ಕಾರ್ಮಿಕ ಸಚಿವರ ಕಾರ್ಖಾನೆಯಲ್ಲೇ ಕಾರ್ಮಿಕರಿಗೆ ಜೀವ ರಕ್ಷಣೆ ಇಲ್ಲ ; ಸಚಿವ ಹೆಬ್ಬಾರ್ ರಾಜೀನಾಮೆಗೆ ಸಿಐಟಿಯು, ಡಿವೈಎಫ್‌ಐ ಆಗ್ರಹ

ಬೆಂಗಳೂರು :  ಮೃತ ಕಾರ್ಮಿಕನ ಕುಟುಂಬಕ್ಕೆ ಕನಿಷ್ಟ 50 ಲಕ್ಷ ರೂಪಾಯಿಗಳ ಪರಿಹಾರ ಒತ್ತಾಯ. ಬೆಂಗಳೂರು: ರಾಜ್ಯದ ಬಿಜೆಪಿ ಸರ್ಕಾರದ ಕಾರ್ಮಿಕ ಸಚಿವರಾಗಿರುವ ಶಿವರಾಂ ಹೆಬ್ಬಾರ ಮಾಲಿಕತ್ವದ ಕಾರ್ಖಾನೆಯಲ್ಲೇ ಕೆಲಸ ಮಾಡುವ ಕಾರ್ಮಿಕರಿಗೆ ಜೀವ ರಕ್ಷಣೆ ಇಲ್ಲ ಎನ್ನುವುದಾದರೆ ಲಕ್ಷಾಂತರ ಕಾರ್ಮಿಕರಿಗೆ ಸುರಕ್ಷತೆ ನೀಡಲು ಎಲ್ಲಿಂದ ಸಾಧ್ಯ. ಒಬ್ಬ ಯುವ ಕಾರ್ಮಿಕನ ಸಾವಿಗೆ ಕಾರಣವಾಗಿರುವ ಸಚಿವ ಶಿವರಾಂ ಹೆಬ್ಬಾರ್ ನೈತಿಕತೆ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(ಸಿಐಟಿಯು) ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‌ಐ) ರಾಜ್ಯ ಸಮಿತಿಗಳು ಆಗ್ರಹಿಸಿವೆ.

ಈ ಕುರಿತು ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಹಾಗೂ ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ್‌ ಜಂಟಿ ಹೇಳಿಕೆ ನೀಡಿದ್ದು,  ಕಾರ್ಮಿಕ ಸಚಿವರ ಮಾಲಿಕತ್ವದಲ್ಲಿ ಜೀವಕಳೆದುಕೊಂಡ ಅಮಾಯಕ ಬಡ ಯುವಕನ ಕುಟುಂಬಕ್ಕೆ ೫೦ ಲಕ್ಷ ಪರಿಹಾರ ನೀಡಬೇಕು ಮತ್ತು ಈ ಸಾವಿಗೆ ಕಾರಣವಾಗಿರುವ ಸಚಿವರ ಮಗ ವಿವೇಕ್ ಹೆಬ್ಬಾರ್ ಸೇರಿ ಇತರರ ಮೇಲೆ ಕೊಲೆ ಮೊಕದ್ದಮೆ ಹೊಡಿ ಕೂಡಲೇ ಬಂಧಿಸಬೇಕೆಂದು ಇಲ್ಲದಿದ್ದರೆ ಹಾವೇರಿಯಲ್ಲೇ ತೀವ್ರ ಹೋರಾಟ ರೂಪಿಸಲಾಗುವುದು ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕೋಣನಕೇರಿಯಲ್ಲಿರುವ ಕಾರ್ಮಿಕ ಸಚಿವರ ಮಗ ವಿವೇಕ್ ಹೆಬ್ಬಾರ್ ಮಾಲೀಕತ್ವದ ವಿಐಪಿಎನ್ ಡಿಸ್ಟಲರೀಸ್ ಕಾರ್ಖಾನೆಯಲ್ಲಿ ತಾಲೂಕಿನ ದುಂಡಸಿ ಗ್ರಾಮದ ನವೀನ ಬಸಪ್ಪ ಚಲವಾದಿ (19) ಎನ್ನುವ ಕಾರ್ಮಿಕ ಯಂತ್ರದ ಬೆಲ್ಸ್ಗೆ ಸಿಲುಕಿ ಮೃತಪಟ್ಟ ಘಟನೆ ಶನಿವಾರ ಸಂಜೆ ಸಂಭವಿಸಿದೆ. ಕಾರ್ಖಾನೆಯಲ್ಲಿ ಕಬ್ಬಿನ ಪುಡಿಯನ್ನು ಯಂತ್ರಕ್ಕೆ ಹಾಕುತ್ತಿದ್ದ ಸಮಯದಲ್ಲಿ ಯಂತ್ರದ ಬೆಲ್ಟ್ ಗೆ ಸಿಲುಕಿ ನವೀನನ ಎರಡೂ ಕೈಗಳು ಕಟ್ ಆಗಿ, ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ರೀತಿಯಕೆಲಸ ಮಾಡುವ ಸ್ಥಳದಲ್ಲಿ ಕಾರ್ಮಿಕರಿಗೆ ಯಾವುದೇ ಸುರಕ್ಷಾತಾ ಕ್ರಮ ಕೈಗೊಳ್ಳದಿರುವುದು ಘಟನೆಗೆ ಕಾರಣ ಎಂದು ಹೇಳಲಾಗಿದೆ. ಲಕ್ಷಾಂತರ ಕಾರ್ಮಿಕರಿಗೆ ಸುರಕ್ಷತೆ ಒದಗಿಸಬೇಕಾದ ಕಾರ್ಮಿಕ ಸಚಿವರೇ ಮಾಲಿಕರಾಗಿರುವ ಈ ಕಾರ್ಖಾನೆಯಲ್ಲಿ ಎಲ್ಲ ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರಿರುವುದು ಅತ್ಯಂತ ಸ್ಷಷ್ಟವಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿಹಾವೇರಿ: ಕಾರ್ಮಿಕ ಸಚಿವರ ಸಕ್ಕರೆ ಕಾರ್ಖಾನೆ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವು

ಕೆಲಸದ ಸ್ಥಳಗಳಲ್ಲಿ ಸುರಕ್ಷತೆಗಳೇ ಮಾಯವಾಗುತ್ತಿರುವಾಗ ಮತ್ತಷ್ಟು ಕಾರ್ಮಿಕರನ್ನು ಶೋಷಿಸಲು ಕಾರ್ಖಾನೆ ಕಾಯ್ದೆಗೆ ತಿದ್ದುಪಡಿ ತಂದು ಕೆಲಸದ ಅವಧಿಯನ್ನು 8 ಗಂಟೆಯಿಂದ 12 ಗಂಟೆ ಹೆಚ್ಚಿಸಲು ಬಿಜೆಪಿ ಸರ್ಕಾರ ಮತ್ತು ಸ್ವತಃ ಕಾರ್ಮಿಕ ಸಚಿವರೇ ಒಪ್ಪಿಗೆ ನೀಡುವುದು ಅತ್ಯಂತ ಖಂಡನಾರ್ಹವಾಗಿದೆ. ಬಿಜೆಪಿ ಸರ್ಕಾರದಲ್ಲಿ ಪ್ರಭಾವೀ ಸಚಿವರಾಗಿರುವ ಸಚಿವ ಹೆಬ್ಬಾರ್ ಅವರ ಮೇಲೆ ಕಟ್ಟಡ ಕಾರ್ಮಿಕ ಮಂಡಳಿಯ ಸಾವಿರಾರು ಕೋಟಿ ನಿಧಿಯನ್ನು ದುರುಪಯೋಗ ಮಾಡಿಕೊಂಡು ನೂರಾರು ಕೋಟಿ ಭ್ರಷ್ಟಾಚಾರ ನಡೆಸಿರುವ ಆರೋಪವಿದೆ. ನೂರಾರು ಸಾಮಾಗ್ರಿಗಳ ಖರೀದಿಗಳ ಮೂಲಕ ಕೋಟ್ಯಾಂತರ ಹಣ ಕಬಳಿಸಲು ಗಮನ ನೀಡಿರುವ ಕಾರ್ಮಿಕ ಸಚಿವರು ಹಾಗೂ ಅವರ ಮಗ ವಿವೇಕ್ ಹಬ್ಬಾರ್ ತಮ್ಮದೇ ಮಾಲೀಕತ್ವದ ಕಾರ್ಖಾನೆಯಲ್ಲಿ ಬಡ ಹಾಗೂ ಯುವ ಕಾರ್ಮಿಕನ ಸಾವಿಗೆ ನೇರ ಕಾರಣವಾಗಿದ್ದಾರೆ ಎಂದು ದೂರಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಕಾರ್ಖಾನೆ ಮಾಲೀಕ ವಿವೇಕ್ ಹೆಬ್ಬಾರ್, ವ್ಯವಸ್ಥಾಪಕ ಮಂಜುನಾಥ, ಲೇಬರ್ ಸಪ್ಲಾಯರ್‌ಗಳಾದ ದಾವಣಗೆರೆಯ ಬಸವರಾಜ ಬಸಪ್ಪ, ವಿಶ್ವನಾಥ ಎ.ಎಸ್., ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಉಮೇಶ ನಿಂಗಪ್ಪ ಸುರವೇ ಹಾಗೂ ಸೇಫ್ಟಿ ಇಂಜಿನಿಯರ್ ಮುಂಡಗೋಡದ ಆಕಾಶ ಶಿವಾಜಿ ಧರ್ಮೋಜಿ ಸೇರಿ 6 ಜನರ ವಿರುದ್ಧ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಮೃತ ಕಾರ್ಮಿಕನ ಕುಟುಂಬಕ್ಕೆ ಕನಿಷ್ಟ 50 ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕು ಹಾಗೂ ಸಾವಿಗೆ ಕಾರಣರಾದ ವಿವೇಕ್ ಹೆಬ್ಬಾರ್ ಮತ್ತಿತರ ಮೇಲೆ ಐಪಿಸಿ 300 ಹಾಗೂ 304 ಮೊದಲಾದ ಕಠಿಣ ಪ್ರಕರಣಗಳನ್ನು ದಾಖಲಿಸಿ ಕೂಡಲೇ ಬಂಧಿಸಬೇಕು ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‌ಐ) ಸಂಘಟನೆಗಳು ಆಗ್ರಹಿಸಿವೆ.

Donate Janashakthi Media

Leave a Reply

Your email address will not be published. Required fields are marked *