ಶಿವಮೊಗ್ಗ: ಹಸಿರುಮಕ್ಕಿ ಸೇತುವೆ ನಿರ್ಮಾಣದಿಂದ ಮದ್ಯ ಕರ್ನಾಟಕ (ದಕ್ಷಿಣ ಒಳನಾಡಿಗೆ), ಉತ್ತರ ಕರ್ನಾಟಕದಿಂದ ಕರಾವಳಿ ಭಾಗಕ್ಕೆ ಸಂಪರ್ಕ ಸಾಧ್ಯ ವಾಗಲಿದೆ. ಮಂಗಳೂರು ಪಟ್ಟಣ, ಮಂಗಳೂರು ಬಂದರು, ಕುಂದಾಪುರ ಪಟ್ಟಣಗಳಿಗೆ ಸಹ ಸಮೀಪವಾಗಲಿದೆ. ಸಾಗರ ತಾಲ್ಲೂಕಿನಿಂದ ಕೊಲ್ಲೂರು, ಉಡುಪಿ ಮುಂತಾದ ಯಾತ್ರಾಸ್ಥಳಗಳಿಗೆ ತೆರಳುವ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದು ಜುಲೈ 4ರಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.
ಸಚಿವ ಮಧು ಬಂಗಾರಪ್ಪ ಜೊತೆಗೂಡಿ ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಹಸಿರು ಮಕ್ಕಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದ ಅವರು ಮಳೆಗಾಲದಲ್ಲಿ ತೊಂದರೆ ಇಲ್ಲದ ರೀತಿಯಲ್ಲಿ ಪಿಲ್ಲರ್ ಮೇಲೆತ್ತುತ್ತಿದ್ದಾರೆ. ಕೊಲ್ಲೂರಿಗೆ ಬಹಳ ಹತ್ತಿರದ ಮಾರ್ಗವಾಗಿದೆ ಎಂದರು.
ಇದನ್ನೂ ಓದಿ: ಭೂಮಿಗಾಗಿ ದೇವನಹಳ್ಳಿ ರೈತರ ಹೋರಾಟ: ಸಿದ್ದರಾಮಯ್ಯ ಜೊತೆಗಿನ ಸಭೆ ಅಪೂರ್ಣ!
ಸಿಗಂಧೂರು ಸೇತುವೆ ಬೇಗ ಆಗಲಿ. ಇದು ಆಗಬಾರದು ಎನ್ನುವ ಉದ್ದೇಶದಿಂದ ರಾಘವೇಂದ್ರ, ಹಾಲಪ್ಪನವರು ತಡ ಮಾಡಿದ್ದಾರೆ. ಹಸಿರುಮಕ್ಕಿ ಸೇತುವೆ ಬಗ್ಗೆ ಒಂಚೂರು ಗಮನ ಹರಿಸಲಿಲ್ಲ. ಹೀಗಾಗಿಯೇ ಕಾಮಗಾರಿ ತಡವಾಗುತ್ತಿದೆ. ಈಗಾಗಲೇ ಕಾಮಗಾರಿ ಮುಕ್ತಾಯದ ಡೆಡ್ ಲೈನ್ ಕೊಟ್ಟಿದ್ದಾರೆ. ಮೇ ಒಳಗೆ ಹಸಿರುಮಕ್ಕಿ ಸೇತುವೆ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ ಎಂದರು.
ನೆನೆಗುದಿಗೆ ಬಿದ್ದಿದ್ದ ಈ ಸೇತುವೆ ಕಾಮಗಾರಿ ಬಗ್ಗೆ ಬೆಳಗಾಂ ಅಧಿವೇಶನದಲ್ಲಿ ಮಾತನಾಡಿ, ಕಾಮಗಾರಿ ಚುರುಕುಗೊಳಿಸಲು ಅನುದಾನಕ್ಕೆ ಕೋರಿಕೆ ಸಲ್ಲಿಸಿದ ಮೇರೆಗೆ ಸರ್ಕಾರ ಮೊದಲ ಹಂತದಲ್ಲಿ ರೂ. 45 ಕೋಟಿ ಹಣ ಬಿಡುಗಡೆ ಮಾಡಿದ್ದು, ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಕ್ಷಿಪ್ರಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಇನ್ನು 16 ಮೀಟರ್ ರಸ್ತೆ ಮಾತ್ರ ಬಾಕಿ ಇದೆ ಎಂದರು.
ಆದಷ್ಟು ಬೇಗವೇ ಹಸಿರುಮಕ್ಕಿ ಸೇತುವೆ ನಿರ್ಮಾಣ ಕಾಮಗಾರಿ ಮುಕ್ತಾಯಗೊಂಡು ಸಾರ್ವಜನಿಕರ ಬಳಕೆಗೆ ಸಾಧ್ಯವಾಗಲಿದೆ. ಉದ್ಘಾಟನೆಯನ್ನು ಯಾರಿಂದ ಮಾಡಿಸಬೇಕು ಎನ್ನುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಹಸಿರು ಮಕ್ಕಿ ಸೇತುವೆ ಉದ್ಘಾಟನೆಯ ನಂತ್ರ ಸ್ಥಳೀಯ ಶಾಲಾ ಮಕ್ಕಳು ಶಾಲೆಗೆ ಹೋಗಲು ಹಾಗೂ ವ್ಯಾಪಾರ ವಹಿವಾಟಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಇದನ್ನೂ ನೋಡಿ: ವಿಶೇಷ ವಿವಾಹ ಕಾಯಿದೆ, 1954: ನೀವು ತಿಳಿದುಕೊಳ್ಳಬೇಕಾದ ಮಾಹಿತಿಗಳು – ಅಶ್ವಿನಿ ಓಬುಳೇಶ್ ಅವರ ವಿಶ್ಲೇಷಣೆ
