ಕಾಮಗಾರಿಗಳ ತನಿಖೆ ನಡೆಯದೇ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಲಾಗದು:ಸಿಎಂ

ಮೈಸೂರು: ಶೇ 40 ಕಮಿಷನ್‌ ಪಡೆದಿರುವ ಬಿಜೆಪಿಯವರಿಗೆ ಹೋರಾಟ ನಡೆಸುವ ನೈತಿಕತೆ ಏನಿದೆ? ನಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಭ್ರಷ್ಟಾಚಾರದ ಕಾರಣಕ್ಕಾಗಿಯೇ ಅವರನ್ನು ಜನರು ತಿರಸ್ಕರಿಸಿದ್ದಾರೆ. ನಾವು ಹಿಂದೆ ಮಾಡಿರುವ ಆರೋಪ ಸಾಬೀತುಪಡಿಸಬೇಕಾಗಿದೆ. ಹೀಗಿರುವಾಗ ಗುತ್ತಿಗೆದಾರರು ಬಿಲ್‌ ಪಾವತಿಗೆ ಆತುರಪಟ್ಟರೆ ಹೇಗೆ? ತನಿಖೆಯಾಗಾಗದೇ ಪಾವತಿಸಲಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,ಶೇ 40ಕಮಿಷನ್‌ ಬಗ್ಗೆ ತನಿಖೆ ನಡೆಸದೇ ಬಿಲ್‌ ಪಾವತಿ ಹೇಗೆ ಮಾಡಲು ಸಾಧ್ಯ? ತನಿಖೆ ನಡೆಸಿ ವರದಿ ಕೊಡುವಂತೆ ಎಸ್‌ಐಟಿಗೆ ಸೂಚಿಸಿದ್ದೇನೆ. ಪ್ರಾಮಾಣಿಕವಾಗಿ ಕೆಲಸ ಮಾಡಿರುವ ಯಾರಿಗೂ ತೊಂದರೆ ಆಗುವುದಿಲ್ಲ. ಯಾರು ಭ್ರಷ್ಟಾಚಾರ ಮಾಡಿದ್ದಾರೆಯೋ,ಗುಣಮಟ್ಟದ ಕೆಲಸ ಮಾಡಿಲ್ಲವೋ ಅಂಥವರಿಗೆ ತೊಂದರೆ ಆಗುತ್ತದೆ ಎಂದರು.

ಇದನ್ನೂ ಓದಿ:ಕೈ ಶಾಸಕರ ಸಿಟ್ಟು ತಣ್ಣಿಸಲು ಸಿಎಂ ಸಿದ್ದರಾಮಯ್ಯ ಇಂದು ಆರು ಜಿಲ್ಲೆಗಳ ಶಾಸಕರ ಸಭೆ

ನಮ್ಮ ಪರಿಸ್ಥಿತಿ ಹಾಗೂ ಬೆಳೆಯನ್ನೂ ನೋಡಬೇಕಲ್ಲಾ:

ಮಳೆ ಕಡಿಮೆಯಾಗಿರುವುದರಿಂದ ಉಂಟಾಗಿರುವ ಸಂಕಷ್ಟದ ಪರಿಸ್ಥಿತಿಯನ್ನು ನಮ್ಮೊಂದಿಗೆ ತಮಿಳುನಾಡು ಕೂಡ ಹಂಚಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು. ಜೂನ್‌ ತಿಂಗಳಿಗೆ ನಿಗದಿಪಡಿಸಿದ ನೀರನ್ನು ಕರ್ನಾಟಕವು ಬಿಟ್ಟಿಲ್ಲ ಎಂಬ ತಮಿಳುನಾಡು ಸರ್ಕಾರದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಾರಿ ಸರಿಯಾಗಿ ಮಳೆಯಾಗದೇ ನಮಗೇ ತೊಂದರೆಯಾಗಿದೆ. ಕೇರಳ ಹಾಗೂ ಕೊಡಗಿನಲ್ಲಿ ಮಳೆ ಕಡಿಮೆಯಾಗಿದ್ದು, ನಮ್ಮ ಜಲಾಶಯಗಳಿಗೆ ಒಳಹರಿವು ಕಡಿಮೆಯಾಗಿದೆ. ಹೆಚ್ಚುವರಿ ನೀರು ಬಂದಾಗಲೆಲ್ಲಾ ಅಲ್ಲಿಗೆ  ಹರಿಸುತ್ತಿದ್ದೆವು. ಈ ಬಾರಿ ಕೊಡಲಾಗಿಲ್ಲ. ನಾವು ಹೆಚ್ಚುವರಿ ನೀರು ಹರಿಸಿಲ್ಲವೆಂದು ತಮಿಳುನಾಡು ತಗಾದೆ ತೆಗೆದಿದೆ. ನಮ್ಮ ಪರಿಸ್ಥಿತಿ ಹಾಗೂ ಬೆಳೆಯನ್ನೂ ನೋಡಬೇಕಲ್ಲಾ? ಎಂದು ಕೇಳಿದರು.

ಗೃಹಲಕ್ಷ್ಮಿ ಯೋಜನೆ ಜಾರಿ ಮುಂದೂಡಿಲ್ಲ. ರಾಹುಲ್‌ ಗಾಂಧಿ ಸಮಯ ಕೊಟ್ಟಿಲ್ಲ. ಈ ತಿಂಗಳ ಕೊನೆಯಲ್ಲಿ ಚಾಲನೆ ಕೊಡುತ್ತೇವೆ. 1.33 ಕೋಟಿ ಮಹಿಳೆಯರಲ್ಲಿ ಈವರೆಗೆ 1.06 ಕೋಟಿ ಮಹಿಳೆಯರು ನೋಂದಾಯಿಸಿದ್ದಾರೆ. ನೋಂದಾಣಿಗೆ ಗಡುವಿಲ್ಲ ಎಂದರು. ಯುವನಿಧಿ ಯೋಜನೆ ಡಿಸೆಂಬರ್‌ ನಂತರ ಜಾರಿಗೊಳಿಸುತ್ತೇವೆ. ಪದವಿ ಮುಗಿಸಿ 6 ತಿಂಗಳು ಕೆಲಸ ಸಿಗದಿದ್ದವರಿಗೆ ನಿರುದ್ಯೋಗ ಭತ್ಯೆ ನೀಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದೇವೆ.  ಡಿಸೆಂಬರ್‌ಗೆ 6 ತಿಂಗಳಾಗುತ್ತದೆ. ಜನವರಿಯಿಂದ ಜಾರಿಗೊಳಿಸಲಿದ್ದೇವೆ. ಬಿಎ,ಬಿಎಸ್ಸಿ,ಬಿಕಾಂ,ಎಂಕಾಂ,ಎಂಎಸ್ಸಿ ಮುಂತಾದ ಪದವಿ ಪಡೆದಿರುವ ನಿರುದ್ಯೋಗಿಗಳಿಗೆ ₹3 ಸಾವಿರ ಹಾಗೂ ಡಿಪ್ಲೊಮಾ ಪಡೆದವರಿಗೆ ₹1,500 ಕೊಡುತ್ತೇವೆ. 2 ವರ್ಷಗಳವರೆಗೆ ಪ್ರತಿ ತಿಂಗಳೂ ನೀಡುತ್ತೇವೆ ಎಂದು ಹೇಳಿದರು.

ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ ಸಂಬಂಧಿಸಿ ಸಮಿತಿ ರಚಿಸಿದ್ದೇವೆ. ಶಾಸಕರಿಗೂ ಸ್ಥಾನ ಕೊಡಬೇಕಿದೆ. ಯಾವ ಅನುಪಾತದಲ್ಲಿ ಹಂಚಿಕೆ ಮಾಡಬೇಕು ಎಂಬುವುದನ್ನು ಸಮಿತಿ ತೀರ್ಮಾನಿಸುತ್ತದೆ. ಕಾರ್ಯಕರ್ತರಿಗೂ ಕೊಡಲಾಗುವುದು ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ,ತಾಲೂಕು ಪಂಚಾಯಿತಿ ಹಾಗೂ ಬಿಬಿಎಂಪಿ ಚುನಾವಣೆ ವಿಷಯದಲ್ಲಿ ನಾವು ನ್ಯಾಯಲಯದ ನಿರ್ದೇಶನ ಪಾಲಿಸುತ್ತೇವೆ. ವಾರ್ಡ್‌ಗಳ ಪುನರ್‌ ವಿಂಗಡಣೆ ವಿಚಾರದಲ್ಲಿ ನ್ಯಾಯಾಲಯ ಗಡುವು ನೀಡಿದೆ. ಆ ಪ್ರಕ್ರಿಯೆ ನಡೆಯುತ್ತಿದೆ. ಚುನಾವಣೆ ವಿಚಾರದಲ್ಲಿ ನಾವು ಯಾವತ್ತೂ ಹಿಂದೆ ಬಿದ್ದಿಲ್ಲ. ಮುಂದೂಡಿದ್ದವರು ಬಿಜೆಪಿಯವರು. ನಾವು ಹಾಗಲ್ಲ. ನ್ಯಾಯಾಲಯದ ನಿರ್ದೇಶನದಂತೆ ನಡೆಯುತ್ತೇವೆ. ಚುನಾವಣೆಗೆ ಸದಾ ಸಿದ್ಧವಿದ್ದೇವೆ ಎಂದು ಹೇಳಿದರು.

ಕೇಂದ್ರ ಸರ್ಕಾರ ತರಲು ಹೊರಟಿರುವ ಏಕರೂಪ ನಾಗರಿಕ ಸಂಹಿತೆಗೆ ನಿಮ್ಮ ವಿರೋಧವಿದೆ ಎಂದು ಪ್ರತಿಕ್ರಿಯಿಸಿದರು. ಸುಪ್ರೀಂ ಕೋರ್ಟ್‌ನ್ಯಾಯಾಧೀಶರನ್ನು ಹೊರಗಿಟ್ಟು ಚುನಾವಣಾ ಆಯುಕ್ತರ ನೇಮಕಕ್ಕೆ ಹೊರಟಿರುವುದರ ಹಿಂದೆ ಷಂಡ್ಯಂತ್ರವಿದೆ. ಬೇಕಾದವರನ್ನು ನೇಮಿಸಿಕೊಳ್ಳಲು ಹೊರಟ್ಟಿದ್ದಾರೆ. ಐಸಿಸಿ ಸೇರಿದಂತೆ ವಿವಿಧ ಕಾನೂನುಗಳಿಗೆ ಹೊಸ ರೂಪ ನೀಡಲು ಮುಂದಾಗಿದ್ದಾರೆ. ಐಪಿಸಿ 1861 ರಲ್ಲಿ ರಚನೆಯಾದದ್ದು. ಏನೇನು ತೀರ್ಮಾನ ಮಾಡುತ್ತಾರೋ ನೋಡೋಣ ಎಂದು ಪ್ರತಿಕ್ರಿಯಿಸಿದರು. ಈ ದೇಶಕ್ಕೆ ಅನ್ವಯ ಆಗುವಂತಹ ಕಾನೂನುಗಳನ್ನು ಮಾಡಬೇಕು ಎಂದರು.

ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಕಾಂಗ್ರೆಸ್‌ ಮುಖಂಡರಾದ ಕೆ.ಮರೀಗೌಡ, ಎಂ.ಕೆ.ಸೋಮಶೇಖರ್‌, ಶಿವಣ್ಣ,ಕಾಂಗ್ರೆಸ್‌ ಗ್ರಾಮಾಂತರ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್‌ ಇದ್ದರು.

Donate Janashakthi Media

Leave a Reply

Your email address will not be published. Required fields are marked *