ಬಿಟ್‌ಕಾಯಿನ್‌ ಪ್ರಕರಣದ ವಿಚಾರದಲ್ಲಿ ಸೂಕ್ತ ಕಾನೂನು ಕ್ರಮಕೈಗೊಳ್ಳಲಿ-ನಮ್ಮ ಅಭ್ಯಂತರವಿಲ್ಲ: ಶಿವಕುಮಾರ್‌

ಬೆಂಗಳೂರು: ಕಾಂಗ್ರೆಸ್ ಪಕ್ಷದ ನಾಯಕರು ಯಾವುದೇ ಅವ್ಯವಹಾರದಲ್ಲಿ ತೊಡಗಿದ್ದರೆ ಅವರನ್ನು ಕಾನೂನು ಪ್ರಕಾರ ಗಲ್ಲಿಗೆ ಹಾಕಲಿ. ನಮ್ಮಿಂದ ಯಾವುದೇ ಅಭ್ಯಂತರವಿಲ್ಲ. ಬಿಟ್ ಕಾಯಿನ್ ವಿಚಾರವಾಗಿ ಪೊಲೀಸ್ ದಾಖಲೆ ಮಾಡಿರುವ ಎಫ್ಐಆರ್, ಮಾಧ್ಯಮಗಳಲ್ಲಿ ಕೇಳಿ ಬಂದಿರುವ ಹೆಸರುಗಳು, ಪ್ರಧಾನಮಂತ್ರಿಗಳಿಗೆ ಹೋಗಿರುವ ದೂರುಗಳು, ಯಾರನ್ನು ವಿವಿಧ ಪ್ರಕರಣದಲ್ಲಿ ಬಂಧಿಸಿ ವಿಚಾರಣೆ ಮಾಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಬಹಿರಂಗ ಮಾಡಲಿ. ಕಾಂಗ್ರೆಸ್ ಪಕ್ಷದ ನಾಯಕರು ಇದರಲ್ಲಿ ಭಾಗಿಯಾಗಿದ್ದರೆ ಅವರನ್ನು ಕೂಡ ಬಂಧಿಸಿ ವಿಚಾರಣೆ ನಡೆಸಲಿ. ನಾವು ಯಾರ ಬೆಂಬಲಕ್ಕೂ ನಿಲ್ಲುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

ಬಿಟ್ ಕಾಯಿನ್ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಬಳಿ ಸಾಕ್ಷಿ ಇದ್ದರೆ ನೀಡಲಿ ಎಂಬ ಬಿಜೆಪಿ ಮುಖಂಡರ ಹೇಳಿಕೆಗೆ ಮೇಲಿನಂತೆ ಪ್ರತಿಕ್ರಿಯೆ ನೀಡಿದರು.

ಇದನ್ನು ಓದಿ: ಬಿಟ್​ಕಾಯಿನ್ ಪ್ರಕರಣ: ಆರೋಪಿ ಶ್ರೀಕೃಷ್ಣ ಬಂಧನ

ಬಿಟ್‌ಕಾಯಿನ್‌ ಪ್ರಕರಣವನ್ನು ಇಡಿಗೆ ಪ್ರಕರಣ ವಹಿಸಿರುವ ಬಗ್ಗೆ ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ. ಇದೆಲ್ಲದರ ಮಾಹಿತಿಯನ್ನು ನೀಡಲಿ. ನಾವು ಕೂಡ ಈ ವಿಚಾರವಾಗಿ ಆಂತರಿಕ ತನಿಖೆ ನಡೆಸಿ ಮಾಹಿತಿ ಕಲೆಹಾಕಿದ್ದು, ನಾವು ಕೂಡ ಸೂಕ್ತ ಸಮಯದಲ್ಲಿ ನಮ್ಮ ಬಳಿ ಇರುವ ದಾಖಲೆಗಳನ್ನು ನೀಡುತ್ತೇವೆ. ನಾವು ತನಿಖೆ ಮಾಡಿಸುವುದು ಬೇರೆ ವಿಚಾರ. ಬಿಜೆಪಿ ಅಧಿಕಾರದಲ್ಲಿದೆ. ಅವರ ಕೈಯಲ್ಲಿ ಸರ್ಕಾರ ಇದೆ. ಗೃಹ ಮಂತ್ರಿಗಳು ಇದ್ದಾರೆ. ರಾಜ್ಯದ ಜನರಿಂದ ಅವರು ಮುಚ್ಚಿಟ್ಟಿರುವ ಸತ್ಯಾಂಶ ಹೊರಗಿಡಲಿ’ ಎಂದರು.

ಜಾಮೀನು ಪಡೆದಿದ್ದ ಶ್ರೀಕೃಷ್ಣ ಮತ್ತೆ ಬಂಧಿಸಿರುವುದರ ಹಿಂದೆ ಬೇರೆಯವರ ಕೈವಾಡ ಇದೆಯೇ ಎಂಬ ಪ್ರಶ್ನೆಗೆ ‘ಈ ಪ್ರಕರಣದಲ್ಲಿ ಎಷ್ಟು ಎಫ್ಐಆರ್ ಹಾಕಲಾಗಿದೆ. ಯಾರ ಮೇಲೆ ಪ್ರಕರಣ ದಾಖಲಾಗಿದೆ, ಹೈಕೋರ್ಟಿನಲ್ಲಿದ್ದ ಪ್ರಕರಣ ಹಿಂಪಡೆದಿದ್ದು ಯಾಕೆ ಎಂಬ ವಿಚಾರಗಳನ್ನು ಬಹಿರಂಗ ಪಡಿಸಲಿ. ಸಮಯ ಬಂದಾಗ ಪಕ್ಷ ಚರ್ಚೆ ಮಾಡಿ ತನ್ನ ತೀರ್ಮಾನ ಕೈಗೊಳ್ಳಲಿದೆ. ಸರ್ಕಾರ ಈ ಪ್ರಕರಣದಲ್ಲಿ ಪಂಚನಾಮದಿಂದ ಹಿಡಿದು ಇಡಿಗೆ ಪ್ರಕರಣ ವಹಿಸಿರುವವರೆಗೂ ಸಂಪೂರ್ಣ ಮಾಹಿತಿ ನೀಡಲಿ’ ಎಂದು ಉತ್ತರಿಸಿದರು.

Donate Janashakthi Media

Leave a Reply

Your email address will not be published. Required fields are marked *