ಕೊಳ್ತಮಜಲು ಅಬ್ದುಲ್ ರೆಹಮಾನ್ ಮನೆಗೆ ಸಿಪಿಐಎಂ ದ.ಕ. ಜಿಲ್ಲಾ ಸಮಿತಿಯ ನಿಯೋಗ ಭೇಟಿ

ಸಿಪಿಐಎಂ ದ.ಕ. ಜಿಲ್ಲಾ ಸಮಿತಿಯ ನಿಯೋಗ  ಸಿಪಿಐಎಂ ದ.ಕ. ಜಿ.ಲ್ಲಾ ಸಮಿತಿಯ ನಿಯೋಗಇತ್ತೀಚೆಗೆ ಮತಾಂಧರಿಂದ ಹತ್ಯೆಗೀಡಾದ ಕೊಳ್ತಮಜಲು ಅಬ್ದುಲ್ ರೆಹಮಾನ್ ಮನೆಗೆ ಇಂದು ಭೇಟಿ ನೀಡಿತು. ನೊಂದಿರುವ ಕುಟುಂಬಕ್ಕೆ ಸಾಂತ್ವನ ಹೇಳಿತು.

ಪೊಳಲಿ ದೇವಸ್ಥಾನದಿಂದ ಸುಮಾರು ನಾಲ್ಕು ಕಿ ಮೀ ದೂರದ ಕೊಳತ್ತಮಜಲು ಎಂಬ ತೀರಾ ಗ್ರಾಮೀಣ ಪ್ರದೇಶದಲ್ಲಿರುವ ಅಬ್ದುಲ್ ರೆಹಮಾನ್ ಮನೆಗೆ ಭೇಟಿ ನೀಡಿದಾಗ, ಮನೆಯ ಮುಂಭಾಗ ಸಾವಿನ ಮೂರನೆ ದಿನದ ಪ್ರಾರ್ಥನೆಯ ಅಡುಗೆಯ ಸಿದ್ದತೆ ನಡೆಯುತ್ತಿತ್ತು. ನಿರ್ಮಾಣ ಹಂತದ ರೆಹಮಾನ್ ಮನೆಯ ಮುಂಭಾಗ ಪ್ರಾರ್ಥನಾ ಕೂಟಕ್ಕಾಗಿ ಚಪ್ಪರ ಹಾಕಲಾಗಿತ್ತು. ಅಜ್ಜನ (ತಾಯಿಯ ತಂದೆ) ಕೈಯಲ್ಲಿದ್ದ ರೆಹಮಾನ್ ನ ಎರಡು ಪುಟಾಣಿ ಮಕ್ಕಳು (ಮೂರು ವರ್ಷ ಹಾಗೂ ಎಂಟು ತಿಂಗಳಿನ) ಮನೆಯ ಮುಂಭಾಗ ದೊಡ್ಡ, ದೊಡ್ಡ ಪಾತ್ರೆಗಳಲ್ಲಿ ನಡೆಯುತ್ತಿದ್ದ ಅಡುಗೆ ತಯಾರಿ, ಸಂಬಂಧಿಗಳ ಓಡಾಟವನ್ನು ಅಮಾಯಕ ಕಣ್ಣುಗಳಲ್ಲಿ ನೋಡುತ್ತಿದ್ದರು. ಮನೆಯ ಒಳಗಡೆ ಗಂಡನನ್ನು ಕಳೆದುಕೊಂಡ ಯುವ ವಿಧವೆಯ, ಮಗನನ್ನು ಕಳೆದುಕೊಂಡ ತಾಯಿಯ ಮೂಕ ರೋಧನೆ ನಮ್ಮ ಹೃದಯಕ್ಕೆ ತಟ್ಟುತ್ತಿತ್ತು ಎನ್ನುವುದನ್ನು ಕಂಡರು.

ಇದನ್ನೂ ಓದಿ:ಅಡಿಕೆ ಹಾಳೆ ರಪ್ತಿಗೆ ಆಮೇರಿಕಾದ ಸುಂಕಯೇತರ ಅಡ್ಡಿ ನಿವಾರಣೆಗೆ KPRS ಆಗ್ರಹ

ನಾವು ಮನೆಯ ಅಂಗಳ ತಲುಪಿದ ಸುದ್ದಿ ತಿಳಿದು ಊರಿನ ಯುವಕರು ನಮ್ಮ ಸುತ್ತ ಜಮಾಯಿಸಿದರು. ರೆಹಮಾನ್ ತಂದೆ ಸ್ವರ ಹೊರಡದ ಗಂಟಲಿನಲ್ಲಿ ತಮ್ಮ ನೋವನ್ನು ಕಣ್ಣೀರು ಸುರಿಸುತ್ತಲೆ ಒಂದಿಷ್ಟು ಹಂಚಿಕೊಂಡರು. ರೆಹಮಾನ್ ನ ಆತ್ಮೀಯ ಗೆಳಯರು, ಒಡನಾಡಿಗಳು ತಮ್ಮ ಮನಸ್ಸಿಗಾದ ಘಾಸಿಯನ್ನು, ಒಳಗಡೆ ಕಟ್ಟಿಕೊಂಡಿರುವ ನೋವನ್ನು, ಜೊತೆಗೆ ಓಡಾಡಿದವರೆ ಕತ್ತರಿಸಿ ಕೊಂದದ್ದನ್ನು ಅರಗಿಸಿಕೊಳ್ಳಲು ಅಸಾಧ್ಯವಾದ ಭಾವದೊಂದಿಗೆ ನಮ್ಮೊಂದಿಗೆ ತಡೆ ರಹಿತವಾಗಿ ತೆರೆದಿಟ್ಟರು ಎಂದು ತಿಳಿಸಿದರು

ಅಲ್ಲಿದ್ದ ಸ್ಥಳೀಯರು ರೆಹಮಾನ್ ಕೊಲೆಯ ದಾರುಣತೆಯನ್ನು, ಅದರ ರಾಜಕಾರಣವನ್ನು, ಕೊಲೆಗಡುಕರ ಮನಸ್ಥಿತಿಯನ್ನು ವಿವರಿಸುತ್ತಿದ್ದರೆ, ಕಳೆದ ಮೂರು ದಶಕದಲ್ಲಿ ಕರಾವಳಿಯ ಕೋಮು ಸಂಘರ್ಷ, ಅದರ ರಾಜಕಾರಣವನ್ನು ಹತ್ತಿರದಿಂದ ಕಂಡಿರುವ ನಾವೇ ರೆಹಮಾನ್ ಕೊಲೆಯ ಭಯಾನಕತೆಗೆ ಬೆಚ್ಚಿಬಿದ್ದೆವು. ಅವರ ವಿವರಣೆ ಹೀಗಿದೆ.

ಅಬ್ದುಲ್ ರೆಹಮಾನ್ ಯಾರೊಂದಿಗೂ ಜಗಳಗಳಿಲ್ಲದ ಸ್ನೇಹಮಯಿ ವ್ಯಕ್ತಿತ್ವದ ಯುವಕ. ತನ್ನ ಶ್ರಮದ ದುಡಿಮೆಯಿಂದ ಮೂರು ಪಿಕಪ್ ಗಳನ್ನು ಖರೀದಿಸಿದ್ದಾನೆ. ಮರಳು, ಕಟ್ಟಡ ನಿರ್ಮಾಣ ಸಾಮಾಗ್ರಿಗಳು, ತೋಟದ ಗೊಬ್ಬರ ಸಾಗಾಟ ಮಾಡುತ್ತಾನೆ. ಸಂಬಂಧಿಯಾದ ತೀರಾ ಬಡ ಕುಟುಂಬದ ಹೆಣ್ಣು ಮಗಳನ್ನು ಮದುವೆಯಾಗಿದ್ದಾನೆ. ಕಳೆದ ನಾಲ್ಕು ವರ್ಷಗಳಿಂದ ಸ್ಥಳೀಯ ಮಸೀದಿಯ ಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸುತ್ತಿದ್ದರು. ಊರಿನ ಹಿಂದುಗಳಿಗೂ ರೆಹಮಾನ್ ಅಂದರೆ ಅಚ್ಚು ಮೆಚ್ಚು. ಅವರೆ ರೆಹಮಾನ್ ಗೆ ಎಂದರು.

ದೊಡ್ಡ ಗ್ರಾಹಕರು. ಶಾರದೋತ್ಸವ ಮೆರವಣಿಗೆ ಸಂದರ್ಭ ಮನೆಯ ಮುಂದೆಯೆ ಗೆಳೆಯರನ್ನು ಸಂಘಟಿಸಿ ತಂಪು ಪಾನೀಯ ವಿತರಿಸುತ್ತಿದ್ದ. ಶಾರದೆಯ ವಿಗ್ರಹದ ಮೆರವಣಿಗೆಗೆ ರೆಹಮಾನ್ ಸಹೋದರ ಪಿಕಪ್ ಒದಗಿಸುತ್ತಿದ್ದ, ಸ್ವತಹ ಶಾರದೆ ಇದ್ದ ಪಿಕಪ್ ಚಲಾಯಿಸುತ್ತಿದ್ದ. ಇಂತಹ ಊರಲ್ಲಿ ಹೀಗಾಯ್ತಲ್ಲ….. !ಕೊಲೆಯ ಮುಂಚೂಣಿಯಲ್ಲಿದ್ದ ದೀಪಕ್ (21 ವರ್ಷ) ರೆಹಮಾನ್ ಗೆ ತೀರಾ ಪರಿಚಿತ. ಊರಿನ ಹುಡುಗ. ಬಡ ಕುಟುಂಬದ ಆತ ಮನೆ ಕಟ್ಟಲು ಆರಂಭಿಸಿದಾಗ ರೆಹಮಾನ್ ಒಂದು ಲೋಡ್ ಮರಳು ಉಚಿತವಾಗಿ ಒದಗಿಸಿದ್ದ. ಕಟ್ಟಡ ನಿರ್ಮಾಣದ ಸಾಮಾಗ್ರಿಗಳನ್ನು ರೆಹಮಾನ್ ನೆ ಸಾಗಾಟ ಮಾಡಿದ್ದ‌. ಅದರಲ್ಲಿ 30 ಸಾವಿರ ರೂಪಾಯಿ ದೀಪಕ್ ಬಾಕಿ ಉಳಿಸಿಕೊಂಡಿದ್ದ. ರೆಹಮಾನ್ ಅದಕ್ಕಾಗಿ ದೀಪಕ್ ಮೇಲೆ ಒತ್ತಡ ಏನೂ ಹಾಕಿರಲಿಲ್ಲ. ಅಭಿಪ್ರಾಯಪಟ್ಟಿದ್ದರು.

ಕೊಲೆಯ ಹಿಂದಿನ ದಿವಸ ರೆಹಮಾನ್ ನನ್ನು ಸಂಪರ್ಕಿಸಿದ ದೀಪಕ್, “ಅರ್ಜೆಂಟ್ ಒಂದು ಲೋಡ್ ಮರಳು ಬೇಕಿತ್ತು, ಮನೆಯ ಕೆಲಸ ಪೂರ್ಣ ಗೊಳಿಸಬೇಕಿದೆ, ನಾಳೆಯ ಹಾಕಬೇಕು ” ಎಂದು ವಿನಂತಿಸಿದ್ದಾನೆ. ಅದರಂತೆ, ಕೊಲೆಯಾದ ದಿನ ಮಧ್ಯಾಹ್ನ ಕೂಲಿ ಕಾರ್ಮಿಕ ಶಾಫಿಯನ್ನು ಜೊತೆ ಸೇರಿಸಿ, ನಿರ್ಮಾಣ ಹಂತದ ತನ್ನ ಮನೆಯ ಮುಂಭಾಗದಲ್ಲಿ ಇದ್ದ ಮರಳನ್ನೆ ಪಿಕಪ್ ನಲ್ಲಿ ಲೋಡ್ ಮಾಡಿ ಕೊಂಡು ದೀಪಕ್ ನ ಮನೆಗೆ ತೆರಳಿದ್ದಾನೆ. ಮರಳು ಅನ್ ಲೋಡ್ ಮಾಡಿದ್ದಾರೆ. ಅಷ್ಟು ಹೊತ್ತಿಗೆ ಸುತ್ತಮುತ್ತ ಅವಿತು ಹೊಂಚು ಹಾಕುತ್ತಿದ್ದ ಮತಾಂಧತೆಯ ಅಫೀಮು ಸೇವಿಸಿದ ಪರಿಚಿತ ಯುವಕರ ದಂಡು ಪಿಕಪ್ ಮುಂದೆ ಆಯುಧಗಳ ಸಹಿತ ಪ್ರತ್ಯಕ್ಷಗೊಂಡಿದೆ. ಕೊಲೆಯ ಸಂಚಿನ ಸಣ್ಣ ಸುಳಿವೂ ಇಲ್ಲದ, ರೆಹಮಾನ್ ನಗುತ್ತಲೆ ಮಾತಾಡಲು ಯತ್ನಿಸಿದ್ದಾನೆ. ದೀಪಕ್ ನಗು ನಗುತ್ತಲೆ ಮಚ್ಚು ಬೀಸಿದ್ದಾನೆ. ವಿಷಯ ಅರ್ಥ ಆಗುವಷ್ಟರಲ್ಲಿ ರೆಹಮಾನ್ ಕುಸಿದಿದ್ದಾನೆ. ಜೊತೆಗಿದ್ದ ಶಾಫಿಗೆ ಓಡಲು ತಿಳಿಸಿದ್ದಾನೆ. ಶಾಫಿ ಪರಿಚಿತ ಕೊಲೆಗಡುಕರ ಕಾಲು ಹಿಡಿದು ರೆಹಮಾನ್ ನನ್ನು ಬಿಟ್ಟು ಬಿಡಿ ಎಂದು ಅಂಗಲಾಚಿದ್ದಾನೆ. ಆದರೆ ನಿರ್ದಯಿ ಹಂತಕರು ಗುರಿಯಿಟ್ಟು ಕಡಿಯತೊಡಗಿದ್ದಾರೆ. ಅಡ್ಡ ಬಂದ ಶಾಫಿಯ ಕಡೆಗೂ ಮಚ್ಚು ತಿರುಗಿದೆ. ರೆಹಮಾನ್, ನನ್ನ ಕತೆ ಮುಗಿಯಿತು, ನೀನು ಓಡು ಓಡು” ಎಂದು ಕೂಗಿದ್ದಾನೆ. ಗಾಯಗೊಂಡ ಶಾಫಿ ತಪ್ಪಿಸಿಕೊಂಡು ಓಡಿ ಹೋಗಿ ಊರಿನ ಯುವಕರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ.‌

ಇದನ್ನೂ ಓದಿ:ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್‌ – ಡೀಸೆಲ್ ದರ ಎಷ್ಟು?

ಊರಿನ ಮುಸ್ಲಿಂ ಯುವಕರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟು ಹೊತ್ತಿಗೆ ರೆಹಮಾನ್ ಪ್ರಾಣ ಪಕ್ಷಿ ಹಾರಿ ಹೋಗಿದೆ. ಇಷ್ಟೆಲ್ಲಾ ನಡೆಯುವಾಗ ದೀಪಕ್ ನ ತಾಯಿ ಹಾಗು ಇತರೆ ಮಕ್ಕಳು ಆ ಮನೆಯ ಒಳಗಡೆಯೇ ಇದ್ದರು. ಮತಾಂಧತೆಯಿಂದ ಕುರುಡಾಗಿದ್ದ ದೀಪಕ್, ಮೇಲಿನ “ನಾಯಕ” ರ ಮಾತು ಕೇಳಿ ತನ್ನ ಹೊಸ ಮನೆಯ ಅಂಗಳದಲ್ಲಿ ತನಗೆ ಹಲವು ಬಾರಿ ನೆರವಾಗಿದ್ದ ಪರಿಚಿತ ಮುಸಲ್ಮಾನನ್ನು ತನ್ನ ತಾಯಿ, ಸಣ್ಣ ಸಹೋದರರ ಕಣ್ಣ ಮುಂದೆಯೆ ಸಹಚರರ ಜೊತೆ ಕಡಿದು ನಿರ್ದಯವಾಗಿ ಕೊಂದು ಹಾಕಿದ್ದ. “ಧರ್ಮ” ರಕ್ಷಣೆಯ ಕಾರ್ಯ ಮಾಡಿದೆ ಎಂದು ಬೀಗಿದ್ದ. ರೆಹಮಾನ್ ನ ಗೆಳೆಯರ ಈ ವಿವರಣೆ ನಮ್ಮನ್ನು ದಿಗ್ಮೂಢರನ್ನಾಗಿಸಿತು. ಕೋಟಿ ಚೆನ್ನಯರು, ಕಾನದ ಕಟರು, ಕೊರಗ ತನಿಯ, ಮಾಲಿಕುದ್ದಿನಾರ್, ಸಯ್ಯದ್ ಮದನಿ, ಸಿರಿಯಪ್ಪೆ, ರಾಣಿ ಅಬ್ಬಕ್ಕ, ಕುದ್ಮಲ್ ರಂಗರಾಯರು ಮುನ್ನಡೆಸಿದ ಕರಾವಳಿಯ ಸ್ಥಿತಿ ಯಾವ ಪಾತಾಳಕ್ಕೆ ಕುಸಿಯಿತು…! ಎಂದು ಮಾಹಿತಿ ನೀಡಿದ್ರು.

ಕೊಳತ್ತಮಜಲು ಕೋಮು ಸೋಂಕು ಪೂರ್ಣ ಪ್ರಮಾಣದಲ್ಲಿ ತಾಗದ ಒಂದು ಸಾಮಾನ್ಯ ಹಳ್ಳಿ. ಇಲ್ಲಿ ಯಾವ ರಾಜಕೀಯವೂ ಇರಲಿಲ್ಲ, ನಾವು ಮನುಷ್ಯರಾಗಿ ಅಷ್ಟೆ ಬದುಕಿದ್ದೆವು ಎಂದು ನುಡಿಯುವ ಊರಿನ ಮುಸ್ಲಿಮರಿಗೆ, ತಮ್ಮ ಊರಿನಲ್ಲಿ ಇಂತಹ ಭೀಕರ ಘಟನೆ ನಡೆದಿರುವುದು ನಂಬಲೆ ಆಗುತ್ತಿಲ್ಲ. ದೂರದ ಬಜ್ಪೆಯ ಸುಹಾಸ್ ಶೆಟ್ಟಿಯ ಹತ್ಯೆಯ ಪ್ರತೀಕಾರ ತಮ್ಮ ಊರಿಗೆ ತಲುಪುತ್ತದೆ ಎಂಬುದು ಅವರಿಗೆ ನಂಬಲು ಸಾಧ್ಯವಾಗುತ್ತಿಲ್ಲ. ಈಗ ಅವರ ಆಗ್ರಹ ಒಂದೇ ಇರುವುದು. ರೆಹಮಾನ್ ಕೊಲೆಯ ಆರೋಪಿಗಳು, ಪಿತೂರಿದಾರರಿಗೆ ಕಠಿಣ ಶಿಕ್ಷೆ ಆಗಬೇಕು, ಊರಿನ ನೆಮ್ಮದಿ, ಸೌಹಾರ್ದತೆ ಉಳಿಯಬೇಕು, ದೀಪಕ್ ಹಾಗೂ ಗೆಳೆಯರನ್ನು ಈ ಕೊಲೆಗೆ ಪ್ರೇರೇಪಿಸಿದ್ದು, ಸಂಚು ರೂಪಿಸಿದ್ದು ಬಜರಂಗ ದಳದ ನಾಯಕ ಭರತ್ ಕುಮ್ಡೇಲು (ಈತ ಸುಹಾಸ್ ಕೊಲೆಗೆ ಪ್ರತೀಕಾರ ಭೀಕರವಾಗಿ ಮಾಡುತ್ತೇವೆ ಎಂದು ಪತ್ರಿಕಾಗೋಷ್ಟಿ ನಡೆಸಿ ಹೇಳಿದ್ದ, ಈ ಹೇಳಿಕೆ ಮೇಲೆ ಎಫ್ಐಆರ್ ಆಗಿದೆ, ಅಶ್ರಪ್ ಕಲಾಯಿ ಹತ್ಯೆಯಲ್ಲೂ ಈತ ಆರೋಪಿ) ಆತ, ಕೊಲೆಯ ಹಿಂದಿನ ದಿನ ಕೊಳತ್ತಮಜಲಿಗೆ ಬಂದು ದೀಪಕ್ ಹಾಗು ಸಹಚರರ ಜೊತೆ ಮೀಟಿಂಗ್ ಮಾಡಿದ್ದ, ಸೂಚನೆ ನೀಡಿದ್ದ, ಆತನನ್ನು ತಕ್ಷಣ ಬಂಧಿಸಬೇಕು ಎಂಬುದು.‌

ರೆಹಮಾನ್ ನ ವೃದ್ಧ ತಂದೆ ಹಾಗೂ ಕೆಲವು ಹಿರಿಯರು ಇನ್ನೊಂದು ನೋವನ್ನು ನಮ್ಮಲ್ಲಿ ತೋಡಿಕೊಂಡರು. ಸ್ಥಳೀಯ ಶಾಸಕ ರಾಜೇಶ್ ನಾಯ್ಕ್ ಕನಿಷ್ಟ ಸಾಂತ್ವನವನ್ನೂ ಹೇಳಲಿಲ್ಲ ಎಂಬುದು ಅವರ ಸಂಕಟವನ್ನು ಹೆಚ್ಚಿಸಿತು. ಸುಹಾಸ್ ಶೆಟ್ಟಿ ಕೊಲೆಯ ಸಂದರ್ಭ ಶವ ಮೆರವಣಿಗೆ, ಅಂತ್ಯ ಕ್ರಿಯೆಯವರೆಗೂ ಸ್ಥಳ ಬಿಟ್ಟು ಕದಲದ, ಆ ಮೇಲಿನ ಸುಹಾಸ್ ಕೊಲೆ ಖಂಡಿಸಿ ನಡೆದ ಪ್ರತಿಭಟನಾ ಸಭೆಗಳು, ಪ್ರತೀಕಾರದ ಮಾತುಗಳಿಗೆ ಸಾಕ್ಷಿ ಆದ ರಾಜೇಶ್ ನಾಯ್ಕ್ ತನ್ನ ಕ್ಷೇತ್ರದಲ್ಲಿ ನಡೆದ ಅಮಾಯಕನೊಬ್ಬ ಹತ್ಯೆಗೆ ಆತನ ಧರ್ಮದ ಗುರುತಿನ ಕಾರಣಕ್ಕೆ ಕನಿಷ್ಟ ಸಂತಾಪವನ್ನೂ ಸೂಚಿಸಲಿಲ್ಲ ಎಂಬದು ಕರಾವಳಿ ರಾಜಕಾರಣದ ಸದ್ಯದ ಹೆಗ್ಗುರುತು. ದೀಪಕ್ ಬೀಸಿದ ಮಚ್ಚಿನ ಏಟಿಗಿಂತಲೂ ಬಿಜೆಪಿ ಶಾಸಕರುಗಳ ಸದ್ಯದ ನಿಲುವುಗಳು ಕಡಿಮೆ ಅಪಾಯಕಾರಿ ಏನಲ್ಲ ಎಂದು ತಿಳಿಸಿದರು.

 

Donate Janashakthi Media

Leave a Reply

Your email address will not be published. Required fields are marked *