ಬಿಜೆಪಿ ಜಿಲ್ಲಾಧ್ಯಕ್ಷನ ಹುಟ್ಟುಹಬ್ಬ ಆರ್ಭಟ: ಕೋವಿಡ್‌ ನಿಯಮ-ರಾತ್ರಿ ಕರ್ಫ್ಯೂ ಇದ್ದರೂ ಭರ್ಜರಿ ಪಾರ್ಟಿ

ಕೋವಿಡ್‌ ನಿಯಾಮವಳಿಗಳು ಜಾರಿ, ರಾತ್ರಿ ಹೊತ್ತು ಕಠಿಣ ನಿರ್ಬಂಧಗಳಿದ್ದರೂ ಸಹ ಭರ್ಜರಿಯಾಗಿ ರಾಜಾರೋಷವಾಗಿ ನಿಯಮ ಉಲ್ಲಂಘಿಸಿದ್ದಲ್ಲದೆ, ಬೀದಿಬೀದಿಯಲ್ಲಿ ತಿರುಗಾಡಿ ಹುಟ್ಟುಹಬ್ಬ ಆಚರಣೆ-ಸಂಭ್ರಮಾಚರಣೆ ಮಾಡಿದ್ದಾರೆ ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಹಳ್ಳಿ ಸುರೇಶ್‌.

ಹಾಸನ: ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರೀಳಿತದಲ್ಲಿದ್ದು, ಸಂಪೂರ್ಣವಾಗಿ ಸೋಂಕು ಕಡಿಮೆಯಾಗಿಲ್ಲ. ಅಲ್ಲದೆ, ಗಡಿಭಾಗದ ರಾಜ್ಯಗಳಲ್ಲಿ ಅತ್ಯಧಿಕ ಪ್ರಕರಣಗಳು ದಾಖಲಾಗುತ್ತಿವೆ. ಇವುಗಳು ನಡುವೆ ಕೋವಿಡ್‌ ತಡೆಗಟ್ಟುವ ನಿಟ್ಟಿನಲ್ಲಿ ನಿರ್ಬಂಧಿತ ನಿಯಮಗಳು ರಾಜ್ಯದಲ್ಲಿ ಜಾರಿಯಲ್ಲಿದ್ದರೂ ಸಹ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಹಾಸನ ಜಿಲ್ಲಾಧ್ಯಕ್ಷ ಹುಲ್ಲಹಳ್ಳಿ ಸುರೇಶ್‌ ತಮ್ಮ ಹುಟ್ಟುಹಬ್ಬದ ನೆಪದಲ್ಲಿ ನಿಯಮಗಳನ್ನು ಉಲ್ಲಂಘಿಸಿರುವ ಘಟನೆ ನಡೆದಿವೆ.

ಇದನ್ನು ಓದಿ: ಕೋವಿಡ್‌ ನಿಯಮ ಉಲ್ಲಂಘನೆ: ಬಿಜೆಪಿ ವಿರುದ್ಧ ಒಟ್ಟು 36 ಕೇಸು ದಾಖಲು

ಬೇಜವಾಬ್ದಾರಿತನದಿಂದ ತೋರಿದ್ದು, ಸೋಂಕು ಪ್ರಕರಣಗಳು ಹರಡುವ ಸಾಧ್ಯತೆಗಳು ಇವೆ. ಈಗಾಗಲೇ ಸೋಂಕು ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯ ಕರ್ಫ್ಯೂ ಜಾರಿಯಾಗಿದೆ. ಹಾಸನದಲ್ಲಿ ಪ್ರತಿದಿನ 80-100 ಜನರಿಗೆ ಕೊರೊನಾ ಸೋಂಕು ದೃಢಪಡುತ್ತಿರುವ ಹಿನ್ನೆಲೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದೆ. ಆದರೂ ಸಹ ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಹಳ್ಳಿ ಸುರೇಶ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಿದ್ದು, ಕಟ್ಟುನಿಟ್ಟಿನ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

ಅಭಿಮಾನಿಗಳು ಮುಂದಿನ ಶಾಸಕ ಹುಲ್ಲಹಳ್ಳಿ ಸುರೇಶ್ ಎಂದು ಘೋಷಣೆ ಕೂಗಿ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ರಸ್ತೆಯಲ್ಲಿ ನೂರಾರು ಜನ ಸೇರಿದ್ದರೂ ಪೊಲೀಸರು ಯಾವುದೇ ಕ್ರಮಕೈಗೊಳ್ಳಲು ಮುಂದಾಗಿಲ್ಲ. ಪೊಲೀಸರ ಸಮ್ಮುಖದಲ್ಲೇ ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಹಳ್ಳಿ ಸುರೇಶ್​​ರವರ ಮೇಲೆ ಅಭಿಮಾನಿಗಳು ಹೂ ಮಳೆ ಸುರಿಸಿ ಸಂಭ್ರಮಿಸಿದ್ದಾರೆ.

ಹುಟ್ಟುಹಬ್ಬದ ವೇಳೆ ಮೆರವಣಿಗೆ ಮಾಡಲಾಗಿದೆ. ರಾತ್ರಿ ಕರ್ಫ್ಯೂ ನಡುವೆಯೂ ಅಭಿಮಾನಿಗಳು ಡಿಜೆ ಪಾರ್ಟಿ ಮಾಡಿದ್ದು, ಈ ವೇಳೆ ಟ್ರಾಫಿಕ್ ಜಾಮ್ ಆಗಿತ್ತು. ಮಾಸ್ಕ್, ಸ್ಯಾನಿಟೈಜರ್ ಇಲ್ಲದೆ ಬೇಕಾಬಿಟ್ಟಿಯಾಗಿ ಬಿಜೆಪಿ ಕಾರ್ಯಕರ್ತರು ವರ್ತಿಸಿದ್ದಾರೆ. ಆಡಳಿತ ಪಕ್ಷದ ಜವಾಬ್ದಾರಿಯುತ ಅಧ್ಯಕ್ಷರಾಗಿ ಬೇಜವಾಬ್ದಾರಿ ವರ್ತನೆ ತೋರಿರುವುದರಿಂದ ಹುಲ್ಲಹಳ್ಳಿ ಸುರೇಶ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನ ಆಕ್ರೋಶ ಹೊರಹಾಕಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *