ಕೋವಿಡ್:‌ ಎರಡನೇ ಅಲೆ ನಿಯಂತ್ರಣದಲ್ಲಿ ಸುಧಾರಣೆ, ಹೊಸ ಪ್ರಕರಣಗಳ ಶೇಕಡವಾರು ಪ್ರಮಾಣ ಇಳಿಕೆ: ಸಚಿವ ಜೆ.ಸಿ. ಮಾಧುಸ್ವಾಮಿ

ತುಮಕೂರು: ಜಿಲ್ಲೆಯಲ್ಲಿ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದು, ಶೇಕಡಾವಾರು ಹೊಸ ಪ್ರಕರಣಗಳ ದಾಖಲಾತಿಯ ಪ್ರಮಾಣ ಇಳಿಕೆಯಾಗುತ್ತಿದೆ. ಆರಂಭದಲ್ಲಿ ಶೇ.45ರಷ್ಟಿದ್ದ ಪಾಸಿಟಿವ್ ಪ್ರಕರಣಗಳು ಶೇ.40ಕ್ಕೆ ತಗ್ಗಿದೆ ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.‌ಮಾಧುಸ್ವಾಮಿ ಅವರು ತಿಳಿಸಿದರು.

ನಗರದ‌ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು,‌ ವ್ಯಾಪಕವಾಗಿ ಹರಡುತ್ತಿದ್ದ ಕೋವಿಡ್-19 ನಿಯಂತ್ರಣಕ್ಕಾಗಿ ಜಿಲ್ಲಾಡಳಿತದಿಂದ ಹಾಸಿಗೆ, ಆಮ್ಲಜನಕ ಹಾಗೂ ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಸರ್ಕಾರದ ಮಾರ್ಗಸೂಚಿಗಳನ್ನು‌ ಕಟ್ಟುನಿಟ್ಟಾಗಿ ಜಾರಿಗೊಳಿಸಿ ಎಲ್ಲಾ ರೀತಿಯಲ್ಲಿಯೂ ಕ್ರಮ ಕೈಗೊಂಡ ಪರಿಣಾಮ ಕೋವಿಡ್ ನಿಯಂತ್ರಣದಲ್ಲಿ ಸುಧಾರಣೆ ಕಂಡು ಬಂದಿದೆ. ಸೋಂಕಿತರ ಚೇತರಿಕೆ ಪ್ರಮಾಣವೂ ಏರಿಕೆಯಾಗುತ್ತಿದೆ ಎಂದರು.

ಇದನ್ನು ಓದಿ: ಕಠಿಣ ಕ್ರಮದಿಂದ ಕೋವಿಡ್‌ ನಿಯಂತ್ರಣ-ದೇವಿಶೆಟ್ಟಿ ನೇತೃತ್ವದ ಸಮಿತಿ ರಚನೆ: ಸಿಎಂ ಯಡಿಯೂರಪ್ಪ

ಬೆಂಗಳೂರು-ತುಮಕೂರು ಓಡಾಡುವವರ ಸಂಖ್ಯೆ ಹೆಚ್ಚಿದ್ದ ಕಾರಣ ಜಿಲ್ಲೆಯಲ್ಲಿ ಸೋಂಕು ವ್ಯಾಪಕವಾಗಿ ಹರಡಲು ಕಾರಣವಾಗಿತ್ತು. ಆದರೆ,‌ ಸರ್ಕಾರದ ಅನುಮತಿಯಿಲ್ಲದ ಕಾರಣ ಆರಂಭದಲ್ಲಿ ಈ ಸಂಚಾರಕ್ಕೆ  ಕಡಿವಾಣ ಹಾಕಲು  ಸಾಧ್ಯವಾಗಿರಲಿಲ್ಲ. ಈಗ ಎಲ್ಲಾ ರೀತಿಯಲ್ಲಿಯೂ ಬಿಗಿ ಕ್ರಮ ಕೈಗೊಳ್ಳಲಾಗಿದ್ದು, ಇದರಿಂದ  ಸೋಂಕಿನ ಪ್ರಮಾಣ ತಗ್ಗಲಿದೆ ಎಂದು ತಿಳಿಸಿದರು.

ಕಳೆದ ಏಪ್ರಿಲ್ ತಿಂಗಳಲ್ಲಿ 18,749 ದೃಢೀಕೃತ ಪ್ರಕರಣಗಳು ವರದಿಯಾಗಿದ್ದು, ಇವರಲ್ಲಿ 8,812 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 69 ಸೋಂಕಿತರು ಸಾವನ್ನಪ್ಪಿದರು. ಅದೇ ರೀತಿ ಮೇ 1ರಿಂದ 12ರವರೆಗೆ 26,790 ದೃಢೀಕೃತ ಪ್ರಕರಣಗಳು ಕಂಡು ಬಂದಿದ್ದು, 12,650 ಸೋಂಕಿತರು ಬಿಡುಗಡೆಯಾಗಿದ್ದಾರೆ ಹಾಗೂ 162 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದರು.

ಇದನ್ನು ಓದಿ: ಕೋವಿಡ್ ಲಸಿಕೆ: ಎರಡನೇ ಡೋಸ್‌ಗೆ ಮಾತ್ರ ಆದ್ಯತೆ

ಅಕ್ಸಿಜನ್ ಸಮಸ್ಯೆಯಾಗದಂತೆ ಕ್ರಮ:

ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಆಮ್ಲಜನಕದ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಸ್ಪತ್ರೆ ಸೇರಿದಂತೆ ತಾಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ. ಈಗಾಗಲೇ ಜಿಲ್ಲಾಸ್ಪತ್ರೆಯಲ್ಲಿ ಘಟಕ ಸ್ಥಾಪನೆ ಅಡಿಪಾಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ಇದಲ್ಲದೆ 110‌ ಆಮ್ಲಜನಕ ಸಾಂದ್ರಕಗಳ ಮೂಲಕವೂ ಸೋಂಕಿತರಿಗೆ ಆಮ್ಲಜನಕ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ‌. ಕೈಗಾರಿಕೋದ್ಯಮಿಗಳಿಂದ 250 ಆಮ್ಲಜನಕ ಸಾಂದ್ರಕಗಳ ನೆರವು ಸಿಗಲಿದೆ. ಈ ಆಮ್ಲಜನಕ ಸಾಂದ್ರಕಗಳನ್ನು ಜಿಲ್ಲಾಸ್ಪತ್ರೆ ಸೇರಿದಂತೆ ತಾಲೂಕು ಆಸ್ಪತ್ರೆಗಳಿಗೂ ನೀಡಿ ಸೋಂಕಿತರಿಗೆ ಸಮಸ್ಯೆಯಾಗದಂತೆ ಆಮ್ಲಜನಕ ಪೂರೈಕೆ ಮಾಡಲಾಗುವುದು. ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿಯೂ ಉತ್ತಮ ಕಾರ್ಯ ನಡೆಯುತ್ತಿದೆ‌.  ಇದರಿಂದ ಜಿಲ್ಲಾಸ್ಪತ್ರೆ ಮೇಲಿನ ಒತ್ತಡ ತಗ್ಗಿದೆ.  ಜಿಲ್ಲೆಗೆ 23 ಕೆಎಲ್ ಆಮ್ಲಜನಕದ ಅಗತ್ಯವಿದ್ದು, ಸದ್ಯ 16 ಕೆಎಲ್ ಮಾತ್ರ ಲಭ್ಯವಿದೆ. ಕೊರತೆಯಿರುವ ಆಮ್ಲಜನಕದ ಬೇಡಿಕೆ ಪೂರೈಸುವಂತೆ ಮನವಿ ಮಾಡಿದ್ದರಿಂದ 23 ಕೆಎಲ್ ಆಮ್ಲಜನಕ ಹಂಚಿಕೆಯಾಗಿದ್ದು, ಅಗತ್ಯಕ್ಕನುಗುಣವಾಗಿ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಗೆ ಮಾಡಲಾಗುವುದು ಎಂದು ಸಚಿವ ಜೆ.ಸಿ.‌ಮಾಧುಸ್ವಾಮಿ  ತಿಳಿಸಿದರು.

ಕೋವಿಡ್ ಪರೀಕ್ಷೆ ಸುಸೂತ್ರ:

ತುಮಕೂರು ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ಸುಸೂತ್ರವಾಗಿ ನಡೆಯುತ್ತಿದೆ. ತುಮಕೂರು ಹಾಗೂ ತಿಪಟೂರಿನಲ್ಲಿ ಲ್ಯಾಬ್ ಗಳಿದ್ದು, ತುಮಕೂರಿನ ಲ್ಯಾಬ್ ನಲ್ಲಿ ಸುಮಾರು ಎರಡೂವರೆ ಸಾವಿರ ಮತ್ತು ತಿಪಟೂರು ಲ್ಯಾಬ್ ನಲ್ಲಿ ಒಂದೂವರೆ ಸಾವಿರ ಪರೀಕ್ಷೆ ಮಾಡಲಾಗುತ್ತಿದೆ. ಇದಲ್ಲದೆ ಶಿರಾದಲ್ಲೂ ಲ್ಯಾಬ್ ತೆರೆಯಲು ಯೋಜನೆ ರೂಪಿಸಲಾಗಿದ್ದು, ಶೀಘ್ರ ಪ್ರಾರಂಭವಾಗಲಿದೆ. ಈ ಲ್ಯಾಬ್ ನಲ್ಲಿಯೂ ಒಂದು ಸಾವಿರ ಕೋವಿಡ್ ಪರೀಕ್ಷೆ ಮಾಡಬಹುದು.‌ ಇದಲ್ಲದೆ, ಲ್ಯಾಬ್ ಆನ್ ರೋಡ್ ವಾಹನದ ಮೂಲಕವೂ  ಸ್ಥಳಕ್ಕೆ ಹೋಗಿ ಟೆಸ್ಟಿಂಗ್ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಇದನ್ನು ಓದಿ: ಕೇಂದ್ರದಿಂದ ಆಗುತ್ತಿರುವ ಅನ್ಯಾಯವನ್ನು ಕನ್ನಡಿಗರು ಪ್ರಶ್ನೆ ಮಾಡಬೇಕು: ಕುಮಾರಸ್ವಾಮಿ

ಕೋವಿಡ್ ಆರೈಕೆ ಕೇಂದ್ರಕ್ಕೆ ಬರಲು ವಿನಂತಿಸಿಕೊಂಡ ಸಚಿವರು:

ಕೋವಿಡ್ ಹರಡುವಿಕೆ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ, ಸೋಂಕಿತರು ಕೇಂದ್ರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.  ಹೋಂ ಐಸೋಲೇಷನ್ ನಲ್ಲಿರುವ ಸೋಂಕಿತರನ್ನು ಕೇಂದ್ರಕ್ಕೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಇದರಿಂದ ಸೋಂಕು ಕುಟುಂಬಕ್ಕೆ ಹಬ್ಬುವುದನ್ನು ತಡೆಯಬಹುದು.‌ ಹಾಗಾಗಿ ಸೋಂಕಿತರು ಹೋಂ ಐಸೋಲೇಷನ್ ಬದಲಿಗೆ ಕೋವಿಡ್ ಕೇರ್ ಗೆ ಬಂದು‌ ಚಿಕಿತ್ಸೆ ಪಡೆಯುವಂತೆ ಮನವಿ‌ ಮಾಡಿದರು.

ಅಗತ್ಯ ವಸ್ತುಗಳ ನೆರವಿಗೆ ಕ್ರಮ:

ಕುಟುಂಬ ಸದಸ್ಯರೆಲ್ಲರಿಗೂ ಸೋಂಕು ತಗುಲಿದ್ದರೆ ಅವರಿಗೆ ಊಟ-ತಿಂಡಿ, ಔಷಧ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಗೂ ಜಿಲ್ಲಾಡಳಿತದಿಂದ ಕ್ರ‌ಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಸೇವೆಗೆ ಮುಂದಾಗಿರುವ 350 ಎನ್‌ಜಿಒಗಳನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಆಶಾ-ಅಂಗನವಾಡಿ ಕಾರ್ಯಕರ್ತೆಯರ ಸಹಕಾರ ದೊರಕಿದೆ ಎಂದು ಸಚಿವರು ಹೇಳಿದರು.

ಮೂರನೇ ಅಲೆ ನಿಗ್ರಹಕ್ಕೆ ಶಕ್ತಿ:

ಆಮ್ಲಜನಕ ಸೇರಿದಂತೆ ಸೋಂಕಿತರ ಆರೈಕೆಗೆ ಕೈಗೊಂಡಿರುವ ಕ್ರಮಗಳು ಕೋವಿಡ್ ಮೂರನೇ ಅಲೆ ನಿಗ್ರಹಕ್ಕೆ ಶಕ್ತಿಯಾಗಲಿದೆ. ಮೂರನೇ ಅಲೆ ನಿಯಂತ್ರಣಕ್ಕೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು‌ ತಿಳಿಸಿದರು.

ಇದನ್ನು ಓದಿ: ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತ ಪತ್ರ ಹೊರಡಿಸಿ – ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹ

ಸಮಸ್ಯೆಗಳು ನಿವಾರಣೆ:

ಆಮ್ಲಜನಕ, ರೆಮ್ಡಿಸಿವರ್ ಸೇರಿದಂತೆ ಬಹುತೇಕ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೆಮ್ಡಿಸಿವರ್ ಕೊರತೆಯಿಲ್ಲ. ಸರ್ಕಾರಿ ಆಸ್ಪತ್ರೆಯಿಂದ ಅನುಮತಿಸಿದ ಸೋಂಕಿತರಿಗೂ ರೆಮ್ಡಿಸಿವರ್ ಅಭಾವವಿಲ್ಲ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಕೊಂಚ ಸಮಸ್ಯೆ ಉಂಟಾಗಿದೆ ಎಂಬ ಮಾತುಗಳು‌ ಕೇಳಿಬಂದಿವೆ. ಅದರ ನಿವಾರಣೆಗೂ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ ಎಂದರು.

ಎಬಿಆರ್‌ಕೆಸೋಂಕಿತರು ಹಣ ಕಟ್ಟುವಂತಿಲ್ಲ:

ಸರ್ಕಾರಿ ಆಸ್ಪತ್ರೆಗಳಿಂದ ಅನುಮತಿ ಪಡೆದು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದ ಸೋಂಕಿತರನ್ನು ಎಬಿಆರ್‌ಕೆ ಅಡಿಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಇಂತಹ ಸೋಂಕಿತರಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ಹಣ ಪಡೆಯುವಂತಿಲ್ಲ.‌ ಚಿಕಿತ್ಸೆ ನೀಡಲು ಹಣ ಪಡೆದ ಬಗ್ಗೆ ದಾಖಲೆ ಸಮೇತ ಮಾಹಿತಿ ಒದಗಿಸಿದರೆ ಕ್ರ‌ಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ವೇಳೆ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ, ಜಿಪಂ ಸಿಇಒ. ಡಾ.ಕೆ ವಿದ್ಯಾಕುಮಾರಿ, ಎಸ್ ಪಿ ಡಾ.ಕೆ ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಡಿಎಚ್ಒ ಡಾ.ನಾಗೇಂದ್ರಪ್ಪ ಸೇರಿದಂತೆ ಇತರರಿದ್ದರು.

Donate Janashakthi Media

Leave a Reply

Your email address will not be published. Required fields are marked *