ಬಿಜೆಪಿ, ಜೆಡಿಎಸ್ ನದ್ದು ಹಾದಿ ತಪ್ಪಿದ ಯಾತ್ರೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಬಂಡಾರಿ

  • ಮೈತ್ರಿ ಪಕ್ಷಗಳ ಮೈಸೂರು ಚಲೋ ಪಾದಯಾತ್ರೆ ಬಗ್ಗೆ ಕೆಪಿಸಿಸಿ ತಿರುಗೇಟು
  • ರಾಜ್ಯಕ್ಕೆ ಸೌಲಭ್ಯ ಕಲ್ಪಿಸಲು ದೆಹಲಿ ಯಾತ್ರೆಯ ಬದಲು ಮೈಸೂರು ಪಾದಯಾತ್ರೆ ಮಾಡಿ ದಾರಿ ತಪ್ಪಿಸುತ್ತಿದ್ದಾರೆ ಎಂಬ ಆರೋಪ

ಬೆಂಗಳೂರು:ಬಿಜೆಪಿಯವರ ಯಾತ್ರೆ ಹಾದಿ ತಪ್ಪಿದೆ. ಅವರು, ರಾಜ್ಯದ ಜನರಿಗೆ ಸೌಲಭ್ಯ ಕಲ್ಪಿಸಲು ದೆಹಲಿಗೆ ಯಾತ್ರೆ ಮಾಡಬೇಕಿತ್ತು. ಅದು ಬಿಟ್ಟು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ವಿರುದ್ಧ ಪಾದಯಾತ್ರೆ ಮಾಡಲು ಹೊರಟಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ತಮ್ಮ 21 ಹಗರಣಗಳು ಬಯಲಾಗುವ ಭಯದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಪಕ್ಷದವರು ಪಾದಯಾತ್ರೆಯ ನಾಟಕ ಆರಂಭಿಸಿ, ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಯಾವುದೇ ಅನುದಾನ ಕೊಟ್ಟಿಲ್ಲ. ಬಜೆಟ್ ಮೇಲೆ ಭಾಷಣ ನಡೆಯುತ್ತಿದ್ದರೂ ರಾಜ್ಯದ ಮೈತ್ರಿ ನಾಯಕರು ಅಲ್ಲಿ ಈ ಬಗ್ಗೆ ಧ್ವನಿ ಎತ್ತಿಲ್ಲ.
ಜಿಎಸ್ ಟಿ ಪಾಲನ್ನು ಕೇಂದ್ರ ರಾಜ್ಯಕ್ಕೆ ಸಮರ್ಪಕವಾಗಿ ನೀಡಿಲ್ಲ. ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಪ್ರತಿಭಟನೆ ಮಾಡಬೇಕಿದ್ದವರು, ಅದಕ್ಕಾಗಿ ಕೊಡಿಸಲು ದೆಹಲಿ ಚಲೋ ಮಾಡಬೇಕಿದ್ದವರು, ಪ್ರಚಾರಕ್ಕಾಗಿ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಮಂಜುನಾಥ ಭಂಡಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಕೀಕರಣಕ್ಕೋಸ್ಕರ ಮೈಸೂರು ಚಲೋ ಬದಲು, ಅದನ್ನು ರದ್ದು ಮಾಡಿ ರಾಜ್ಯದ ಜನರಿಗೋಸ್ಕರ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಲು ದೆಹಲಿ ಚಲೋ ಮಾಡಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದಿದ್ದಾರೆ.

ಕೊನೆಯ ಯಾತ್ರೆಯಾಗುತ್ತೆ

ಈ ಹಿಂದೆ ಬಿಜೆಪಿಯವರು ವಿಪರೀತ ಭ್ರಷ್ಟಾಚಾರ ಮಾಡಿದ್ದಕ್ಕೆ, ರಾಜ್ಯದ ಜನರಿಗೆ ಅನ್ಯಾಯ ಮಾಡಿದ್ದಕ್ಕೆ, ಮತದಾರರಿಗೆ ಮೋಸ ಮಾಡಿದ್ದಕ್ಕೆ, ಸುಳ್ಳು ಹೇಳಿ ರಾಜ್ಯದ ಮಾನ ಹರಾಜು ಹಾಕಿದ್ದಕ್ಕೆ‌, ರಾಜ್ಯದ ಹೆಸರಿಗೆ ಕಪ್ಪು ಮಸಿ ಬಳಿಯಲು ಯತ್ನಿಸಿದ್ದಕ್ಕೆ ರಾಜ್ಯದ ಜನರು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸಿದರು. 136 ಸೀಟುಗಳನ್ನು ಕಾಂಗ್ರೆಸ್ ಗೆ ನೀಡಿದರು. ಲೋಕಸಭಾ ಚುನಾವಣೆಯಲ್ಲಿ ಚಾರ್ ಸೌ ಪಾರ್ ಎನ್ನುತ್ತಿದ್ದವರಿಗೆ 240 ಕ್ಕೆ ಸೀಮಿತಗೊಳಿಸಿದರು. ಇದು ಇವರ ಕೊನೆಯ ಯಾತ್ರೆಯಾಗಲಿದೆ ಎಂದು ಮಂಜುನಾಥ ಭಂಡಾರಿ ಭವಿಷ್ಯ ನುಡಿದಿದ್ದಾರೆ.

ಕಾವಲು ನಾಯಿಗಳಾಗಬೇಕಿದ್ದವರು ಕಚ್ಚಾಡುತ್ತಿದ್ದಾರೆ

ಬಿಜೆಪಿಯವರಲ್ಲೇ ಸಾಮರಸ್ಯವಿಲ್ಲ. ವಿರೋಧ ಪಕ್ಷವಾಗಿ ಪ್ರಜಾಪ್ರಭುತ್ವದ ಕಾವಲು ನಾಯಿಯಾಗಬೇಕಿದ್ದವರು. ಕವಲು ದಾರಿಯಲ್ಲಿ ಹೋಗುತ್ತಿದ್ದಾರೆ. ಕಚ್ಚಾಡುತ್ತಿದ್ದಾರೆ.
ಒಂದೆಡೆ ಮೈಸೂರಿಗೆ ಪಾದಯಾತ್ರೆ ಮಾಡುತ್ತೇವೆ ಎಂದಿದ್ದರೆ, ಬಸವಕಲ್ಯಾಣದಿಂದ ಬಳ್ಳಾರಿಗೆ ಪಾದಯಾತ್ರೆ ಮಾಡುತ್ತೇವೆ ಎಂದು ಇನ್ನೊಂದಿಷ್ಟು ನಾಯಕರು ಹೇಳುತ್ತಿದ್ದಾರೆ. ಇವರ ಅಸ್ತಿತ್ವ ನಾಯಕತ್ವ ಪೈಪೋಟಿಗಾಗಿ ನಡೆಯುತ್ತಿರುವ ಯಾತ್ರೆ ಇದಾಗಿದೆ. ಮೊನ್ನೆ ನಡೆದ ಪಾದಯಾತ್ರೆ ಪೂರ್ವಭಾವಿ ಸಭೆಯಲ್ಲಿ ಶಾಸಕರು ಪಾಲ್ಗೊಂಡಿಲ್ಲ.‌ ಜಿ.ಟಿ.ದೇವೆಗೌಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮಂಜುನಾಥ ಭಂಡಾರಿ ಅವರು ಲೇವಡಿ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *