ಅಮೆರಿಕ ಮತ್ತು ಜಿ-7 ಯುದ್ಧಕೋರತನ- ಸಿಪಿಐ(ಎಂ) ಖಂಡನೆ

ಪಶ್ಚಿಮ ಏಷ್ಯಾ ಮತ್ತು ಆಚೆಗೆ ಸಾಮ್ರಾಜ್ಯಶಾಹಿ ಪ್ರಾಬಲ್ಯವನ್ನು ಹೇರಲು ಪುಂಡ ಪ್ರಭುತ್ವ ಇಸ್ರೇಲಿನ ಬಳಕೆ

ನವದೆಹಲಿ: ಇರಾನ್ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ಧಕೋರ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಬಲವಾಗಿ ಖಂಡಿಸಿದೆ. ಇಂತಹ ಮಾತುಗಾರಿಕೆ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ಇಡೀ ಪಶ್ಚಿಮ ಏಷ್ಯಾ ಪ್ರದೇಶವನ್ನು ಯುದ್ಧ ಮತ್ತು ಅಸ್ಥಿರತೆಯತ್ತ ತಳ್ಳುತ್ತದೆ ಎಂದು ಅದು ಹೇಳಿದೆ.

ಅಧ್ಯಕ್ಷ ಟ್ರಂಪ್ ಈಗ ಇರಾನಿನ ನಾಯಕರನ್ನು ಹತ್ಯೆ ಮಾಡುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕುತ್ತಿರುವುದು ಮತ್ತು ಇರಾನ್‌ನ ಬೇಷರತ್ ಶರಣಾಗತಿಗೆ ಒತ್ತಾಯಿಸುತ್ತಿರುವುದು ಅತ್ಯಂತ ಶೋಚನೀಯ. ಪಶ್ಚಿಮ ಏಷ್ಯಾದಲ್ಲಿ ಅಮೆರಿಕದ ಮಿಲಿಟರಿ ಪಡೆಗಳನ್ನು ದೊಡ್ಡ ಪ್ರಮಾಣದಲ್ಲಿ ಸಜ್ಜುಗೊಳಿಸುವುದು ಇರಾನ್ ಮೇಲೆ ದಾಳಿ ನಡೆಸಲು ಇಸ್ರೇಲ್ ಜೊತೆ ಸೇರಲು ಅಮೆರಿಕದ ಸಿದ್ಧತೆಯನ್ನು ಮತ್ತಷ್ಟು ಸೂಚಿಸುತ್ತದೆ. ಈ ಬೆಳವಣಿಗೆಗಳು ಅಪಾಯಕಾರಿ ಮತ್ತು ಈ ಪ್ರದೇಶವನ್ನು ಮತ್ತು ಜಗತ್ತನ್ನು ವಿನಾಶಕಾರಿ ಯುದ್ಧದ ಅಂಚಿಗೆ ತಳ್ಳುವ ಅಪಾಯವಿದೆ.

ಕೆನಡಾದಲ್ಲಿ ಜಿ-7 ಸಭೆಯ ಇತ್ತೀಚಿನ ಹೇಳಿಕೆಯು ಈ ಯುದ್ಧಕೋರತನಕ್ಕೆ ಮತ್ತಷ್ಟು ಬಲ ತುಂಬುತ್ತದೆ. ಇಸ್ರೇಲಿನ ಆಕ್ರಮಣಕಾರಿ ಕೃತ್ಯಗಳ ಬಗ್ಗೆ ಕಣ್ಣು ಮುಚ್ಚಿಕೊಂಡಿರುವ ಜಿ-7 ಇರಾನನ್ನು ದೂಷಿಸುತ್ತಿರುವುದು ಖಂಡನೀಯ ಎಂದಿರುವ ಸಿಪಿಐ(ಎಂ) ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಆಗುತ್ತಿರುವ ಅಸ್ಥಿರತೆಗೆ ಪ್ರಾಥಮಿಕವಾಗಿ ಇಸ್ರೇಲ್ ಹೊಣೆ ಎಂಬುದು ಸ್ಪಷ್ಟವಾಗಿದೆ ಎಂದಿದೆ.

ಇದನ್ನೂ ಓದಿ: ಪ್ರಥಮ ಶ್ರೇಣಿ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ: ಅರ್ಜಿ ಸಲ್ಲಿಸೋದು ಹೇಗೆ?

ಗಾಜಾ ಮೇಲಿನ ನರಮೇಧಕಾರೀ ದಾಳಿಯಿಂದ ಆರಂಭಗೊಂಡು, ಇಸ್ರೇಲ್ ತನ್ನ ಮಿಲಿಟರಿ ಕಾರ್ಯಾಚರಣೆಗಳನ್ನು ಸಿರಿಯಾ, ಲೆಬನಾನ್, ಯೆಮೆನ್ ಮತ್ತು ಈಗ ಇರಾನ್ ಸೇರಿದಂತೆ ಈ ಪ್ರದೇಶದ ಇತರ ದೇಶಗಳಿಗೆ ಉದ್ದೇಶಪೂರ್ವಕವಾಗಿ ವಿಸ್ತರಿಸಿದೆ. ಇಸ್ರೇಲನ್ನು ನಿರ್ಬಂಧಿಸದಿದ್ದರೆ, ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಈಡೇರದ ನಿರೀಕ್ಷೆಯಾಗಿಯೇ ಉಳಿಯುತ್ತದೆ.

ಅಮೆರಿಕ ಮತ್ತು ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿ ಪಶ್ಚಿಮ ಏಷ್ಯಾ ಮತ್ತು ಅದರಾಚೆಗೆ ತಮ್ಮ ಪ್ರಾಬಲ್ಯವನ್ನು ಹೇರಲು ಒಂದು ಪುಂಡ ಪ್ರಭುತ್ವವಾದ ಇಸ್ರೇಲನ್ನು ಬಳಸುತ್ತಿವೆ, ಇದು ಅಂತರರಾಷ್ಟ್ರೀಯ ಕಾನೂನುಗಳು ಮತ್ತು ಸಂಪ್ರದಾಯಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ ಎಂದು ಸಿಪಿಐ(ಎಂ) ಹೇಳಿದೆ.

ಅಮೆರಿಕ ಮತ್ತು ಇಸ್ರೇಲ್ ತಮ್ಮ ಆಕ್ರಮಣಕಾರಿ ಕ್ರಮಗಳನ್ನು ನಿಲ್ಲಿಸಿ ರಾಜತಾಂತ್ರಿಕ ಕ್ರಮಗಳಿಗೆ ಮರಳುವಂತೆ ಒತ್ತಡ ಹೇರಲು ಅಂತರರಾಷ್ಟ್ರೀಯ ಸಮುದಾಯವು ತುರ್ತಾಗಿ ಕಾರ್ಯಪ್ರವೃತ್ತವಾಗಬೇಕು. ಬಿಜೆಪಿ ನೇತೃತ್ವದ ಭಾರತ ಸರ್ಕಾರವು ತನ್ನ ಅಮೆರಿಕ ಪರ, ಇಸ್ರೇಲ್ ಪರ ವಿದೇಶಾಂಗ ನೀತಿ ನಿಲುವನ್ನು ತ್ಯಜಿಸಬೇಕು. ಜಾಗತಿಕ ದಕ್ಷಿಣಕ್ಕೆ ನಿಜವಾದ ಬದ್ಧತೆಯು ಇಸ್ರೇಲ್‌ನ ಮತ್ತು ಅದರ ಪ್ರಮುಖ ಬೆಂಬಲಿಗ ಯುನೈಟೆಡ್ ಸ್ಟೇಟ್ಸ್‌ನ ಆಕ್ರಮಣವನ್ನು ತಕ್ಷಣವೇ ಕೊನೆಗೊಳಿಸಬೇಕೆಂದು ಸಾಮೂಹಿಕವಾಗಿ ಒತ್ತಾಯಿಸಲು ಇತರ ರಾಷ್ಟ್ರಗಳೊಂದಿಗೆ ಸೌಹಾರ್ದದ ಅಗತ್ಯವಿದೆ ದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಇದನ್ನೂ ನೋಡಿ: POSH ಕಾಯ್ದೆ ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ?Janashakthi Media

Donate Janashakthi Media

Leave a Reply

Your email address will not be published. Required fields are marked *