ಬುಡಕಟ್ಟು ಯುವಕನ ಮೇಲೆ ಮೂತ್ರ ವಿಸರ್ಜನೆ ಖಂಡಿಸಿ ಪಕ್ಷ ತೊರೆದ ಬಿಜೆಪಿ ನಾಯಕ!

ಭೋಪಾಲ್:‌ ಕಳೆದ ವಾರ ಬುಡುಕಟ್ಟು ಸಮುದಾಯದ ವ್ಯಕ್ತಿಯ ಮೇಲೆ ಬಿಜೆಪಿ ನಾಯಕನೊಬ್ಬ ಮೂತ್ರ ವಿಸರ್ಜನೆ ಮಾಡಿದ ಪ್ರಕರಣ ಇಡೀ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಇಂತಹ ಅನಾಗರಿಕ ವರ್ತನೆಯ ವಿರುದ್ಧ ಎಲ್ಲೆಡೆ ಆಕ್ರೋಶವೂ ಕೇಳಿಬಂದಿತ್ತು. ಇದೀಗ ಇದೇ ಘಟನೆಯಿಂದ ಮನನೊಂದು ಬಿಜೆಪಿ ನಾಯಕರೊಬ್ಬರು ಪಕ್ಷವನ್ನು ತೊರೆದು ಹೊರಬಂದಿದ್ದಾರೆ.

ಮಧ್ಯಪ್ರದೇಶದ ಬಿಜೆಪಿ ನಾಯಕನೊಬ್ಬ ಆದಿವಾಸಿ ಬುಡಕಟ್ಟು ಸಮುದಾಯದ ಯುವಕನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ ಅಮಾನುಷವಾದ ಘಟನೆ ಸಿಧಿ ಜಿಲ್ಲೆಯಲ್ಲಿ ನಡೆದಿತ್ತು. ಇದೇ ವಿಚಾರದಲ್ಲಿ ಸ್ಥಳೀಯ ಶಾಸಕರ ನಡೆಯ ವಿರುದ್ಧ ಸಿಡಿದೆದ್ದು ಬಿಜೆಪಿಯ ಸಿದ್ದಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿವೇಕ್‌ ಕೋಲ್‌ ಪಕ್ಷವನ್ನು ತೊರೆದು ಹೊರ ಬಂದಿದ್ದಾರೆ. ಈ ವೇಳೆ ಘಟನೆಯನ್ನು ಖಂಡಿಸಿ ಪಕ್ಷದ ನಾಯಕರ ವಿರುದ್ಧವು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಮಧ್ಯಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಘಟನೆ । ಯುವಕನಿಗೆ ಹಲ್ಲೆ ನಡೆಸಿ ಕಾಲು ನೆಕ್ಕಿಸಿದ ದುಷ್ಕರ್ಮಿಗಳು

ಬಿಜೆಪಿ ಮುಖಂಡ ಪ್ರವೇಶ ಶುಕ್ಲಾ ಎಂಬಾತ ಆದಿವಾಸಿ ಬುಡಕಟ್ಟು ಸಮುದಾಯದ ಯುವಕನೊಬ್ಬನ ಮೇಲೆ ಮೂತ್ರ ವಿಸರ್ಜನೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದರ ವಿರುದ್ಧ ಭಾರೀ ಆಕ್ರೋಶವೂ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಡ್ಯಾಮೇಜ್‌ ಕಂಟ್ರೋಲ್‌ ಮಾಡಲು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಸಂತ್ರಸ್ತರ ಮನೆಗೆ ತೆರಳಿ ಆತನ ಪಾದ ತೊಳೆದು ಕ್ಷಮೆಯಾಚನೆ ಮಾಡಿದ್ದರು. ಸದ್ಯ ಇದೀಗ ಸಿಎಂ ಶಿವರಾಜ್‌ ಸಿಂಗ್‌ ಚೌಹಣ್‌ ಅವರು ಪಾದ ತೊಳೆದ ವ್ಯಕ್ತಿಯೇ ಬೇರೆ, ಸಂತ್ರಸ್ತನೇ ಬೇರೆ ಎಂದು ಸುದ್ದಿ ಹರಿದಾಡ್ತಿದೆ. ಕಾಂಗ್ರೆಸ್‌ ಕೂಡ ಟ್ವೀಟ್‌ ಮಾಡಿ ನಕಲಿ ಸಂತ್ರಸ್ತನ ಮನೆಗೆ ಸಿಎಂ ತೆರಳಿದ್ದಾರೆ ಎಂದು ಆರೋಪ ಮಾಡಿದೆ.

ಈ ಘಟನೆಗೆ ಸಂಬಂಧಿಸಿದಂತೆ ಪಕ್ಷ ತೊರೆದಿರುವ ಸಿದ್ಧಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿವೇಕ್‌ ಕೋಲ್‌  ಸಿದ್ದಿಗಾರರ ಜೊತೆ ಮಾತನಾಡಿದ್ದು, ನನ್ನ ರಾಜೀನಾಮೆ ಅಂತಿಮವಾಗಿದೆ. ನಾನು ಎರಡು ದಿನಗಳ ಹಿಂದೆ ಸಂಸದ,ಬಿಜೆಪಿ ಮುಖ್ಯಸ್ಥ ವಿಡಿ ಶರ್ಮಾ ಅವರಿಗೆ ಇ-ಮೇಲ್‌ ಮಾಡಿದ್ದೇನೆ. ನಾನು ಅದನ್ನು ಬಿಜೆಪಿಯ ಪದಾಧಿಕಾರಿಗಳ ವಾಟ್ಸಾಪ್‌ ಗ್ರೂಪ್‌ನಲ್ಲಿ ಪೋಸ್ಟ ಮಾಡಿದ್ದೇನೆ. ನನ್ನ ರಾಜೀನಾಮೆಯನ್ನು ಹಿಂಪಡೆಯುವಂತೆ ಪಕ್ಷವು ನನ್ನನ್ನು ಕೇಳಿಲ್ಲ ಎಂದು ಹೇಳಿದ್ದಾರೆ.

ವಿವೇಕ್‌ ಕೋಲ್‌ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಕಳೆದ ಎರಡು ವರ್ಷಗಳಿಂದ ಸ್ಥಳೀಯ ಬಿಜೆಪಿ ಶಾಸಕ ಕೇದಾರನಾಥ್‌ ಶುಕ್ಲಾ ಅವರ ಕೃತ್ಯಗಳಿಂದ ತನಗೆ ನೋವುಂಟಾಗಿದೆ. ಇದರಲ್ಲಿ ಆದಿವಾಸಿ ಬುಡಕಟ್ಟು ಸಮುದಾಯಗಳ ಭೂಮಿಯನ್ನು ಅತಿಕ್ರಮಣ ಮತ್ತು ಸಿಧಿಯಲ್ಲಿನ ಇತರ ದೌರ್ಜನ್ಯಗಳು ಸೇರಿವೆ ಎಂದು ಬರೆದಿದ್ದಾರೆ.

ಆರೋಪಿಗೂ ಶಾಸಕ ಶುಕ್ಲಾಗೂ ಯಾವುದೇ ಸಂಬಂಧವಿಲ್ಲ ಎಂದು  ಬಿಜೆಪಿ ಸಮರ್ಥಿಸಿಕೊಂಡಿದೆ. ಆದರೆ ಕೋಲ್‌ ಅವರು ಪತ್ರದಲ್ಲಿ ಶುಕ್ಲಾ ಮತ್ತು ಆರೋಪಿಯ ಸಂಬಂಧದ ಬಗ್ಗೆ ವಿವರಿಸಿ, ಹಲವು ಆರೋಪಗಳನ್ನು ಮಾಡಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *