ನವದೆಹಲಿ: ನ್ಯಾಯಮೂರ್ತಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ಚಂಡೀಗಢ ಮೂಲದ ಪತ್ರಕರ್ತ ಹಾಗೂ ಯುಟ್ಯೂಬರ್ ಅಜಯ್ ಶುಕ್ಲಾ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಸುಪ್ರೀಂ ಕೋರ್ಟ್, ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಿದೆ.
ನಿವೃತ್ತ ನ್ಯಾಯಮೂರ್ತಿ ಬೆಲಾ ಎಂ. ತ್ರಿವೇದಿ ರ ವಿರುದ್ಧ ಶುಕ್ಲಾ ವಿಡಿಯೊವನ್ನು ಯುಟ್ಯೂಬ್ನಲ್ಲಿ ಹಂಚಿಕೊಂಡಿದ್ದರು. ವಿವಾದಾತ್ಮಕ ವಿಡಿಯೊವನ್ನು ತಕ್ಷಣವೇ ತೆಗೆದುಹಾಕಬೇಕು ಮತ್ತು ಇಂಥ ಮಾದರಿಯ ವಿಡಿಯೊವನ್ನು ಪಬ್ಲಿಶ್ ಮಾಡದಂತೆ ನಿರ್ಬಂಧ ಹೇರಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾ. ಅಗಸ್ಟಿನ್ ಜಾರ್ಜ್ ಮಾಸಿಹ್ ಹಾಗೂ ನ್ಯಾ. ಎ.ಎಸ್.ಚಂದೂರ್ಕರ್ ಅವರಿದ್ದ ಪೀಠವು ಆದೇಶಿಸಿತು.
ಜತೆಗೆ ವರಪ್ರದ ಮಿಡಿಯಾದ ಮುಖ್ಯ ಸಂಪಾದಕ ಶುಕ್ಲಾಗೆ ನೋಟಿಸ್ ಜಾರಿ ಮಾಡಿತು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿ, ‘ಇದೊಂದು ಗಂಭೀರ ಪ್ರಕರಣ. ಈ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿದ ಸುಪ್ರೀಂ ಕೋರ್ಟ್ನ ಕ್ರಮ ಶ್ಲಾಘನೀಯ’ ಎಂದರು.
ಇದನ್ನೂ ಓದಿ: ಪಂಜಾಬ್ನ ಶ್ರೀ ಮುಕ್ತ್ಸರ್ ಸಾಹಿಬ್ನಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ: ಐವರು ಸಾವು
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮಾತನಾಡಿ, ‘ಆರೋಪಿ ಶುಕ್ಲಾ ಅವರು ನ್ಯಾಯಮೂರ್ತಿ ವಿರುದ್ಧ ಹಗರಣದ ಆರೋಪ ಮಾಡಿ, ಅದರ ಕುರಿತ ವಿಡಿಯೊವನ್ನು ಯುಟ್ಯೂಬ್ನಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಪವಿತ್ರವಾದ ನ್ಯಾಯಾಲಯದ ಘನತೆಗೆ ಕುತ್ತು ತಂದಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಸಂವಿಧಾನವು ವಾಕ್ ಸ್ವಾತಂತ್ರ್ಯವನ್ನು ನಮ್ಮೆಲ್ಲರಿಗೂ ನೀಡಿದೆ. ಹಾಗೆಂದ ಮಾತ್ರಕ್ಕೆ ನ್ಯಾಯಾಧೀಶರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಲು ಬಳಸಬಾರದು. ಈ ವಿಡಿಯೊದಲ್ಲಿ ಮಾಡಿರುವ ಆರೋಪಗಳು ನ್ಯಾಯಾಂಗ ನಿಂದನೆ ಹಾಗೂ ನ್ಯಾಯಾಂಗ ವ್ಯವಸ್ಥೆ ಕುರಿತು ಅಗೌರವ ತೋರಿದಕ್ಕೆ ಸಮವಾಗಿದೆ’ ಎಂದು ನ್ಯಾ. ಬಿ.ಆರ್. ಗವಾಯಿ ಅಭಿಪ್ರಾಯಪಟ್ಟಿದ್ದಾರೆ.
‘ಅಜಯ್ ಶುಕ್ಲಾ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಿಕೊಳ್ಳುವಂತೆ ರಿಜಿಸ್ಟ್ರಾರ್ಗೆ ನಿರ್ದೇಶಿಸಲಾಗಿದೆ. ಪ್ರಕರಣದಲ್ಲಿ ಯುಟ್ಯೂಬ್ ಚಾನಲ್ ಅನ್ನು ಪಕ್ಷಗಾರರನ್ನಾಗಿಸಲಾಗುವುದು. ಇದಕ್ಕೆ ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್ ಅವರು ನ್ಯಾಯಾಲಯಕ್ಕೆ ಸಹಕರಿಸಲು ಕೋರಲಾಗಿದೆ’ ಎಂದು ಆದೇಶಿಸಿದರು.
ಇದನ್ನೂ ನೋಡಿ: ‘ಬೂಕರ್’ ಅನುಭವವನ್ನು ಬಿಚ್ಚಿಟ್ಟ ಬಾನು ಮುಷ್ತಾಕ್ Janashakthi Media