ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಗೆ ರೂ.200 ಕೋಟಿ ಬಿಡುಗಡೆ ಮಾಡಲಾಗಿದೆ. ಬಿಎಂಟಿಸಿ ನೌಕರರ ಭವಿಷ್ಯ ನಿಧಿ, ಉಪ ಧನ, ನಿವೃತ್ತಿ ಪಿಂಚಣಿ, ಮರಣ ಹೊಂದಿದ ಬಿಎಂಟಿಸಿ ನೌಕರರ ಗಳಿಕೆ ರಜೆ ಮರುಪಾವತಿ ಮಾಡಲಾಗಿದೆ. ಬಾಕಿಗಳನ್ನು ಪಾವತಿಸಲು ಹಣ ಬಿಡುಗಡೆ ಮಾಡಿ ಆದೇಶಿಸಲಾಗಿದ್ದು, ಈ ಬಗ್ಗೆ ಟ್ವೀಟ್ ಮೂಲಕ ವಿಷಯ ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ @BMTC_BENGALURU ನೌಕರರ ಭವಿಷ್ಯನಿಧಿ , ಉಪಧನ, ನಿವೃತ್ತ/ಮರಣ ಹೊಂದಿದ ನೌಕರರ ಗಳಿಕೆ ರಜೆ ಮರುಪಾವತಿ ಹಾಗೂ ಪೂರೈಕೆದಾರರ ಬಿಲ್ಲುಗಳ ಹಳೆಯ ಬಾಕಿ ತೀರುವಳಿ ಸಲುವಾಗಿ ರೂ. 20000.00 ಲಕ್ಷಗಳನ್ನು ( ಇಪ್ಪತ್ತು ಸಾವಿರ ಲಕ್ಷಗಳು ಮಾತ್ರ) ಈ ಕೆಳಕಂಡಂತೆ ಬಳಸಲು ಬಿಡುಗಡೆಗೊಳಿಸಿ ಆದೇಶಿಸಿದೆ.
— B Sriramulu (@sriramulubjp) February 9, 2022
ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ನೂತನ ಬಸ್ಗೆ ಹಸಿರುನಿಶಾನೆ ತೋರುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಳ್ಳಾರಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಕ್ಷೇತ್ರಕ್ಕೆ ಸಾರಿಗೆ ಇಲಾಖೆಯು ಈ ಮೊದಲು, ಬಳ್ಳಾರಿಯಿಂದ ಸವದತ್ತಿಗೆ ನೂತನ ಬಸ್ ಸೇವೆಯನ್ನು ಫೆಬ್ರವರಿ 07 ರಂದು ಆರಂಭಿಸಿತ್ತು.
ಬಳ್ಳಾರಿಯಿಂದ ಬೆಳಗ್ಗೆ 8ಕ್ಕೆ ಹೊರಡಲಿರುವ ಬಸ್ ಸವದತ್ತಿಗೆ ಮಧ್ಯಾಹ್ನ 2ಕ್ಕೆ ತಲುಪಲಿದೆ. ಸವದತ್ತಿಯಿಂದ ಬಳ್ಳಾರಿಗೆ ಮಧ್ಯಾಹ್ನ 2:30ಕ್ಕೆ ಹೊರಡಲಿದೆ. 263 ರೂ.ಗಳಷ್ಟು ಟೀಕೆಟ್ ದರ ಇದೆ. ಬಳ್ಳಾರಿಯಿಂದ ಹೊಸಪೇಟೆ, ಕೊಪ್ಪಳ, ಗದಗ, ನವಲಗುಂದ, ಯಲ್ಲಮ್ಮನಗ ಗುಡ್ಡದ ಮಾರ್ಗವಾಗಿ ಸವದತ್ತಿಗೆ ತೆರಳಲಿದೆ.
ಬಸ್ ಸಂಚಾರಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಸಚಿವ ಶ್ರೀರಾಮುಲು ಬಳ್ಳಾರಿಯಿಂದ ತಿರುಪತಿ, ಶ್ರೀಶೈಲ, ಧರ್ಮಸ್ಥಳ, ಮಂತ್ರಾಲಯ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಬಸ್ ಸೇವೆ ಆರಂಭಿಸಲಾಗಿದೆ ಎಂದು ಹೇಳಿದ್ದರು.
ಈ ಬಾರಿಯ ಬಜೆಟ್ನಲ್ಲಿ ಸಾರಿಗೆ ಇಲಾಖೆಯನ್ನು ಮುಂದಿನ ದಿನಗಳಲ್ಲಿ ಲಾಭದಯಕವನ್ನಾಗಿ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ನೇಮಿಸಲಾದ ಶ್ರೀನಿವಾಸ್ ಮೂರ್ತಿ ನೇತೃತ್ವದ ಉನ್ನತ ಸಮಿತಿ ವರದಿ ನೀಡಿದ್ದು, ಆ ವರದಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದರ ಮೂಲಕ ಇಲಾಖೆಯನ್ನು ಲಾಭದಾಯಕವನ್ನಾಗಿ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದರು.
