ಬಿಲ್ಕೀಸ್ ಬಾನೋ ಪ್ರಕರಣ | ಅಪರಾಧಿಗಳ ಶರಣಾಗತಿಗೆ ಸಮಯಾವಕಾಶ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್

ನವದೆಹಲಿ:ಬಿಲ್ಕೀಸ್ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳಿಗೆ ಶರಣಾಗಲು ಸಮಯವನ್ನು ವಿಸ್ತರಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಶರಣಾಗತಿಗೆ ಸಮಯ ವಿಸ್ತರಣೆ ಕೋರಿ ಅಪರಾಧಿಗಳು ಉಲ್ಲೇಖಿಸಿರುವ ಕಾರಣಗಳು ಅರ್ಹತೆಯ ಕೊರತೆಯನ್ನು ಹೊಂದಿವೆ ಎಂದು ನ್ಯಾಯಾಲಯ ಹೇಳಿದ್ದು, ಜನವರಿ 8ರ ತೀರ್ಪಿನ ಪ್ರಕಾರ, ನ್ಯಾಯಾಲಯವು ನಿಗದಿಪಡಿಸಿದ ಮೂಲ ಗಡುವು ಜನವರಿ 21ರೊಳಗೆ ಅಪರಾಧಿಗಳು ಜೈಲು ಅಧಿಕಾರಿಗಳ ಮುಂದೆ ಶರಣಾಗಬೇಕು ಎಂದು ಹೇಳಿದೆ. ಹೀಗಾಗಿ 11 ಅಪರಾಧಿಗಳೂ ಭಾನುವಾರದೊಳಗೆ ಶರಣಾಗಬೇಕಾಗಿದೆ.

2002ರಲ್ಲಿ ಗುಜರಾತ್‌ನಲ್ಲಿ ನಡೆದ ಗಲಭೆಯಲ್ಲಿ ಬಿಲ್ಕೀಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ, ಅವರ ಕುಟುಂಬದ ಏಳು ಸದಸ್ಯರನ್ನು ಹತ್ಯೆಗೈದ ಪ್ರಕರಣದ ಎಲ್ಲಾ 11 ಅಪರಾಧಿಗಳಿಗೆ ಗುಜರಾತ್ ಸರ್ಕಾರ ಕ್ಷಮಾದಾನ ನೀಡಿತ್ತು. ಆದರೆ ಇದರ ವಿರುದ್ಧ ಸುಪ್ರೀಂಕೋರ್ಟ್‌ ಕದ ತಟ್ಟಿದ್ದ ಬಿಲ್ಕಿನ್ ಬಾನೋ ಅವರು ಸರ್ಕಾರದ ನಿರ್ಧಾರವನ್ನು ರದ್ದು ಮಾಡಿಸಿದ್ದರು. ಈ ವೇಳೆ ನ್ಯಾಯಾಲಯ ಎರಡು ವಾರಗಳಲ್ಲಿ ಎಲ್ಲಾ ಅಪರಾಧಿಗಳು ಶರಣಾಗುವಂತೆ ತೀರ್ಪು ನೀಡಿತ್ತು.

ಇದನ್ನೂ ಓದಿ: ಬಿಲ್ಕೀಸ್ ಬಾನೊ ಪ್ರಕರಣ | ಸುಪ್ರೀಂನಲ್ಲಿ ಶರಣಾಗತಿಗೆ ಸಮಯ ಕೋರಿದ 3 ಅಪರಾಧಿಗಳು

ಹೀಗಾಗಿ ಅಪರಾಧಿಗಳಲ್ಲಿ ಕೆಲವರು ಜೈಲು ಅಧಿಕಾರಿಗಳ ಮುಂದೆ ಶರಣಾಗಲು ಹೆಚ್ಚಿನ ಸಮಯ ಕೋರಿ ಗುರುವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ‘ಅನಾರೋಗ್ಯ’, ‘ಚಳಿಗಾಲದ ಬೆಳೆಗಳ ಕೊಯ್ಲು’ ಮತ್ತು ‘ಮಗನ ಮದುವೆ’ ಕಾರಣ ನೀಡಿ ಅಪರಾಧಿಗಳು ಶರಣಾಗಲು ಸಮಯವನ್ನು ವಿಸ್ತರಿಸುವಂತೆ ಸುಪ್ರೀಂಕೋರ್ಟ್‌ ಜೊತೆಗೆ ವಿನಂತಿಸಿದ್ದಾರೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.

ಗುರುವಾರದಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಸಂಜಯ್ ಕರೋಲ್ ಅವರ ಪೀಠದ ಮುಂದೆ ಸಮಯ ವಿಸ್ತರಣೆ ಕೋರಿದ ಅರ್ಜಿಯನ್ನು ಉಲ್ಲೇಖಿಸಲಾಗಿದ್ದು, ಸಿಜೆಐ ಮುಂದೆ ಮನವಿಯನ್ನು ಸಲ್ಲಿಸುವಂತೆ ರಿಜಿಸ್ಟ್ರೀ ಹೇಳಿದೆ. ಜೀವಾವಧಿ ಶಿಕ್ಷೆಯನ್ನು ಎದುರಿಸುತ್ತಿರುವ 11 ಅಪರಾಧಿಗಳನ್ನು ಅಕಾಲಿಕವಾಗಿ ಬಿಡುಗಡೆ ಮಾಡಲು 2022ರ  ಆಗಸ್ಟ್‌ನಲ್ಲಿ ಗುಜರಾತ್ ಸರ್ಕಾರ ನಿರ್ಧಾರ ಮಾಡಿತ್ತು.

ಸುಪ್ರೀಂಕೋರ್ಟ್ ತನ್ನ 251 ಪುಟಗಳ ತೀರ್ಪಿನಲ್ಲಿ, ಗುಜರಾತ್ ಸರ್ಕಾರವು ಶಿಕ್ಷೆಯ ವಿನಾಯತಿಗಾಗಿ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲು ಯಾವುದೇ ಅಧಿಕಾರವನ್ನು ಹೊಂದಿಲ್ಲ ಎಂದು ಹೇಳಿತ್ತು. ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ ರಾಜ್ಯದ ಸರ್ಕಾರ ಮಾತ್ರ ಪರಿಹಾರಕ್ಕಾಗಿ ಅರ್ಜಿಯನ್ನು ಪರಿಗಣಿಸಲು ಮತ್ತು ಆದೇಶವನ್ನು ನೀಡಲು ಸಮರ್ಥವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಇದನ್ನೂ ಓದಿ:ಕನ್ನಡಿಗರಿಗೆ ಆದ ಅನ್ಯಾಯದ ಬಗ್ಗೆ ಮೋದಿ ಉತ್ತರಿಸಬೇಕೆ ವಿನಃ ಬಿಜೆಪಿ ಐಟಿ ಸೆಲ್ ಅಲ್ಲ – ಸಿದ್ದರಾಮಯ್ಯ

ಅಕಾಲಿಕವಾಗಿ ಬಿಡುಗಡೆಯಾದ 11 ಅಪರಾಧಿಗಳ ಹೆಸರು ಕೆಳಗಿನಂತಿದೆ:
ಬಕಾಭಾಯಿ ವೋಹಾನಿಯಾ, ಬಿಪಿನ್ ಚಂದ್ರ ಜೋಶಿ, ಕೇಸರಭಾಯಿ ವೋಹಾನಿಯಾ, ಗೋವಿಂದ್ ನಾಯ್, ಜಸ್ವಂತ್ ನಾಯ್, ಮಿತೇಶ್ ಭಟ್, ಪ್ರದೀಪ್ ಮೋರ್ಧಿಯಾ, ರಾಧೇಶ್ಯಾಮ್ ಶಾ, ರಾಜುಭಾಯ್ ಸೋನಿ, ರಮೇಶ್ ಚಂದನಾ ಮತ್ತು ಶೈಲೇಶ್ ಭಟ್.

ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ, “ಸಂತ್ರಸ್ತೆಯ ಹಕ್ಕುಗಳೂ ಮುಖ್ಯ, ಮಹಿಳೆ ಗೌರವಕ್ಕೆ ಅರ್ಹಳು. ಮಹಿಳೆಯರ ವಿರುದ್ಧ ನಡೆಸಲಾಗುವ ಬರ್ಬರ ಅಪರಾಧಗಳಲ್ಲಿ ಅಪರಾಧಿಗಳ ಶಿಕ್ಷೆ ಕಡಿತಗೊಳಿಸಲು ಸಾಧ್ಯವೇ? ಅಪರಾಧಿಗಳಿಗೆ ಶಿಕ್ಷೆ ಯಾವ ರಾಜ್ಯದ ನ್ಯಾಯಾಲಯದಲ್ಲಿ ವಿಧಿಸಲಾಗಿತ್ತೋ ಆ ರಾಜ್ಯದ ಸರ್ಕಾರಗಳು ಶಿಕ್ಷೆ ಕಡಿತಗೊಳಿಸುವ ಬಗ್ಗೆ ನಿರ್ಧರಿಸಬಹುದೇ ವಿನಹ ಅಪರಾಧ ನಡೆದ ರಾಜ್ಯದ ಸರ್ಕಾರಗಳಲ್ಲ” ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು.

ಅಪರಾಧಿಗಳ ಬಿಡುಗಡೆ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಬಿಲ್ಕೀಸ್ ಬಾನು, ತೃಣಮೂಲ ಕಾಂಗ್ರೆಸ್‌ ಪಕ್ಷದ ಮಹುವಾ ಮೊಯಿತ್ರಾ, ಸಿಪಿಐ(ಎಂ) ಪಾಲಿಟ್‌ ಬ್ಯುರೋ ಸದಸ್ಯೆ ಸುಭಾಷಿಣಿ ಅಲಿ, ಪತ್ರಕರ್ತೆ ರೇವತಿ ಲೌಲ್‌ ಹಾಗೂ ಲಕ್ನೋ ವಿವಿಯ ಮಾಜಿ ಉಪಕುಲಪತಿ ರೂಪ್‌ ರೇಖಾ ವರ್ಮಾ ಸಹಿತ ಹಲವರು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಸುಪ್ರೀಂ ಕೋರ್ಟ್‌ 11 ದಿನಗಳ ಕಾಲ ಅರ್ಜಿ ವಿಚಾರಣೆ ನಡೆಸಿ, ಅಕ್ಟೋಬರ್‌ನಲ್ಲಿ ತೀರ್ಪು ಕಾಯ್ದಿರಿಸಿತ್ತು.

2002ರ ಗುಜರಾತ್ ಕೋಮು ಗಲಭೆಗಳ ವೇಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಐದು ತಿಂಗಳ ಗರ್ಭಿಣಿಯಾಗಿದ್ದ 21 ವರ್ಷದ ಬಿಲ್ಕಿಸ್ ಬಾನೋ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಜೊತೆಗೆ ಅದೇ ವೇಳೆ ಅವರ ಜೊತೆಗೆ ಇದ್ದ ಅವರ ಮೂರು ವರ್ಷದ ಮಗಳು ಸೇರಿದಂತೆ ಏಳು ಮಂದಿ ಕುಟುಂಬ ಸದಸ್ಯರನ್ನು ಕಗ್ಗೋಲೆ ಮಾಡಲಾಗಿತ್ತು.

ವಿಡಿಯೊ ನೋಡಿ: ಕೆಮಿಕಲ್​ ಮಿಶ್ರಿತ ನೀರು ಹೊರಹಾಕುತ್ತಿರುವ ಯತ್ನಾಳ ಸಕ್ಕರೆ ಕಾರ್ಖಾನೆ : ಜನರ ಹೊಟ್ಟೆ ಸೇರುತ್ತಿದೆ ವಿಷಕಾರಿ ನೀರು

Donate Janashakthi Media

Leave a Reply

Your email address will not be published. Required fields are marked *