ಉಡುಪಿ: ಅವಧಿಗೆ ಮುನ್ನ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷರ ಬದಲಾವಣೆ ಬಗ್ಗೆ ನಿಗರ್ಮನ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಜೂನ್ 16 ಸೋಮವಾರದಂದು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವಧಿ
ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರ್ ನವೀನ್ ಶೆಟ್ಟಿ ರಿಗೆ ಅಧಿಕಾರ ಹಸ್ತಾಂತರಿಸಲು ಹಾಗೂ ನಿಗರ್ಮನ ಅಧ್ಯಕ್ಷರ ಸನ್ಮಾನವನ್ನು ಸ್ವೀಕರಿಸಲು ನಿರಾಕರಿಸಿದ ಕಿಶೋರ್ ಕುಮಾರ್, ತನಗೆ ಆದ ನೋವು ಮತ್ತು ಮೋಸವನ್ನು ಬಹಿರಂಗವಾಗಿ ಹೇಳಿಕೊಂಡರು. ಅವಧಿ
ಬಿಜೆಪಿ ಜಿಲ್ಲಾಧ್ಯಕ್ಷರ ಅವಧಿ ಮೂರು ವರ್ಷವಾದರೂ ಕಿಶೋರ್ ಕುಮಾರ್ ಅವರನ್ನು ಒಂದು ವರ್ಷ ನಾಲ್ಕು ತಿಂಗಳಿಗೆ ಬದಲಾಯಿಸಿರುವುದೇ ಈ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಇಸ್ರೇಲ್-ಇರಾನ್ ಸೇನಾ ಸಂಘರ್ಷ: ವಿಶ್ವದ ಅತಿ ದೊಡ್ಡ ಅನಿಲ ಕ್ಷೇತ್ರ ಸ್ಫೋಟ
ಎಂಟು ತಿಂಗಳಲ್ಲೇ ವದಂತಿ
ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಕಿಶೋರ್ ಕುಮಾರ್, ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮಾಡುವಾಗ ಜಾತಿ, ಹಣಗಳ ಬಗ್ಗೆ ಚರ್ಚೆ ಆಗುತ್ತದೆ. ಆದರೆ ಒಬ್ಬ ಜಿಲ್ಲಾಧ್ಯಕ್ಷನ ನೇಮಕ ಮಾಡುವಾಗ ಇದೆಲ್ಲ ಬೇಕೇ? ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬುದಾಗಿ ಕೇವಲ ಭಾಷಣದಲ್ಲಿ ಮಾತ್ರ. ನಾನು ಜಿಲ್ಲಾಧ್ಯಕ್ಷನಾಗಿದ್ದಾಗ ಲೋಕಸಭಾ ಚುನಾವಣೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲವು ಸಾಧಿಸಿತ್ತು. ಪಕ್ಷ ಕೊಟ್ಟ ಕಾರ್ಯಕ್ರಮಗಳನ್ನು ಅತ್ಯಂತ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ರಾಜ್ಯಕ್ಕೆ ಯಾವುದೇ ಸುಳ್ಳು ವರದಿ ಕಳುಹಿಸದೆ ಮಾಡಿದ್ದೆ. ಆದರೂ ನನ್ನಿಂದ ಏನು ತೊಂದರೆ ಆಗಿತ್ತು ಎಂಬುದು ಗೊತ್ತಿಲ್ಲ ಎಂದರು.
‘ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಆಯ್ಕೆ ಆಗುತ್ತೇನೆ ಎಂಬುದು ನನಗೆ ಗೊತ್ತಿರಲಿಲ್ಲ. ಬೇರೆಯವರು ಅದಕ್ಕೆ ಪ್ರಯತ್ನ ಪಟ್ಟಿದ್ದರು. ಆದರೆ ನಾನು ಯಾವುದೇ ಪ್ರಯತ್ನ ಪಟ್ಟಿರಲಿಲ್ಲ. ಒಂದು ವರ್ಷ ನಾಲ್ಕು ತಿಂಗಳು ಜಿಲ್ಲಾಧ್ಯಕ್ಷನಾಗಿ ಕೆಲಸ ಮಾಡಿದೆ. ಆದರೆ ಅಧ್ಯಕ್ಷನಾಗಿ ಎಂಟು ತಿಂಗಳು ಆಗುವಾಗಲೇ ನನ್ನ ಅಧ್ಯಕ್ಷ ಸ್ಥಾನ ಹೋಗುವ ಬಗ್ಗೆ ವದಂತಿಗಳು ಹರಡಲು ಆರಂಭಿಸಿತು. ಈ ವಿಚಾರ ತಿಳಿದ ಕೂಡಲೇ ಜಿಲ್ಲಾ ಪದಾಧಿಕಾರಿಗಳ ಸಭೆ ಕರೆದು ನಾನು ಯಾವತ್ತು ಈ ಸ್ಥಾನ ಉಳಿಸಿ ಅಂತ ಯಾರ ಬಳಿಯೂ ಬೇಡಿಕೊಳ್ಳುವುದಿಲ್ಲ. ನಿಮಗೆ ನಾನು ಈ ಸ್ಥಾನದಲ್ಲಿ ಮುಂದುವರೆಯಬೇಕೆಂದು ಅನಿಸಿದರೆ ನೀವು ಪ್ರಯತ್ನ ಮಾಡುವುದಾದರೆ ನನ್ನ ಆಕ್ಷೇಪ ಇಲ್ಲ ಎಂದು ಹೇಳಿದೆ’
ಮೋಸ ಯಾಕೆ ಮಾಡಬೇಕು
ಸಂಜೆ 7.30ಕ್ಕೆ ನನಗೆ ರಾಜ್ಯ ಪ್ರಧಾನ ಕಾರ್ಯದರ್ಶಿಯಿಂದ ಕರೆ ಬಂದಿತ್ತು. ನಿಮ್ಮನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ಬದಲು ಮಾಡುವುದಾಗಿ ಹೇಳಿದರು. ಆ ಸ್ಥಾನಕ್ಕೆ ಶಾಸಕರನ್ನು ನೇಮಕ ಮಾಡುವುದಿಲ್ಲ ಎಂದರು. ಅದಕ್ಕೆ ನಾನು ನನ್ನನ್ನು ತೆಗೆದ ನಂತರ ನೀವು ಯಾರನ್ನು ಮಾಡಿದರೂ ನನಗೆ ಅದರ ಅವಶ್ಯಕತೆ ಇಲ್ಲ ಎಂದು ಹೇಳಿದೆ. ಯಾವಾಗ ಅಧ್ಯಕ್ಷರ ಮಾಡುತ್ತೀರಿ ಎಂದು ಕೇಳಿದಕ್ಕೆ ರಾತ್ರಿ ಮಾಡುತ್ತೇವೆ ಎಂದು ಹೇಳಿದರು. ಆದರೆ ಫೋನ್ ಇಟ್ಟು ವಾಟ್ಸಾಪ್ ನೋಡುವಾಗ ಅಧ್ಯಕ್ಷರ ಬದಲಾವಣೆ ಮಾಡಿರುವ ಆದೇಶ ಬಂದಿದೆ. ಈ ರೀತಿ ಮೋಸ ಯಾಕೆ ಮಾಡಬೇಕು ಎಂದು ಕಿಶೋರ್ ಕುಮಾರ್ ಪ್ರಶ್ನಿಸಿದರು.
ಎಲ್ಲರು ಕರೆ ಮಾಡಿ ನಿಮ್ಮನ್ನು ಅಧ್ಯಕ್ಷ ಸ್ಥಾನದಿಂದ ತೆಗೆದರಲ್ಲ ಎಂದು ಹೇಳುವಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ. ಅವಧಿಗೆ ಮುನ್ನ ಬದಲಾವಣೆ ಮಾಡಿರುವುದರಿಂದ ನನ್ನ ಬಗ್ಗೆ ಕೆಲವು ತಪ್ಪು ಸಂದೇಶಗಳು ಹೋಗುತ್ತಿವೆ. ನಾನು ಯಾರಿಗೂ ವಂಚನೆ ಮಾಡಿಲ್ಲ, ಯಾರಿಂದಲೂ ಹಣ ಪಡೆದಿಲ್ಲ. ನಾನು ಅಧ್ಯಕ್ಷನಾದ ಬಳಿಕ ಸಾಕಷ್ಟು ಖರ್ಚುಗಳಾಗಿವೆ. ಕೈಯಿಂದ ತುಂಬಾ ಹಣ ವ್ಯಯ ಮಾಡಿದ್ದೇನೆ. ಯಾರ ಬಳಿಯೂ ಬೇಡಲು ಹೋಗಿಲ್ಲ. ಇದಕ್ಕಿಂತ ಗರಿಷ್ಠ ನಿಷ್ಠೆ ಹಾಗೂ ಪ್ರಾಮಾಣಿಕತೆ ತೋರಿಸಲು ನನ್ನಿಂದ ಆಗುವುದಿಲ್ಲ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್, ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಕಿರಣ್ ಕೊಡ್ಗಿ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮುಖಂಡರಾದ ಉದಯ ಕುಮಾರ್ ಶೆಟ್ಟಿ, ವಿಕಾಸ್ ಪುತ್ತೂರು, ರೇಷ್ಮಾ ಉದಯ ಶೆಟ್ಟಿ, ದಿನಕರ ಶೆಟ್ಟಿ ಹೆರ್ಗ ಉಪಸ್ಥಿತರಿದ್ದರು.
ಅಧಿಕಾರ ಹಸ್ತಾಂತರ, ಸನ್ಮಾನ ಸ್ವೀಕರಿಸಲು ನಿರಾಕರಣೆ!
‘ನಿರ್ಗಮನ ಅಧ್ಯಕ್ಷರಿಗೆ ಅಭಿನಂದನೆ ಮಾಡುವುದು ಬೇಡ. ನಾನು ಅದನ್ನು ಸ್ವೀಕರಿಸುವುದಿಲ್ಲ. ಅಧಿಕಾರ ಹಸ್ತಾಂತರ ಕೂಡ ಇಲ್ಲ. ಅಧಿಕಾರವನ್ನು ನನ್ನಿಂದ ಕಸಿದುಕೊಳ್ಳಲಾಗಿದೆ. ಆದುದರಿಂದ ಇದು ಅಧಿಕಾರ ಹಸ್ತಾಂತರ ಕಾರ್ಯಕ್ರಮ ಅಲ್ಲ. ನನ್ನ ಹತ್ತಿರ ಇಲ್ಲದ ಅಧಿಕಾರವನ್ನು ಹಸ್ತಾಂತರ ಮಾಡಿದರೆ ತಪ್ಪು ಸಂದೇಶ ಹೋಗುತ್ತದೆ. ಹಾಗಾಗಿ ಅಧಿಕಾರವನ್ನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಳು ಹಸ್ತಾಂತರ ಮಾಡುತ್ತಾರೆ ಎಂದು ಕಿಶೋರ್ ಕುಮಾರ್ ಕುಂದಾಪುರ ಕಾರ್ಯಕ್ರಮದಲ್ಲಿ ತಿಳಿಸಿದರು.
ಅದರಂತೆ ನೂತನ ಜಿಲ್ಲಾಧ್ಯಕ್ಷರಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಪಕ್ಷದ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಆ ವೇಳೆ ಇದ್ದ ನಿರ್ಗಮನ ಅಧ್ಯಕ್ಷ ತಮ್ಮ ಕೈಯನ್ನು ಹಿಂದಕ್ಕೆ ಕಟ್ಟಿ ನಿಂತಿದ್ದರು. ಇದೇ ವೇಳೆ ಬಿಜೆಪಿ ಮುಖಂಡ ಉದಯ ಕುಮಾರ್ ಶೆಟ್ಟಿ, ನಿರ್ಗಮನ ಅಧ್ಯಕ್ಷರಿಗೆ ಶಾಲು ಹಾಕಿ ಅಭಿನಂದಿಸಲು ಮುಂದಾದರು. ಆಗ ಕಿಶೋರ್ ಕುಮಾರ್ ಅದನ್ನು ನಿರಾಕರಿಸಿದರು. ಕಾರ್ಯಕ್ರಮ ಮುಗಿದ ಕೂಡಲೇ ಕಿಶೋರ್ ಕುಮಾರ್ ಮುಂದಿನ ಕಾರ್ಯಕ್ರಮಕ್ಕೆ ನಿಲ್ಲದೆ ತನ್ನ ಹೆಗಲ ಮೇಲೆ ಇದ್ದ ಬಿಜೆಪಿ ಶಾಲನ್ನು ಅಲ್ಲೇ ಇಟ್ಟು ಹೊರ ನಡೆದರು.
ಇದನ್ನೂ ನೋಡಿ: ಅಭಿಮಾನಿಗಳ ಉನ್ಮಾದ, ಸರ್ಕಾರದ ಅತ್ಯುತ್ಸಾಹ ಮತ್ತು ಮಾರುಕಟ್ಟೆಯ ದಾಹ Janashakthi Media