ. ನೀಡಿದ್ದೇವೆ. ಆದರೆ ಕಾರ್ಯಕ್ರಮಕ್ಕೆ ನಮಗೆ ಕನಿಷ್ಠ 1 ತಿಂಗಳು ಮುಂಚಿತವಾಗಿ ಹೇಳುವ ಸೌಜನ್ಯವನ್ನು ಕೇಂದ್ರ ಸರ್ಕಾರ ತೋರಿಸಿಲ್ಲ” ಎಂದು ಹರಿಹಾಯ್ದರು.

ಕೇಂದ್ರ ಸರ್ಕಾರ ಸಿಎಂ ಅವರಿಗೆ ಮೊದಲು ತಿಳಿಸಬೇಕಿತ್ತು. ರಾಜ್ಯ ಸರ್ಕಾರವನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಈ ಕುರಿತು ಸಂಸದರೂ ಸಹ ಮನವಿ ಮಾಡಿದ್ದರು. ಅದಕ್ಕಾಗಿ ಸಿಎಂ ಪತ್ರ ಕೂಡ ಬರೆದಿದ್ದಾರೆ. ಇಂಥಾ ಕಾರ್ಯಕ್ರಮ ಮಾಡುವಾಗ ಸಿಎಂ ರಿಗೆ ಕನಿಷ್ಠ ಒಂದು ತಿಂಗಳ ಮುಂಚಿತವಾಗಿ ಹೇಳಬೇಕು ಎಂದು ಡಿಕೆಶಿ ಹೇಳಿದರು.

ಇದನ್ನೂ ಓದಿ: ಸಿಗಂದೂರು ಸೇತುವೆ | ಉದ್ಘಾಟನೆಗೆ ಸಿಎಂ ಗೈರು – ಗಡ್ಕರಿ ನಿರ್ಧಾರಕ್ಕೆ ಸಿಎಂ ಆಕ್ರೋಶ

ಇದು ಬಹಳ ದೊಡ್ಡ ಕಾರ್ಯಕ್ರಮ. 2 ಸಾವಿರ ಕೋಟಿ ರೂ.ಗೂ ಹೆಚ್ಚು ಹಣ ನಮ್ಮ ನಿರಾವರಿ ಇಲಾಖೆಯಿಂದ ಖರ್ಚು ಮಾಡ್ತಾ ಇದ್ದೇವೆ. ನಾವೆಲ್ಲರೂ ಇದಕ್ಕೆ ಹೋಗಲೇ ಬೇಕಾಗಿತ್ತು.  ಆದರೂ ಗೈರು ಹಾಜರಾಗಿರುವುದು ಉದ್ದೇಶ ಪೂರ್ವಕವೇ ಅನ್ನೋ ವಿಚಾರ ಬೇರೆ. ರಾಜಕಾರಣ ಆಮೇಲೆ ಮಾತನಾಡೋಣ. ಮುಂಚಿತವಾಗಿ ತಿಳಿಸಿದ್ದರೆ ಖಂಡಿತವಾಗಿ ಆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೆವು ಎಂದು ಡಿಸಿಎಂ ಹೇಳಿದರು.

ಇದೇ ವೇಳೆ ನಟಿ ಬಿ. ಸರೋಜಾ ದೇವಿ ನಿಧನಕ್ಕೆ ಸಂತಾಪ ಸೂಚಿಸಿದ ಡಿಕೆಶಿ,ಅವರು ನನಗೆ ಬಹಳ ಆತ್ಮೀಯರಾಗಿದ್ದರು. ಅನೇಕ ಸಂದರ್ಭದಲ್ಲಿ ಸರ್ಕಾರದ ಅನೇಕ ಕಾರ್ಯಕ್ರಮಗಳು ಭಾಗಿಯಾಗಿದ್ದರು.

ಇತ್ತೀಚಿಗೆ ಅವರ ಆರೋಗ್ಯ ಸಲ್ಪ ಹದಗೆಟ್ಟಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸುತ್ತೇನೆ. ಅವರ ಅಭಿಮಾನಿಗಳಿಗೆ ಬಂಧುಗಳಿಗೆ ಭಗವಂತ ನೋವನ್ನು ಭರಿಸುವ ಶಕ್ತಿ ಕೊಡಲಿ ಅಂತ ಕೇಳಿಕೊಳ್ಳುತ್ತೇನೆ ಎಂದು ಹೇಳಿದರು.

ಇದನ್ನೂ ನೋಡಿ: ಸಾರ್ವತ್ರಿಕ ಮುಷ್ಕರ | ಕೇಂದ್ರ – ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ಸಿಡಿದೆದ್ದ ರೈತ – ಕಾರ್ಮಿಕರು Janashakthi

Donate Janashakthi Media

Leave a Reply

Your email address will not be published. Required fields are marked *