ತಿರುವನಂತಪುರಂ: ಕಾರಾಗೃಹ ಇಲಾಖೆಯ ಡಿಐಜಿ ಎಂ.ಕೆ. ವಿನೋದ್ ಕುಮಾರ್ ವಿರುದ್ಧ ಕೈದಿಗಳು ಹಾಗೂ ಅವರ ಸಂಬಂಧಿಕರಿಂದ ಲಂಚ ಪಡೆದ ಆರೋಪದಡಿ ವಿಜಿಲೆನ್ಸ್ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ಜೈಲಿನಲ್ಲಿ ಪೆರೋಲ್ ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸಲು ವಿನೋದ್ ಕುಮಾರ್ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ತಿಳಿದುಬಂದಿದ್ದೂ, ಹಣವನ್ನು ನೇರವಾಗಿ ಪಡೆಯುವ ಬದಲು, ತಮ್ಮ ಸಂಬಂಧಿಕರ ಬ್ಯಾಂಕ್ ಖಾತೆಗಳಿಗೆ ಯುಪಿಐ (UPI) ಮೂಲಕ ವರ್ಗಾವಣೆ ಮಾಡಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.
ಇದನ್ನೂ ಓದಿ: ದಾವಣಗೇರಿ | ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ವಾಪಸ್ ಪಡೆಯಲು ಎಫ್.ಎಂ.ಆರ್.ಎ.ಐ.ಪ್ರತಿಭಟನೆ
ವಿಶೇಷವೆಂದರೆ, 2012ರಲ್ಲಿ ನಡೆದ ಆರ್ಎಂಪಿ ನಾಯಕ ಟಿ.ಪಿ. ಚಂದ್ರಶೇಖರನ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಕೋಡಿ ಸುನಿಯ ಸಂಬಂಧಿಯೊಬ್ಬರು ನಡೆಸಿದ ಹಣಕಾಸಿನ ವಹಿವಾಟಿನಿಂದ ಈ ಹಗರಣವನ್ನು ಬಯಲಿಗೆಳೆದಿದೆ ಎಂದು ವಿಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಜೈಲು ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಮಾತ್ರವಲ್ಲದೇ ವಿನೋದ್ ಕುಮಾರ್ ಮತ್ತು ಅವರ ಸಂಬಂಧಿಕರ ಬ್ಯಾಂಕಿನ ವಹಿವಾಟು ವಿವರಗಳು ಸಹ ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. ತನಿಖೆಯ ಭಾಗವಾಗಿ ಕುಮಾರ್ ಅವರನ್ನು ಶೀಘ್ರದಲ್ಲೇ ವಿಚಾರಣೆ ನಡೆಸಲಾಗುವುದು ಎಂದು ವಿಎಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳ (VACB), ತನಿಖೆ ಮುಗಿಯುವವರೆಗೆ ಡಿಐಜಿ ವಿನೋದ್ ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಸರ್ಕಾರಕ್ಕೆ ವಿಎಸಿಬಿ ಶಿಫಾರಸು ಮಾಡಿದೆ.
ಇದನ್ನೂ ನೋಡಿ: ಏನಿದು ದ್ವೇಷ ಅಪರಾಧಗಳ ಮಸೂದೆ? ದ್ವೇಷಾಪರಾಧಕ್ಕೆ ಶಿಕ್ಷೆಯೇನು? Janashakthi Media
