ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಬಿಎಸ್‌ವೈ ನೇಮಕ ? ಸಮುದಾಯ ಮತಗಳ ಓಲೈಕೆಗೆ ಬಿಜೆಪಿ ಮಾಸ್ಟರ್‌ ಪ್ಲಾನ್‌!

ಬೆಂಗಳೂರು : ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖವಾಗಿ ವೀರಶೈವ ಲಿಂಗಾಯತ ಮತಗಳು ಕೈ ತಪ್ಪಿಬಹುದು ಎಂಬ ಭೀತಿಗೆ ಒಳಗಾಗಿರುವ ಆಡಳಿತರೂಡ
ಬಿಜೆಪಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲು ಮುಂದಾಗಿದೆ.

ವೀರಶೈವ ಲಿಂಗಾಯಿತ ಸಮುದಾಯದ ಏಕಮೇವ ಅದ್ವಿತೀಯ ನಾಯಕರಾಗಿರುವ ಯಡಿಯೂರಪ್ಪ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದರೆ ಮುನಿಸಿಕೊಂಡಿರುವ ಸಮುದಾಯವನ್ನು ಓಲೈಕೆ ಮಾಡಿಕೊಳ್ಳಬಹುದೆಂಬ ಲೆಕ್ಕಾಚಾರ ಇದರಲ್ಲಿ ಅಡಗಿದೆ.
ಸದ್ಯದಲ್ಲೇ ಅಧಿಕೃತವಾಗಿ ಪಕ್ಷದ ವತಿಯಿಂದಲೇ ಘೋಷಣೆಯಾಗಲಿದ್ದು, ಬಿಜೆಪಿಯು ಯಡಿಯೂರಪ್ಪ ಅವರನ್ನು ಯಾವುದೇ ಸಂದರ್ಭದಲ್ಲೂ ಕಡೆಗಣಿಸಿಲ್ಲ ಎಂಬ ಸಂದೇಶವನ್ನು ರಾಜ್ಯದ ಜನತೆಗೆ ನೀಡಬೇಕೆಂದು ಆರ್.ಎಸ್.ಎಸ್ ನ ಚಿಂತಕರ ಛಾವಡಿ ಬಿಜೆಪಿಗೆ ಸಲಹೆ ನೀಡಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಕಾಂಗ್ರೆಸ್ ಚುನಾವಣೆಯ ಪ್ರಚಾರದಲ್ಲಿ ಯಡಿಯೂರಪ್ಪ ಅವರನ್ನು ಬಿಜೆಪಿ ಅಧಿಕಾರದಿಂದ ಕಿತ್ತುಹಾಕಿ ಕಣ್ಣೀರು ಹಾಕಿಸಿದೆ. ಸ್ವಾಭಿಮಾನಿ ವೀರಶೈವ ಲಿಂಗಾಯಿತರು ಎಚ್ಚೆತ್ತುಕೊಳ್ಳಬೇಕೆಂದು ಪದೇ ಪದೇ ಪ್ರಸ್ತಾಪ ಮಾಡುತ್ತಿರುವುದು ಕಮಲ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ಸೋಮವಾರ ರಾಜ್ಯಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿಗಳಾದ ಎಸ್.ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲ್ ಅವರನ್ನು ಅವಮಾನಿಸಿತ್ತು ಎನ್ನುವ ಮೂಲಕ ಆ ಸಮುದಾಯದ ಮತಗಳು ಕೈ ಪಕ್ಷದತ್ತ ಚದರದಂತೆ ರಾಜಕೀಯ ಜಾಣ್ಮೆ ಮೆರೆದಿದ್ದರು. ಅಲ್ಲದೇ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ವೇಳೆ ಯಡಿಯೂರಪ್ಪ ಅವರ ನಾಯಕತ್ವವನ್ನು ಗುಣಗಾನ ಮಾಡಿದ್ದರು. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಅವರುಗಳು ಯಡಿಯೂರಪ್ಪ ಅವರ ಬಗ್ಗೆ ಅನುಕಂಪದ ಮಾತುಗಳನ್ನಾಡಿ, ಕೇವಲ ಬಿಜೆಪಿಗೆ ಮತ ತರಲು ಬಿ.ಎಸ್.ವೈ ಬೇಕೆ? ಅವರನ್ನು ಅಧಿಕಾರದಿಂದ ಏಕೆ ಕಿತ್ತು ಹಾಕಿದ್ದೀರಿ? ಕಣ್ಣೀರು ಹಾಕಿಸಿದ್ದು ಏಕೆ? ವೀರಶೈವ ಲಿಂಗಾಯಿತರು ಈ ಬಾರಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದ್ದರು.ಇದು ಪಕ್ಷಕ್ಕೆ ಮುಳುವಾಗಲಿದೆ ಎಂಬ ಸುಳಿವು ಸಿಗುತ್ತಿದ್ದಂತೆ ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾಗಿರುವ ಬಿಜೆಪಿ ವರಿಷ್ಠರು ಬಿ.ಎಸ್.ವೈ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿ, ಮುಂಚೂಣಿಗೆ ತರಲು ಮುಂದಾಗಿದ್ದಾರೆ.

ಪಂಚಮಶಾಲಿ ಹೊಡೆತದ ಭೀತಿ: ಈ ಬೆಳವಣಿಗೆಗಳ ನಡುವೆಯೇ ಬಿಜೆಪಿಗೆ ಪಂಚಮಶಾಲಿ ಮೀಸಲಾತಿ ಹೋರಾಟ ಕೂಡ ಬಿಟ್ಟುಬಿಡದೇ ಕಾಡುತ್ತಿದೆ. ಅಂದಾಜು ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದಲ್ಲಿ 40 ವಿಧಾನಸಭಾ ಕ್ಷೇತ್ರದಲ್ಲಿ ಈ ಸಮುದಾಯ ಸೋಲು-ಗೆಲುವನ್ನು ತೀರ್ಮಾನಿಸುವಷ್ಟು ಸಾಮರ್ಥ್ಯವನ್ನು ಸಮುದಾಯ ಹೊಂದಿದೆ. ಕಳೆದ 2 ವರ್ಷಗಳಿಂದ ಪಂಚಮಶಾಲಿ ಸಮುದಾಯದ ಜಯಮೃತ್ಯುಂಜಯ ಸ್ವಾಮೀಜಿ ರಾಜ್ಯಾದ್ಯಂತ ಮೀಸಲಾತಿಗಾಗಿ ಹೋರಾಟ ನಡೆಸುತ್ತಲ್ಲೇ ಇದ್ದಾರೆ. ನಮ್ಮ ಸಮುದಾಯಕ್ಕೆ ನ್ಯಾಯ ಒದಗಿಸದಿದ್ದರೆ ಬರಲಿರುವ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕದಂತೆ ಕರೆ ಕೊಡುವುದಾಗಿ ಎಚ್ಚರಿಕೆ ಕೊಟ್ಟಿದ್ದರು. ಯಡಿಯೂರಪ್ಪ ಇಲ್ಲದೇ ಪ್ರಚಾರಕ್ಕೆ ಹೋದರೆ ಪಕ್ಷಕ್ಕೆ ಹಿನ್ನಡೆಯಾಗಬಹುದೆಂದು ಬಿಜೆಪಿಯ ಆಂತರಿಕ ಸಮೀಕ್ಷೆಗಳು ಕೂಡ ವರದಿ ಕೊಟ್ಟಿವೆ. ಅಗ ಕಾಂಗ್ರೆಸ್ ಒಕ್ಕಲಿಗ, ಕುರುಬ, ಲಿಂಗಾಯಿತ, ದಲಿತ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲ್ಪಸಂಖ್ಯಾತ ಸಮುದಾಯದ ಪ್ರಮುಖರನ್ನು ಮುಂಚೂಣಿಗೆ ಬಿಟ್ಟು ಮತ ಬೇಟೆಯಾಡುತ್ತಿದೆ.

ಇದೆಲ್ಲವನ್ನೂ ಪರಿಗಣಿಸಿರುವ ಆರ್.ಎಸ್.ಎಸ್ ವರಿಷ್ಠರು ಕಡೆ ಪಕ್ಷ ಚುನಾವಣೆ ಮುಗಿಯುವವರೆಗೂ ಯಡಿಯೂರಪ್ಪ ಅವರನ್ನು ಗೌರವದಿಂದ ನಡೆಸಿಕೊಳ್ಳಿ ಎಂದು ಸಲಹೆ ಕೊಟ್ಟಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮುದಾಯದ ಮತಗಳನ್ನು ಸೆಳೆಯುವ ಸಾಮರ್ಥ್ಯ ಇಲ್ಲದಿರುವುದು ಒಕ್ಕಲಿಗ ಮತಗಳು ನಿರೀಕ್ಷಿತ ಪ್ರಮಾಣದಲ್ಲಿ ಬಿಜೆಪಿ ಕಡೆ ವಾಲದಿರುವುದು ಬಿ.ಎಸ್.ವೈ ಅವರನ್ನು ಮುಂಚೂಣಿಗೆ ತಂದಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಅವರನ್ನೇ ಹೆಚ್ಚು ಬಿಂಬಿಸಲು ತಯಾರಿ ನಡೆಸಿದೆ.

Donate Janashakthi Media

Leave a Reply

Your email address will not be published. Required fields are marked *