ಭ್ರಷ್ಟಚಾರ ಆರೋಪ ಪ್ರಕರಣ : ದೇಶ್ಮುಖ್ ರಾಜೀನಾಮೆ ಅಂಗೀಕಾರ, ವಾಲ್ಸೆ ಗೆ ಹೆಚ್ಚುವರಿ ಹೊಣೆಗಾರಿಕೆ

ಮುಂಬೈ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​ಮುಖ್ ರಾಜೀನಾಮೆಯನ್ನು ರಾಜ್ಯದ ರಾಜ್ಯಪಾಲರು ಅಂಗೀಕರಿಸಿದ್ದಾರೆ.

ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿ ಆರೋಪಿ ಸ್ಥಾನದಲ್ಲಿ ಇರುವ ಅನಿಲ್ ದೇಶ್​ಮುಖ್ ಎಪ್ರಿಲ್ 05 ರಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ದೇಶ್​ಮುಖ್ ರಾಜೀನಾಮೆ ಈಗ ಅಂಗೀಕಾರವಾಗಿದ್ದು, ದಿಲೀಪ್​ ವಾಲ್ಸೆ ಪಾಟೀಲ್​ಗೆ ಮಹಾರಾಷ್ಟ್ರ ಗೃಹ ಸಚಿವ ಸ್ಥಾನದ ಹೊಣೆ ನೀಡಲಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶಿಫಾರಸಿನ ಮೇರೆಗೆ ದಿಲೀಪ್​ ವಾಲ್ಸೆಗೆ ಗೃಹ ಖಾತೆ ಜವಾಬ್ದಾರಿ ವಹಿಸಲಾಗಿದೆ.

ಘಟನೆಯ ಹಿನ್ನೆಲೆ : ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​ಮುಖ್ ವಿರುದ್ಧ ಪ್ರತಿ ತಿಂಗಳು ₹ 100 ಕೋಟಿ ಹಣ ವಸೂಲಿ ಒತ್ತಡ ಆರೋಪಿಸಿ ಪತ್ರ ಬರೆದಿದ್ದ ಪರಮ್​ವೀರ್ ಸಿಂಗ್ ಪ್ರಕರಣ ಸಿಬಿಐ ಮೆಟ್ಟಿಲೇರಿತ್ತು. 15 ದಿನದ ಒಳಗೆ ಪ್ರಾಥಮಿಕ ತನಿಖೆ ನಡೆಸಿ ವರದಿ ನಿಡುವಂತೆ ಸಿಬಿಐಗೆ ಬಾಂಬೆ ಹೈಕೋರ್ಟ್ ಸೂಚನೆ ನೀಡಿದೆ. ಈ ಹಿಂದೆ ನಡೆದಿದ್ದ ವಿಚಾರಣೆಯಲ್ಲಿ ಇನ್ನೂ ಗೃಹ ಸಚಿವ ಅನಿಲ್ ದೇಶ್​ಮುಖ್ ವಿರುದ್ಧ ಎಫ್​ಐಆರ್ ದಾಖಲಿಸಿಲ್ಲ ಎಂದು ಪ್ರಶ್ನಿಸಿತ್ತು.

ಅಮಾನತ್ತುಗೊಂಡಿರುವ ಎಎಸ್ಐ​ ಸಚಿನ್ ವಾಜೆ ಬಳಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್, ಬಾರ್ ಮತ್ತು ರೆಸ್ಟೊರೆಂಟ್​​ಗಳಿಂದ ಪ್ರತಿ ತಿಂಗಳು ₹ 100 ಕೋಟಿ ಹಣ ವಸೂಲಿ ಮಾಡುವಂತೆ ಒತ್ತಡ ಹೇರಿದ್ದರು ಎಂದು ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್​ವೀರ್ ಸಿಂಗ್ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದರು. ಈ ಗಂಭೀರ ಆರೋಪದಿಂದ ಮಹಾರಾಷ್ಟ್ರ ಶಿವಸೇನೆ-ಎನ್​ಸಿಪಿ ಮೈತ್ರಿಕೂಟದ ಸರ್ಕಾರಕ್ಕೆ ಭಾರೀ ಮುಖಭಂಗವಾಗಿತ್ತು.

ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅವರು ತಮ್ಮ ವಿರುದ್ಧ ಮಾಡಿರುವ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿದ ಹಿನ್ನೆಲೆಯಲ್ಲಿ ಅನಿಲ್ ದೇಶ್​ಮುಖ್ ರಾಜೀನಾಮೆ ನೀಡಿದ್ದರು. ಅವರ ರಾಜೂನಾಮೆ ಅಂಗೀಕಾರವಾಗಿದ್ದು, ಸಚಿವ ದಿಲೀಪ್​ ವಾಲ್ಸೆ ಪಾಟೀಲ್​ಗೆ ಮಹಾರಾಷ್ಟ್ರ ಗೃಹ ಸಚಿವ ಸ್ಥಾನದ ಹೊಣೆ ನೀಡಲಾಗಿದೆ.

ದಿಲೀಪ್ ವಾಲ್ಸೆ ಪಾಟೀಲ್ ಯಾರು?: ಪ್ರಸ್ತುತ ಮಹಾರಾಷ್ಟ್ರದ ಅಂಬೆಗಾಂವ್ ಕ್ಷೇತ್ರದಿಂದ, ಎನ್​ಸಿಪಿ ಪಕ್ಷದ ಶಾಸಕರಾಗಿರುವ ದಿಲೀಪ್ ವಾಲ್ಸೆ ಪಾಟೀಲ್, 6 ಬಾರಿ ಎಂಎಲ್​ಎ ಸ್ಥಾನ ಪಡೆದ ಹಿರಿಯ, ಅನುಭವಿ ರಾಜಕಾರಣಿ. 1999ರಿಂದ 2009ರ ವರೆಗೆ ವಿವಿಧ ಸಚಿವ ಸ್ಥಾನ ನಿಭಾಯಿಸಿ ಅನುಭವವನ್ನೂ ಹೊಂದಿದ್ದಾರೆ. ಈ ಮೊದಲು, ಹಣಕಾಸು, ಇಂಧನ, ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದವರು. ವಾಲ್ಸೆ, ಎನ್​ಸಿಪಿ ನಾಯಕ ಹಾಗೂ ಮಹಾರಾಷ್ಟ್ರದ ಪ್ರಭಾವಿ ರಾಜಕಾರಣಿ ಶರದ್ ಪವಾರ್​ಗೆ ಆಪ್ತರೂ ಹೌದು. ಎನ್​ಸಿಪಿ ಮತ್ತು ಶಿವಸೇನಾ ನೇತೃತ್ವದ ಈಗಿನ ಸರ್ಕಾರದಲ್ಲಿ ಅಬಕಾರಿ ಹಾಗೂ ಕಾರ್ಮಿಕ ಸಚಿವರಾಗಿ ಕೆಲಸ ನಿರ್ವಹಿಸುತ್ತಿದ್ದ ದಿಲೀಪ್ ವಾಲ್ಸೆಗೆ ಗೃಹ ಖಾತೆ ಹೆಚ್ಚುವರಿ ಜವಾಬ್ದಾರಿಯಾಗಿ ಒದಗಿದೆ. ದಿಲೀಪ್ ವಾಲ್ಸೆ ಪಾಟೀಲ್ ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *