ಬೆಂಗಳೂರು: ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯ ಒಳ ಮೀಸಲಾತಿಗೆ ಸಂಬಂಧಿಸಿ ನ್ಯಾ. ನಾಗಮೋಹನ ದಾಸ್ ಆಯೋಗವು ಮಧ್ಯಂತರ ವರದಿಯನ್ನು ನೀಡಿದೆ. ಸಮಿತಿಯು ಪ್ರಧಾನವಾಗಿ ನಾಲ್ಕು ಶಿಫಾರಸ್ಸುಗಳನ್ನು ನೀಡಿದೆ. ಈ ಶಿಫಾರಸ್ಸುಗಳನ್ನು ರಾಜ್ಯ ಸಚಿವ ಸಂಪುಟವು ಅಂಗೀಕರಿಸಿದೆ ಎಂದು ಕಾರ್ಯದರ್ಶಿ ಡಾ. ಪ್ರಕಾಶ್ ಕೆ ಹೇಳಿದ್ದಾರೆ. ಒಳಮೀಸಲಾತಿ
ಈ ಹಿನ್ನೆಲೆಯಲ್ಲಿ ಒಳ ಮೀಸಲಾತಿಗೆ ಅಗತ್ಯವಾದ ವೈಜ್ಞಾನಿಕ ಸಮೀಕ್ಷೆಯನ್ನು ನಿಗದಿತ ಗಡುವಿನಲ್ಲಿ ಪೂರ್ಣಗೊಳಿಸಬೇಕು ಮತ್ತು ಅಲ್ಲಿಯವರೆಗೆ ಪರಿಶಿಷ್ಟ ಜಾತಿಗಳಿಗೆ ಅನ್ಯಾಯವಾಗದ ಹಾಗೆ ನೇಮಕಾತಿಗಳನ್ನು ತಡೆಹಿಡಿಯಬೇಕೆಂದು ಸಿಪಿಐ(ಎಂ) ರಾಜ್ಯ ಸಮಿತಿಯು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತದೆ.
ಪರಿಶಿಷ್ಟ ಜಾತಿಗಳ ವೈಜ್ಞಾನಿಕ ವರ್ಗೀಕರಣಕ್ಕೆ ಹೊಸ ಸಮೀಕ್ಷೆ ನಡೆಸಿ ದತ್ತಾಂಶ ಸಂಗ್ರಹಿಸಲು ಮಾಡಿರುವ ಶಿಫಾರಸ್ಸು ಮುಂದಿನ ದಿನಗಳಲ್ಲಿ ಒಳಮೀಸಲಾತಿಯ ವಿವಿಧ ಪ್ರಶ್ನೆಗಳ ಮೇಲೆ ಕೋರ್ಟ್ ಮೆಟ್ಟಿಲೇರುವುದನ್ನು ತಡೆಗಟ್ಟಲು ಅಗತ್ಯವಾಗಿದೆ.
ಇದನ್ನೂ ಓದಿ: ಚಿತ್ರದುರ್ಗ| ನಕಲಿ ಪಾಸ್ ಪೋರ್ಟ್ ವಂಚನೆ: 8500 ರೂ. ದಂಡ
ಸುಪ್ರೀಂ ಕೋರ್ಟಿನ ತೀರ್ಪು ಬಹಳ ಮುಖ್ಯವಾಗಿ ಈ ಅಂಶವನ್ನು ಆಧರಿಸಿದೆ. ಆದ್ದರಿಂದ ಆಯೋಗವು ಅಭಿಪ್ರಾಯಪಟ್ಟಿರುವ ಹಾಗೆ ಆಧುನಿಕ ಸಾಧನಗಳನ್ನು ಬಳಸಿ, ಸರ್ಕಾರವು ನಿಗದಿ ಪಡಿಸಿದ 60 ದಿನಗಳೊಳಗೆ, ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಬೇಕಾಗಿದೆ.
ಆಯೋಗವು ಶಿಫಾರಸ್ಸು ಮಾಡಿರುವ ಹಾಗೆ ಮುಂದಿನ ನೇಮಕಾತಿಗಳಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಅನ್ಯಾಯವಾಗದ ಹಾಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಎರಡು ತಿಂಗಳ ಅವಧಿಗೆ ಪರಿಶಿಷ್ಟ ಜಾತಿಗಳ ಮೀಸಲು ನೇಮಕಾತಿಯನ್ನು ಮುಂದೂಡುವುದು ಅಗತ್ಯವಾಗಿದೆ.
ಒಳ ಮೀಸಲಾತಿ ವಿಚಾರವು ಪ್ರಮುಖ ಹಾಗೂ ಅತ್ಯಂತ ಸಂಕೀರ್ಣವಾದ ಪ್ರಶ್ನೆಯಾಗಿದೆ.ಒಮ್ಮೆ ಜಾರಿಗೊಳಿಸಿದ ನಂತರ, ಸೂಕ್ತ ದತ್ತಾಂಶಗಳ ಕೊರತೆ ಅಥವಾ ಅವೈಜ್ಞಾನಿಕ ಸಮೀಕ್ಷೆ ಇತ್ಯಾದಿ ಕಾರಣಗಳಿಗಾಗಿ ಕೋರ್ಟಿನಲ್ಲಿ ನಕಾರಾತ್ಮಕ ಪರಿಣಾಮ ಉಂಟಾಗದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ.
ಆದ್ದರಿಂದ ಎರಡು ತಿಂಗಳ ಸಮಯದಲ್ಲಿ, ಒಳ ಮೀಸಲಾತಿ ತೀರ್ಮಾನವು ಯಾವುದೇ ಕಾನೂನಿನ ತೊಡಕುಗಳಿಗೆ ಸಿಕ್ಕಿ ತೊಳಲಾಡದಂತೆ ಮಾಡುವ ದೃಷ್ಟಿಯಿಂದ, ವೈಜ್ಞಾನಿಕ ಸಮೀಕ್ಷೆ ಮೂಲಕ ದತ್ತಾಂಶ ಸಂಗ್ರಹ ಮಾಡಲು ಎಲ್ಲ ಶಕ್ತಿಗಳು ಸಹಕಾರ ನೀಡಬೇಕೆಂದು ಸಿಪಿಐ(ಎಂ) ವಿನಂತಿಸುತ್ತದೆ.
ಇದನ್ನೂ ನೋಡಿ: ತುಮಕೂರು | ರೈತರ ಮೇಲೆ ಗುಬ್ಬಿ ಶಾಸಕನ ದರ್ಪ – KPRS ಖಂಡನೆ Janashakthi Media