ಕೈ ಪಕ್ಷದಿಂದ ಯಾರೇ ಸಿಎಂ ಆದರೂ ನೀಡಿದ ಭರವಸೆಗಳನ್ನು ಈಡೇರಿಸದಿದ್ದಲ್ಲಿ ಬದಲಾವಣೆ ಗ್ಯಾರಂಟಿ : ಮಲ್ಲಿಕಾರ್ಜುನ ಖರ್ಗೆ

ಮಂಗಳೂರು : ಕಾಂಗ್ರೆಸ್ ಈ ಬಾರಿ ಚುನಾವಣೆಯಲ್ಲಿ ಬಹುಮತಗಳಿಂದ ಗೆದ್ದು ಯಾರೇ ಮುಖ್ಯಮಂತ್ರಿಯಾದರೂ ಅವರು ಚುನಾವಣಾ ಪೂರ್ವ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ಕೆಲಸ ಮಾಡದಿದ್ದರೆ ಅವರನ್ನು ಬದಲಾಯಿಸಲಾಗುವುದು ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಿನ್ನೆ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಪಕ್ಷವು ಜನರಿಗೆ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತದೆ ಎಂದು ಒತ್ತಿ ಹೇಳಿದರು. ಕಾಂಗ್ರೆಸ್ ನಾಯಕರು ಅಧಿಕಾರವನ್ನು ಸ್ವೀಕರಿಸಿದ ನಂತರ ಜನಪರ, ಬಡವರ ಪರವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ, ಆಡಳಿತ ಪಕ್ಷವು ಜನರ ಮಧ್ಯೆ ಜನಪ್ರಿಯತೆ ಕಳೆದುಕೊಳ್ಳುತ್ತದೆ ಎಂದರು.

ದಿವಂಗತ ನಾಯಕಿ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದ ಅವಧಿಯಲ್ಲಿ 10 ಅಂಶಗಳ ಕಾರ್ಯಕ್ರಮಗಳ ಮೂಲಕ ಭೂ ಕಾನೂನುಗಳಲ್ಲಿ ಸುಧಾರಣೆಗಳನ್ನು ತಂದರು, ಜೀತ ಕಾರ್ಮಿಕ ಪದ್ಧತಿಯನ್ನು ರದ್ದುಗೊಳಿಸಿದರು, ಬ್ಯಾಂಕ್‌ಗಳ ರಾಷ್ಟ್ರೀಕರಣವನ್ನು ಜಾರಿಗೆ ತಂದರು ಎಂದು ಖರ್ಗೆ ಸ್ಮರಿಸಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅನೇಕರು ಜಿಲ್ಲೆಯಲ್ಲಿ ಸ್ವತಂತ್ರ ಬ್ಯಾಂಕುಗಳನ್ನು ಸ್ಥಾಪಿಸಿದರು. ಆದರೆ ಕೇಂದ್ರದಲ್ಲಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಸ್ವತಂತ್ರ ಬ್ಯಾಂಕುಗಳನ್ನು ವಿಲೀನಗೊಳಿಸಿದರು. ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಜಯಾ ಬ್ಯಾಂಕ್ ವಿಲೀನಗೊಂಡಿತು. ಈಗ, ಪರರಾಜ್ಯಗಳ ಪದವೀಧರರು ಈ ಬ್ಯಾಂಕುಗಳಲ್ಲಿ ಉದ್ಯೋಗ ಗಳಿಸಿ ಕರ್ನಾಟಕದವರಿಗೆ ಉದ್ಯೋಗ ಸಿಗುತ್ತಿಲ್ಲ, ಬಿಜೆಪಿ ಆಡಳಿತದಲ್ಲಿ ಕರ್ನಾಟಕ ಜನತೆ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

ಇದನ್ನೂ ಓದಿ : ಮುಖ್ಯಮಂತ್ರಿ ಸ್ಥಾನ ನನಗೆ ಬೇಡ : ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ

ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವುದೇ ನಿರ್ದಿಷ್ಟ ಕಾರ್ಯಕ್ರಮದಿಂದ ಕರ್ನಾಟಕ ಜನತೆ ಪ್ರಯೋಜನ ಪಡೆದಿಲ್ಲ. ಬಿಜೆಪಿ ಮೊದಲು ಈ ರಾಜ್ಯಕ್ಕೆ ತನ್ನ ಕೊಡುಗೆಯ ಬಗ್ಗೆ ಮಾತನಾಡಬೇಕು, ನಂತರ ಮತ ಕೇಳಬೇಕು. ಬಿಜೆಪಿ ಧರ್ಮಗಳ ನಡುವೆ ಘರ್ಷಣೆಯನ್ನು ಹುಟ್ಟುಹಾಕುತ್ತದೆ ಎಂದರು.

Donate Janashakthi Media

Leave a Reply

Your email address will not be published. Required fields are marked *