ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಹಲವು ಮೃತದೇಹಗಳನ್ನು ಹೂತು ಹಾಕಿದ್ದೇನೆ ಎಂದಿದ್ದ ಅನಾಮಧೇಯ ವ್ಯಕ್ತಿ ತೋರಿಸಿದ ಜಾಗಗಳಲ್ಲಿ ತನುಖೆ ನಡೀತಿದೆ. ಉತ್ಖನನ ಕಾರ್ಯವನ್ನು ತೀವ್ರಗೊಳಿಸಿರುವ ಎಸ್ಐಟಿ, ಆಗಸ್ಟ್ 4ರಂದು ಅನಾಮಧೇಯ ವ್ಯಕ್ತಿ ತೋರಿಸಿರುವ ಬಂಗ್ಲಗುಡ್ಡ ಎಂಬ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಒಂದು ಅಸ್ಥಿಪಂಜರ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಕುರಿತು ಎಸ್ಐಟಿ ಅಧಿಕಾರಿಗಳು ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ.
ಇದೀಗ ಪ್ರಕರಣದ ತನಿಖೆ ತೀವ್ರಗೊಂಡಿರುವ ಹೊತ್ತಲ್ಲೇ ಸ್ಫೋಟಕ ವಿಚಾರವೊಂದು ಹೊರಬಿದ್ದಿದೆ. ಈವರೆಗೆ ಧರ್ಮಸ್ಥಳ ಗ್ರಾಮದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 9 ಅಸ್ಥಿಪಂಜರಗಳು ಪತ್ತೆಯಾಗಿದೆ ಎಂದು ಹೇಳಲಾಗಿದ್ದು, ಅಸ್ಥಿಪಂಜರಗಳನ್ನು ಮಣಿಪಾಲದ ಕಸ್ತೂರ್ ಬಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಸಾರಿಗೆ ಮುಷ್ಕರ : ರಾಜ್ಯಾದ್ಯಂತ ಬಸ್ಸುಗಳ ಸೇವೆ ವ್ಯತ್ಯಯ
ಆ ಒಂಬತ್ತು ಅಸ್ಥಿಪಂಜರದ ಪೈಕಿ ಒಂದು ಪೋಸ್ಟ್ ಮಾರ್ಟಮ್ ಆಗಿರೋ ತಲೆಬುರುಡೆಯಾಗಿದ್ದು, ಉಳಿದ ಎಂಟು ಅಸ್ಥಿಪಂಜರದಲ್ಲಿ ಪೋಸ್ಟ್ ಮಾರ್ಟಮ್ ಆದ ಗುರುತಿಲ್ಲ. ಅಂದರೆ 8 ಅಸ್ಥಿಪಂಜರ ಸಹಜ ಸಾವೋ ಅಥವಾ ಕೊಲೆಯೋ ಎಂಬ ಬಗ್ಗೆ ಇನ್ನಷ್ಟೇ ತನಿಖೆಯಾಗಬೇಕಾಗಿದೆ.
ಇನ್ನು ಸಿಕ್ಕಿರುವ ಒಂಬತ್ತು ಅಸ್ಥಿಪಂಜರದಲ್ಲಿ ಎರಡು 10 ಹಾಗೂ 12 ವರ್ಷದ ಬಾಲಕಿಯರ ಕಳೇಬರ ಎಂದು ಹೇಳಲಾಗಿದೆ. ಇನ್ನೆರಡು ಅಸ್ಥಿಪಂಜರ ಯುವಕರದ್ದಾಗಿದ್ದು, ಉಳಿದ ಆರು ಅಸ್ಥಿಪಂಜರ ಯುವತಿಯರದ್ದು ಎಂಬ ಮಾಹಿತಿ ಲಭ್ಯವಾಗಿದೆ.

ಅನಾಮಧೇಯ ವ್ಯಕ್ತಿ ಗುರುತಿಸಿದ್ದ 13 ಜಾಗದಲ್ಲಿ 6ನೇ ಪಾಯಿಂಟ್ನಿಂದ ಅಸ್ಥಿಪಂಜರ ಸಿಗೋಕೆ ಶುರುವಾಗಿತ್ತು. ಇದೀಗ 6ರಿಂದ 10ರ ಪಾಯಿಂಟ್ನವರೆಗೆ ಒಟ್ಟು 9 ಅಸ್ಥಿಪಂಜರ ಸಿಕ್ಕಿವೆ ಎಂದು SIT ಮೂಲಗಳಿಂದ ಮಾಹಿತಿ ದೊರೆತಿದೆ.
ಸದ್ಯ ಸಿಕ್ಕಿರುವ ಅಸ್ಥಿಪಂಜರಗಳನ್ನ ಮಣಿಪಾಲದ ಕಸ್ತೂರ್ ಬಾ ಆಸ್ಪತ್ರೆಯಲ್ಲಿ ಶೇಖರಿಸಿಡಲಾಗಿದೆಯಂತೆ. ಮುಂದಿನ ದಿನದಲ್ಲಿ ಇವಗಳನ್ನು ಪುಣೆಯಲ್ಲಿರುವ FSLಗೆ ರವಾನಿಸುವ ಸಾಧ್ಯತೆ ಹೆಚ್ಚಿದೆ. ಈ ಎಲ್ಲದರ ಬಗ್ಗೆ SIT ಅಧಿಕಾರಿಗಳು ಶೀಘ್ರವೇ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಸದ್ಯ ಸಾಕ್ಷಿಗಳನ್ನ ಅರಸಿ SIT ಟೀಂ ಹೊರಟಿದ್ದು, ಇಂದು ಮತ್ತೆ ಉಳಿದಿರುವ 3 ಭಾಗದಲ್ಲಿ ಉತ್ಖನನ ಕಾರ್ಯ ಮುಂದುವರಿಯಲಿದೆ.
ಇದನ್ನೂ ನೋಡಿ: ಧರ್ಮಸ್ಥಳದಲ್ಲಿ ಅಸ್ಥಿಪಂಜರ ಪತ್ತೆ! ಹೂತಿಟ್ಟ ಸತ್ಯ ಹೊರ ಬರಲಿ!! Janashakthi Media
