ಸಂವಿಧಾನ ಸಂಭ್ರಮೋತ್ಸವ – ಸರ್ವರಿಗಾಗಿ ಸಂವಿಧಾನದ ಕುರಿತು ಅರಿವು

ಬೆಂಗಳೂರು: ಬೆಂಗಳೂರು  ಉತ್ತರ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ ಮಂಗಸಂದ್ರದಲ್ಲಿ ಸಮಾಜಕಾರ್ಯ ವಿಭಾಗ ಹಾಗೂ ಸತ್ವ ಸಂಸ್ಥೆ, ಚಿಂತಾಮಣಿ ಮತ್ತು ಹೊಸ ಚಿಗುರು ಸಂಸ್ಥೆ, ಮಾಲೂರು ಸಹಯೋಗದ ಮೇರೆಗೆ 08-02-2025 ಶನಿವಾರದಂದು “ಸಂವಿಧಾನ ಸಂಭ್ರಮೋತ್ಸವ – ಸರ್ವರಿಗಾಗಿ ಸಂವಿಧಾನದ ಕುರಿತು ಅರಿವು” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಒಂದು ಕಾರ್ಯಕ್ರಮಕ್ಕೆ ಪ್ರಾಸ್ತಾವಿಕ ನುಡಿಗಳನ್ನು ಸಮಾಜ ಕಾರ್ಯ ವಿಭಾಗದ ಉಪನ್ಯಾಸಕರು ಆದಂತಹ ಡಾ. ರಾಜಣ್ಣ ಜಿ ರವರು ಮಾತನಾಡಿ ಸಂವಿಧಾನದ ಆಶಯ ಸರ್ವರಿಗೂ ದಕ್ಕಿದೆ ಅದು ಇನ್ನಷ್ಟು ವಿಸ್ತರಿಸಿಕೊಳ್ಳಬೇಕಿದೆ ಎಂದು ಹೇಳುವ ಮೂಲಕ ಭಾರತದ ಇತಿಹಾಸ ಮತ್ತು ಸಂವಿಧಾನದ ಆಶಯಗಳ ಬಗ್ಗೆ ತಿಳಿಸಿದರು.

ಸದರಿ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಕವಿಗಳು ಹಾಗೂ ಕನ್ನಡ ಉಪನ್ಯಾಸಕರಾದಂತಹ ಬೊಮ್ಮೇಕಲ್ಲು ವೆಂಕಟೇಶ್ ಹಾಗೂ ಬೇರು ಬೆವರು ಕಲಾ ಬಳಗದ ಸೋರಪಲ್ಲಿ ಚಂದ್ರಶೇಖರ್ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಕಾರ್ಯಕ್ರಮದ ಕುರಿತು ಬೊಮ್ಮೇಕಲ್ಲು ವೆಂಕಟೇಶ್ ಅವರು ಸಂವಿಧಾನ ಹಾಗೂ ಪ್ರಸ್ತುತತೆಯ ವಿಷಯದ ಕುರಿತು ಸುಧೀರ್ಘವಾಗಿ ವಿಶ್ಲೇಷಿಸಿದರು. ಸಂವಿಧಾನವೆಂಬುದು ಜನಪದ ವಾಗಬೇಕು, ಜನರು ಸಂವಿಧಾನವನ್ನು ಸಂಭ್ರಮಿಸಬೇಕು ಎಂದು ಹೇಳುವ ಮೂಲಕ ಬುದ್ಧ, ಬಸವಣ್ಣ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಗಾಂಧಿ, ಕುವೆಂಪು ಒಳಗೊಂಡಂತ ದೇಶದ ಬಹು ಸಂಸ್ಕೃತಿಯನ್ನು ಸಂವಿಧಾನ ಎತ್ತಿ ಹಿಡಿದಿರುವುದು ನಮ್ಮ ಸಂವಿಧಾನದ ವೈಶಿಷ್ಟ್ಯವಾಗಿದೆ.

ಈ ಸಂವಿಧಾನವನ್ನು ಉಳಿಸುವ, ಅಳವಡಿಸಿಕೊಳ್ಳುವ ಜವಾಬ್ದಾರಿ ಎಲ್ಲ ಭಾರತೀಯರ ಮೇಲಿದೆ ಎಂಬುದನ್ನು ತಿಳಿಸಿದರು. ಬಹುತೇಕ ಇತಿಹಾಸವನ್ನು ತಿಳಿಸಲಾಗಿದೆ ಹಾಗೂ ನೈಜ ಇತಿಹಾಸವುಳ್ಳ ಪಠ್ಯಗಳು ಮಕ್ಕಳಿಗೆ ತಲುಪಬೇಕಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಸಂವಿಧಾನವೆಂಬುದು ಬರೀ ಒಂದು ವರ್ಗಕ್ಕೆ ಅಥವಾ ಒಂದು ಧರ್ಮಕ್ಕೆ ಸೀಮಿತವಾಗದೆ ಭಾರತದ ಒಟ್ಟು ಜನಸಾಮಾನ್ಯರ ಬದುಕಿನ ಒಳಿತಿಗಾಗಿ ಸಂವಿಧಾನವನ್ನು ರಚಿಸಿದರು ಎಂಬುದನ್ನು ಹೇಳುವ ಮೂಲಕ ಇಲ್ಲಿನ ಜನರು ಎದುರಿಸುತ್ತಿರುವ ಅಸ್ಪೃಷ್ಯತೆ, ಬಡತನ, ಅಸಮಾನತೆ ಅನ್ಯಾಯ ನಿವಾರಿಸಲು ನಮಗೆ ಇರುವ ಅಸ್ತ್ರ ಸಂವಿಧಾನ ಒಂದೇ ಎಂದು ಹೇಳುವ ಮೂಲಕ ತಮ್ಮ ವಿಚಾರವನ್ನು ಮಂಡಿಸಿದರು.

ಜೊತೆಗೆ ಬೇರು ಬೆವರು ಕಲಾ ಬಳಗದ ವತಿಯಿಂದ ಸೋರಪಲ್ಲಿ ಚಂದ್ರಶೇಖರ್ ರವರು ತಮ್ಮ ತಂಡದವರಾದ ನವೀನ್, ಚಲಪತಿ ಹಾಗೂ ಪ್ರದೀಪ್ ರವರ ಜೊತೆಗೂಡಿ “ಭಾರತ ಕಥಾ” ಎಂಬ ವಿಷಯದ ಕುರಿತು ಹಾಡು ಮತ್ತು ಕಥೆಯ ಮೂಲಕ ಸಂವಿಧಾನವನ್ನು, ಭಾರತದ ಮೂಲ ಇತಿಹಾಸವನ್ನು ಒಳಗೊಂಡಂತೆ ಭಾರತದ ಸಂವಿಧಾನದ ರಚನೆಯ ಕುರಿತು ಕಥೆಯ ಶೈಲಿಯಲ್ಲಿ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಪ್ರಸ್ತುತ ಪಡಿಸಿದರು.

ಭಾರತವೆಂದರೆ ಕೇವಲ ಕಲ್ಲಲ್ಲ, ಮಣ್ಣಲ್ಲ, ಬೆಟ್ಟ-ಗುಡ್ಡ ಮಾತ್ರವಲ್ಲ ಭಾರತವೆಂದರೆ ಇಲ್ಲಿ ವಾಸಿಸುತ್ತಿರುವ ಜನರು ಎಂಬ ತೆಲುಗಿನ ಒಬ್ಬ ಮಹಾಕವಿ ಹೇಳಿರುವ ಮಾತನ್ನು ಒಳಗೊಂಡಂತೆ ವಿವಿಧತೆಯಲ್ಲಿ ಏಕತೆಯನ್ನು ಎತ್ತಿ ಹಿಡಿಯುವ ದೇಶದಲ್ಲಿ ವೈವಿಧ್ಯತೆಯನ್ನು ಸವಿಯುವ ಜೊತೆಗೆ ನಾವೆಲ್ಲರೂ ಸಾಮರಸ್ಯ, ಸಹಬಾಳ್ವೆಯಿಂದ ಬದುಕಬೇಕಿದೆ ಇತರರನ್ನು ಬದುಕಲು ಬಿಡಬೇಕಿದೆ ಎಂಬುದನ್ನು ಭಾರತ ಕಥಾ ಸ್ಪಷ್ಟಪಡಿಸಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬೆಂ. ಉ. ವಿ. ವಿ ಸ್ನಾತಕೋತರ ಕೇಂದ್ರದ ನಿರ್ದೇಶಕರು ಆದಂತಹ ಪ್ರೊ. ಕುಮುದ ಡಿ ರವರು ಕಾರ್ಯಕ್ರಮದ ಪ್ರಾರಂಭದಿಂದ ಕೊನೆಯ ತನಕ ಉಪಸ್ಥಿತಿಯಲ್ಲಿದ್ದು, ಕಾರ್ಯಕ್ರಮದ ಎಲ್ಲಾ ಚಟುವಟಿಕೆಗಳನ್ನು ಅವಲೋಕಿಸಿ “ಭಾರತ ಕಥಾ” ಪ್ರಸ್ತುತ ದಿನಮಾನದ ಕುರಿತು ಇಂದಿನ ವಿದ್ಯಾರ್ಥಿಗಳಿಗೆ ಮಹತ್ತರ ಸಂದೇಶವನ್ನು ನೀಡಿದೆ ಎಂದು ವ್ಯಕ್ತಪಡಿಸಿದರು ಹಾಗೂ ಕಾರ್ಯಕ್ರಮವನ್ನು ಆಯೋಜಿಸಿದ ಸಮಾಜಕಾರ್ಯ ವಿಭಾಗದ ಪ್ರಶಿಕ್ಷಣಾರ್ಥಿಗಳಾದ ಸಂಕೇತ್ ರಾವ್ ಸಿ.ಎನ್, ಐಶ್ವರ್ಯ ವಿ ಹಾಗೂ ಭವಾನಿ ಕೆ. ಎಂ ರವರನ್ನು ಪ್ರಶಂಸಿಸುತ್ತ ಇಂತಹ ಕಾರ್ಯಕ್ರಮಗಳು ಇನ್ನಷ್ಟು ವಿದ್ಯಾರ್ಥಿಗಳಿಗೆ ತಲುಪುವಂತಹ ಕಾರ್ಯವಾಗಬೇಕು ಎಂದು ತಮ್ಮ ಅಧ್ಯಕ್ಷತೆ ನುಡಿಗಳಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಸಮಾಜಕಾರ್ಯ ವಿಭಾಗದ ಸಂಯೋಜಕರು ಆದ ಡಾ. ಗುಂಡಪ್ಪ ದೇವಿಕೇರಿ ರವರು, ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಆಗಮಿಸಿದಂತಹ ಸತ್ವ ವ್ಯಸನ ಮತ್ತು ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ವ್ಯವಸ್ಥಾಪಕರು ಆದ ಡಾ. ಪಾರ್ವತಿ, ಹಾಗೂ ಹೊಸ ಚಿಗುರು ಸಂಸ್ಥೆಯ ಅಧ್ಯಕ್ಷರು ಆದಂತಹ ಶ್ರೀಯುತ ಹರೀಶ್ ಎಸ್ ಎಂ ರವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಬೆಂ. ಉ. ವಿ. ವಿ ಸ್ನಾತಕೋತರ ಕೇಂದ್ರದ ವಿವಿಧ ವಿಭಾಗದ ಬೋಧಕರು ಮತ್ತು ಬೋಧಕೇತರ ವರ್ಗದವರು ಹಾಗೂ ಹಲವಾರು ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *