ನ್ಯೂಸ್ 18 ಕಾರ್ಯಕ್ರಮ ನಿರಾಕರಿಸಿದ ಛತ್ತೀಸ್‌ಗಢ ಸಿಎಂ | ಕೋಮು ಆಧಾರಿತ ವರದಿ ಹಿನ್ನಲೆ

ಹರಿಯಾಣದ ಹಿಂಸಾಚಾರದ ವೇಳೆ ನ್ಯೂಸ್ 18 ಇಂಡಿಯಾ ನಿರೂಪಕರ ವರದಿಗಳಿಂದಾಗಿ ನೂಹ್‌ನ ಮಿಯಾ ಮುಸ್ಲಿಮರು ತೀವ್ರವಾಗಿ ತೊಂದರೆಗೆ ಒಳಗಾಗಿದ್ದರು

ಛತ್ತೀಸ್‌ಗಢ: ಹರಿಯಾಣದ ಹಿಂಸಾಚಾರದ ಕುರಿತು ಮಾಡಿದ್ದ ಕೋಮು ಆಧಾರಿತ ವರದಿಯ ಹಿನ್ನಲೆಯಲ್ಲಿ ”ನೆಟ್‌ವರ್ಕ್ 18” ಆಯೋಜಿಸಿದ್ದ ಸಮಾವೇಶದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ನಿರಾಕರಿಸಿದ್ದಾರೆ ಎಂದು ಸಿಎಂ ಕಚೇರಿಯ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಹಿಂಸಾಚಾರದ ವೇಳೆ ನ್ಯೂಸ್ 18 ಇಂಡಿಯಾ ಆ್ಯಂಕರ್ ಅಮನ್ ಚೋಪ್ರಾ ಅವರು ಕೋಮು ಆಧಾರಿತ ಟೀಕೆಗಳನ್ನು ಮಾಡಿದ್ದರು. ಹೀಗಾಗಿ ರಾಯಪುರದಲ್ಲಿ ”ನ್ಯೂಸ್ 18  ಮಧ್ಯಪ್ರದೇಶ-ಛತ್ತೀಸ್‌ಗಢ” ಆಯೋಜಿಸಿದ್ದ ”ರೈಸಿಂಗ್ ಛತ್ತೀಸ್‌ಗಢ” ಸಮಾವೇಶವನ್ನು ಬಹಿಷ್ಕರಿಸಲು ಪಕ್ಷ ನಿರ್ಧರಿಸಿದೆ ಎಂದು ರಾಜ್ಯ ಕಾಂಗ್ರೆಸ್ ಘಟಕ ಹೇಳಿಕೊಂಡಿದೆ.

ಈ ಮಧ್ಯೆ ಕಾಂಗ್ರೆಸ್ ನಾಯಕ ನಂದ್ ಕುಮಾರ್ ಸಾಯಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ನ ಛತ್ತೀಸ್‌ಗಢದ ವಕ್ತಾರ ಸುಶೀಲ್ ಆನಂದ್ ಶುಕ್ಲಾ, “ಸಂವಹನ ಅಂತರದಿಂದ ಸಾಯಿ ಅವರು ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ಅವರು ಬಿಜೆಪಿಯಿಂದ ಕಾಂಗ್ರೆಸ್ ಸೇರಿದವರು… ಅವರಿಗೆ ಸಂದೇಶ ತಡವಾಗಿ ತಲುಪಿತು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೂರಿಲ್ಲದೇ ಹೋದರೂ ದ್ವೇಷ ಭಾಷಣ ಮಾಡುವವರ ವಿರುದ್ಧ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ : ಸುಪ್ರೀಂ

ಸಾಯಿ ಅವರು ಎರಡು ತಿಂಗಳ ಹಿಂದೆಯಷ್ಟೆ ಕಾಂಗ್ರೆಸ್ ಸೇರಿದ್ದರು. ಪಕ್ಷ ಸೇರ್ಪಡೆಯ ತಿಂಗಳ ನಂತರ ಅವರನ್ನು ಕ್ಯಾಬಿನೆಟ್ ದರ್ಜೆ ಹುದ್ದೆಯಾಗಿರುವ ಛತ್ತೀಸ್‌ಗಢದ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮ (CSIDC) ಅಧ್ಯಕ್ಷರಾಗಿ ನಿಯೋಜಿಸಲಾಗಿತ್ತು.

ಛತ್ತೀಸ್‌ಗಢದ ಕಾಂಗ್ರೆಸ್ ಸರ್ಕಾರವೇ ಸಮಾವೇಶವನ್ನು ಪ್ರಾಯೋಜಿಸಿತ್ತು ಎಂಬ ವದಂತಿಗಳು ಇದೆಯಾದರೂ, ರಾಜ್ಯದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯದ ಹಿರಿಯ ಅಧಿಕಾರಿಗಳು ಅದನ್ನು ನಿರಾಕರಿಸಿದ್ದಾರೆ. ಅದಾಗ್ಯೂ, ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಹಾಜರಾಗುವುದಿಲ್ಲ ಎಂದು ಅವರ ಕಚೇರಿ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಆದರೆ ಅವರು ಅದೇ ದಿನ ರಾಯ್‌ಪುರದಲ್ಲಿ ಎನ್‌ಡಿಟಿವಿ ಸಮಾವೇಶದಲ್ಲಿ ಭಾಗವಹಿಸಿದ್ದರು.

ಹರಿಯಾಣದ ಹಿಂಸಾಚಾರದ ವೇಳೆ ನ್ಯೂಸ್ 18 ಇಂಡಿಯಾ ನಿರೂಪಕರ ವರದಿಗಳಿಂದಾಗಿ ನೂಹ್‌ನ ಮಿಯಾ ಮುಸ್ಲಿಮರು ತೀವ್ರವಾಗಿ ತೊಂದರೆಗೆ ಒಳಗಾಗಿದ್ದರು. ನ್ಯೂಸ್ 18 ಇಂಡಿಯಾ ಕಾರ್ಯಕ್ರಮಗಳು ಕೋಮು ಗಲಭೆಯನ್ನು ಹೆಚ್ಚಿಸುತ್ತಿದೆ ಎಂದು ಹಲವಾರು ಪ್ರಜ್ಞಾವಂತರು ಆರೋಪಿಸಿದ್ದರು. ನ್ಯೂಸ್18  ಇಂಡಿಯಾದ ಹಿರಿಯ ಸಂಪಾದಕ ಮತ್ತು ನಿರೂಪಕ ಅಮನ್ ಚೋಪ್ರಾ, “ಕಲ್ಲು ತೂರಾಟಗಾರರಿಗೆ ಶಾಶ್ವತ ಪರಿಹಾರ” ಇಲ್ಲವೆ ಎಂದು ಪ್ರಶ್ನಿಸಿದ್ದರು. ಈ ಹಿಂದೆ ಅವರ ಟಿವಿ ಕಾರ್ಯಕ್ರಮಗಳ ವಿರುದ್ಧ ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರದಿಂದ ಹಲವಾರು ಬಾರಿ ದಂಡ ವಿಧಿಸಲಾಗಿತ್ತು.

ಇದನ್ನೂ ಓದಿ: ಕೋಮು ದ್ವೇಷ ಭಾಷಣ : ಸಚಿವ ಮುನಿರತ್ನ ವಿರುದ್ದ ದೂರು ದಾಖಲು

ಈ ಮಧ್ಯೆ ಸೋಮವಾರ ನಡೆದ ರೈಸಿಂಗ್ ಛತ್ತೀಸ್‌ಗಢ ಸಮಾವೇಶದಲ್ಲಿ “ಹಿರಿಯ ಕಾಂಗ್ರೆಸ್ ನಾಯಕ” ಎನ್ನಲಾದ ಕುನಾಲ್ ಶುಕ್ಲಾ ಕೂಡ ಭಾಗವಹಿಸಿದ್ದಾರೆ ಎಂದು ”ನ್ಯೂಸ್ 18 ಮಧ್ಯಪ್ರದೇಶ ಛತ್ತೀಸ್‌ಗಢ” ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಸುಶೀಲ್ ಆನಂದ್ ಶುಕ್ಲಾ, “ಕುನಾಲ್ ಶುಕ್ಲಾ ಪಕ್ಷದ ಪ್ರಾಥಮಿಕ ಸದಸ್ಯನೂ ಅಲ್ಲ. ಅವರು ಸುಮಾರು 20 ವರ್ಷಗಳ ಹಿಂದೆ ಯುವ ಕಾಂಗ್ರೆಸ್‌ನ ಹುದ್ದೆಯಲ್ಲಿದ್ದರು… ಕಾಂಗ್ರೆಸ್ ಪಕ್ಷದ ಯಾವುದೆ ನಾಯಕರು ಅಥವಾ ವಕ್ತಾರರು ಸಮಾವೇಶಕ್ಕೆ ಹೋಗಲಿಲ್ಲ. ನಮ್ಮ ನಿಲುವು ಸ್ಪಷ್ಟವಾಗಿದೆ. ಭೂಪೇಶ್ ಬಾಘೆಲ್ ನಮ್ಮ ನಾಯಕ…ಅವರ ನಿಲುವು ಪಕ್ಷದ ನಿಲುವು ಕೂಡ ಆಗಿದೆ” ಎಂದು ಹೇಳಿದ್ದಾರೆ.

ಅಮನ್ ಚೋಪ್ರಾ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ, “ಸಮಾಜದಲ್ಲಿ ವಿಷ ಹರಡುವುದನ್ನು” ತಡೆಯುವ ಸಲುವಾಗಿ ನ್ಯೂಸ್ 18 ಇಂಡಿಯಾ ಆಂಕರ್ ಅಮನ್ ಚೋಪ್ರಾ ಅವರ ಕಾರ್ಯಕ್ರಮದಲ್ಲಿ ಪಕ್ಷದ ಯಾವುದೇ ವಕ್ತಾರರು ಕಾಣಿಸಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಘೋಷಿಸಿತ್ತು.

ಇದನ್ನೂ ಓದಿ: ದ್ವೇಷ ಭಾಷಣ ಮತ್ತು ಹಿಂಸಾಚಾರದ ನಡುವಿನ ಕೊಂಡಿಯನ್ನು ಗುರುತಿಸಿದ ಸುಪ್ರಿಂ ಕೋರ್ಟ್ ಟಿಪ್ಪಣಿಗಳು

ಮುಸ್ಲಿಮ್ ಸಮುದಾಯವನ್ನು ನಿಂದಿಸಿದ್ದಕ್ಕಾಗಿ ಚೋಪ್ರಾ ಅವರ ಕಾರ್ಯಕ್ರಮಕ್ಕೆ ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಮತ್ತು ಡಿಜಿಟಲ್ ಸ್ಟ್ಯಾಂಡರ್ಡ್ ಅಥಾರಿಟಿ (NBDSA) ಈ ವರ್ಷದ ಆರಂಭದಲ್ಲಿ ದಂಡ ವಿಧಿಸಿತ್ತು. ನ್ಯೂಸ್ 18 ಇಂಡಿಯಾದ ಅಮನ್ ಚೋಪ್ರಾ ಅವರು ಅಹಮದಾಬಾದ್‌ನಲ್ಲಿ ನಡೆದ ಗಾರ್ಬಾ ಕಾರ್ಯಕ್ರಮವೊಂದರಲ್ಲಿ “ಕೆಲವು ದುಷ್ಕರ್ಮಿಗಳ ಕೃತ್ಯಗಳಿಗಾಗಿ ಇಡೀ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿದ್ದಾರೆ, ನಿಂದಿಸಿದ್ದಾರೆ ಮತ್ತು ಜಾತಿ ನಿಂದನೆ ಮಾಡಿದ್ದಾರೆ” ಎಂದು NBDSA ತನ್ನ ಆದೇಶದಲ್ಲಿ ಹೇಳಿತ್ತು.

ಕಳೆದ ವರ್ಷ ನ್ಯೂಸ್ 18 ಇಂಡಿಯಾಗೆ 50,000 ರೂ. ದಂಡವನ್ನು ವಿಧಿಸಿದ್ದ NBDSA, ಕರ್ನಾಟಕದ ಹಿಜಾಬ್ ನಿಷೇಧದ ಕುರಿತು ಅಮನ್ ಚೋಪ್ರಾ ಅವರ ಕಾರ್ಯಕ್ರಮವನ್ನು ತೆಗೆದುಹಾಕುವಂತೆ ಚಾನಲ್‌ಗೆ ನಿರ್ದೇಶಿಸಿತು. “ಚೋಪ್ರಾ ಅವರು ನೀತಿ ಸಂಹಿತೆ ಮತ್ತು ಬ್ರಾಡ್‌ಕಾಸ್ಟಿಂಗ್ ಮಾನದಂಡಗಳ ಬಗ್ಗೆ ಅಗೌರವದಿಂದ ವರ್ತಿಸಿದ್ದಾರೆ. ಹಿಜಾಬ್‌ನಂತಹ ಸೂಕ್ಷ್ಮ ವಿಷಯಗಳ ಕುರಿತು ಚರ್ಚೆಗಳನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ಅವರಿಗೆ ಮಾರ್ಗದರ್ಶನ ನೀಡಬೇಕು ಮತ್ತು ತರಬೇತಿ ನೀಡಬೇಕು” ಎಂದು ಪ್ರಾಧಿಕಾರ ತಿಳಿಸಿತ್ತು.

ವಿಡಿಯೊ ನೋಡಿ: ಧರ್ಮಸ್ಥಳ, ಉಜಿರೆಯಲ್ಲಿ 463 ಅಸಹಜ ಸಾವು – ಖಾವಂದರಿಂದ ಮಾನವ ಹಕ್ಕುಗಳ ಉಲ್ಲಂಘನೆ – ನರೇಂದ್ರ ನಾಯಕ್‌ ನೇರ ಆರೋಪ

Donate Janashakthi Media

Leave a Reply

Your email address will not be published. Required fields are marked *