ಬೆಂಗಳೂರು: ಮೀಟರ್ ಬಡ್ಡಿ ದಂಧೆಕೋರರ ಹಾವಳಿ ಮತ್ತೆ ನಗರದಲ್ಲಿ ಹೆಚ್ಚಾಗಿದೆ. ಉದ್ಯಮಿಯೊಬ್ಬರು ಪಡೆದಿದ್ದ 25 ಲಕ್ಷ ರೂ.ಗಳಿಗೆ 80 ಲಕ್ಷ ರೂ. ಬಡ್ಡಿ ವಸೂಲಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಉದ್ಯಮಿ ಅಕ್ಷಯ್ ಅಳವಂಡಿ ಎಂಬುವರು ನೀಡಿದ ದೂರಿನ ಮೇರೆಗೆ ಸಿಸಿಬಿ ಪೊಲೀಸರು ಪ್ರದೀಪ್ ಗೌಡ ಹಾಗೂ ಭಾಸ್ಕರ್ ಗೌಡ ವಿರುದ್ಧ ಕರ್ನಾಟಕ ಲೇವಾದೇವಿದಾರರ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕಪ್ಪತಗುಡ್ಡದ ಸುತ್ತಮುತ್ತಲ ಪ್ರದೇಶ ಪರಿಸರ ಸೂಕ್ಷ್ಮ ವಲಯ: ಎಸ್.ಆರ್.ಹಿರೇಮಠ
ಬನಶಂಕರಿ 2ನೇ ಹಂತದ ನಿವಾಸಿ ಅಕ್ಷಯ್, ಹೊಸ ಉದ್ಯಮ ಸ್ಥಾಪನೆಗಾಗಿ 2024ರಲ್ಲಿ ಪ್ರದೀಪ್ ಗೌಡ ಹಾಗೂ ಭಾಸ್ಕರ್ ಬಳಿ 25 ಲಕ್ಷ ರೂ.ಸಾಲ ಪಡೆದಿದ್ದರು. ಸಾಲ ನೀಡಿದ ಬಳಿಕ ವಾರದ ಬಡ್ಡಿ ಲೆಕ್ಕದಲ್ಲಿ ಹಣ ವಸೂಲಿಗೆ ನಿಂತಿದ್ದ ಆರೋಪಿಗಳು, ಅಕ್ಷಯ್ ಬಳಿ 80 ಲಕ್ಷ ರೂ. ಕಟ್ಟಿಸಿಕೊಂಡಿದ್ದಾರೆ.
ಅಲ್ಲದೆ, ಇನ್ನೂ 70 ಲಕ್ಷ ರೂ. ನೀಡುವಂತೆ ಜೀವ ಬೆದರಿಕೆ ಹಾಕಿದ್ದಾರೆ. 70 ಲಕ್ಷ ರೂ ಕೊಡಲು ವಿಫಲವಾಗಿದ್ದಕ್ಕೆ ಪತ್ನಿಯ ಹೆಸರಿನಲ್ಲಿದ್ದ ಟಾಟಾ ನೆಕ್ಸಾನ್ ಕಾರು ಕಸಿದುಕೊಂಡು ಹೋಗಿದ್ದಾರೆ. ಜತೆಗೆ 29-30 ಫಾರಂಗೆ ಬಲವಂತದಿಂದ ಸಹಿ ಹಾಕಿಸಿಕೊಂಡು ಕಿರುಕುಳ ನೀಡುತ್ತಿದ್ದಾರೆ ಎಂದು ಅಕ್ಷಯ್ ದೂರಿನಲ್ಲಿ ಆರೋಪಿಸಿದ್ದಾರೆ.
ಪರವಾನಗಿ ಪಡೆಯದೆ ಮೀಟರ್ ಬಡ್ಡಿ ವ್ಯವಹಾರ
ಆರೋಪಿಗಳಿಬ್ಬರೂ ಯಾವುದೇ ಪರವಾನಗಿ ಪಡೆಯದೇ ಅಕ್ರಮವಾಗಿ ಬಡ್ಡಿ ವ್ಯವಹಾರ ನಡೆಸುತ್ತಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಪೊಲೀಸರು ಮಾಹಿತಿ ನೀಡಿದರು.
ಇದನ್ನೂ ನೋಡಿ: ಕೌಶಲ್ಯದ ಹೆಸರಲ್ಲಿ ಕಾರ್ಮಿಕ ಮಂಡಳಿಯ ಹಣ ವ್ಯಯ – ಕಾರ್ಮಿಕ ಸಂಘಟನೆಗಳ ಆಕ್ಷೇಪ
