ಕಲಬುರಗಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ದಿನನಿತ್ಯ ಬೆಲೆ ಏರಿಕೆ ಮಾಡುತ್ತಲೇ ಬಂದಿದೆ ಇದರಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ ಎಂದು ಮಾಜಿ ಶಾಸಕ ಸುಭಾಷ ಆರ್ ಗುತ್ತೇದಾರ ಆರೋಪಿಸಿದ್ದಾರೆ.
ಶನಿವಾರ ಆಳಂದ ಪಟ್ಟಣದ ಬಸ್ ನಿಲ್ದಾಣದ ಎದುರು ಆಳಂದ ಮಂಡಲ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಚುನಾವಣೆ ಪೂರ್ವದಲ್ಲಿ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಈಗ ಅವುಗಳನ್ನು ಅನುಷ್ಠಾನಕ್ಕೆ ತರಲು ಹೆಣಗಾಡುತ್ತಿದೆ. ಗ್ಯಾರಂಟಿಗಳಿಗೆ ಹಣ ಹೊಂದಿಸಲು ಮೊದಲು ಎಸ್ಸಿಪಿ ಟಿಎಸ್ಪಿ ಹಣ ಬಳಸಿದ ಸರ್ಕಾರ ಈಗ ಒಂದೊಂದಾಗಿ ದಿನಬಳಕೆಯ ವಸ್ತುಗಳ ಬೆಲೆ ಏರಿಸುತ್ತಿದೆ ಇದರಿಂದ ಜನಸಾಮಾನ್ಯರು ಜೀವನ ನಡೆಸುವುದು ಕಷ್ಟವಾಗುತ್ತಿದೆ ಎಂದು ಹೇಳಿದರು.
ಒಂದು ಬೆರಳಿನಿಂದ ಕೊಟ್ಟು ನಾಲ್ಕು ಬೆರಳಿನಿಂದ ಕಸಿದುಕೊಳ್ಳುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಜನಸಾಮಾನ್ಯರ ಬದುಕು ದುಸ್ತರವಾಗಿದೆ ಅಲ್ಲದೇ ಆಡಳಿತ ಯಂತ್ರವೂ ಸಂಪೂರ್ಣ ಕುಸಿದು ಹೋಗಿದೆ. ಕೊಡಗಿನಲ್ಲಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಶಾಸಕರ ಹೆಸರು ಡೆಥನೋಟ್ನಲ್ಲಿ ಬರೆದಿದ್ದಾನೆ ಆದರೆ ಎಫ್ಐಆರ್ನಲ್ಲಿ ಅವರ ಹೆಸರು ಸೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿ :-ಮೈಸೂರು ಏರ್ಪೋರ್ಟ್ ರನ್ ವೇ ವಿಸ್ತರಣೆ ಕೆಲಸ ಆರಂಭಿಸಿ: ವಿಮಾನಯಾನ ಸಚಿವರಿಗೆ ಸಿದ್ದರಾಮಯ್ಯ ಮನವಿ ಪತ್ರ
ಪ್ರತಿಭಟನೆಯಲ್ಲಿ ಆಳಂದ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ಸುನಿತಾ ಚಂದ್ರಶೇಖರ ಪೂಜಾರಿ, ಮುಖಂಡ ಆನಂದರಾವ ಪಾಟೀಲ ಮಲ್ಲಣ್ಣಾ ನಾಗೂರೆ, ಅಣ್ಣಾರಾವ ಪಾಟೀಲ, ಚಂದ್ರಕಾಂತ ಭೂಸನೂರ, ಸಂತೋಷ ಹಾದಿಮನಿ, ರಾಜಶೇಖರ ಘೂಳ, ಆದಿನಾಥ ಹೀರಾ, ರಘುನಾಥ ಪಾಟೀಲ ಸಿದ್ದು ಹಿರೋಳಿ, ಶಿವಪುತ್ರ ನಡಗೇರಿ, ಶರಣಗೌಡ ಪಾಟೀಲ ದೇವಂತಗಿ, ಸಚೀನ್ ಬಿರಾದಾರ ಶಿವರಾಜ ಅವರಳ್ಳಿ, ಧನರಾಜ ಭಂಡಗಾರ, ಅಂಬಾರಾಯ ಚಲಗೇರಿ, ಮಲ್ಲಿನಾಥ ಪರೇಣಿ, ಗಣೇಶ ಓಣಮಶೆಟ್ಟಿ, ಪ್ರಕಾಶ ಮಾನೆ, ಸೀತಾರಾಮ ಜಮಾದಾರ, ಸುನೀಲ ಹಿರೋಳಿಕರ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.