ದೇಶದ್ರೋಹ ಕಾನೂನು ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ: ಅರ್ಜಿಗಳನ್ನು ವಜಾಗೊಳಿಸಲು ಮನವಿ

ನವದೆಹಲಿ: ದೇಶದ್ರೋಹ ಕಾನೂನನ್ನು ಸಮರ್ಥಿಸಿಕೊಂಡಿರುವ ಕೇಂದ್ರದ ಬಿಜೆಪಿ ಸರ್ಕಾರವು ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಅರ್ಜಿಗಳನ್ನು ವಜಾಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದೆ. ಬ್ರಿಟಿಷರ ಕಾಲದ ದೇಶದ್ರೋಹ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ಹಲವಾರು ಅರ್ಜಿಗಳು ಸಲ್ಲಿಕೆಯಾಗಿವೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಮೂವರು ನ್ಯಾಯಾಧೀಶರ ಪೀಠಕ್ಕೆ ಕೇಂದ್ರವು ಸಲ್ಲಿಸಿದ ಲಿಖಿತ ಹೇಳಿಕೆಯಲ್ಲಿ ಕೇದಾರನಾಥ ಸಿಂಗ್ ವಿರುದ್ಧ ಬಿಹಾರ ರಾಜ್ಯ ಪ್ರಕರಣದಲ್ಲಿ ದೇಶದ್ರೋಹ ಕಾನೂನನ್ನು ಎತ್ತಿ ಹಿಡಿದು ಸರ್ವೋಚ್ಚ ನ್ಯಾಯಾಲಯವು ನೀಡಿರುವ ತೀರ್ಪಿಗೆ ಬದ್ಧರಾಗಿರಬೇಕಾಗುತ್ತದೆ ಎಂದು ತಿಳಿಸಿದೆ.

ಇದನ್ನು ಓದಿ: ದೇಶದ್ರೋಹ ಕಾನೂನು: ವಾರದೊಳಗೆ ಪ್ರತಿಕ್ರಿಯಿಸಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ

“ಸಮಾನತೆಯ ಹಕ್ಕು ಮತ್ತು ಜೀವಿಸುವ ಹಕ್ಕಿನಂತಹ ಮೂಲಭೂತ ಹಕ್ಕುಗಳ ನೆಲೆಗಟ್ಟಿನಲ್ಲಿ ಸೆಕ್ಷನ್ 124 ಎ (ದೇಶದ್ರೋಹ ಕಾನೂನು) ಎಲ್ಲ ಆಯಾಮಗಳನ್ನೂ ಸಾಂವಿಧಾನಿಕ ಪೀಠವೊಂದು ಈಗಾಗಲೇ ಪರಿಶೀಲಿಸಿದೆ” ಎಂದು ಸುಪ್ರೀಂಕೋರ್ಟ್‌ಗೆ ಕೇಂದ್ರವು ತಿಳಿಸಿದೆ.

ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ (ಇಜಿಐ) ಮತ್ತು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸೇರಿದಂತೆ ಐವರು ಕಕ್ಷಿದಾರರು ದೇಶದ್ರೋಹ ಕಾನೂನನ್ನು ಪ್ರಶ್ನಿಸಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.

ದೇಶದ್ರೋಹ ಕಾನೂನಿನ ದಂಡನೆಗಳನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಕಳೆದ ವರ್ಷದ ಜುಲೈನಲ್ಲಿ ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಮಹಾತ್ಮ ಗಾಂಧಿ ಅವರಂತಹ ವ್ಯಕ್ತಿಗಳನ್ನು ಸುಮ್ಮನಾಗಿಸಲು ಬ್ರಿಟಿಷರು ಬಳಸುತ್ತಿದ್ದ ನಿಯಮಗಳನ್ನು ಏಕೆ ರದ್ದು ಮಾಡುತ್ತಿಲ್ಲ ಎಂದು ಕೇಂದ್ರ ಸರ್ಕಾರವನ್ನು ಕೋರ್ಟ್ ಪ್ರಶ್ನಿಸಿತ್ತು.

ಇದನ್ನು ಓದಿ: ವಸಾಹತುಶಾಹಿ ದೇಶದ್ರೋಹ ಕಾಯ್ದೆ ರದ್ದಾಗಲಿ: ನ್ಯಾ ಎಚ್‌.ಎನ್‌.ನಾಗಮೋಹನ್‌ ದಾಸ್

ಪ್ರಕರಣವೊಂದರ ವಿಚಾರಣೆ ವೇಳೆ, ದೇಶದ್ರೋಹ ಕಾನೂನನ್ನು ತಮಗಾಗದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಬಳಸಲಾಗುತ್ತಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತ್ತು.  ‘ಬಡಗಿಯೊಬ್ಬನಿಗೆ ಮರದ ತುಂಡೊಂದನ್ನು ಕತ್ತರಿಸಲು ಗರಗಸ ನೀಡಿದರೆ, ಆತ ಅದನ್ನು ಇಡೀ ಅರಣ್ಯವನ್ನು ಕತ್ತರಿಸಲು ಬಳಸಿದಂತೆ ಆಗಿದೆ’ ಎಂದು ದೇಶದ್ರೋಹದ ಕಾನೂನು ದುರ್ಬಳಕೆ ಆಗುತ್ತಿರುವ ಸ್ವರೂಪದ ಬಗ್ಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಕಳವಳ ವ್ಯಕ್ತಪಡಿಸಿದ್ದರು. ಯಾವುದೋ ಕಾರಣಕ್ಕೆ ಹಳ್ಳಿಯೊಂದರಲ್ಲಿ ಯಾರನ್ನಾದರೂ ಸಿಕ್ಕಿಸಲು ಪೊಲೀಸ್ ಅಧಿಕಾರಿ ಬಯಸಿದ್ದರೆ, ಆತ ಸೆಕ್ಷನ್ 124ಎ ಬಳಸಬಹುದಾಗಿದೆ. ಇದು ಜನರಲ್ಲಿ ಭಯ ಮೂಡಿಸಿದೆ ಎಂದು ಹೇಳಿದ್ದರು.

ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ,ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಹಿಮಾ ಕೊಹ್ಲಿ ಅವರ ಮೂವರು ನ್ಯಾಯಾಧೀಶರ ವಿಶೇಷ ಪೀಠವು ಮೇ 10ರಂದು ದೇಶದ್ರೋಹ ಕಾನೂನನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆಯನ್ನು ನಡೆಸಲಿದೆ.

Donate Janashakthi Media

Leave a Reply

Your email address will not be published. Required fields are marked *