ವರುಣ ವಿಧಾನಸಭಾ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧಿಸುವ ಕುರಿತು ಬಿಎಸ್‌ವೈ ಸ್ಪಷ್ಟನೆ

ಬೆಂಗಳೂರು : ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ವರುಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಗೊಂದಲಕ್ಕೆ ತೆರೆ ಬಿದ್ದಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವುದು ಖಚಿತವಾಗುತ್ತಿರುವಂತೆ, ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿತ್ತು.

ಶುಕ್ರವಾರ ಮೈಸೂರಿಗೆ ಬಂದ ಬಿ ವೈ ವಿಜಯೇಂದ್ರ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡುತ್ತ, ರಾಜ್ಯನಾಯಕರು ಏನೇ ಶಿಫಾರಸು ಮಾಡಿದರೂ ಹೈಕಮಾಂಡ್ ತೀರ್ಮಾನವೇ ಅಂತಿಮ, ಹೈಕಮಾಂಡ್ ಎಲ್ಲಿ ಹೇಳುತ್ತದೋ ಅಲ್ಲಿ ಸ್ಪರ್ಧಿಸುತ್ತೇನೆ ಎಂದಿದ್ದರು.
ರಾಜ್ಯದ ಜನತೆ ವರುಣಾ ಕ್ಷೇತ್ರದ ಮೂಲಕ ನನ್ನನ್ನು ಗುರುತಿಸಿದರೆ, ಶಿಕಾರಿಪುರ ಕ್ಷೇತ್ರದ ಜನತೆ ತಂದೆಯ ಮೂಲಕ ನನಗೆ ಪ್ರೀತಿ, ವಿಶ್ವಾಸ ತೋರಿಸಿದ್ದಾರೆ. ಈಗಾಗಲೇ ಶಿಕಾರಿಪುರ ತಾಲ್ಲೂಕಿನ ಗ್ರಾಮಗಳಲ್ಲಿ ಒಂದು ಸುತ್ತಿನ ಓಡಾಟ ನಡೆಸಿದ್ದು, ಇನ್ನೆರಡು ಮೂರು ದಿನಗಳಲ್ಲಿ ಮತ್ತೊಂದು ಸುತ್ತಿನ ಸಂಚಾರ ನಡೆಸುತ್ತೇನೆ ಎಂದು ತಿಳಿಸಿದ್ದರು.

ಇದನ್ನೂ ಓದಿ : ವಿಜಯೇಂದ್ರ ಸ್ಪರ್ಧಿಸಿ ಗೆದ್ರೆ ರಾಜಕೀಯ ನಿವೃತ್ತಿ

ವಿಜಯೇಂದ್ರರ ಹೇಳಿಕೆ ಹೊರಬರುತ್ತಲೇ ಬೆಂಗಳೂರಿನಲ್ಲಿ ಶುಕ್ರವಾರವೇ ಮೈಸೂರಿಗೆ ಹೊರಡುವ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿ ಎಸ್ ಯಡಿಯೂರಪ್ಪ ಸಂಪೂರ್ಣ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ವಿಜಯೇಂದ್ರಗೆ ಒತ್ತಡ ಇರುವುದು ಹೌದು, ಆದರೆ ವಿಜಯೇಂದ್ರ ವರುಣಾದಲ್ಲಿ ಸ್ಪರ್ಧಿಸುವುದಿಲ್ಲ, ಶಿಕಾರಿಪುರದಿಂದಲೇ ಸ್ಪರ್ಧಿಸಬೇಕು, ನನ್ನ ಕ್ಷೇತ್ರದಲ್ಲಿಯೇ ನಿಂತುಕೊಳ್ಳಬೇಕೆಂದು ಹೈಕಮಾಂಡ್ ಗೆ ನಾನು ಶಿಫಾರಸು ಮಾಡುತ್ತೇನೆ ಎಂದಿದ್ದಾರೆ.
ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಹಲವರ ಒತ್ತಡವಿದ್ದರೂ ಶಿಕಾರಿಪುರದಿಂದಲೇ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ ಎಂದು ಈ ಹಿಂದೆಯೇ ಹೇಳಿದ್ದೆ. ಯಾವುದೇ ಕಾರಣಕ್ಕೂ ವರುಣಾಕ್ಕೆ ಹೋಗುವ ಪ್ರಶ್ನೆಯಿಲ್ಲ. ಶಿಕಾರಿಪುರ ಸ್ಪರ್ಧೆ ಮಾಡುವ ಬಗ್ಗೆ ಹೈಕಮಾಂಡ್ ಗೂ ತಿಳಿಸುತ್ತೇನೆ, ವಿಜಯೇಂದ್ರಗೂ ತಿಳಿಸುತ್ತೇನೆ ಎಂದರು.
ಇನ್ನು ಮೂರ್ನಾಲ್ಕು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ಸಹ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *