ಲಕ್ನೋ: ಮೇ 15 ಗುರುವಾರ ಬೆಳಿಗ್ಗೆ ದೆಹಲಿಯಿಂದ ಬಿಹಾರಕ್ಕೆ ಹೋಗುತ್ತಿದ್ದ ಡಬಲ್ ಡೆಕ್ಕರ್ ಬಸ್ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಐವರು ಸಾವನ್ನಪ್ಪದ ಘಟನೆ ಲಕ್ನೋದಲ್ಲಿ ಮೋಹನ್ ಲಾಲ್ ಗಂಜ್ ಬಳಿಯ ಕಿಸಾನ್ ಪಥ್ನಲ್ಲಿ ನಡೆದಿದೆ.
ಘಟನೆಯಲ್ಲಿ ಐದು ಜನರು ಜೀವಂತವಾಗಿ ಸುಟ್ಟುಹೋಗಿದ್ದಾರೆ ಎಂದು ವರದಿಯಾಗಿದೆ. ದೆಹಲಿಯಿಂದ ಬಿಹಾರಕ್ಕೆ ಪ್ರಯಾಣಿಸುತ್ತಿದ್ದ ಈ ಬಸ್ನಲ್ಲಿ 60 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ಘಟನೆ ನಡೆಯುತ್ತಿದ್ದಂತೆ ಚಾಲಕ ಮತ್ತು ನಿರ್ವಾಹಕ ಸ್ಥಳದಿಂದ ಪರಾರಿಯಾಗಿದ್ದಾರೆ ಮತ್ತು ತುರ್ತು ನಿರ್ಗಮನ ದ್ವಾರ ತೆರೆಯಲು ವಿಫಲವಾಗಿದೆ ಎಂದು ವರದಿಯಾಗಿದೆ.
ಬಸ್ ಚಲಿಸುತ್ತಿರುವಾಗ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿತು ಆದರೆ ಆ ಸಮಯದಲ್ಲಿ ಹೆಚ್ಚಿನ ಪ್ರಯಾಣಿರು ನಿದ್ರಿಸುತ್ತಿದ್ದರು, ನೋಡ ನೋಡುತ್ತಲೇ ದಟ್ಟವಾದ ಹೊಗೆ ಬಸ್ ತುಂಬಾ ಹರಡತು, ಪ್ರಯಾಣಿಕರು ಎಚ್ಚರಗೊಂಡು ಭಯಭೀತರಾದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ನರೇಗಾ ಕಾರ್ಮಿಕರಿದ್ದ ವಾಹನ ಪಲ್ಟಿ; 28 ಮಂದಿಗೆ ಗಾಯ
ಆ ಸಮಯದಲ್ಲಿ ಕೆಲವು ಪ್ರಯಾಣಿಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಆದರೆ ಹಿಂಭಾಗದಲ್ಲಿ ಕುಳಿತಿದ್ದವರು ಸಿಕ್ಕಿಹಾಕಿಕೊಂಡರು. ತಪ್ಪಿಸಿಕೊಳ್ಳಲು ಕಷ್ಟವಾಗಲು ಪ್ರಮುಖ ಕಾರಣ ಚಾಲಕನ ಕ್ಯಾಬಿನ್ನಲ್ಲಿ ಹೆಚ್ಚುವರಿ ಆಸನವಿದ್ದು, ಅದು ದಾರಿಯನ್ನು ನಿರ್ಬಂಧಿಸಿತ್ತು. ಇದಲ್ಲದೆ, ತುರ್ತು ನಿರ್ಗಮನ ತೆರೆಯಲು ವಿಫಲವಾದ ಕಾರಣ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು ಎಂದು ವರದಿಯಾಗಿದೆ.
ಬೆಂಕಿ ಹೊತ್ತಿಕೊಂಡ ಬಸ್ಸಿನಿಂದ ಪ್ರಯಾಣಿಕರನ್ನು ಕೆಳಗಿಳಿಸಲು ಹತ್ತಿರದ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಸಹಾಯ ಮಾಡಿದರು. ಚಾಲಕ ಮತ್ತು ನಿರ್ವಾಹಕ ಬಸ್ಸಿನಿಂದ ಜಿಗಿದು ಪ್ರಯಾಣಿಕರನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಸ್ಥಳೀಯರ ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಆರು ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಆಗಮಿಸಿದವು ಮತ್ತು ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಹಲವಾರು ಗಂಟೆಗಳ ಪ್ರಯತ್ನ ಬೇಕಾಯಿತು. ಆದರೆ ಅಷ್ಟರೊಳಗೆ ಬಸ್ ಸಂಪೂರ್ಣವಾಗಿ ಸುಟ್ಟುಹೋಗಿತ್ತು. ಪೊಲೀಸರು ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಇದನ್ನೂ ನೋಡಿ: ಮುಸ್ಲಿಮರ ಒಪ್ಪಿಗೆ ಇಲ್ಲದ ಕಾನೂನುಗಳು ಮುಸ್ಲಿಂ ಪರ ಆಗುವುದಿಲ್ಲ – ಬಿ.ಎಂ. ಹನೀಫ್ Janashakthi Media